ಕೊಡಗು : ಮಡಿಕೇರಿ ಕೆಎಸ್ಆರ್ಟಿಸಿ ಮ್ಯಾನೇಜರ್ ಕಿರುಕುಳ ಆರೋಪ ಹಿನ್ನೆಲೆ ಸಿಬ್ಬಂದಿಯೊಬ್ಬರು ಡಿಪೋ ವ್ಯವಸ್ಥಾಪಕಿ ಹಾಗೂ ಡಿಸಿ ಎದುರೇ ಬಸ್ ಡಿಪೋದಲ್ಲಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಕಿರಿಯ ಸಹಾಯಕ ಅಭಿಷೇಕ್ (27) ಆತ್ಮಹತ್ಯೆಗೆ ಯತ್ನಿಸಿದ ಸಿಬ್ಬಂದಿ ಎಂದು ತಿಳಿದು ಬಂದಿದೆ.
ಕೆಎಸ್ಆರ್ಟಿಸಿ ವ್ಯವಸ್ಥಾಪಕಿ ಹಾಗೂ ಕೆಎಸ್ಆರ್ಟಿಸಿ ಡಿಸಿ ಜೊತೆಗೆ ಮಂಗಳವಾರ ಸಂಜೆ ಜಗಳ ಮಾಡಿದ್ದ ಅಭಿಷೇಕ್ ಬುಧವಾರ ಡಿಪೋದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಆತ್ಮಹತ್ಯೆಗೆ ಯತ್ನಿಸಿದ್ದ ಅಭಿಷೇಕ್ನನ್ನು ಅಲ್ಲಿನ ಸಿಬ್ಬಂದಿ ನಗರದ ಮೆಡಿಕಲ್ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಪುತ್ತೂರು ವಿಭಾಗದ ಡಿಸಿ ಮತ್ತು ಕಳೆದ ಎಂಟು ವರ್ಷದಿಂದ ವ್ಯವಸ್ಥಾಪಕಿಯಾಗಿರುವರು ಇತ್ತೀಚೆಗೆ ವರ್ಗಾವಣೆಯಾದರೂ ರಿಲೀವ್ ಆಗಿರಲಿಲ್ಲ. ಆತ್ಮಹತ್ಯೆ ಯತ್ನಕ್ಕೂ ಮೊದಲು ಬೆಂಗಳೂರಿನ ಕೇಂದ್ರ ಕಚೇರಿಯ ವ್ಯವಸ್ಥಾಪಕರಿಗೆ ಅಭಿಷೇಕ್ ಪತ್ರ ಬರೆದಿದ್ದಾರೆ. ವ್ಯವಸ್ಥಾಪಕಿ ಹಾಗೂ ಡಿಸಿ ತಮಗೆ ನಿರಂತರ ಕಿರುಕುಳ ನೀಡುತ್ತಿದ್ದಾರೆ ಎಂದು ಅಭಿಷೇಕ್ ತಾವು ಬರೆದ ಪತ್ರದಲ್ಲಿ ಪ್ರಸ್ತಾಪ ಮಾಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ನನ್ನ ಆತ್ಮಹತ್ಯೆಗೆ ಇವರಿಬ್ಬರೇ ನೇರ ಕಾರಣ ಎಂದು ಅವರು ಆ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.
ಅಭಿಷೇಕ್ ತಾಯಿ ಆರೋಪ ಏನು?: ’’ನನ್ನ ಮಗನಿಗೆ ಪುತ್ತೂರಿನಲ್ಲಿ ಕಿರುಕುಳ ನೀಡಿದರು. ಬಳಿಕ ಅಲ್ಲಿಂದ ನನ್ನ ಮಗ ಮಡಿಕೇರಿ ಡಿಪೋಗೆ ವರ್ಗಾಯಿಸಿಕೊಂಡ. ಆಗಲೂ ಸಹ ಪುತ್ತೂರಿನಲ್ಲಿ ಕಿರುಕುಳ ತಪ್ಪಿರಲಿಲ್ಲ. ಬಳಿಕ ಮಡಿಕೇರಿಗೆ ಬಂದಾಕ್ಷಣವೂ ಕಿರುಕುಳ ಮುಂದುವರಿಯಿತು. ಕಳೆದ ಮೂರು ವರ್ಷಗಳಿಂದ ಇಲ್ಲಿ ನನ್ನ ಮಗ ಕಾರ್ಯ ನಿರ್ವಹಿಸುತ್ತಿದ್ದಾನೆ. ಇತ್ತಿಚೇಗೆ ಆತನಿಗೆ ಕಿರುಕುಳ ಹೆಚ್ಚಾಗಿದೆ. ರಾತ್ರಿ 12 ಗಂಟೆ ಕಳೆದ್ರೂ ಸಹ ಕೆಲಸ ಮಾಡುತ್ತಿದ್ದನು. ಇದರಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಅಭಿಷೇಕ್ ತಾಯಿ ಆರೋಪಿಸಿದ್ದಾರೆ.
ಆತ್ಮಹತ್ಯೆಗೆ ಯತ್ನಿಸಿರುವ ಅಭಿಷೇಕ್ ಬರೆದಿರುವ ಪತ್ರ ಸಹ ಲಭ್ಯವಾಗಿದೆ. ವಾರ್ಷಿಕ ಗುಣ ವಿಮರ್ಶೆಯಲ್ಲಿ ಅತೃಪ್ತಿಕರ ಎಂದು ಬರೆಯಲಾಗಿತ್ತು. ಈ ಸಂಬಂಧ ಅಭಿಷೇಕ್ಗೆ ನೋಟಿಸ್ ಸಹ ಜಾರಿಯಾಗಿತ್ತು,. ಈ ಹಿನ್ನೆಲೆ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ತಿಳಿದುಬಂದಿದೆ. ಸದ್ಯ ಅಭಿಷೇಕ್ಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಕೆಎಸ್ಆರ್ಟಿಸಿ ಸಿಬ್ಬಂದಿ ಸ್ಥಿತಿ ಚಿಂತಾಜನಕವಾಗಿದೆ. ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
ಈ ಬಗ್ಗೆ ಇನ್ನೂ ಪೊಲೀಸ್ ಅಧಿಕಾರಿಗಳಿಂದ ಅಧಿಕೃತ ಹೇಳಿಕೆ ಲಭ್ಯವಾಗಬೇಕಿದೆ.