ETV Bharat / state

ರೋಗಿಗಳ ಪಾಲಿನ ಆಪದ್ಭಾಂಧವ.. ಅನಾಥ ಶವಗಳ ಮುಕ್ತಿಧಾತ ಅಬ್ದುಲ್ ಖಾದರ್​

author img

By

Published : May 24, 2023, 8:30 PM IST

ಸಮಾಜ ಸೇವಕ ಅಬ್ದುಲ್ ಖಾದರ್
ಸಮಾಜ ಸೇವಕ ಅಬ್ದುಲ್ ಖಾದರ್

ಕಳೆದ 9 ವರ್ಷಗಳಿಂದಲೂ ಅಬ್ದುಲ್ ಖಾದರ್ ಎಂಬುವವರು ಅನಾಥ ಶವದ ಅಂತ್ಯಕ್ರಿಯೆ ನಡೆಸುತ್ತಾ ಬಂದಿದ್ದಾರೆ. ಇವರ ಸೇವೆಗೆ ಹಲವು ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ.

ಸಮಾಜ ಸೇವಕ ಅಬ್ದುಲ್ ಖಾದರ್

ಹಾವೇರಿ : ನಗರೀಕರಣ, ಆಧುನಿಕತೆಯ ನಡುವೆ ಮಾನವೀಯ ಮೌಲ್ಯಗಳು ಕಣ್ಮರೆಯಾಗುತ್ತಿವೆ. ಅಕ್ಕಪಕ್ಕದ ಸಾವು ನೋವುಗಳಿಗೆ ಜನನ ಮರಣಗಳಿಗೆ ಸಹ ಸ್ಪಂದಿಸದ ವಾತಾವರಣ ನಿರ್ಮಾಣವಾಗುತ್ತಿದೆ. ಆದರೆ, ಹಾವೇರಿ ನಗರದಲ್ಲೊಬ್ಬರು ಆಪದ್ಬಾಂಧವರಿದ್ದಾರೆ. ಅಬ್ದುಲ್ ಖಾದರ್ ಹೆಸರಿನ ಇವರು ನಗರದಲ್ಲಿ ಎಲ್ಲಿಯೇ ಅಪಘಾತಗಳಾಗಲಿ, ಅನಾಥ ಶವ ಪತ್ತೆಯಾದರೆ ಕ್ಷಣಾರ್ಧದಲ್ಲಿ ಅಲ್ಲಿಗೆ ಹಾಜರಾಗುತ್ತಾರೆ.

ಅನಾಥ ಶವದ ಅಂತ್ಯಕ್ರಿಯೆ ನಡೆಸುವ ಅಬ್ದುಲ್​: ಪೊಲೀಸರಿಗೆ ಮಾಹಿತಿ ತಿಳಿಸಿ ಅನಾಥ ಶವಗಳನ್ನು ತೆಗೆದುಕೊಂಡು ಬಂದು ಹಾವೇರಿಯ ಶವಾಗಾರದಲ್ಲಿರಿಸುತ್ತಾರೆ. ಅನಾಥ ಶವಕ್ಕೆ ಯಾರಾದರೂ ವಾರಸುದಾರರು ಇದ್ದರೆ, ಅವರಿಗೆ ಪೋನ್ ಮಾಡಿ ವಿಷಯ ತಿಳಿಸುತ್ತಾರೆ. ಬಹುತೇಕ ಅನಾಥ ಶವಗಳಿಗೆ ವಾರಸುದಾರರು ಇರುವುದು ಕಡಿಮೆ. ಈ ಕುರಿತಂತೆ ಪೊಲೀಸ್ ಇಲಾಖೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಅನಾಥ ಶವದ ಅಂತ್ಯಕ್ರಿಯೆಯನ್ನ ಅಬ್ದುಲ್ ನೆರವೇರಿಸುತ್ತಾರೆ.

ಕಳೆದ 9 ವರ್ಷಗಳಿಂದ ಇವರ ಈ ಅನಾಥ ಸೇವೆ ನಡೆಯುತ್ತಿದೆ. ಹಾವೇರಿ ನಗರದ ಬಸ್ ನಿಲ್ದಾಣ, ರೈಲು ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಶವ ಪತ್ತೆಯಾದರೆ ಅಲ್ಲಿಗೆ ಧಾವಿಸುವ ಖಾದರ್ ಮುಂದಿನ ಕಾರ್ಯ ಕೈಗೊಳ್ಳುತ್ತಾರೆ. ಈ ರೀತಿ ಕಳೆದ 9 ವರ್ಷದಲ್ಲಿ 500 ಕ್ಕೂ ಅಧಿಕ ಅನಾಥ ಶವಗಳಿಗೆ ಅಬ್ದುಲ್ ಖಾದರ್ ಮುಕ್ತಿ ನೀಡಿದ್ದಾರೆ. ಈ ರೀತಿ ಸಾವನ್ನಪ್ಪಿದವರ ಸಂಬಂಧಿಕರ ಮನೆಗೆ ಶವ ತೆಗೆದುಕೊಂಡು ಹೋದಾಗ ಅವರ ಪ್ರೀತಿ ಕಂಡು ಸೇವೆ ಮಾಡುವ ಉತ್ಸಾಹ ಹೆಚ್ಚಾಗುತ್ತಿದೆ ಎನ್ನುತ್ತಾರೆ ಅಬ್ದುಲ್.

ತಂದೆ ತೀರಿಕೊಂಡಾಗ ಸಾಕಷ್ಟು ನೋವು ಅನುಭವಿಸಿದ ಅಬ್ದುಲ್​: ಅಬ್ದುಲ್​ಗೆ ನಾಲ್ಕು ಜನ ಒಡಹುಟ್ಟಿದವರಿದ್ದು, ತನ್ನ ತಂದೆಯನ್ನ ಅನಾರೋಗ್ಯದ ಕಾರಣ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಸಾಕಷ್ಟು ಕಷ್ಟಪಟ್ಟೆ. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ತಂದೆ ತೀರಿಕೊಂಡಾಗ ಸಾಕಷ್ಟು ನೋವು ಅನುಭವಿಸಿದೆ. ಅಂದಿನಿಂದಲೇ ಜನರಿಗೆ, ಅನಾಥರಿಗೆ ಈ ರೀತಿಯ ಸಹಾಯ ಮಾಡಲು ನಿರ್ಧರಿಸಿದೆ ಎನ್ನುತ್ತಾರೆ ಅಬ್ದುಲ್. ಅಪಘಾತಗಳು ಸಂಭವಿಸಿದಾಗ ಗಾಯಾಳುಗಳನ್ನ ಆಸ್ಪತ್ರೆಗೆ ಕರೆತರುವ ಅಬ್ದುಲ್ ಖಾದರ್ ಹೆಚ್ಚಿನ ಚಿಕಿತ್ಸೆಗಳಿಗೆ ದೂರದ ದಾವಣಗೆರೆ ಹುಬ್ಬಳ್ಳಿ ಆಸ್ಪತ್ರೆಗಳಿಗೆ ರೋಗಿಗಳನ್ನ ಕಳುಹಿಸಿಕೊಡುತ್ತಾರೆ.

ತನ್ನ ಕೈಯಿಂದಲೇ ಹಣಕಾಸಿನ ಸಹಾಯ: ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳಿಗಂತೂ ಅಬ್ದುಲ್ ಖಾದರ್​ ಆಪತ್ಬಾಂಧವರೇ ಆಗಿದ್ದಾರೆ. ರೋಗಿಗಳಿಗೆ ಚೀಟಿ ಮಾಡಿಸುವುದರಿಂದ ಹಿಡಿದು ನುರಿತ ವೈದ್ಯರ ಹತ್ತಿರ ಕಳಿಸುವ ಕೆಲಸ ಮಾಡುತ್ತಾರೆ. ಇನ್ನು ಕೆಲವೊಮ್ಮೆ ಬಂಧುಗಳಿಲ್ಲದ ಅನಾಥರು ಆಸ್ಪತ್ರೆಗೆ ಸೇರಿದ್ದರೆ ಅವರಿಗೆ ಬಂಧುವಾಗಿ ಕಾರ್ಯನಿರ್ವಹಿಸುವ ಅಬ್ದುಲ್ ತನ್ನ ಕೈಯಿಂದಲೇ ಹಣಕಾಸಿನ ಸಹಾಯ ಮಾಡುತ್ತಾರೆ.

ಯಾವುದೇ ಜಾತಿ ಧರ್ಮವನ್ನ ನೋಡದ ಅಬ್ದುಲ್​: ತನ್ನ ಸಂಬಂಧಿಕರು ಆಸ್ಪತ್ರೆಗೆ ದಾಖಲಾದಾಗ ಯಾವ ರೀತಿ ನಿತ್ಯ ವಿಚಾರಿಸುವಂತೆ ಅನಾಥ ರೋಗಿಗಳ ಹತ್ತಿರ ಹೋಗಿ ಪ್ರತಿನಿತ್ಯ ಅವರ ಆರೋಗ್ಯ ವಿಚಾರಿಸುತ್ತಾರೆ. ಈ ರೀತಿಯ ಸೇವೆಯಲ್ಲಿ ಯಾವುದೇ ಜಾತಿ ಧರ್ಮವನ್ನ ಅಬ್ದುಲ್ ನೋಡುವುದಿಲ್ಲ. ಇನ್ನು ಕೊರೊನಾ ಸಮಯದಲ್ಲಿ ಸಂಬಂಧಿಕರು ಅಂತ್ಯಕ್ರಿಯೆಗೆ ಮುಂದೆ ಬರದೆ ಇದ್ದ ಎಷ್ಟೋ ಪ್ರಕರಣಗಳಲ್ಲಿ ಇವರೇ ಅಂತಿಮಕ್ರಿಯೆ ನಡೆಸಿದ್ದಾರೆ.

ಇವರ ಸೇವೆಗೆ ಹಲವು ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ. ದಿನನಿತ್ಯ ದುಡಿದು ತಿನ್ನುವ ಅಬ್ದುಲ್ ಕೆಲ ಸಮಯ ಇದಕ್ಕಾಗಿ ಮೀಸಲಿಟ್ಟಿದ್ದಾರೆ. ಪ್ರತಿನಿತ್ಯ ಜಿಲ್ಲಾಸ್ಪತ್ರೆಯಲ್ಲಿ ಕಾಣಿಸುವ ಅಬ್ದುಲ್, ಬಡರೋಗಿ ಸೇವೆಯಲ್ಲಿ ನಿರತರಾಗಿರುತ್ತಾರೆ.

ಇದನ್ನೂ ಓದಿ: ಅಂಗಾಂಗ ದಾನದಿಂದ ಐವರಿಗೆ ಜೀವದಾನ.. ತಂದೆಯ ಸಾವಿನ ನೋವಲ್ಲೂ ಮಾನವೀಯತೆ ಮೆರೆದ ಮಕ್ಕಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.