ETV Bharat / state

ನಾನು ಶಿಗ್ಗಾಂವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಕಾಂಕ್ಷಿಯಲ್ಲ : ವಿನಯ್​ ಕುಲಕರ್ಣಿ

author img

By

Published : Mar 27, 2023, 9:09 PM IST

Updated : Mar 28, 2023, 10:15 PM IST

Former Minister Vinay Kulkarni
ಮಾಜಿ ಸಚಿವ ವಿನಯ್​ ಕುಲಕರ್ಣಿ

ಮಾಜಿ ಸಚಿವ ವಿನಯ್​ ಕುಲಕರ್ಣಿ ಧಾರವಾಡ ಕ್ಷೇತ್ರದ ಮೇಲೆ ತನ್ನ ಒಲವು ತೋರುತ್ತಿದ್ದಾರೆ.

ನಾನು ಶಿಗ್ಗಾಂವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಕಾಂಕ್ಷೆಯಲ್ಲ

ಹಾವೇರಿ : ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಶಿಗ್ಗಾಂವಿ ಕ್ಷೇತ್ರದಿಂದ ಮಾಜಿ ಸಚಿವ ವಿನಯ್​ ಕುಲಕರ್ಣಿ ಸ್ಪರ್ಧೆ ಮಾಡುತ್ತಾರೆ ಎಂಬ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದ್ದವು. ಇದೀಗ ಈ ವಿಚಾರವಾಗಿ ಹಾವೇರಿ ಜಿಲ್ಲೆ ಸವಣೂರಿನಲ್ಲಿ ಪ್ರತಿಕ್ರಿಯಿಸಿರುವ ಮಾಜಿ ಸಚಿವ ವಿನಯ್​ ಕುಲಕರ್ಣಿ, ಶಿಗ್ಗಾಂವಿ ಕ್ಷೇತ್ರಕ್ಕೆ ಸ್ಪರ್ಧಿಸುವ ವಿಚಾರದಲ್ಲಿ ನನ್ನ ವೈಯಕ್ತಿಕ ಆಸೆ ಇಲ್ಲ, ನನಗೆ ಯಾವ ದುರಾಸೆನು ಇಲ್ಲ. ನಾನು ಶಿಗ್ಗಾಂವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಕಾಂಕ್ಷಿಯಲ್ಲ ಹಾಗು ಟಿಕೆಟ್​ಗಾಗಿ ಅಪ್ಲಿಕೇಶನ್ ಕೂಡ ಹಾಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಧಾರವಾಡ ಕ್ಷೇತ್ರದ ಮೇಲೆ ಒಲವು : ಶಿಗ್ಗಾಂವಿ ಕ್ಷೇತ್ರದಲ್ಲಿ ಈಗಾಗಲೇ ಹಲವಾರು ಮುಖಂಡರು ಅರ್ಜಿ ಸಲ್ಲಿಸಿದ್ದಾರೆ. ಖಾದ್ರಿ ಅವರಷ್ಟೇ ಅಲ್ಲ, ಸೋಮಣ್ಣ ಬೇವಿನಮರದ, ಷಣ್ಮುಖಪ್ಪ ಶಿವಳ್ಳಿ, ಶಶಿಧರ್ ಎಲಿಗಾರ, ನಾಲ್ಕೈದು ಜನ ಅಲ್ಪ ಸಂಖ್ಯಾತರ ಮುಖಂಡರು ಸಹ ಅರ್ಜಿ ಸಲ್ಲಿಸಿದ್ದಾರೆ. ಸಹಜವಾಗಿ ಅವರೆಲ್ಲರೂ ಸ್ಥಳೀಯರು. ಆ ಆಧಾರದ ಮೇಲೆ ಟಿಕೆಟ್ ಕೇಳುತ್ತಿದ್ದಾರೆ. ನಾನು ಎರಡು ಬಾರಿ ಸಂಸತ್​ ಚುನಾವಣೆಗೆ ನಿಂತಿರಬಹುದು. ಎಲ್ಲರೂ ಸೇರಿ ಏನಾದರು ಮಾಡಿ ಎಂದರೆ ಆಮೇಲೆ ವಿಚಾರ ಮಾಡುವೆ ಎಂದು ವಿನಯ್​ ಕುಲಕರ್ಣಿ ತಿಳಿಸಿದರು. ನನ್ನ ಕ್ಷೇತ್ರ ಧಾರವಾಡ ನನಗೆ ಕ್ಲಿಯರ್ ಇದ್ದು, ಅಲ್ಲಿಂದ ಸಾಕಷ್ಟು ಬಾರಿ ಆಯ್ಕೆಯಾಗಿದ್ದೇನೆ, ಸೋತಿದ್ದೇನೆ. ಆ ಭಾಗಕ್ಕೆ ಸಾಕಷ್ಟು ಅಭಿವೃದ್ಧಿ ಕೂಡ ಮಾಡಿದ್ದೇನೆ. ಧಾರವಾಡದಲ್ಲಿ ಸಾಕಷ್ಟು ಗೌರವ, ಪ್ರೀತಿ ಜೊತೆಗೆ ದೊಡ್ಡ ಬಳಗವಿದೆ. ಆದರೆ ಕೋರ್ಟ್​ ಆದೇಶ ಇರುವ ಹಿನ್ನೆಲೆ ಧಾರವಾಡಕ್ಕೆ ನಾನು ತೆರಳಲು ಆಗಲ್ಲವೆಂದು ವಿನಯ್​ ಕುಲಕರ್ಣಿ ಆರೋಪಿಸಿದರು.

ನನಗೆ ಹೊಸ ಹೊಸ ಕ್ಷೇತ್ರಗಳನ್ನು ಹುಡುಕಿಕೊಳ್ಳುವುದು ಅವಶ್ಯಕತೆ ಇಲ್ಲ. ಧಾರವಾಡ ಹೋಗೋಕೆ ಆಗಿಲ್ಲ ಅನ್ನುವ ವಿಚಾರ ಬಿಟ್ಟರೆ, ಎರಡು ದಿನಗಳಿಂದ ನಾನು ಆ ಜನರ ಜೊತೆ ಇದ್ದೇನೆ ಎಂದು ಕುಲಕರ್ಣಿ ತಿಳಿಸಿದರು. ಅಲ್ಲಿಯ ಜನರು ಕೂಡ ಧಾರವಾಡದಲ್ಲೇ ನಿಲ್ಲುವಂತೆ ಒತ್ತಾಯ ಮಾಡುತ್ತಿದ್ದು, ನಾನು ಬೇರೆ ಕಡೆ ಹೋಗುತ್ತೇನೆ ಎಂಬ ವಿಚಾರಕ್ಕೆ ಅವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ತಪ್ಪು ಮಾಡದೆ ಇದ್ದರೂ ಹಲವರು ನೋವು ನೀಡುತ್ತಿದ್ದಾರೆ ಎಂದು ವಿನಯ್​ ಕುಲಕರ್ಣಿ ಬೇಸರ ವ್ಯಕ್ತಪಡಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆ ಧಮನ- ವಿನಯ್​ ಕುಲಕರ್ಣಿ : ರಾಹುಲ್ ಗಾಂಧಿಯವರ ಸ್ಥಿತಿಯನ್ನು ನೋಡಿದರೆ ಯಾರು ರಾಜಕಾರಣ ಮಾಡಬಾರದು ಎಂದು ಅನಿಸುತ್ತದೆ. ಯಾಕೆ ರಾಜಕಾರಣ ಮಾಡಬೇಕು ಎಂಬ ನೋವು ಕಾಡುತ್ತಿದೆ. ದೀನದಲಿತರು, ಹಿಂದುಳಿದವರು ಹಾಗೂ ಬಡವರನ್ನು ಮೇಲೆ ಎತ್ತುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಎಲ್ಲರನ್ನು ಸಮಾನತೆಯಿಂದ ನೋಡುವುದೇ ಕಾಂಗ್ರೆಸ್ ತತ್ವ ಸಿದ್ಧಾಂತ. ಆ ತತ್ವ ಸಿದ್ಧಾಂತದಲ್ಲಿ ನಾವು ಸಹ ನಡೆದುಕೊಳ್ಳುತ್ತಿದ್ದೇವೆ. ಇಂಥ ಸಮಯದಲ್ಲಿ ನೈತಿಕ ರಾಜಕಾರಣವನ್ನು ಮಾಡಲು ಬಿಡುತ್ತಿಲ್ಲ. ಇಂತಹ ಸನ್ನಿವೇಶದಲ್ಲಿ ಒಂದು ಶಬ್ದವನ್ನು ಮಾತನಾಡುವುದು ಕಷ್ಟವಾಗಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆ ಧಮನವಾಗುತ್ತಿದೆ ಎಂದು ವಿನಯ್​ ಕುಲಕರ್ಣಿ ತಿಳಿಸಿದರು.

ನನ್ನನ್ನು ಕ್ಷೇತ್ರದಿಂದ ದೂರವಿಟ್ಟರು- ಕುಲಕರ್ಣಿ : ಮೂರು ವರ್ಷದಿಂದ ಮನೆ, ಅಲ್ಲಿನ ಕ್ಷೇತ್ರದ ಜನರನ್ನು ಬಿಟ್ಟು, ನಾನೊಬ್ಬ ರೈತನಾಗಿ ನನ್ನ ಜಮೀನನ್ನು ಬಿಟ್ಟು, ನನ್ನ ಸಾಕು ಪ್ರಾಣಿಗಳನ್ನು ಬಿಟ್ಟು ದೂರ ಇರುವಂತ ವ್ಯವಸ್ಥೆಗೆ ನನ್ನ ದೂಡಿದ್ದಾರೆ ಎಂದು ವಿನಯ್​ ಕುಲಕರ್ಣಿ ಆರೋಪಿಸಿದರು. ಇಂಥ ನೋವಿನಲ್ಲಿ ನಾನು ಜೀವನ ಮಾಡುತ್ತಿರುವೆ. ನಮ್ಮ ಜನರಿಗಾಗಿ ನಾನು ರಾಜಕಾರಣ ಮಾಡಬೇಕಾದ ಅನಿವಾರ್ಯತೆ ಇದೆ. ನಾನು ಜನಪ್ರಿಯ ನಾಯಕ ಯಾವ ಕ್ಷೇತ್ರದಲ್ಲಿ ಆದರೂ ನಾನು ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ. ನಾನು ರಾಜಕಾರಣಿ ಆಗಿರುವುದರಿಂದ ನನ್ನ ನಮ್ಮ ಬದುಕೇ ಜನರ ಪರವಾಗಿ ಇರುತ್ತೆ ಎಂದು ಹೇಳಿದರು.

ಪಂಚಮಸಾಲಿ ಮೀಸಲಾತಿ ಕುರಿತು ಪ್ರತಿಕ್ರಿಯೆ : ಇದೇ ವೇಳೆ ಪಂಚಮಸಾಲಿ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಅಸಮಾಧಾನ ಹೊರಹಾಕಿದ ವಿನಯ್​ ಕುಲಕರ್ಣಿ ಪಂಚಮಸಾಲಿ ಸಮಾಜದ ಮೀಸಲಾತಿ ವಿಚಾರದಲ್ಲಿ ಬಸವರಾಜ ಬೊಮ್ಮಾಯಿ‌ ಎಲ್ಲರಿಗೂ 3D ತೋರಿಸಿದ್ದಾರೆ ಎಂದು ವ್ಯಂಗ್ಯವಾಡಿದರು. ಅದು ಅವೈಜ್ಞಾನಿಕವಾಗಿದ್ದು, ಯಾವ 2D? ಯಾವ 2C? ಯಾರು ಕೇಳಿಲ್ಲಾ, ಆದ್ರೆ ಬೊಮ್ಮಾಯಿ‌ 3D ತೋರಿಸಿದ್ದಾರೆ ಎಂದು ಕಿಡಿಕಾರಿದರು. ಇಂಥ ಹೊಲಸು ರಾಜಕಾರಣವನ್ನು ನಾವು ಕಲ್ಪನೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಚುನಾವಣೆ ಸಮಯದಲ್ಲಿ ಬೊಮ್ಮಾಯಿ ಸಮಾಜ ಸಮಾಜದ ಮಧ್ಯೆ ಬೆಂಕಿ ಹಚ್ಚುವ ಕೆಲಸಕ್ಕೆ ಮುಂದಾಗಿದ್ದು, ರಾಜಕೀಯ ದುರುದ್ದೇಶದಿಂದ ಮೀಸಲಾತಿ ಹಂಚಿಕೆ ಮಾಡಿದ್ದಾರೆ ಎಂದು ವಿನಯ‌ ಕುಲಕರ್ಣಿ ತಿಳಿಸಿದರು.

ಇದನ್ನೂ ಓದಿ : ಸಿಎಂ ಬೊಮ್ಮಾಯಿ ವಿರುದ್ಧ ಶಿಗ್ಗಾಂವಿ ಫೈಟರ್​​ ಯಾರು?: ಗುಟ್ಟು ಬಿಟ್ಟುಕೊಡದ ಕಾಂಗ್ರೆಸ್

Last Updated :Mar 28, 2023, 10:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.