ETV Bharat / state

ಮೊಹರಂ ಆಚರಣೆ ವೇಳೆ ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ: 8 ಮಂದಿಗೆ ಗಂಭೀರ ಗಾಯ

author img

By

Published : Jul 30, 2023, 3:26 PM IST

crime-fight-between-two-families-during-muharram-celebrations-in-chittapura-at-kalaburagi
ಮೊಹರಂ ಆಚರಣೆ ವೇಳೆ ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ: 8 ಮಂದಿಗೆ ಗಂಭೀರ ಗಾಯ

ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ ನಡೆದು, ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿತ್ತಾಪುರದಲ್ಲಿ ನಡೆದಿದೆ.

ಕಲಬುರಗಿ: ಹಿಂದೂ ಮುಸ್ಲಿಂ ಭಾವೈಕ್ಯತೆಯ ಪ್ರತೀಕವಾದ ಮೊಹರಂ ಹಬ್ಬದ ದಿನದಂದೇ, ಹಳೆ ದ್ವೇಷಕ್ಕೆ ಎರಡು ಕುಟುಂಬಗಳ ನಡುವೆ ಮಾರಾಮಾರಿ ಉಂಟಾಗಿರುವ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ನಡೆದಿದೆ. ಒಂದೇ ಸಮುದಾಯಕ್ಕೆ ಸೇರಿದ ಹೊನಗುಂಟಾ ಮತ್ತು ಗೋಟಾಳ್ ಕುಟುಂಬಗಳು ಹಳೆ ವೈಷಮ್ಯದ ಹಿನ್ನೆಲೆ ಪರಸ್ಪರ ಕಲ್ಲು ಹಾಗೂ ಕಟ್ಟಿಗೆಯಿಂದ ಹೊಡೆದಾಡಿಕೊಂಡಿದ್ದಾರೆ. ಈ ಘಟನೆಯಲ್ಲಿ ಎಂಟು ಜನರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರೇಮ ವಿವಾಹಕ್ಕೆ ಸಂಬಂಧಿಸಿ ಈ ಎರಡು ಕುಟುಂಬದ ಮಧ್ಯೆ ಕಳೆದ ಹಲವು ವರ್ಷಗಳಿಂದ ದ್ವೇಷವಿತ್ತು. ಮೊಹರಂ ಹಬ್ಬ ಆಚರಣೆ ಮೆರವಣಿಗೆ ನೋಡಲೆಂದು ವಿವಿಧ ಗ್ರಾಮಗಳಿಂದ ಇಂಗಳಗಿ ಗ್ರಾಮಕ್ಕೆ ಬಂದಿದ್ದ ಜನರು, ಕಲ್ಲು ತೂರಾಟದಿಂದ ಭಯದಿಂದ ದಿಕ್ಕಾಪಾಲಾಗಿ ಓಡಿದ್ದಾರೆ. ಪರಿಸ್ಥಿತಿ ಹತೋಟಿಗೆ ತರಲು ಬಂದ ಪೊಲೀಸರ ಮೇಲೂ ಕಲ್ಲು ತೂರಾಟ ನಡೆಸಲಾಗಿದೆ. ಈ ಕುರಿತಾಗಿ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಈ ಬಗ್ಗೆ ಕ್ರಮ‌ ಕೈಗೊಂಡಿದ್ದು, ಸದ್ಯ ಗ್ರಾಮದಲ್ಲಿ ಶಾಂತ ವಾತಾವರಣ ನಿರ್ಮಾಣವಾಗಿದೆ.

ಮೊಹರಂ ಹಬ್ಬದ ನಿಮಿತ್ತ ಶಿಯಾ ಸಮುದಾಯದಿಂದ ಮಾತಂ ಮೆರವಣಿಗೆ: ಶನಿವಾರ ಮೊಹರಂ ಹಬ್ಬವನ್ನು ಜಿಲ್ಲೆಯಲ್ಲಿ ಅದ್ಧೂರಿಯಾಗಿ ಆಚರಣೆ ಮಾಡಲಾಯಿತು. ಮೊಹರಂ ನಿಮಿತ್ತ ಶಿಯಾ ಸಮುದಾಯದವರು ಮಾತಂ ಮೆರವಣಿಗೆ ಮಾಡಿದರು. ತಾರಫೈಲ್ ಬಡಾವಣೆಯಿಂದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದವರೆಗೆ ಶಿಯಾ ಸಮುದಾಯದ ನೂರಾರು ಪುರುಷರು ಹಾಗೂ ಮಹಿಳೆಯರು ಸೇರಿ ಅನೇಕರು ತಮ್ಮ ದೇಹ ದಂಡಿಸಿಕೊಂಡು ಮೆರವಣಿಗೆ ಮಾಡಿದರು.

ಮೊಹರಂ ನಿಮಿತ್ತ ಅಲ್ಲಾನನ್ನು ಸ್ಥಾಪಿಸಿ, ಕೊನೆಯ ದಿನದಂದು ಮಾತಂ ಮೆರವಣಿಗೆಯನ್ನು ಮಾಡುವ ಮೂಲಕ ವಿಶೇಷವಾಗಿ ಆಚರಿಸಿದರು. ಹಜರತ್ ಇಮಾಮ್ ಹುಸೇನ್ ಅವರು ಮೊಹರಂ ತಿಂಗಳಲ್ಲಿ ಹುತಾತ್ಮರಾದ ಇತಿಹಾಸದ ಹಿನ್ನೆಲೆಯಲ್ಲಿ ತ್ಯಾಗ ಮತ್ತು ಬಲಿದಾನದ ದು:ಖದ ದಿನವನ್ನಾಗಿ ಈ ಸಮುದಾಯದವರು ಮೊಹರಂ ಹಬ್ಬವನ್ನು ಪ್ರತಿ ವರ್ಷ ಆಚರಿಸುತ್ತಾರೆ. ಅಂತೆಯೇ ಈ ವರ್ಷವೂ ನಗರದ ವಿವಿಧೆಡೆ ಶಿಯಾ ಸಮುದಾಯದವರು ಸಾಂಪ್ರದಾಯಿಕ ಮೊಹರಂ ಹಬ್ಬವನ್ನು ನೆರವೇರಿಸಿದರು.

ಇನ್ನೊಂದಡೆ ಶನಿವಾರ ಬೆಳಗಿನ ಜಾವ 3 ಗಂಟೆಯಿಂದ ನಗರದ ಎಲ್ಲಾ ಆಲಂ ದೇವರು ಬೋರಾಬಾಯಿ ನಗರದ ಬಳಿ ಇರುವ ಶಾ ಹುಸೇನಿ ಚಿಲ್ಲಾ ಸಮೀಪದಲ್ಲಿ ಸೇರಿದ್ದರು. ವಿವಿಧೆಡೆಯಿಂದ ಬಂದ ಆಲಂ ದೇವರು ಪರಸ್ಪರ ಭೇಟಿಯಾಗಿ ಅಲ್ಲಿನ ಬಾವಿಯ ಸುತ್ತಲೂ ಸೇರಿ ಮಜಮಾ ಮಾಡಿದರು. ಕೊನೆಗೆ ಎಲ್ಲಾ ಆಲಂ ದೇವರ ಪಂಜಾಗಳನ್ನು ಬಾವಿಯಲ್ಲಿ ಇಣುಕಿ ನೋಡಿದಾಗ ಶಾಂತವಾಗುವ ಪೀರ್ ಅವರು ಶೋಕಾಚರಣೆಯಲ್ಲಿ ತಮ್ಮ, ತಮ್ಮ ಸ್ವ ಸ್ಥಳಗಳಿಗೆ ಹಿಂತಿರುಗಿದರು.

ನಗರದ ದರ್ಗಾ ಪ್ರದೇಶ, ಎಂಎಸ್‍ಕೆ ಮಿಲ್ ಪ್ರದೇಶ, ಜಗತ್ ಬಡಾವಣೆ, ಬ್ರಹ್ಮಪೂರ್ ಬಡಾವಣೆ, ಯಂಕವ್ವ ಮಾರುಕಟ್ಟೆ, ರಾಣೇಶ್ ಪೀರ್ ದರ್ಗಾ, ಮಾಂಗರವಾಡಿ ಸೇರಿದಂತೆ ಎಲ್ಲ ಬಡಾವಣೆಗಳಲ್ಲಿನ ಶಿಯಾ ಸಮುದಾಯದವರು ಆಲಾ ಪೀರ್ ದೇವರನ್ನು ಸ್ಥಾಪಿಸಿದ್ದರು. ಹತ್ತು ದಿನಗಳ ನಂತರ ಕೊನೆಯಲ್ಲಿ ಅವರೆಲ್ಲರೂ ಮೊಹರಂ ಹಬ್ಬದ ಮಾತಂ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಮೂಲಕ ಶ್ರದ್ಧಾ ಭಕ್ತಿಯಿಂದ ಹಬ್ಬದಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ: Shivamogga crime: ಮನೆ ವಿಚಾರಕ್ಕೆ ಶಿವಮೊಗ್ಗದಲ್ಲಿ ಸಂಬಂಧಿಕರ ಗಲಾಟೆ; ಓರ್ವನ ಕೊಲೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.