ETV Bharat / state

ಹಾವೇರಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ: ಗಮನ ಸೆಳೆದ ಕಲಾ ಪ್ರದರ್ಶನ

author img

By

Published : Jan 6, 2023, 8:49 AM IST

Updated : Jan 6, 2023, 11:09 AM IST

ಏಲಕ್ಕಿ ನಾಡು, ಸಂತ-ಶರಣರ ಬೀಡು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆ ಹಾವೇರಿಯಲ್ಲಿ ನಡೆಯುತ್ತಿರುವ 86ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಧ್ವಜಾರೋಹಣ ನೆರವೇರಿಸುವ ಮೂಲಕ ಇಂದು ಬೆಳಗ್ಗೆ ಚಾಲನೆ ದೊರೆಯಿತು.

kannada sahitya sammelana
86ನೇ ಕನ್ನಡ ಸಾಹಿತ್ಯ ಸಮ್ಮೇಳನ

ಹಾವೇರಿಯಲ್ಲಿ ನಡೆಯುತ್ತಿರುವ 86ನೇ ಕನ್ನಡ ಸಾಹಿತ್ಯ ಸಮ್ಮೇಳನ

ಹಾವೇರಿ: ಏಲಕ್ಕಿ ನಗರಿ ಹಾವೇರಿಯಲ್ಲಿ ನಡೆಯುತ್ತಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಧ್ವಜಾರೋಹಣ ನೆರವೇರಿಸುವ ಮೂಲಕ ಅಧಿಕೃತ ಚಾಲನೆ ಸಿಕ್ಕಿದೆ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್​ ಹೆಬ್ಬಾರ್​ ರಾಷ್ಟ್ರ ಧ್ವಜಾರೋಹಣ ಮಾಡಿದರೆ, ಸಾಹಿತ್ಯ ಪರಿಷತ್ತಿನ ಧ್ವಜಾರೋಹಣವನ್ನು ಕ.ಸಾ.ಪ ಅಧ್ಯಕ್ಷ ಮಹೇಶ ಜೋಶಿ ಹಾಗೂ ಕನ್ನಡ ಧ್ವಜಾರೋಹಣ ಕಾರ್ಯಕ್ರಮವನ್ನು ಜಿಲ್ಲಾ ಕ.ಸಾ.ಪ ಅಧ್ಯಕ್ಷ ಲಿಂಗಯ್ಯ ಹಿರೇಮಠ ನೆರವೇರಿಸಿದರು. ಮೂರು ಧ್ವಜಾರೋಹಣವನ್ನು ಏಕಕಾಲಕ್ಕೆ ಮಾಡಲಾಯಿತು.

ಸಮ್ಮೇಳನಾಧ್ಯಕ್ಷರ ಮೆರವಣಿಗೆ, ಕಲಾತಂಡಗಳ ಮೆರುಗು: ಇದಾದ ಬಳಿಕ ವಿಶೇಷ ರಥದಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಿತು. ಮೆರವಣಿಗೆಗೂ ಮುನ್ನ ಸಮ್ಮೇಳನಾಧ್ಯಕ್ಷ ದೊಡ್ಡರಂಗೇಗೌಡರು ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿದರು. ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ನೂರಾರು ಕಲಾತಂಡಗಳು ಆಕರ್ಷಕ ಕಲಾಪ್ರದರ್ಶನ ನೀಡಿದವು. ಹಾವೇರಿ ಸುತ್ತಮುತ್ತಲ ಗ್ರಾಮಸ್ಥರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಮೆರವಣಿಗೆಯ ಸೌಂದರ್ಯವನ್ನು ಕಣ್ತುಂಬಿಕೊಂಡರು.

ಇಂದಿನಿಂದ 3 ದಿನ ನುಡಿಹಬ್ಬದ ರಸದೌತಣ: ಇಂದಿನಿಂದ ಜನವರಿ 8ರ ವರೆಗೆ ಕನ್ನಡ ಸಾಹಿತ್ಯ ಜಾತ್ರೆ ನಡೆಯಲಿದ್ದು, ಮದುವಣಗಿತ್ತಿಯಂತೆ ಹಾವೇರಿ ನಗರಿ ಶೃಂಗಾರಗೊಂಡಿದೆ. ಈವರೆಗೂ ರಾಜ್ಯದಲ್ಲಿ ನಡೆದಿದ್ದ ಸಾಹಿತ್ಯ ಸಮ್ಮೇಳನಕ್ಕಿಂತ ಈ ಬಾರಿ ನಡೆಯುತ್ತಿರುವ ನುಡಿಹಬ್ಬ ಬಹಳ ವಿಶೇಷ ಮತ್ತು ಅದ್ದೂರಿಯಾಗಿದೆ. ಊಟದ ವ್ಯವಸ್ಥೆ, ಪ್ರಧಾನ ವೇದಿಕೆ, ಸಮಾನಂತರ ವೇದಿಕೆ ಮತ್ತು ಪ್ರದರ್ಶನ ಮಳಿಗೆ ಹಾಗು ಪುಸ್ತಕ ವಾಣಿಜ್ಯ ಮಳಿಗೆಗಳು ಒಂದೇ ಕಡೆ ಇರುವ ಸಮ್ಮೇಳನ ಸಾಕಷ್ಟು ವೈಶಿಷ್ಠ್ಯತೆಗಳಿಂದ ಕೂಡಿದೆ.

ಕನಕದಾಸರ ಹುಟ್ಟೂರು, ಕೋಟೆ ಶೈಲಿಯ ದ್ವಾರ: ವೇದಿಕೆ ಮುಂಭಾಗ ಸುಮಾರು 25 ಎಕರೆ ಪ್ರದೇಶದಲ್ಲಿ ಪಾರ್ಕಿಂಗ್ ವ್ಯವಸ್ಥೆ ಹಾಗೂ ಮಳಿಗೆಗಳನ್ನು ನಿರ್ಮಿಸಲಾಗಿದೆ. ಕನಕದಾಸರ ಹುಟ್ಟೂರು ಬಾಡ ಗ್ರಾಮದ ಕೋಟೆ ಶೈಲಿಯ ಮಾದರಿಯಲ್ಲಿ ದ್ವಾರ ನಿರ್ಮಾಣಗೊಂಡಿದ್ರೆ, ಜರ್ಮನ್ ಟೆಕ್ನಾಲಜಿ ಬಳಸಿ ವೇದಿಕೆ ನಿರ್ಮಾಣವಾಗಿದೆ. ಸುಮಾರು 50-70 ಸಾವಿರ ಕನ್ನಡಾಭಿಮಾನಿಗಳು ಸಮ್ಮೇಳನ ವೀಕ್ಷಿಸಲು ಅನುಕೂಲವಾಗುವಂತೆ ವೇದಿಕೆ ಸಿದ್ಧಗೊಳಿಸಲಾಗಿದೆ.

ಸ್ಥಳೀಯ ವಿಶೇಷ ಖಾದ್ಯಗಳಿಗೆ ಒತ್ತು: ಸಾಹಿತ್ಯ ಸಮ್ಮೇಳನಕ್ಕೆ ಬರುವವರಿಗೆ ಶುಚಿ-ರುಚಿಯಾದ ಊಟೋಪಹಾರದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಮಧ್ಯಾಹ್ನದ ಊಟಕ್ಕೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಬಹುದು. ಹಾಗಾಗಿ, ಯಾರಿಗೂ ಕೊರತೆ ಆಗದಂತೆ ಮತ್ತು ಎಷ್ಟೇ ಜನರು ಬಂದರೂ ಅವರನ್ನು ನಿಭಾಯಿಸಲು ಊಟದ ಕೌಂಟರ್‌ಗಳು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಸ್ಥಳೀಯ ತಿನಿಸುಗಳಿಗೆ ಹೆಚ್ಚು ಒತ್ತು ಕೊಟ್ಟು ಊಟದ ಮೆನು ಸಿದ್ಧಪಡಿಸಲಾಗಿದೆ. ಊಟದ ವ್ಯವಸ್ಥೆ ನಿರ್ವಹಣೆಗಾಗಿ ಅಧಿಕಾರಿಗಳು, ಪಿಡಿಒಗಳು, ಬಿಲ್‌ ಕಲೆಕ್ಟರ್‌ ಸೇರಿದಂತೆ ವಿವಿಧ ಇಲಾಖೆ ಸಿಬ್ಬಂದಿಯನ್ನು ನೇಮಿಸಲಾಗಿದೆ.

ಕನ್ನಡಾಭಿಮಾನಿಗಳಿಗೆ ವಿಶೇಷ ತಿಂಡಿ, ತಿನಿಸು: ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಅಂಗವಾಗಿ ವಿಶೇಷ ಖಾದ್ಯಗಳಾದ ಶೇಂಗಾ ಹೋಳಿಗೆ, ಬೇಸನ್ ಉಂಡಿ, ರವಾ ಉಂಡಿ, ಮೋತಿಚೂರ್, ಗೋಧಿ ಹುಗ್ಗಿ, ಲಡ್ಡು ಮತ್ತು ಲಡಗಿಪಾಕ್ ಸೇರಿದಂತೆ ವಿವಿಧ ಸಿಹಿ ತಿನಿಸುಗಳನ್ನು ಬಾಣಸಿಗರು ಸಿದ್ಧಪಡಿಸುತ್ತಿದ್ದಾರೆ. ಸುಮಾರು 2 ಲಕ್ಷ 50 ಸಾವಿರ ಶೇಂಗಾ ಹೋಳಿಗೆಗಳನ್ನು ಈಗಾಗಲೇ ತಯಾರಿಸಲಾಗಿದೆ. 600 ಬಾಣಸಿಗರೂ ಸೇರಿದಂತೆ 1,200 ಮಂದಿ ಅಡುಗೆ ಸಿಬ್ಬಂದಿ ಖಾದ್ಯಗಳ ತಯಾರಿಕೆಯಲ್ಲಿ ತೊಡಗಿದ್ದಾರೆ.

ಇದನ್ನೂ ಓದಿ: ಹಾವೇರಿ ನುಡಿಹಬ್ಬ: ಕನ್ನಡಾಭಿಮಾನಿಗಳಿಗೆ ಸಿಗಲಿದೆ ವೈವಿಧ್ಯಮಯ ಊಟೋಪಚಾರ

Last Updated : Jan 6, 2023, 11:09 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.