ETV Bharat / state

ಅಂತಿಮ ಘಟ್ಟ ತಲುಪಿದ ಕನ್ನಡ ಸಾಹಿತ್ಯ ಸಮ್ಮೇಳನ; ಮುಂದಿನ ನುಡಿಹಬ್ಬ ಎಲ್ಲಿ? ನಡೀತಿದೆ ಚರ್ಚೆ

author img

By

Published : Jan 8, 2023, 10:01 AM IST

Updated : Jan 8, 2023, 10:19 AM IST

ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ನಿನ್ನೆ(ಶನಿವಾರ) ಭಾರಿ ಜನದಟ್ಟಣೆ ಕಂಡುಬಂತು. ಇಂದು ಕೊನೆಯ ದಿನದ ನುಡಿಹಬ್ಬ ನಡೆಯುತ್ತಿದ್ದು, 87ನೇ ಸಾಹಿತ್ಯ ಸಮ್ಮೇಳನಕ್ಕೆ ಸ್ಥಳ ನಿಗದಿ ಕುರಿತು ಚರ್ಚೆ ನಡೆಯುತ್ತಿದೆ.

Dignitaries sitting in the program at the 86th Kannada Sahitya Sammelna
86 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಾರ್ಯಕ್ರಮದಲ್ಲಿ ಆಸೀನರಾಗಿರುವ ಗಣ್ಯಾತಿಗಣ್ಯರು

ಹಾವೇರಿ: 86ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಂತಿಮ ಘಟ್ಟ ತಲುಪಿದ್ದು, ಮುಂಬರಲಿರುವ 87ನೇ ಸಾಹಿತ್ಯ ಸಮ್ಮೇಳನ ಎಲ್ಲಿ ನಡೆಯಬೇಕು ಎಂಬುದರ ಕುರಿತಂತೆ ಶನಿವಾರ ರಾತ್ರಿ ಕ.ಸಾ.ಪ ಕಾರ್ಯಕಾರಿಣಿ ಸಭೆ ನಡೆಯಿತು. ಈ ಸಭೆಯಲ್ಲಿ ಬಹುತೇಕ ಸದಸ್ಯರು ತಮ್ಮ ತಮ್ಮ ಜೆಲ್ಲೆಗಳಿಗೆ ಪ್ರಾಶಸ್ತ್ಯ ನೀಡುವಂತೆ ಆರೋಗ್ಯಕರ ಚರ್ಚೆ ನಡೆಸಿದರು ಎಂದು ಕ.ಸಾ.ಪ ರಾಜ್ಯಾಧ್ಯಕ್ಷ ಮಹೇಶ್ ಜೋಷಿ ತಿಳಿಸಿದರು. ಮಂಡ್ಯ, ಚಿಕ್ಕಮಂಗಳೂರು, ಬೆಂಗಳೂರು ಗ್ರಾಮಾಂತರ ಮತ್ತು ಚಾಮರಾಜನಗರ ಸೇರಿದಂತೆ ಹಲವು ಜಿಲ್ಲೆಗಳು ಸಮ್ಮೇಳನದ ಆತಿಥ್ಯಕ್ಕೆ ಪೈಪೋಟಿ ನಡೆಸಿವೆ. ಆದರೆ ತಮ್ಮ ಆರೋಗ್ಯ ಸರಿಯಿಲ್ಲದ ಕಾರಣ ಚರ್ಚೆ ಅರ್ಧಕ್ಕೆ ಮೊಟಕುಗೊಂಡಿದೆ. ರವಿವಾರ ಮುಂಜಾನೆ ಮತ್ತೆ ಸಭೆ ಸೇರಿ ಮುಂದಿನ ಸಮ್ಮೇಳನ ಎಲ್ಲಿ ನಡೆಯಬೇಕು ಎಂಬುದನ್ನು ತೀರ್ಮಾನಿಸುತ್ತೇವೆ ಎಂದು ಅವರು ಹೇಳಿದರು.

ಇದಕ್ಕೂ ಮೊದಲು, ಸಾಹಿತ್ಯ ಸಮ್ಮೇಳನದಲ್ಲಿ ಭಾಗಿಯಾಗಿ ಮಾತನಾಡಿದ ಕಾಗಿನೆಲೆ ನಿರಂಜನಾನಂದ ಪುರಿ ಶ್ರೀಗಳು, 'ಕನ್ನಡವನ್ನು ನಾವು ಹೀನಾಯ ಸ್ಥಿತಿಗೆ ತಂದಿದ್ದೇವೆ. ಮುಂದಿನ ಸಮ್ಮೇಳನದಲ್ಲಿ ಕನ್ನಡದ ಬಗ್ಗೆ ಈ ರೀತಿಯಾಗಿ ಮಾತನಾಡುವ ವ್ಯವಸ್ಥೆಯಾಗಬಾರದು' ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 'ಪ್ರಸ್ತುತ ದಿನಗಳಲ್ಲಿ ಕನ್ನಡದ ಪರಿಸ್ಥಿತಿ ಬಹಳ ಕೆಟ್ಟು ಹೋಗಿದೆ. ಕನ್ನಡ ಭಾಷೆಯನ್ನು ನಾವು ಯಾವ ರೀತಿ ಬಳಸಿ ಹಾಳು ಮಾಡುತ್ತಿದ್ದೇವೆ ಎಂಬುದರೆಡೆಗೆ ಗಮನ ಹರಿಸಬೇಕಿದೆ' ಎಂದರು.

ಇನ್ನು, ಸಾಹಿತ್ಯ ಸಮ್ಮೇಳನಕ್ಕೆ ನಿರೀಕ್ಷೆಗೂ ಮೀರಿ ಜನರು ಆಗಮಿಸುತ್ತಿದ್ದಾರೆ. ಸಮ್ಮೇಳನದ ವೇದಿಕೆಗಳು, ಗೋಷ್ಠಿಗಳು, ಪ್ರದರ್ಶನಗಳು, ಪುಸ್ತಕ ಮಳಿಗೆಗಳಲ್ಲಿ ಎಲ್ಲಿ ನೋಡಿದದಲ್ಲಿ ಜನರು ತುಂಬಿದ್ದು ಕಂಡುಬಂತು. ಒಟ್ಟು 300ಕ್ಕೂ ಅಧಿಕ ಪುಸ್ತಕ ಮಳಿಗೆಗಳನ್ನು ತೆರೆಯಲಾಗಿದ್ದು, ಜನರು ಖರೀದಿಗೆ ಮುಗಿಬಿದ್ದರು.

ಆನ್‌ಲೈನ್‌ ಪೇಮೆಂಟ್‌ಗೆ ನೆಟ್‌ವರ್ಕ್‌ ಸಮಸ್ಯೆ: ತಮ್ಮ ತಮ್ಮ ನೆಚ್ಚಿನ ಲೇಖಕರ ಪುಸ್ತಕಗಳ ಖರೀದಿಗೆ ಮನಸ್ಸು ಮಾಡಿದ ಓದುಗರು ಕವನ ಸಂಕಲನ, ಕಾವ್ಯ ಸಂಕಲನ, ನಾಟಕಗಳ ಪುಸ್ತಕಗಳನ್ನು ಕೇಳಿ ಪಡೆಯುತ್ತಿದ್ದರು. ಚಿಕ್ಕಮಕ್ಕಳಿಂದ ಹಿಡಿದು ವಯೋವೃದ್ದರೂ ಖರೀದಿಯಲ್ಲಿ ತೊಡಗಿದ್ದರು. ಇದೆಲ್ಲದರ ನಡುವೆ ಪುಸ್ತಕ ವ್ಯಾಪಾರಸ್ಥರು ಮತ್ತು ಓದುಗರಿಗೆ ನೆಟ್‌ವರ್ಕ್ ಸಮಸ್ಯೆ ಕಾಡಿತು. ಪುಸ್ತಕಗಳನ್ನು ಖರೀದಿಸಿ ಆನ್‌ಲೈನ್​ ಪೇಮೆಂಟ್​ ಮಾಡಲು ಹೋದರೆ ನೆಟ್‌ವರ್ಕ್ ಸಿಗದೆ ಹಣ ವ್ಯಾಪಾರಿಗಳಿಗೆ ಸಿಗುತ್ತಿರಲಿಲ್ಲ. ಹೀಗಾಗಿ ಪುಸ್ತಕಗಳನ್ನು ವಾಪಸ್ ಮಾಡಿರುವ ಪ್ರಸಂಗಗಳೂ ನಡೆದವು. ಕೆಲವು ಗ್ರಾಹಕರು ಸಮ್ಮೇಳನಗಳಲ್ಲಿ ಪುಸ್ತಕಗಳನ್ನು ರಿಯಾಯತಿ ದರದಲ್ಲಿ ಮಾರಬೇಕು ಎಂದು ಒತ್ತಾಯಿಸಿದರು. ಮೂರು ದಿನಗಳ ಸಮ್ಮೇಳನದಲ್ಲಿ ಮೊದಲನೇ ಮತ್ತು ಎರಡನೇ ದಿನವಾದ ನಿನ್ನೆ ಓದುಗರು ಹೆಚ್ಚು ಪುಸ್ತಕಗಳನ್ನು ಹುಡುಕಿ, ಖರೀದಿಸುತ್ತಿದ್ದರು.

ಪಂಚಮಸಾಲಿ ಹರಿಹರಪೀಠದ ವಚನಾನಂದ ಸ್ವಾಮೀಜಿ ಭಕ್ತರ ಜೊತೆ ಬಂದು ಪುಸ್ತಕ ಖರೀದಿಸಿದರು. ಆಯೋಜಕರು ಪುಸ್ತಕ ವ್ಯಾಪಾರಿಗಳಿಗೆ ಸರಿಯಾದ ನೆಟ್‌ವರ್ಕ್ ವ್ಯವಸ್ಥೆ ಮಾಡಿದ್ದರೆ ಇನ್ನೂ ಹೆಚ್ಚು ಪುಸ್ತಕ ವ್ಯಾಪಾರವಾಗುತ್ತಿತ್ತು. ಅದನ್ನು ಬಿಟ್ಟರೆ ಪುಸ್ತಕ ವ್ಯಾಪಾರದಲ್ಲಿ ಯಾವುದೇ ಸಮಸ್ಯೆಗಳಿರಲಿಲ್ಲ. ಸ್ಟಾಲ್, ಕುಡಿಯುವ ನೀರಿನ ವ್ಯವಸ್ಥೆ, ಊಟ ಮತ್ತು ವಸತಿ ವ್ಯವಸ್ಥೆ ಎಲ್ಲವೂ ಅಚ್ಚುಕಟ್ಟಾಗಿದ್ದು, ಕನ್ನಡಾಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಇದನ್ನೂ ಓದಿ: 'ಚಿಕ್ಕಬಳ್ಳಾಪುರ ಉತ್ಸವ'ಕ್ಕೆ ವೈಭವದ ಚಾಲನೆ: 2 ಭಾರತ ರತ್ನ ಪಡೆದ ಜಿಲ್ಲೆ- ಸಿಎಂ ಗುಣಗಾನ

Last Updated : Jan 8, 2023, 10:19 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.