ETV Bharat / state

ಕೊಡಗು: ಪ್ರವಾಸೋದ್ಯಮ ಸಾಧಕ ಬಾಧಕ.. ಒಂದು ಸಂವಾದ

author img

By

Published : Oct 6, 2021, 10:59 PM IST

ಕೊಡಗು ಹೋಟೆಲ್​​, ರೆಸಾರ್ಟ್ ಮತ್ತು ಹೋಂಸ್ಟೇ ಅಸೋಸಿಯೇಷನ್ ಜತೆಗೆ ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಪ್ರವಾಸೋದ್ಯಮದ ಸಾಧಕ ಭಾದಕಗಳ ಕುರಿತು ಸಂವಾದ ಆಯೋಜಿಸಲಾಗಿತ್ತು.

kodagu
ಕೊಡಗು

ಕೊಡಗು: ದಕ್ಷಿಣದ ಕಾಶ್ಮೀರ, ಸ್ಕಾಟ್ ಲ್ಯಾಂಡ್ ಆಫ್ ಇಂಡಿಯಾ ಎಂದೆಲ್ಲ ಕರೆಸಿಕೊಳ್ಳುವ ಕೊಡಗು ಜಿಲ್ಲೆ ಪ್ರವಾಸೋದ್ಯಮದಿಂದ ಕಳೆದ 15 ವರ್ಷಗಳಿಂದ ಗಮನ ಸೆಳೆದಿದೆ. ಆದರೆ ಪ್ರವಾಸೋದ್ಯಮದಿಂದಾಗಿಯೇ ಕೊಡಗಿನ ಪರಿಸರ ಹಾಳಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.

ಕೊಡಗು: ಪ್ರವಾಸೋದ್ಯಮದ ಸಾಧಕ ಬಾಧಕಗಳ ಕುರಿತು ಸಂವಾದ

ಈ ಹಿನ್ನೆಲೆ ಇಂದು ಕೊಡಗು ಹೋಟೆಲ್​​, ರೆಸಾರ್ಟ್ ಮತ್ತು ಹೋಂಸ್ಟೇ ಅಸೋಸಿಯೇಷನ್ ಜತೆಗೆ ಕೊಡಗು ಪ್ರೆಸ್ ಕ್ಲಬ್​​​​​​ನಿಂದ ಪ್ರವಾಸೋದ್ಯಮದ ಸಾಧಕ ಭಾದಕಗಳ ಕುರಿತು ಸಂವಾದ ಆಯೋಜಿಸಲಾಗಿತ್ತು.

ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಬಹುತೇಕ ಪ್ರಮಾಣದಲ್ಲಿ ಕಾಫಿ ಬೆಳೆಯಲಾಗುತ್ತಿದೆ. ಆದರೆ, ಕಾಫಿಗೆ ಉತ್ತಮ ಬೆಲೆ ಸಿಗದೇ, ಉತ್ಪಾದನಾ ವೆಚ್ಚವೂ ಮಿತಿಮೀರಿ ಕಾಫಿ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗೆ ಸಂಕಷ್ಟಕ್ಕೆ ಸಿಲುಕಿರುವ ಕಾಫಿ ಬೆಳೆಗಾರರಿಗೆ ಪರ್ಯಾಯ ಆದಾಯದ ಮೂಲವಾಗಿ ಹೋಂಸ್ಟೇ ಮತ್ತು ರೆಸಾರ್ಟ್ ಉದ್ಯಮ ಬೆಳೆದಿದೆ ಎಂದು ಹೋಂಸ್ಟೇ, ರೆಸಾರ್ಟ್ ಮತ್ತು ಹೋಟೆಲ್​​ ಅಸೋಸಿಯೇಷನ್ ಮುಖಂಡರು ಸಂವಾದದಲ್ಲಿ ಪ್ರತಿಪಾದಿಸಿದರು.

ಇದಕ್ಕೆ ಕೂಡಲೇ ವಿರೋಧ ವ್ಯಕ್ತಪಡಿಸಿದ ಪ್ರವಾಸೋದ್ಯಮ ವಿರೋಧಿ ಹೋರಾಟ ಸಮಿತಿ ಮುಖಂಡರು ಕೊಡಗಿನಲ್ಲಿ ಪ್ರವಾಸೋದ್ಯಮ ಅವಲಂಬಿತರು ಇರುವುದು ಶೇ.5 ರಷ್ಟು ಜನರು ಮಾತ್ರ. ಉಳಿದಂತೆ ಎಲ್ಲರೂ ಕೃಷಿಯನ್ನು ನಂಬಿ ಬದುಕುತ್ತಿದ್ದಾರೆ ಎಂದರು.

ಸ್ಥಳೀಯರು ನೆಮ್ಮದಿ ಕಳೆದುಕೊಂಡಿದ್ದಾರೆ..

ಕೊಡಗಿನಲ್ಲಿ ಹೋಂಸ್ಟೇ ಆರಂಭವಾದಾಗ ಪ್ರವಾಸಿಗರನ್ನು ನೆಂಟರಂತೆ ಕಂಡು ಕಳುಹಿಸುವ ಸ್ಥಿತಿ ಇತ್ತು. ಆದರೆ, ಸ್ಥಿತಿ ಸಂಪೂರ್ಣ ಬದಲಾಗಿದೆ. ಮನೆಗಳನ್ನು ಬಾಡಿಗೆಗೆ ಪಡೆದುಕೊಂಡು ಹೋಂಸ್ಟೇ ನಡೆಸುತ್ತಿದ್ದಾರೆ.

ಪ್ರವಾಸಿಗರಿಗೆ ಸಮಯ ಎಂಬುದೇ ಇಲ್ಲ. ರಾತ್ರಿ ವೇಳೆಯಲ್ಲಿ ಪ್ರವಾಸಿಗರು ರಸ್ತೆ ಬದಿಗಳ ಮನೆಗಳ ಬಾಗಿಲು ಬಡಿದು ವಿಳಾಸ ಕೇಳುವುದು, ಮಾರ್ಗಗಳನ್ನು ಕೇಳುವುದು ಮಾಡುತ್ತಿದ್ದಾರೆ. ಕೊಡಗಿನ ರಸ್ತೆ ರಸ್ತೆಗಳಲ್ಲಿ ಮದ್ಯ ಸೇವಿಸಿ ಎಲ್ಲೆಂದರಲ್ಲಿ ಬಾಟೆಲ್, ಪ್ಲಾಸ್ಟಿಕ್ ಬಿಸಾಡಿ ಹೋಗುತ್ತಿದ್ದಾರೆ. ಇದರಿಂದಾಗಿ ಸ್ಥಳೀಯ ಜನರು ನೆಮ್ಮದಿ ಕಳೆದುಕೊಂಡಿದ್ದಾರೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಮುಖ್ಯವಾಗಿ ದಿನಕ್ಕೆ ಇಂತಿಷ್ಟು ಪ್ರವಾಸಿಗರಿಗೆ ಮಾತ್ರ ಅವಕಾಶ, ಧಾರ್ಮಿಕ ಸ್ಥಳಗಳಿಗೆ ಡ್ರೆಸ್ ಕೋಡ್, ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಮೂಲ ಸೌಕರ್ಯ ಮತ್ತು ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಬೇಕು ಎಂಬ ಎನ್ನುವ ಒಟ್ಟಾಭಿಪ್ರಾಯ ಸಭೆಯಿಂದ ಮೂಡಿ ಬಂತು.

ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಕಳೆದ 15 ವರ್ಷದಿಂದ ಪ್ರವಾಸಿಗರನ್ನು ಸೆಳೆಯಲು ಕೊಡಗಿನ ಧಾರ್ಮಿಕ ಕ್ಷೇತ್ರಗಳನ್ನು ಪ್ರವಾಸಿ ತಾಣ ಎಂಬ ಪಟ್ಟಿಗೆ ಸೇರಿಸಿರುವುದರಿಂದ ಇದೀಗ ಜಿಲ್ಲೆಯ ಪ್ರವಾಸೋದ್ಯಮದ ಬಗ್ಗೆ ಪರ, ವಿರೋಧ ಚರ್ಚೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಪರಿಸರ ಪೂರಕ ಪ್ರವಾಸೋದ್ಯಮ ಕಲ್ಪನೆ ಮಾಡಲಿ ಎಂಬುವುದು ಜಿಲ್ಲೆಯ ಜನರ ಆಗ್ರಹವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.