'ಚಿಕ್ಕಬಳ್ಳಾಪುರ ಉತ್ಸವ'ಕ್ಕೆ ವೈಭವದ ಚಾಲನೆ: 2 ಭಾರತ ರತ್ನ ಪಡೆದ ಜಿಲ್ಲೆ- ಸಿಎಂ ಗುಣಗಾನ

author img

By

Published : Jan 8, 2023, 8:17 AM IST

Updated : Jan 8, 2023, 8:50 AM IST

CM Basavaraja Bommai

ಚಿಕ್ಕಬಳ್ಳಾಪುರ ಜಿಲ್ಲೆ ರಚನೆಯಾಗಿ 15 ವರ್ಷಗಳು ತುಂಬಿವೆ. ಈ ಹಿನ್ನೆಲೆಯಲ್ಲಿ ಎಂಟು ದಿನಗಳ ಚಿಕ್ಕಬಳ್ಳಾಪುರ ಉತ್ಸವ ನಡೆಯುತ್ತಿದ್ದು, ಶನಿವಾರ ಸಂಜೆ ಚಾಲನೆ ನೀಡಲಾಗಿದೆ. ಈ ಸಂದರ್ಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಧರ್ಮಸ್ಥಳ ಧರ್ಮಾಧಿಕಾರಿ ಹಾಗು ರಾಜ್ಯಸಭೆ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಜಿಲ್ಲೆಯ ಸಾಧನೆಗಳನ್ನು ಕೊಂಡಾಡಿದರು.

ಚಿಕ್ಕಬಳ್ಳಾಪುರ: 'ವಿಶ್ವವಿಖ್ಯಾತ ಇಂಜಿನಿಯರ್ ಸರ್.ಎಂ.ವಿಶ್ವೇಶ್ವರಯ್ಯ, ಖ್ಯಾತ ರಾಸಾಯನ ವಿಜ್ಞಾನಿ ಸಿ.ಎನ್.ಆರ್​.ರಾವ್ ಹೀಗೆ ಎರಡು ಭಾರತ ರತ್ನಗಳನ್ನು ಪಡೆದ ದೇಶದ ಏಕೈಕ ಜಿಲ್ಲೆ ಚಿಕ್ಕಬಳ್ಳಾಪುರ. 'ಚಿಕ್ಕಬಳ್ಳಾಪುರ ಉತ್ಸವ' ಅನ್ನೋದು ಸುಂದರ ಕಾರ್ಯಕ್ರಮವಾಗಿದ್ದು, ನಾನು ಕಣ್ಣು ತುಂಬಿಕೊಡಿದ್ದೇನೆ. ಜಿಲ್ಲೆಯ ದೊಡ್ಡ ಮನಸ್ಸಿನ ಜನತೆ ಉತ್ಸವ ಆಚರಿಸಲು ಉತ್ಸುಕರಾಗಿದ್ದಾರೆ. ಹುರುಪು, ಹುಮ್ಮಸ್ಸು ಇದ್ದಾಗ ಕಾರ್ಯಸಾಧ್ಯವಾಗುತ್ತದೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಚಿಕ್ಕಬಳ್ಳಾಪುರ ಜಿಲ್ಲೆ ಮತ್ತು ಡಾ.ಕೆ.ಸುಧಾಕರ್ ಫೌಂಡೇಶನ್ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ಸಂಜೆ ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ 'ಚಿಕ್ಕಬಳ್ಳಾಪುರ ಉತ್ಸವ 2023' ಕಾರ್ಯಕ್ರಮವನ್ನು ರಾಜ್ಯಸಭಾ ಸದಸ್ಯ, ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಉಪಸ್ಥಿತಿಯಲ್ಲಿ ಉದ್ಘಾಟಿಸಿ ಮಾತನಾಡಿದರು. ನಟ ಕಿಚ್ಚ ಸುದೀಪ್​ ಅವರು ಕೂಡ ಉದ್ಘಾಟನೆಗೆ ಸಾಥ್​ ಕೊಟ್ಟರು. 'ರೇಷ್ಮೆ, ತರಕಾರಿ, ಹೂ ಹಣ್ಣು ಉತ್ಪಾದನೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ವಿಶ್ವಕ್ಕೆ ಮಾದರಿಯಾಗಿದೆ. ನಾನು ಕೂಡ ಇಲ್ಲಿನ ಕಾಯಿಪಲ್ಲೆ ಬಳಸುತ್ತೇನೆ' ಎಂದರು. ಇದೇ ವೇಳೆ, ಸರ್ಕಾರದ ವಸ್ತು ಪ್ರದರ್ಶನಗಳು, ಮೇಳಗಳ ಆಶಯಗಳನ್ನು ಸದ್ಬಳಕೆ ಮಾಡಿಕೊಳ್ಳಲು ಹಾಗೂ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಉತ್ಸವ ಆಚರಣೆ ಮಾಡುವಂತೆ ತಿಳಿಸಿದರು.

ಡಾ.ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ, 'ಚಿಕ್ಕಬಳ್ಳಾಪುರ ಎಂದರೆ ನೆನಪಿಗೆ ಬರುವುದು ಹಾಲು, ಹಣ್ಣು, ಹೂ ಕೊಡುವ ಜಿಲ್ಲೆ. ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ರೈತರು ಇನ್ನೂ ಹೆಚ್ಚಿನ ಸಾಧನೆ ಮಾಡಬೇಕು. ಸರ್ಕಾರದ ಯೋಜನೆಗಳು ಸಾರ್ವಜನಿಕರಿಗೆ ತಲುಪುವಂತಾಗಲಿ. ಮಹಿಳೆಯರ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ನೆರವು ನೀಡಲಿ. ಸಚಿವ ಕೆ.ಸುಧಾಕರ್ ಅವರು ಈ ಭಾಗದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಮಾಡುವಂತಾಗಲಿ' ಎಂದು ಆಶಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎನ್.ನಾಗರಾಜ್ ಮಾತನಾಡಿ, 'ಚಿಕ್ಕಬಳ್ಳಾಪುರ ಜಿಲ್ಲೆಗೆ ಹೊಸದಾಗಿ 'ಫಲಪುಷ್ಪ ಗಿರಿಧಾಮ ನಾಡು' ಎಂದು ಬಸವರಾಜ ಬೊಮ್ಮಾಯಿ ನಾಮಕರಣ ಮಾಡಿದ್ದಾರೆ. ಈ ಜಿಲ್ಲೆ ಹತ್ತಾರು ವರ್ಷಗಳಿಂದ ಬರಗಾಲದ ನಾಡು ಎಂದು ಹೆಸರಾಗಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಮಲೆನಾಡು ಆಗಿದೆ. ಕೆರೆ-ಕಟ್ಟೆಗಳು ತುಂಬಿದ್ದು ರೈತರು ಸಂತೋಷದಿಂದ ಇದ್ದಾರೆ. ಜಿಲ್ಲೆಗೆ ವೈದ್ಯಕೀಯ ಕಾಲೇಜು ಮಂಜೂರಾಗಿದ್ದು, ಶೀಘ್ರದಲ್ಲೇ ಲೋಕಾರ್ಪಣೆ ಆಗಲಿರುವುದು ಹೆಮ್ಮೆಯ ಸಂಗತಿ. ಸಾದು ಸಂತರು, ವಿಶ್ವ ವಿಖ್ಯಾತ ವಿಜ್ಞಾನಿ, ಹೆಸರಾಂತ ಸಾಹಿತಿಗಳು ಜನಿಸಿದ ನಾಡಾಗಿದೆ. ಇಂತಹ ನಾಡಿನಲ್ಲಿ ಚಿಕ್ಕಬಳ್ಳಾಪುರ ಉತ್ಸವ ಆಚರಣೆ ಮಾಡುತ್ತಿರುವುದು ಸಂತೋಷದ ತಂದಿದೆ' ಎಂದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, 'ಚಿಕ್ಕಬಳ್ಳಾಪುರ ಉತ್ಸವ ಇಡೀ ರಾಜ್ಯವನ್ನು ಚಿಕ್ಕಬಳ್ಳಾಪುರದ ಕಡೆ ನೋಡುವಂತೆ ಮಾಡಿದೆ. ಎಲ್ಲಿ ನೋಡಿದರೂ ನೀರು, ಹಸಿರು, ಇದರಿಂದ ರೈತರು, ಜನತೆ ಸಂತೋಷದಿಂದಿದ್ದಾರೆ. ಕೆರೆ-ಕಟ್ಟೆಗಳಲ್ಲಿ ನೀರು ತುಂಬಿದೆ. ಹೀಗಾಗಿ ಉತ್ಸವ ಮಾಡುತ್ತಿದ್ದೇವೆ. ನವ ಚಿಕ್ಕಬಳ್ಳಾಪುರದಿಂದ ನಾವು ನವ ಕರ್ನಾಟಕ ಮತ್ತು ನವ ಭಾರತ ಕಟ್ಟೋಣ' ಎಂದು ಹೇಳಿದರು.

'ಜಿಲ್ಲೆ ಸಾಧು,ಸಂತರು ಮೆಟ್ಟಿದ ನೆಲ. ಧಾರ್ಮಿಕವಾಗಿ, ಐತಿಹಾಸಿಕವಾಗಿ, ಜಿಲ್ಲೆ ಖ್ಯಾತಿ ಪಡೆದಿದೆ. 800 ಕೋಟಿ ರೂ ವೆಚ್ಚದ ಸರ್ಕಾರಿ ವೈದ್ಯಕೀಯ ಕಾಲೇಜನ್ನು ಸರ್ಕಾರ ನೀಡಿದೆ. ವೈದ್ಯಕೀಯ ಶಿಕ್ಷಣಕ್ಕೂ ಒತ್ತು ನೀಡಲಿದ್ದೇವೆ. ಎತ್ತಿನಹೊಳೆ ಯೋಜನೆಗೆ 23 ಸಾವಿರ ಕೋಟಿ ರೂ ಮೀಸಲಿಟ್ಟಿದ್ದಾರೆ. ಜಿಲ್ಲೆಯ ಅಭಿವೃದ್ಧಿ ಬಗ್ಗೆ ಮುಖ್ಯಮಂತ್ರಿಗಳಿಗೆ ವಿಶೇಷ ಒಲವಿದೆ. ಅದಕ್ಕಾಗಿ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ಪ್ರತಿದಿನ ವಿಭಿನ್ನ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಖ್ಯಾತ ನಟ ಕಿಚ್ಚ ಸುದೀಪ್ ಅವರು ಇಲ್ಲಿಗೆ ಬಂದು ಪ್ರೀತಿ ತೋರಿದ್ದಾರೆ. ಜಿಲ್ಲಾಡಳಿತ ಅಧಿಕಾರಿಗಳು ಮತ್ತು ಸಿಬ್ಬಂದಿ 15 ದಿನಗಳ ಕಾಲ ಹಗಲಿರುಳು ಶ್ರಮಿಸಿದ ಕಾರಣ ಉತ್ಸವ ಯಶಸ್ವಿಯಾಗಲು ಕಾರಣವಾಗಿದೆ' ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ವಿ.ಸುನೀಲ್ ಕುಮಾರ್ ಮತ್ತು ನಗರಾಭಿವೃದ್ಧಿ ಸಚಿವರಾದ ಭೈರತಿ ಬಸವರಾಜು ಹಾಗೂ ನಟ ಸುದೀಪ್ ಮಾತನಾಡಿದರು. ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ.ನಾಗರಾಜ್, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ಕೆ.ವಿ.ನವೀನ್ ಕಿರಣ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಪಿ.ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್, ಉಪವಿಭಾಗಾಧಿಕಾರಿ ಡಾ. ಜಿ.ಸಂತೋಷ್ ಕುಮಾರ್, ಚಿಕ್ಕಬಳ್ಳಾಪುರ ನಗರಸಭೆಯ ಅಧ್ಯಕ್ಷ ಡಿ.ಎಸ್.ಆನಂದರೆಡ್ಡಿ (ಬಾಬು), ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಕೃಷ್ಣಮೂರ್ತಿ ಹಾಗೂ ನಗರ ಸಭೆ ಸದಸ್ಯರು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು, ಅಧಿಕಾರಿಗಳು, ಸಿಬ್ಬಂದಿ, ಸಾವಿರಾರು ಕಲಾವಿದರು, ಸಾರ್ವಜನಿಕರು ಪಾಲ್ಗೊಂಡಿದ್ದರು. ಜಿಲ್ಲಾಧಿಕಾರಿ ಎನ್‌.ಎಂ.ನಾಗರಾಜ್ ಸ್ವಾಗತಿಸಿದರು. ನೃತ್ಯ, ಗಾಯನ ಕಾರ್ಯಕ್ರಮಗಳು ಜನರನ್ನು ರಂಜಿಸಿದವು.

ಇದನ್ನೂ ಓದಿ: ಕೋಟೆಯಲ್ಲಿ ಮೂರು ದಿನ ಬೀದರ್ ಉತ್ಸವ: ಸುದೀಪ್, ಶಿವರಾಜ್​ಕುಮಾರ, ಡಾಲಿ ಧನಂಜಯ ಭಾಗಿ

Last Updated :Jan 8, 2023, 8:50 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.