ETV Bharat / state

ತಿರುಪತಿ ಮಾದರಿಯಲ್ಲಿ ಅಂಜನಾದ್ರಿ ಅಭಿವೃದ್ಧಿ - ಕ್ಷೇತ್ರದ ಜನರಿಗೆ ಡಬಲ್ ಬೆಡ್ ರೂಂ ಮನೆ: ರೆಡ್ಡಿ ಅಭಯ

author img

By

Published : May 29, 2023, 5:13 PM IST

Congratulatory program
ಅಭಿನಂದನಾ ಸಮರ್ಪಣಾ ಕಾರ್ಯಕ್ರಮ

ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುತ್ತಿದ್ದೇವೆ ಎಂದು ಹೇಳಿದ ಜನಾರ್ದನ ರೆಡ್ಡಿ.

ಗಂಗಾವತಿ: ಹಿಂದೂಗಳ ಪವಿತ್ರ ಧಾರ್ಮಿಕ ತಾಣವಾಗಿರುವ ತಿರುಪತಿ ದೇವಸ್ಥಾನದ ಮಾದರಿಯಲ್ಲಿ ಗಂಗಾವತಿಯ ಅಂಜನಾದ್ರಿ ದೇಗುಲವನ್ನು ಅಭಿವೃದ್ಧಿ ಮಾಡುವ ಗುರಿ ಹಮ್ಮಿಕೊಳ್ಳುತ್ತಿದ್ದೇನೆ. ಅಲ್ಲದೇ ಸದಾ ಜನರೊಂದಿಗೆ ಇರಲು 'ನಿಮ್ಮೊಂದಿಗೆ ನಾನು' ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದೇನೆ ಎಂದು ಗಂಗಾವತಿ ಶಾಸಕ ಜಿ ಜನಾರ್ದನ ರೆಡ್ಡಿ ಹೇಳಿದ್ದಾರೆ.

ಚುನಾವಣೆಯ ಬಳಿಕ ಇದೇ ಮೊದಲ ಬಾರಿಗೆ ನಗರದ ಕನಕಗಿರಿ ರಸ್ತೆಯಲ್ಲಿ ಇರುವ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕಚೇರಿಯಲ್ಲಿ ಭಾನುವಾರ ಪಕ್ಷದ ನಾಯಕರು, ಕಾರ್ಯಕರ್ತರು, ಮತದಾರರಿಗೆ ಆಯೋಜಿಸಲಾಗಿದ್ದ ಅಭಿನಂದನಾ ಸಮರ್ಪಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಾನು ಈ ಮೊದಲೇ ಅಂದರೆ ಚುನಾವಣೆಯ ಪೂರ್ವದಲ್ಲಿ ಹೇಳಿದಂತೆ ಅಂಜನಾದ್ರಿ ದೇವಸ್ಥಾನವನ್ನು ತಿರುಪತಿ ತಿಮ್ಮಪ್ಪನ ದೇವಸ್ಥಾನದ ಮಾದರಿಯಲ್ಲಿ ಅಭಿವೃದ್ಧಿ ಪಡಿಸುತ್ತೇನೆ. ಕ್ಷೇತ್ರದ ಜನರಿಗೆ ಡಬಲ್ ಬೆಡ್ ರೂಂ ಮನೆಗಳನ್ನು ಕಟ್ಟಿಸಿ ಕೊಡಲಾಗುತ್ತದೆ. ಗಂಗಾವತಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುತ್ತಿದೆ ಎಂದರು.

ನಾಲ್ಕು ಕಡೆ ಕಚೇರಿ: ಜನ ಅನಗತ್ಯವಾಗಿ ಗಂಗಾವತಿಯ ನನ್ನ ಮನೆಗೆ ಬಂದು ಅಲೆದಾಡುವ ಬದಲಿಗೆ ಕ್ಷೇತ್ರದ ನಾಲ್ಕು ಕಡೆ ಕಚೇರಿ ಮತ್ತು ಮನೆಗಳನ್ನು ನಿರ್ಮಿಸಲಿದ್ದೇನೆ. ಜನ ಅಲ್ಲಿಗೆ ಬಂದು ತಮ್ಮ ಸಮಸ್ಯೆ ಹೇಳಿಕೊಂಡರೆ ಸಾಕು. ಅವುಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಮುಖ್ಯವಾಗಿ ಗಂಗಾವತಿ ತಾಲೂಕಿನ ಇರಕಲಗಡಾ, ಕಿನ್ನಾಳ, ಆನೆಗೊಂದಿ ಹಾಗೂ ವೆಂಕಟಗಿರಿ ಗ್ರಾಮಗಳಲ್ಲಿ ಶಾಸಕರ ಕಚೇರಿಯನ್ನು ಆರಂಭಿಸುತ್ತೇನೆ. ಸರಕಾರದ ಕೆಲಸಕ್ಕೆ ಜನ ಪರದಾಡುವುದನ್ನು ತಪ್ಪಿಸಲು ಮತ್ತು ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ. ಗಂಗಾವತಿ ಕ್ಷೇತ್ರದ ಗ್ರಾಮೀಣ ಭಾಗದಲ್ಲಿ ನಾಲ್ಕು ಕಡೆ ಶಾಸಕರ ಕಚೇರಿ ಆರಂಭಿಸಿದರೆ ಜನ ಪದೇ ಪದೆ ಸರಕಾರಿ ಕಚೇರಿಗಳಿಗೆ ಅಲೆಯುವುದು ತಪ್ಪಲಿದೆ ಎಂಬ ಉದ್ದೇಶಕ್ಕೆ ನಾಲ್ಕು ಕಡೆ ಕಚೇರಿ ಆರಂಭಿಸಲಿದ್ದೇನೆ ಎಂದರು.

ನಗರದಲ್ಲಿ ಮತಗಳಿಕೆ ಹಿನ್ನಡೆ: ಬಳಿಕ ಚುನಾವಣೆಯತ್ತ ತಮ್ಮ ಮಾತಿನ ದಾಟಿಯನ್ನು ಹೊರಳಿಸಿದ ರೆಡ್ಡಿ, ಚುನಾವಣೆಯ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ನಮಗೆ ಉತ್ತಮವಾದ ಮತಗಳನ್ನು ಜನ ಹಾಕಿದ್ದಾರೆ. ಆದರೆ ನಗರದಲ್ಲಿ ಮತಗಳಿಕೆಯಲ್ಲಿ ನಾವು ಹಿನ್ನಡೆ ಅನುಭವಿಸಿದ್ದೇವೆ. ನಗರದಲ್ಲಿ ಮುಖ್ಯವಾಗಿ ಒಂದು ಕೋಮಿನ ಜನ ಎಲ್ಲವೂ ಪಡೆದುಕೊಂಡು ಬ್ಯಾಲನ್ಸ್ ಮಾಡಿ ಮತ ಹಾಕಿದ್ದಾರೆ. ಇದನ್ನು ಗಮನಿಸಿ ನಮ್ಮ ಪಕ್ಷದ ಮುಖಂಡರು ಇನ್ನು ಮುಂದೆ ಪಕ್ಷ ಸಂಘಟನೆ ಮಾಡಬೇಕಿದೆ. ಗ್ರಾಮೀಣ ಭಾಗದಲ್ಲಿ ನಮಗೆ ಹೆಚ್ಚಿನ ಮತ ಬಂದಿವೆ. ನಾನು ಗೆಲ್ಲಲು ಗ್ರಾಮೀಣಭಾಗದ ಮತಗಳೇ ಕಾರಣ ಎಂದು ರೆಡ್ಡಿ ಹೇಳಿದರು.

ಪಕ್ಷಕ್ಕಲ್ಲ ಗ್ಯಾರಂಟಿಗಾಗಿ ಮತ: ಚುನಾವಣೆಯ ಸಂದರ್ಭದಲ್ಲಿ ಜನ ಕಾಂಗ್ರೆಸ್ ಪಕ್ಷ ಅಥವಾ ನಾಯಕರ ಮುಖ ನೋಡಿಕೊಂಡು ಮತ ಹಾಕಿಲ್ಲ. ಬದಲಿಗೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ನೀಡಿದ್ದ ಗ್ಯಾರಂಟಿಗಳ ಕಾರಣಕ್ಕಾಗಿ ಮತ ನೀಡಿದ್ದಾರೆ. ಗ್ಯಾರಂಟಿಗಳನ್ನು ಆ ಪಕ್ಷದವರು ಎಷ್ಟರ ಮಟ್ಟಿಗೆ ಈಡೇರಿಸುತ್ತಾರೋ ಕಾಯ್ದು ನೋಡಬೇಕಿದೆ. ಚುನಾವಣಾ ಸಂದರ್ಭದಲ್ಲಿ ನನ್ನ ಗಮನಕ್ಕೆ ಬಂದ ಸಮಸ್ಯೆಗಳನ್ನು ಜನರಿದ್ದಲ್ಲಿಗೇ ಬಂದು ಬಗೆಹರಿಸುತ್ತೇನೆ. ಸದಾ ಜನರೊಂದಿಗೆ ಇರಲು 'ನಿಮ್ಮೊಂದಿಗೆ ನಾನು' ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಈ ಮೂಲಕ ಅಧಿಕಾರಿಗಳೊಟ್ಟಿಗೆ ಸೇರಿ ಜನರ ಕೆಲಸಗಳನ್ನು ಸ್ಥಳದಲ್ಲೇ ಮಾಡಿಸುವ ಉದ್ದೇಶವಿದೆ ಎಂದು ರೆಡ್ಡಿ ಹೇಳಿದರು.

ಇದನ್ನೂ ಓದಿ: ಪಂಚಾಯ್ತಿ ಮಟ್ಟದಲ್ಲಿ ನವೋದಯ ಶಾಲೆ ಆರಂಭಿಸುವ ಪ್ರಸ್ತಾಪ: ಎಲ್ಲ ಗ್ಯಾರಂಟಿಗಳನ್ನು ಜಾರಿಗೆ ತರುತ್ತೇವೆ ಎಂದ ಡಿಕೆಶಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.