ETV Bharat / state

ಯಾರು ಬೇಕಾದ್ರೂ ಸಿಎಂ ಆಗಿ, ನನಗೆ ಬೇಕಿರುವುದು ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಬೇಕು ಅಷ್ಟೇ: ಖರ್ಗೆ

author img

By

Published : Apr 16, 2023, 4:23 PM IST

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ

ರಾಹುಲ್ ಗಾಂಧಿ ದೇಶಾದ್ಯಂತ ಭಾರತ್ ಜೋಡೋ ಮೂಲಕ ಸಂಚರಿಸಿ ದೇಶದ ಜನರ ದುಃಖ ದುಮ್ಮಾನಗಳನ್ನು ಕೇಳಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹೇಳಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹೇಳಿಕೆ

ಕೋಲಾರ : ರಾಜ್ಯದಲ್ಲಿ ಯಾರು ಬೇಕಾದರೂ ಮುಖ್ಯಮಂತ್ರಿಗಳಾಗಿ, ಅದು ನನಗೆ ಬೇಕಾಗಿಲ್ಲ. ನನಗೆ ಬೇಕಿರುವುದು ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್​ ಅಧಿಕಾರಕ್ಕೆ ಬರಬೇಕು ಅಷ್ಟೇ ಎಂದು ಮಲ್ಲಿಕಾರ್ಜುನ್ ಖರ್ಗೆ ತಿಳಿಸಿದ್ದಾರೆ. ಕೋಲಾರದಲ್ಲಿಂದು ನಡೆದ ಕಾಂಗ್ರೆಸ್​ ಜೈ ಭಾರತ ಸಮಾವೇಶದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರು ದೇಶಾದ್ಯಂತ ಭಾರತ್ ಜೋಡೋ ಯಾತ್ರೆಯ ಮೂಲಕ ಸಂಚರಿಸಿ ಜನರ ದು:ಖ ದುಮ್ಮಾನಗಳನ್ನು ಕೇಳಿದ್ದಾರೆ. ಬಂಗಾರದ ಜಿಲ್ಲೆ ಕೋಲಾರ. ಇಡೀ ದೇಶದಲ್ಲಿ ಮೂರೇ ಮೂರು ಬಂಗಾರ ಗಣಿಗಳಿವೆ. ಅದರಲ್ಲಿ ಮೂರೂ ಕೂಡಾ ಕರ್ನಾಟಕದಲ್ಲಿವೆ‌. ಬರಗಾಲಕ್ಕೆ ತುತ್ತಾದ ಈ ಜಿಲ್ಲೆಗೆ ಈ ಕಡೆ ನೀರಾವರಿವಾಗಲೀ, ಕೃಷಿಗಾಗಲೀ ಸರ್ಕಾರ ಅಷ್ಟೊಂದು ಮಹತ್ವ ನೀಡುತ್ತಿರಲಿಲ್ಲ‌. ಆದರೆ ನಮ್ಮ‌ ಸರ್ಕಾರ ಬಂದ ಮೇಲೆ ಕೆ.ಸಿ.ವ್ಯಾಲಿ ನೀರಿನ ಯೋಜನೆ ಮಾಡಿದರು. ಈ ಕೆಲಸ ಮಾಡಿದ್ದಕ್ಕಾಗಿ ಇಂದು ನೂರಾರು ಕೆರೆಗಳು ತುಂಬಿವೆ. ಲಕ್ಷಾಂತರ ಎಕರೆ ಕೃಷಿ ಮಾಡುತ್ತಿದ್ದಾರೆ ಎಂದರು.

ಈ ಹಿಂದೆ ಕೃಷಿ ಸಚಿವರಾಗಿದ್ದ ಕೃಷ್ಣಪ್ಪ ಅವರ ಕಾಲದಲ್ಲಿ ಡೈರಿ ಪ್ರಾರಂಭವಾಯಿತು. ಬಂಗಾರದಂತಹ ಜಿಲ್ಲೆಯಿಂದ ಚುನಾವಣೆ ಪ್ರಾರಂಭಿಸಿದ್ದೇವೆ‌. ಇವತ್ತು ಜನರು ಮೋದಿ ಸರ್ಕಾರದಿಂದ ಬೇಸತ್ತಿದ್ದಾರೆ. ಇದಕ್ಕಿಂತ ಹೆಚ್ಚಿಗೆ ಜನರು 40% ಕಮಿಷನ್​ಗೆ ಬೇಸತ್ತರು. ಹೀಗಾಗಿ ಕಾಂಗ್ರೆಸ್​ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಸ್ವಯಂಪ್ರೇರಿತರಾಗಿ ಬರ್ತಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಮೋದಿ, ಶಾ ಒಂದೂ ಮಾತು ಹೇಳಲ್ಲ. ಆದರೆ ಎಲ್ಲಿ ಹೋದರಲ್ಲಿ ಕಾಂಗ್ರೆಸ್​ ಪಕ್ಷವನ್ನು ಬಯ್ಯುತ್ತಾ ಒಂಭತ್ತು ವರ್ಷ ಕಳೆದರು. ಇಲ್ಲಿ ಬಂದಾಗ ಡಬಲ್ ಇಂಜಿನ್ ಸರ್ಕಾರ ಕರ್ನಾಟಕಕ್ಕೇನು ಕೊಟ್ಟಿದೆ ಎಂದು ಹೇಳಬೇಕು ಎಂದು ಹೇಳಿದರು.

ಭಾರತ್ ಜೊಡೋ ಯಾತ್ರೆಯನ್ನು ಯಶಸ್ವಿಯಾಗಿ ಮಾಡಿ ಪ್ರಪಂಚಾದ್ಯಂತ ಹೆಸರಾಗಿರುವವರು ರಾಹುಲ್ ಗಾಂಧಿ. ಇದು ವಿಶೇಷವಾದ ಚುನಾವಣೆಯ ಸಭೆ. 18 ಕೋಟಿ ನೌಕರಿ ಕೊಡಬೇಕಾಗಿತ್ತು, ಎಲ್ಲಿ ಕೊಟ್ಟರು?. ಅದಾನಿಯವರಂಥ ಕಂಪನಿಗಳಿಗೆ ಮಾರಾಟ ಮಾಡಿ ಯುವಕರನ್ನು ರಸ್ತೆಗೆ ಹಾಕಿದ್ದಾರೆ. ಈ ಹಿಂದೆ 70 ವರ್ಷದಲ್ಲಿ ಆಗಿಲ್ಲದೇ ಇರುವುದನ್ನು ಮೋದಿ ಒಂಭತ್ತು ವರ್ಷದಲ್ಲಿ ಮಾಡಿದ್ದಾರೆ ಎಂದು ಸುಳ್ಳು ಹೇಳುತ್ತಾರೆ‌. ರಾಹುಲ್ ಐದಾರು ಪ್ರಶ್ನೆಗಳನ್ನು ಸದನದಲ್ಲಿ ಕೇಳಿದ್ರು. 2014 ರಲ್ಲಿ 50 ಸಾವಿರ ಕೋಟಿ ಆಸ್ತಿ ಇರುತ್ತೆ. 2023 ರಲ್ಲಿ 12 ಲಕ್ಷ ಕೋಟಿ ಆಗುತ್ತೆ. ಇದೆಲ್ಲಿಂದ ಬಂತು ಅಂತ ಕೇಳಿದ್ರು. ಮೋದಿ ಅವರು ಹೊರಗಡೆ ಹೋದಾಗ ಅದಾನಿ ಎಲ್ಲೆಲ್ಲಿ ಭೇಟಿ ಆದರು ಅಂತ ಕೇಳಿದ್ರು. ಇದರಿಂದಾಗಿ ಅವರ ಮೇಲೆ ಕೇಸ್ ಹಾಕಿದ್ರು ಎಂದು ಆಕ್ರೋಶ ವ್ಯಕ್ತಪಡಿಸಿದರು.

'ಯಾರೇ ಮುಖ್ಯಮಂತ್ರಿಗಳಾಗಿ ನನಗೆ ಬೇಕಾಗಿಲ್ಲ': ಕೋಲಾರದಲ್ಲಿ ಮಾತನಾಡಿದ್ದಕ್ಕೆ ಗುಜರಾತ್​ನಲ್ಲಿ ಎಫ್.ಐ.ಆರ್ ಮಾಡಿದ್ರು. 24 ಗಂಟೆಯಲ್ಲಿ ಲೋಕಸಭೆ ಸದಸ್ಯತ್ವ ಅನರ್ಹಗೊಳಿಸಿದ್ರು. ಮನೆ ಕಸಿದುಕೊಂಡ್ರು. ಹೀಗಾಗಿ ಪ್ರಜಾಪ್ರಭುತ್ವ ಉಳಿಸಬೇಕಾಗಿದೆ. ನೀವು ಯಾರೇ ಮುಖ್ಯಮಂತ್ರಿಗಳಾಗಿ ನನಗೆ ಬೇಕಾಗಿಲ್ಲ. ನನಗೆ ಬೇಕಾಗಿರುವುದು ಕಾಂಗ್ರೆಸ್​ ಪಾರ್ಟಿ ಅಧಿಕಾರಕ್ಕೆ ಬರಬೇಕು. ನೀವು ಸಿಎಂ ಸ್ಥಾನದ ಕುರಿತು ತಲೆಕೆಡಿಸಿಕೊಳ್ಳಬೇಡಿ, ಜನ ತೀರ್ಮಾನ ಮಾಡ್ತಾರೆ‌, ಎಲ್ಲರೂ ಕೈಗೂಡಿದರೆ ಮಾತ್ರ ಆಗುತ್ತದೆ. ಒಂದು ಕೈನಲ್ಲಿ ಚಪ್ಪಾಳೆ ತಟ್ಟಲು ಆಗುವುದಿಲ್ಲ ಎಂದು ವೇದಿಕೆ ಮೇಲಿದ್ದ ಸಿದ್ದರಾಮಯ್ಯ ಹಾಗೂ ಡಿಕೆಶಿಗೆ ಪರೋಕ್ಷವಾಗಿ ಕಿವಿಮಾತು ಹೇಳಿದರು.

ಇದನ್ನೂ ಓದಿ: ಇಂದು, ನಾಳೆ ರಾಜ್ಯದಲ್ಲಿ ರಾಹುಲ್ ಹವಾ.. ಕಾಂಗ್ರೆಸ್ ಪ್ರಚಾರಕ್ಕೆ ಹೊಸ ಚೈತನ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.