ETV Bharat / state

ಕಲ್ಲು ಕ್ವಾರಿಯಲ್ಲಿ ಕಾರ್ಮಿಕ ಸಾವು ಪ್ರಕರಣ: ಕ್ವಾರಿ ಮಾಲೀಕ ಸೇರಿ 7 ಮಂದಿ ಬಂಧನ

author img

By

Published : May 26, 2023, 5:03 PM IST

quarry-owner-and-7-arrested-in-kolar
ಕಲ್ಲು ಕ್ವಾರಿಯಲ್ಲಿ ಕಾರ್ಮಿಕ ಸಾವು ಪ್ರಕರಣ: ಕ್ವಾರಿ ಮಾಲೀಕ ಸೇರಿ 7 ಮಂದಿ ಬಂಧನ

ಕೆ ಬಿ ಹೊಸಹಳ್ಳಿ ಗ್ರಾಮದ ಬಳಿಯ ಕಲ್ಲು ಕ್ವಾರಿಯಲ್ಲಿ ಬ್ಲಾಸ್ಟಿಂಗ್ ವೇಳೆ ಕಾರ್ಮಿಕ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿ ಆರೋಪಿಗಳನ್ನು ವೇಮಗಲ್​ ಪೊಲೀಸರು ಬಂಧಿಸಿದ್ದಾರೆ.

ಕೋಲಾರ: ತಾಲೂಕಿನ ಕೆ ಬಿ ಹೊಸಹಳ್ಳಿ ಗ್ರಾಮದ ಬಳಿಯ ಕಲ್ಲು ಕ್ವಾರಿಯಲ್ಲಿ ಬುಧವಾರ ಬ್ಲಾಸ್ಟಿಂಗ್ ವೇಳೆ ಕಾರ್ಮಿಕ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ, ಕ್ವಾರಿ ಮಾಲೀಕ ಸೇರಿ ಏಳು ಮಂದಿ ಆರೋಪಿಗಳನ್ನು ವೇಮಗಲ್​ ಪೊಲೀಸರು ಬಂಧಿಸಿದ್ದಾರೆ. ಕ್ವಾರಿ ಮಾಲೀಕ ಸೇರಿ 11 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಬ್ಲಾಸ್ಟಿಂಗ್​ ವೇಳೆ ಯಾದಗಿರಿ ಮೂಲದ‌ ಸೋಮು ಜಾದವ್ ಎಂಬ ಕಾರ್ಮಿಕ ಮೃತಪಟ್ಟಿದ್ದ.

ಗೋಪಿ ಎಂಬುವರಿಗೆ ಗಂಭೀರ ಗಾಯವಾಗಿತ್ತು, ಈ ಸಂಬಂಧ ಘಟನಾ ಸ್ಥಳಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಹಾಗೂ ಕೋಲಾರ ಎಸ್ಪಿ ನಾರಾಯಣ್​​ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಸದ್ಯ ಕ್ವಾರಿ ಮಾಲೀಕ ಅಬ್ದುಲ್ ರೆಹಮಾನ್, ಮ್ಯಾನೇಜರ್ ದೇವರಾಜ್ ಸೇರಿ ಒಟ್ಟು ಏಳು ಮಂದಿಯನ್ನು ಬಂಧಿಸಲಾಗಿದ್ದು, ಇನ್ನುಳಿದ ನಾಲ್ಕು ಆರೋಪಿಗಳ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ.

ಮೈಸೂರಿನಲ್ಲಿ ಅಂಗನವಾಡಿ ಕಾರ್ಯಕರ್ತೆಯ ಹತ್ಯೆ ಮಾಡಿದ್ದ ಆರೋಪಿ ಬಂಧನ: ಹಣಕಾಸಿನ ವಿಚಾರದಲ್ಲಿ ಉಂಟಾದ ಮನಸ್ತಾಪದಿಂದ, ಅಂಗನವಾಡಿ ಕಾರ್ಯಕರ್ತೆಯನ್ನು ಕಬ್ಬಿಣದ ಸಲಾಕೆಯಿಂದ ಹೊಡೆದು ಕೊಲೆ ಮಾಡಿದ ಘಟನೆ, ಮೈಸೂರು ಹೊರ ವಲಯದ ಬೆಂಗಳೂರು ಹೆದ್ದಾರಿ ಪಕ್ಕದಲ್ಲಿ ಇರುವ ಸಿದ್ದಲಿಂಗಪುರದಲ್ಲಿ ಬುಧವಾರ ನಡೆದಿತ್ತು. ಈ ಸಂಬಂಧ ಹತ್ಯೆಯ ಆರೋಪಿಯನ್ನು ಮೇಟಗಳ್ಳಿ ಪೊಲೀಸರು ಬಂಧಿಸಿದ್ದಾರೆ.

ಕಳೆದ ಬುಧವಾರ ಸಂಜೆ ಮೈಸೂರು - ಬೆಂಗಳೂರು ಹೆದ್ದಾರಿಯ ಪಕ್ಕದಲ್ಲಿ ಇರುವ ಸಿದ್ದಲಿಂಗಪುರ ಗ್ರಾಮದಲ್ಲಿ ಇರುವ ಬೇಕರಿಯೊಂದರಲ್ಲಿ, ಅಂಗನವಾಡಿ ಕಾರ್ಯಕರ್ತೆಯನ್ನು ಕಬ್ಬಿಣದ ಸಲಾಕೆಯಿಂದ ಬರ್ಬರವಾಗಿ ಕೊಲೆ ಮಾಡಿ, ಆರೋಪಿ ಪರಾರಿಯಾಗಿದ್ದ. ಈ ಸಂಬಂಧ ನಗರದ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು. ಕಳೆದ ರಾತ್ರಿ ಹತ್ಯೆಯ ಆರೋಪಿ ಮೋಹನ್ (26) ಅವರನ್ನು ‌ಪೊಲೀಸರು ಬಂಧಿಸಿದ್ದಾರೆ.

ಕೊಲೆಯ ವಿವರ: ಹತ್ಯೆಯಾದ ಅಂಗನವಾಡಿ ಕಾರ್ಯಕರ್ತೆ ಮಮತಾಳನ್ನು ಕಳೆದ ಬುಧವಾರ ಸಂಜೆ ಕೊಲೆ ಮಾಡಿ ಪರಾರಿಯಾಗಿದ್ದ ಮೋಹನ್ ಎಂಬಾತನನ್ನು ಬಂಧಿಸಿ ವಿಚಾರಣೆ ಕೈಗೊಂಡಾಗ, ಪೊಲೀಸ್ ವಿಚಾರಣೆಯಲ್ಲಿ ಆರೋಪಿ ಕೊಲೆಗೆ ಕಾರಣ ತಿಳಿಸಿದ್ದಾನೆ. ಕಳೆದ ಮೂರು ವರ್ಷಗಳಿಂದ ಸಿದ್ದಲಿಂಪುರದ ಹೆದ್ದಾರಿಯ ಪಕ್ಕದಲ್ಲಿ ಬೇಕರಿ ನಡೆಸುತ್ತಿದ್ದ ಅದೇ ಗ್ರಾಮದ ಮೋಹನ್ ಎಂಬಾತ, ಪಾಂಡವಪುರ ತಾಲೂಕಿನ ಕೆರೆತಣ್ಣೂರು ಗ್ರಾಮದಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದ ಮಮತಾಳೊಂದಿಗೆ ಸಂಪರ್ಕ ಹೊಂದಿದ್ದನು. ಆಕೆ ಚೀಟಿ ವ್ಯವಹಾರ ನಡೆಸುತ್ತಿದ್ದು, ಈತನಿಗೆ ಹಣಕಾಸು ಸಹಾಯ ಮಾಡಿದ್ದರು. ಆಕೆ ಈತನೊಂದಿಗೆ ಬೇಕರಿಯಲ್ಲಿಯೇ ಬಂದು ವ್ಯಾಪಾರ ನಡೆಸುತ್ತ ಜೊತೆಯಲ್ಲಿಯೇ ಇರುತ್ತಿದ್ದರು ಎನ್ನಲಾಗಿದೆ.

ಬುಧವಾರ ಸಂಜೆ ಬೇಕರಿಗೆ ಬಂದ ಮಮತಾ ಮೋಹನ್​ನೊಂದಿಗೆ ಹಣಕಾಸು ವಿಚಾರಕ್ಕೆ ಗಲಾಟೆ ನಡೆಸಿದ್ದಾರೆ. ಈ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು, ಬೇಕರಿ ತಿನಿಸುಗಳನ್ನು ಮಾಡಲು ಬಳಸುತ್ತಿದ್ದ ಕಬ್ಬಿಣದ ಸಲಾಕೆಯಿಂದ ಮಮತಾಳ ತಲೆಗೆ ಹೊಡೆದಿದ್ದರಿಂದ ಸ್ಥಳದಲ್ಲೇ ಮಮತಾ ಮೃತಪಟ್ಟಿದ್ದರು.

ಇದನ್ನೂ ಓದಿ:ಮ್ಯಾಟ್ರಿಮೋನಿ ನಂಟು, 2 ವರ್ಷದಿಂದ ಸಂಬಂಧ: ಯುವಕನ ವಿರುದ್ಧ ಯುವತಿ ದೂರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.