ETV Bharat / state

ಕಲಬುರಗಿ ಪೊಲೀಸರ ಭರ್ಜರಿ‌ ಕಾರ್ಯಾಚರಣೆ: ಇಬ್ಬರು ಕುಖ್ಯಾತ ಸರಗಳ್ಳರ ಬಂಧನ

author img

By ETV Bharat Karnataka Team

Published : Oct 16, 2023, 8:35 AM IST

kalaburagi police
ಕಲಬುರಗಿ ಪೊಲೀಸರ ಭರ್ಜರಿ‌ ಕಾರ್ಯಚರಣೆ

ಕಲಬುರಗಿ ನಗರದ ಮಹಿಳೆಯರ ನಿದ್ದೆಗೆಡಿಸಿದ್ದ ಖತರ್ನಾಕ್ ಸರಗಳ್ಳರನ್ನು ಪೊಲೀಸರು ಅರೆಸ್ಟ್ ಮಾಡಿ ಜೈಲಿಗಟ್ಟಿದ್ದಾರೆ.

ಕಲಬುರಗಿಯಲ್ಲಿ ಇಬ್ಬರು ಕುಖ್ಯಾತ ಸರಗಳ್ಳರ ಬಂಧನ

ಕಲಬುರಗಿ : ಜಿಲ್ಲಾ ಪೊಲೀಸರು ಭರ್ಜರಿ‌ ಕಾರ್ಯಾಚರಣೆ ನಡೆಸುವ ಮೂಲಕ 15 ಸರ ಕಳ್ಳತನ ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಬ್ಬರು ಕುಖ್ಯಾತ ಸರಗಳ್ಳರನ್ನು ಬಂಧಿಸಲಾಗಿದ್ದು, ಆರೋಪಿಗಳಿಂದ 298 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿಕೊಳ್ಳಲಾಗಿದೆ. ಕಲಬುರಗಿ ಮೂಲದ ಶೇಖ್ ಅಜರುದ್ದೀನ್ (26) ಹಾಗೂ ಮುಹಮ್ಮದ್ ತೌಸೀಫ್ (23) ಬಂಧಿತರು.

ಬಂಧಿತ ಇಬ್ಬರು ಆರೋಪಿಗಳು ಕಳೆದೊಂದು ವರ್ಷದಿಂದ ನಗರದ ವಿವಿಧೆಡೆ ಕಳ್ಳತನ ಮಾಡಿ ಪರಾರಿಯಾಗಿದ್ದರು. ಅಶೋಕ್ ನಗರ, ಸ್ಟೇಷನ್ ಬಜಾರ್, ಆರ್ ಜಿ ನಗರ, ಎಂ ಬಿ ನಗರ, ಕಲಬುರಗಿ ವಿಶ್ವವಿದ್ಯಾಲಯ ಠಾಣೆ ಮತ್ತು ಬ್ರಹ್ಮಪುರ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಮೇಲೆ ಬಂದು ಮಹಿಳೆಯರ ಕೊರಳಿಗೆ ಕೈಹಾಕಿ ಚಿನ್ನದ ಸರ ಕದ್ದು ಪರಾರಿಯಾಗಿದ್ರು. ನಿರಾಯಾಸವಾಗಿ ಸರಗಳ್ಳತನ ಮಾಡುತ್ತಾ ಒಂದು ವರ್ಷದಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿಕೊಂಡು ಓಡಾಡುತ್ತಿದ್ದ ಇವರ ಬಂಧನಕ್ಕಾಗಿ ವಿಶೇಷ ಪೊಲೀಸ್ ತಂಡ ರಚಿಸಿಕೊಂಡು ಫೀಲ್ಡ್​ಗಿಳಿದ ಪೊಲೀಸರು ಇದೀಗ ಆರೋಪಿಗಳನ್ನು ಹೆಡೆಮುರಿಕಟ್ಟಿದ್ದಾರೆ.

ಆರೋಪಿಗಳ ಬಂಧನದಿಂದ ಒಟ್ಟು 15 ಸರಗಳ್ಳತನ ಪ್ರಕರಣಗಳನ್ನು ಭೇದಿಸಿದಂತಾಗಿದೆ. ಬಂಧಿತರಿಂದ 17 ಲಕ್ಷದ 88 ಸಾವಿರ ಮೌಲ್ಯದ 298 ಗ್ರಾಂ ಚಿನ್ನಾಭರಣ ಮತ್ತು ಕೃತ್ಯಕ್ಕೆ ಬಳಸುತ್ತಿದ್ದ ಎರಡು ಬೈಕ್​ಗಳನ್ನು ಜಪ್ತಿ‌ ಮಾಡಿಕೊಂಡಿದ್ದಾಗಿ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.

ಓರ್ವ ಆರೋಪಿ ಟಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಇನ್ನೋರ್ವ ಫರ್ನಿಚರ್ ವರ್ಕ್ ಮಾಡುತ್ತಿದ್ದ. ಬೈಕ್​ನಲ್ಲಿ ಫೀಲ್ಡ್​ಗೆ ಇಳಿಯುತ್ತಿದ್ದ ಆರೋಪಿಗಳು ನಗರಾದ್ಯಂತ ಓಡಾಡಿ ಮಹಿಳೆಯರ ಚಿನ್ನದ ಸರಗಳನ್ನು ಎಗರಿಸಿ ಎಸ್ಕೇಪ್ ಆಗುತ್ತಿದ್ದರು. ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಆರೋಪಿಗಳನ್ನು ಖಾಕಿ ಪಡೆ ಬಂಧಿಸಿದೆ.

ಕದ್ದ ಸ್ವತ್ತಿನಲ್ಲಿ ಕೆಲವನ್ನು ತಮ್ಮ ಬಳಿ ಇಟ್ಟುಕೊಂಡಿದ್ರೆ, ಇನ್ನೂ ಕೆಲವೊಂದನ್ನು ವ್ಯಕ್ತಿಯೊಬ್ಬರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡಿದ್ದಾರೆ. ಮತ್ತಷ್ಟು ಚಿನ್ನವನ್ನು ಮುತ್ತೂಟ್​ ಫೈನಾನ್ಸ್​ನಲ್ಲಿ ಅಡವಿಟ್ಟಿದ್ದಾರೆ ಎಂದು ಪೊಲೀಸ್ ಕಮಿಷನರ್ ಚೇತನ್ ಆರ್ ತಿಳಿಸಿದ್ದಾರೆ.

ನಗರದಲ್ಲಿ ಇವರಂತೆ ಮತ್ತೊಂದು ತಂಡ ಸರಗಳ್ಳತನ‌ ಮಾಡುತ್ತಿದ್ದು, ಅವರನ್ನು ಶೀಘ್ರವೇ ಬಂಧಿಸುವುದಾಗಿ ಪೊಲೀಸರು ಭರವಸೆ ವ್ಯಕ್ತಪಡಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಅಶೋಕ್​ ನಗರ ಠಾಣೆಯ ಪಿಐ ಅರುಣ ಕುಮಾರ್​, ಸ್ಟೇಷನ್​ ಬಜಾರ್​ ಠಾಣೆಯ ಶಕೀಲ್ ಅಂಗಡಿ ಹಾಗೂ ಸಿಬ್ಬಂದಿ ಕಾರ್ಯಕ್ಕೆ ಕಮಿಷನರ್ ಚೇತನ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಬುದ್ಧಿಮಾಂದ್ಯನಂತೆ ನಟಿಸಿ ₹50 ಲಕ್ಷ ಮೌಲ್ಯದ 150 ಮೊಬೈಲ್ ಕಳವು ; ಐನಾತಿ ಕಳ್ಳ ಕೊನೆಗೂ ಸೆರೆ

ಇತ್ತೀಚಿನ ಪ್ರಕರಣ- 108 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿ ಬಂಧನ : ಇನ್ನು ಬೆಂಗಳೂರು ನಗರದಲ್ಲಿ ಜನರಿಗೆ ಕೋಟಿಗಟ್ಟಲೇ ರೂಪಾಯಿ ವಂಚಿಸಿ, ಆರು ವರ್ಷಗಳಿಂದ ತಲೆಮರೆಸಿಕೊಂಡಿದ್ದ 108 ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಸಿಸಿಬಿಯ ವಿಶೇಷ ವಿಚಾರಣಾ ದಳದ ಅಧಿಕಾರಿಗಳು ಕಳೆದ ಮಾರ್ಚ್​ ತಿಂಗಳಲ್ಲಿ ಬಂಧಿಸಿದ್ದಾರೆ. ಅಶ್ವಾಕ್ ಅಹಮದ್ ಬಂಧಿತ ಆರೋಪಿ.

ಇದನ್ನೂ ಓದಿ : 80 ಪ್ರಕರಣಗಳಲ್ಲಿ ಭಾಗಿ, ಜೈಲಿಗೆ ಹೋಗಿಬಂದರೂ ಬುದ್ಧಿ ಕಲಿಯದ ಸರಗಳ್ಳ : ಮತ್ತೆ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.