ETV Bharat / state

ಅಧಿಕಾರಕ್ಕಾಗಿ ಅಲ್ಲ, ಜನಕಲ್ಯಾಣಕ್ಕಾಗಿ ರಾಜಕಾರಣ ಮಾಡುವೆ: ಸಿಎಂ ಬೊಮ್ಮಾಯಿ

author img

By

Published : Mar 14, 2023, 8:04 PM IST

Updated : Mar 14, 2023, 9:04 PM IST

ಕೊಪ್ಪಳ ಜಿಲ್ಲಾಮಟ್ಟದ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಸಮಾವೇಶ - ದೇಶದ ಜಿಡಿಪಿ ದರ 6.8 ಆಗಿದ್ದರೆ ರಾಜ್ಯದ ಜಿಡಿಪಿ ದರ 9.1ರಷ್ಟಾಗಿದೆ. ಬಿಜೆಪಿ ಸರ್ಕಾರ ಕೃಷಿ ಆಧಾರಿತ ಹತ್ತಾರು ಯೋಜನೆ ಜಾರಿ ಮಾಡಿದೆ - ಸಿಎಂ ಬಸವರಾಜ ಬೊಮ್ಮಾಯಿ ಅಭಿಮತ. ಅಂಜನಾದ್ರಿಯಲ್ಲಿ 120 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಸಿಎಂ ಚಾಲನೆ.

convention Beneficiaries various schemes of State Govt
ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಸಮಾವೇಶ

ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದರು.

ಗಂಗಾವತಿ: ಅಧಿಕಾರಕ್ಕಾಗಿ ರಾಜಕಾರಣ ಮಾಡುವುದಲ್ಲ, ಜನ ಕಲ್ಯಾಣಕ್ಕಾಗಿ ನಾನು ರಾಜಕೀಯ ಮಾಡುತ್ತಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ನಗರದ ತಾಲೂಕು ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ರಾಜ್ಯ ಸರಕಾರದ ನಾನಾ ಯೋಜನೆಗಳ ಫಲಾನುಭವಿಗಳ ಕೊಪ್ಪಳ ಜಿಲ್ಲಾಮಟ್ಟದ ಸಮಾವೇಶದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿದರು.

ರಾಜಕೀಯ ಉದ್ದೇಶ ಇರಿಸಿಕೊಂಡಿರುವ ವ್ಯಕ್ತಿ ಮುಂದಿನ ಚುನಾವಣೆ ದೃಷ್ಟಿಯಲ್ಲಿಟ್ಟು ಕೊಂಡಿರುತ್ತಾನೆ. ಆದರೆ, ಜನಕಲ್ಯಾಣ ಉದ್ದೇಶ ಇರಿಸಿಕೊಂಡಿರುವ ವ್ಯಕ್ತಿ ಮುಂದಿನ ಪೀಳಿಗೆಯ ಕಲ್ಯಾಣ ಉದ್ದೇಶ ಹೊಂದಿರುತ್ತಾನೆ. ನಾನು ಎರಡನೇ ಸಾಲಿನ ರಾಜಕಾರಣಿ ಎಂದು ಅಭಿಮತ ವ್ಯಕ್ತಪಡಿಸಿದರು.

ಜನರ ಮನಸ್ಸಿನಿಂದ ಕಾಂಗ್ರೆಸ್ ನಿಧಾನ ಕಾಣೆ: 60ಕ್ಕೂ ಹೆಚ್ಚು ವರ್ಷ ದೇಶದಲ್ಲಿ ರಾಜಕಾರಣ ಮಾಡಿದ ಕಾಂಗ್ರೆಸ್ ತುಷ್ಟೀಕರಣದಿಂದ ಜನರಿಂದ ತಿರಸ್ಕಾರಕ್ಕೆ ಒಳಗಾಗಿದೆ. ಇದೀಗ ಜನರ ಮನಸ್ಸಿನಿಂದ ಕಾಂಗ್ರೆಸ್ ನಿಧಾನವಾಗಿ ಕಾಣೆಯಾಗುತ್ತಿದೆ. ಇದು ಕಾಂಗ್ರೆಸ್ ನಾಯಕರ ಮನಸ್ಥಿತಿಯನ್ನು ಕದಡಿದೆ. ಕಾಂಗ್ರೆಸ್ ನಾಯಕರು ಹತಾಶೆ ಭಾವನೆಯಲ್ಲಿದ್ದು ವೈಯಕ್ತಿಕ ನಿಂದನೆ, ಅಸಂವಿಧಾನಿಕ ಪದಗಳ ಬಳಕೆಯಂತ ಕೃತ್ಯಕ್ಕೆ ಇಳಿದಿದ್ದಾರೆ. ಈ ಬಗ್ಗೆ ನಾವು ಹೆಚ್ಚಿಗೆ ಗಮನ ಹರಿಸುವುದಿಲ್ಲ. ನಮ್ಮದೇನಿದ್ದರೂ ಜನಪರ ಯೋಜನೆ, ರಾಜಕಾರಣ ಎಂದು ಸಿಎಂ ಹೇಳಿದರು.

ರಾಜ್ಯದ ಜಿಡಿಪಿ ದರ 9.1:ದೇಶದ ಜಿಡಿಪಿ ದರ 6.8 ಆಗಿದ್ದರೆ ರಾಜ್ಯದ ಜಿಡಿಪಿ ದರ 9.1ರಷ್ಟಾಗಿದೆ. ನೆರೆ - ಹೊರೆಯ ರಾಜ್ಯಗಳಿಗಿಂತ ನಮ್ಮ ರಾಜ್ಯದ ಜಿಡಿಪಿ ದರ ಅತ್ಯುತ್ತಮವಾಗಿದೆ. ಕೃಷಿರಂಗ ಸುಧಾರಿಸಿದರೆ ಸಹಜವಾಗಿ ಜಿಡಿಪಿ ವೃದ್ಧಿಯಾಗುತ್ತದೆ ಎಂಬ ಉದ್ದೇಶಕ್ಕೆ ಕೃಷಿ ಆಧಾರಿತ ಹತ್ತಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಮಾಹಿತಿ ನೀಡಿದರು.

ಕೃಷಿಗೆ ಹಲವಾರು ಯೋಜನೆ:ರೈತರಿಗೆ ಶೂನ್ಯ ಬಡ್ಡಿಯಲ್ಲಿ ಐದು ಲಕ್ಷ ಮೊತ್ತದ ವರೆಗೆ ಸಾಲ, ರೈತರ ಮಕ್ಕಳಿಗೆ ವಿದ್ಯಾನಿಧಿ, ಬೀಜ ಬಿತ್ತನೆಗೆ ಮುನ್ನವೇ ಹತ್ತು ಸಾವಿರ ರೂಪಾಯಿ ಮೊತ್ತದ ರಸಗೊಬ್ಬರ, ಬೀಜ ಖರೀದಿಗೆ ಸಬ್ಸಿಡಿ ನೀಡಲಾಗುತ್ತಿದೆ. ರೈತನಿಗೆ ವಿಮೆ ಮಾಡಿಸಲಾಗಿದೆ.ಯಶಸ್ವಿನಿ ಯೋಜನೆ ಮರು ಚಾಲನೆ ತರಲಾಗಿದೆ. ಅಲ್ಲದೇ ರೈತರಿಗೆ ವಾರ್ಷಿಕ ಮೂರು ಕಂತುಗಳಲ್ಲಿ ರಾಜ್ಯ ಮತ್ತು ಕೇಂದ್ರದಿಂದ ಹತ್ತು ಸಾವಿರ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಕೃಷಿ ಕ್ಷೇತ್ರ ಶೇ.1ರಷ್ಟು ಸುಧಾರಣೆಯಾದರೆ ಸಾಕು ಕೈಗಾರಿಕಾ ವಲಯ ಶೇ.4ರಷ್ಟು ಸೇವಾ ವಲಯದಲ್ಲಿ ಶೇ.10ರಷ್ಟು ಅಭಿವೃದ್ಧಿಯಾಗುತ್ತದೆ ಎಂದು ಸಿಎಂ ಹೇಳಿದರು.

ಕನಕಗಿರಿ ಉತ್ಸವ: ಇದೇ ತಿಂಗಳಲ್ಲಿ ಕನಕಗಿರಿ ಉತ್ಸವ ಆಚರಿಸಲಾಗುವುದು ಎಂದು ಘೋಷಣೆ ಮಾಡಿದ ಸಿಎಂ, ಆನೆಗೊಂದಿ ಉತ್ಸವದ ಬಗ್ಗೆ ಜನರಿಂದ ಆಗ್ರಹ ಕೇಳಿಬಂದರೂ ಇದಕ್ಕೆ ಸಿಎಂ ಸ್ಪಂದಿಸಲಿಲ್ಲ. ಅಲ್ಲದೇ ಕೊಪ್ಪಳದ ಏತನೀರಾವರಿ ಯೋಜನೆಯನ್ನು ನಮ್ಮ ಸರ್ಕಾರದ ಅವಧಿಯಲ್ಲಿ ಚಾಲನೆ ನೀಡಲಾಗಿದೆ. ಇನ್ನೊಂದು ವಾರದಲ್ಲಿ ನಾನೇ ಬಂದು ಕಾಮಗಾರಿಗೆ ಚಾಲನೆ ನೀಡುತ್ತೇನೆ ಎಂದು ಸಿಎಂ ಹೇಳಿದರು.

ಅಂಜನಾದ್ರಿ 120 ಕೋಟಿ ಮೊತ್ತದ ಕಾಮಗಾರಿಗೆ ಭೂಮಿ ಪೂಜೆ: ಮೊದಲು ಗಂಗಾವತಿ ತಾಲೂಕಿನ ಅಂಜನಾದ್ರಿಯಲ್ಲಿ 120 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ರೂಪವೇ, ಪ್ರದಕ್ಷಿಣೆ ಪಥ ನಿರ್ಮಾಣ ಮಾಡಲಾಗುತ್ತಿದೆ. ಅಂಜನಾದ್ರಿಯನ್ನು ಧಾರ್ಮಿಕ ಪ್ರವಾಸಿ ತಾಣವನ್ನಾಗಿಸುವುದು ನಮ್ಮ ಉದ್ದೇಶ ಎಂದು ಹೇಳಿದರು. ಸಚಿವ ಸೋಮಣ್ಣ ಮತ್ತು ನಮ್ಮ ಒಡನಾಟ 3 ದಶಕಗಳಿಂದಲೇ ಇದೆ, ಅವರಿಗೆ ಕೊಂಚ ಅಸಮಾಧಾನವಿದೆ. ಎಲ್ಲವನ್ನೂ ಸರಿ ಮಾಡಲಾಗುವುದು. ಬಿಜೆಪಿ ಬಿಟ್ಟು ಸೋಮಣ್ಣ ಹೋಗುವುದಿಲ್ಲ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂಓದಿ:ಮನೆ ಮನೆಗೆ ತೆರಳಿ ಕಾಂಗ್ರೆಸ್ ಪಕ್ಷದ ಗ್ಯಾರೆಂಟಿ ಕಾರ್ಡ್ ಹಂಚಿಕೆ: ಮತಬೇಟೆ ಆರಂಭಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ

Last Updated :Mar 14, 2023, 9:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.