ಗಂಗಾವತಿ(ಕೊಪ್ಪಳ): ದಾಸಪರಂಪರೆ ಮತ್ತು ದಾಸ ಸಾಹಿತ್ಯವನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಮಾತಾಂಬುಜಾ ಫಿಲಂ ಸಂಸ್ಥೆಯಿಂದ ನಗರದಲ್ಲಿ ನಡೆಯುತ್ತಿರುವ ಜಗನ್ನಾಥ ದಾಸರ ಭಾಗ-2 ಚಿತ್ರೀಕರಣಕ್ಕೆ ಶಾಸಕ ಜಿ. ಜನಾರ್ದರೆಡ್ಡಿ ಬುಧವಾರ ಚಾಲನೆ ನೀಡಿದರು.
ಇಲ್ಲಿನ ಹಿರೇಜಂತಕಲ್ ಪ್ರದೇಶದಲ್ಲಿರುವ ಐತಿಹಾಸಿಕ ಹಾಗೂ ಪೌರಾಣಿಕಾ ಹಿನ್ನೆಲೆಯ ಪ್ರಸನ್ನ ಪಂಪಾ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ನಡೆದ ರಾಘವೇಂದ್ರ ಸ್ವಾಮೀಜಿಗಳ ಪಾತ್ರಧಾರಿಯ ಸನ್ನಿವೇಶದ ಚಿತ್ರೀಕರಣಕ್ಕೆ ಶಾಸಕ ರೆಡ್ಡಿ ಅವರು ಕ್ಲಾಪ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಶಾಸಕ ಜಿ ಜನಾರ್ದರೆಡ್ಡಿ , ದಾಸರ ನಾಡು ಎಂದು ಗುರುತಿಸಿಕೊಂಡಿರುವ ಬಳ್ಳಾರಿ, ವಿಜಯನಗರ, ರಾಯಚೂರು, ಕೊಪ್ಪಳ ಸೇರಿದಂತೆ ಕಲ್ಯಾಣ ಕರ್ನಾಟಕದ ನಾನಾ ಜಿಲ್ಲೆಗಳಲ್ಲಿ ದಾಸರ ಪ್ರಭಾವ ಜನರ ಬಹಳಷ್ಟಾಗಿದೆ. ದಾಸರ ಸರಳ ಮತ್ತು ಅರ್ಥ ಪೂರ್ಣ ಜೀವನ ಜನರನ್ನು ಪ್ರಭಾವಗೊಳಿಸಿದೆ ಎಂದು ತಿಳಿಸಿದರು.
ದಾಸರು ಎಂದರೆ ಕನಕದಾಸ, ಪುರಂದರ ದಾಸರು ಮಾತ್ರ ಬಹಳ ಜನರಿಗೆ ಗೊತ್ತಿದೆ. ಆದರೆ ಅದೇ ದಾಸ ಪರಂಪರೆಯಲ್ಲಿ ಬಂದಿರುವ ಜಗನ್ನಾಥ ದಾಸರ ಬಗ್ಗೆ ವಿಶೇಷವಾಗಿ ಚಿತ್ರ ಮಾಡುತ್ತಿರುವುದು ಮಾತಾಂಬುಜಾ ಫಿಲಂ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.
ಜಗನ್ನಾಥ ದಾಸರ ಚಿತ್ರದಲ್ಲಿ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮೀಜಿ ಪಾತ್ರಕ್ಕೆ ಅಮೆರಿಕದ ನ್ಯೂಜೆರ್ಸಿಯಾದಲ್ಲಿ ಕಳೆದ 53 ವರ್ಷದಿಂದ ನೆಲೆಸಿ ಅಲ್ಲಿ ಕ್ಯಾನ್ಸರ್ ತಜ್ಞರಾಗಿರುವ ಆರ್ ಸುಧೀಂದ್ರ ಆಯ್ಕೆಯಾಗಿರುವುದು ವಿಶೇಷವಾಗಿದೆ. ಅವರಿಗೆ ನಾಡು-ನುಡಿ ಮತ್ತು ಸಂಸ್ಕೃತಿಯ ಬಗ್ಗೆ ಕಾಳಜಿ ಇರುವುದಕ್ಕೆ ಪಾತ್ರಕ್ಕೆ ಒಪ್ಪಿರುವುದು ಹೆಮ್ಮೆ ಎಂದರು.
ನಿರ್ಮಾಪಕ ನಿರ್ದೇಶಕ ಮಧುಸೂದನ್ ಹವಾಲ್ದಾರ್ ಚಿತ್ರದ ಬಗ್ಗೆ ಮಾತನಾಡಿ, ಈಗಾಗಲೇ ಮೊದಲ ಭಾಗವೂ ಶತದಿನೋತ್ಸವ ಕಂಡಿರುವ ಹಿನ್ನೆಲೆ ಇದೀಗ ಎರಡನೇ ಭಾಗದ ಚಿತ್ರೀಕರಣ ಮಾಡಲಾಗುತ್ತಿದೆ. ಒಟ್ಟು ನಾಲ್ಕು ಭಾಗದಲ್ಲಿ ಜಗನ್ನಾಥ ದಾಸರ ಪೂರ್ಣ ಪರಿಚಯ ಮಾಡುವ ಉದ್ದೇಶವಿದೆ ಎಂದರು.
ಕಲಾವಿದರಾದ ರಾಮಮೂರ್ತಿ ನವಲಿ, ನಾಗರಾಜ ಇಂಗಳಗಿ, ಸಿ. ಮಹಾಲಕ್ಷ್ಮಿ, ಪುರುಷೋತಮ್ಮ ರೆಡ್ಡಿ, ವೆಂಕಟರಮಣ್ಣನ ಪಾತ್ರಧಾರಿ ವಿಷ್ಣುತೀರ್ಥ ಜೋಶಿ, ಜಗನ್ನಾಥ ದಾಸರ ಪಾತ್ರಧಾರಿ- ಹೈದರಾಬಾದಿನ ಶರತ್ ಜೋಶಿ ಕಲಾವಿದರು ಒಳಗೊಂಡಂತೆ ನಾನಾ ದೃಶ್ಯ ಚಿತ್ರೀಕರಣ ಮಾಡಲಾಯಿತು.
ಕ್ಯಾಮೆರಾಮನ್, ನಾರಾಯಣ ಸಿ., ವ್ಯವಸ್ಥಾಪಕ ರಾಮಚಂದ್ರ ಕುಲಕರ್ಣಿ, ಸಹಾಯಕ ನಿರ್ದೇಶಕ ಬಾಬಣ್ಣ, ಮೇಕಪ್ಮನ್ ರಮೇಶ ಬಾಬು ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಒಟ್ಟು ಮೂರು ವಾರಗಳ ಕಾಲ ಸ್ಥಳೀಯ ಪ್ರದೇಶದಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ಚಿತ್ರತಂಡ ತಿಳಿಸಿದೆ.
ಇದನ್ನೂಓದಿ:ಆಸ್ಕರ್ 2024: ನಾಮನಿರ್ದೇಶನ ಪ್ರಕ್ರಿಯೆಗೆ ಮಲಯಾಳಂನ '2018: ಎವ್ರಿಒನ್ ಈಸ್ ಎ ಹೀರೋ' ಎಂಟ್ರಿ