ETV Bharat / state

ಭವಾನಿ ಅಕ್ಕ, ಪ್ರಜ್ವಲ್ ರೇವಣ್ಣ ನಶೆಯಲ್ಲಿ ಮಾತನಾಡಿದ್ದಾರೆ.. ಗಂಭೀರವಾಗಿ ಪರಿಗಣಿಸಬೇಡಿ: ಶಾಸಕ ಪ್ರೀತಂ ಗೌಡ

author img

By

Published : Nov 1, 2022, 8:04 PM IST

mla-preetham-gowda-challenged-bhavani-revanna-and-mp-prajwal-revanna
ಭವಾನಿ ಅಕ್ಕ, ಪ್ರಜ್ವಲ್ ನಶೆಯಲ್ಲಿ ಮಾತನಾಡಿದ್ದಾರೆ... ನಮ್ಮ ತಂದೆ ಬಗ್ಗೆ ದಾಖಲೆ ಕೊಟ್ಟರೆ, ನನ್ನ ಸ್ಥಾನಕ್ಕೆ ರಾಜೀನಾಮೆ: ಪ್ರೀತಂ ಗೌಡ

ಭವಾನಿ ರೇವಣ್ಣನವರು ಹೊಳೆನರಸೀಪುರದ ಸೊಸೆ ಆಗುವುದಕ್ಕಿಂತ ಮೊದಲು ಅವರ ಮನೆ ಪರಿಸ್ಥಿತಿ ಹೇಗಿತ್ತು ಎಂಬುದರ ಬಗ್ಗೆ ಅವರೇ ಆತ್ಮ ವಿಮರ್ಶೆ ಮಾಡಿಕೊಂಡರೆ ಸಾಕು ಎಂದು ಶಾಸಕ ಪ್ರೀತಂ ಗೌಡ ತಿರುಗೇಟು ನೀಡಿದರು.

ಹಾಸನ: ರಾತ್ರಿಯೆಲ್ಲ ನಶೆ ಏರಿಸಿಕೊಂಡು ಬೆಳಗ್ಗೆ ಬೆಳಗ್ಗೆ ನಶೆಯಲ್ಲಿ ಏನೇನು ಮಾತನಾಡುತ್ತಾರೆ. ಬಿಬಿಎಂಪಿಯಲ್ಲಿ ಏನಾದ್ರೂ ನಮ್ ತಂದೆ ಕೆಲಸ ಮಾಡಿದ್ದರೆ ನಾನು ರಾಜೀನಾಮೆ ಕೊಡುತ್ತೇನೆ ಎಂದು ಶಾಸಕ ಪ್ರೀತಂ ಗೌಡ ಅವರು ಭವಾನಿ ರೇವಣ್ಣ ಮತ್ತು ಸಂಸದ ಪ್ರಜ್ವಲ್​ ರೇವಣ್ಣ ಅವರಿಗೆ ಸವಾಲು ಎಸೆದರು.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ತಂದೆ ಒಂದೇ ಒಂದು ದಿನ ಬಿಬಿಎಂಪಿಯಲ್ಲಿ ಕೆಲಸ ಮಾಡಿದ್ದರೆ, ಅದಕ್ಕೆ ಹೆಚ್​ ಡಿ ರೇವಣ್ಣನವರು ಶಿಫಾರಸು ಮಾಡಿದ್ದರೆ, ಇದಕ್ಕೆ ದಾಖಲೆ ನೀಡಲಿ. ನಮ್ಮಕ್ಕ ಭವಾನಿ ರೇವಣ್ಣ ನಶೆ ಪ್ರಭಾವದಿಂದ ಆ ರೀತಿ ನಮ್ಮ ತಂದೆ ಬಗ್ಗೆ ಮಾತನಾಡಿರಬಹುದು ಎಂದು ಟೀಕಿಸಿದರು.

ಅವರೇ ಆತ್ಮ ವಿಮರ್ಶೆ ಮಾಡಿಕೊಂಡರೆ ಸಾಕು: ಇದೆಲ್ಲವನ್ನೂ ಗಂಭೀರವಾಗಿ ತೆಗೆದುಕೊಳ್ಳಬೇಡಿ.. ಆಕಸ್ಮಾತ್ ಗಂಭೀರವಾಗಿ ತೆಗೆದುಕೊಂಡಿದ್ದರೆ ಅವರು, ದಾಖಲೆ ತಂದು ಇಡಲಿ. ಇಲ್ಲವಾದರೆ ಅವರು ನಶೆಯಲ್ಲಿ ಮಾತನಾಡಿದ್ದಾರೆ ಎಂದು ಅಂದುಕೊಳ್ಳಿ. ಭವಾನಿ ರೇವಣ್ಣನವರು ಹೊಳೆನರಸೀಪುರದ ಸೊಸೆ ಆಗುವಕ್ಕಿಂತ ಮೊದಲು ಅವರ ಮನೆ ಪರಿಸ್ಥಿತಿ ಹೇಗಿತ್ತು ಎಂಬುದರ ಬಗ್ಗೆ ಅವರೇ ಆತ್ಮ ವಿಮರ್ಶೆ ಮಾಡಿಕೊಂಡರೆ ಸಾಕು ಎಂದು ತಿರುಗೇಟು ನೀಡಿದರು.

ಇಡೀ ಹಾಸನ ಜಿಲ್ಲೆಯ ಜನತೆಗೆ ನಮ್ಮ ಕುಟುಂಬದ ಬಗ್ಗೆ ಗೊತ್ತಿದೆ. ಈ ಬಗ್ಗೆ ನಾನು ಏನು ಹೆಚ್ಚಿಗೆ ಹೇಳಲು ಹೋಗುವದ ಅವಶ್ಯಕತೆ ಇಲ್ಲ. ಅವರು ಮೈಸೂರು ಜಿಲ್ಲೆಯವರಾಗಿರುವುದರಿಂದ ಏನಾದ್ರೂ ಮೈಸೂರು ಮಹಾರಾಜರ ವಂಶಕ್ಕೆ ಸಾಲ ಕೊಟ್ಟು ಅವರಿಗಿಂತ ಭವಾನಿ ರೇವಣ್ಣನವರು ಆಗರ್ಭ ಶ್ರೀಮಂತರಾಗಿದ್ದರಾ?. ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ, ಅವರು ಮಾತನಾಡುವ ಶೈಲಿ, ದಾಟಿ ನೋಡಿದರೆ ಬಹಳ ಆಗರ್ಭ ಶ್ರೀಮಂತರು ಅನಿಸುತ್ತದೆ. ನಾವಂತು ಮಧ್ಯಮ ವರ್ಗದ ಕುಟುಂಬದವರು ಮತ್ತು ಸ್ವಾಭಿಮಾನದಿಂದ ಬದುಕಿರುವಂತರು ಎಂದರು.

ಭವಾನಿ ಅಕ್ಕ, ಪ್ರಜ್ವಲ್ ನಶೆಯಲ್ಲಿ ಮಾತನಾಡಿದ್ದಾರೆ... ನಮ್ಮ ತಂದೆ ಬಗ್ಗೆ ದಾಖಲೆ ಕೊಟ್ಟರೆ, ನನ್ನ ಸ್ಥಾನಕ್ಕೆ ರಾಜೀನಾಮೆ: ಪ್ರೀತಂ ಗೌಡ

ಹುಟ್ಟ ಗುಣ ಸುಟ್ಟರೂ ಹೋಗುವುದಿಲ್ಲ: ಹಾಲ್ಕೋಹಾಲ್ ಡಿಟೆಕ್ಟರನ್ನು ಜೊತೆಯಲ್ಲಿಟ್ಟುಕೊಂಡು ಮುಂದೆ ಹಾಸನಕ್ಕೆ ಬಂದಾಗ ಪರೀಕ್ಷೆ ಮಾಡಿ, ಅದು 30-60 ಅಲ್ಲ, ಒಂದು ಫುಲ್ ಬಾಟಲ್ ಹಾಕುತ್ತಾರೆ. ನಶೆಯಲ್ಲಿ ಮಾತನಾಡಿಲ್ಲ ಅಂದ್ರೆ ಸಿಂಪಲ್ ಲಾಜಿಕ್.. ನಮ್ಮಪ್ಪನ ಬಗ್ಗೆ ಮಾತನಾಡಿರುವುದಕ್ಕೆ ಅವರು ದಾಖಲೆ ಕೊಡಬೇಕು. ಇಲ್ಲಂದ್ರೆ 5-7ನೇ ಕ್ಲಾಸ್ ಫಿಕ್ಸ್ ಆಗುತ್ತೆ. ರಾತ್ರಿ 2 ಗಂಟೆಯವರೆಗೂ ನಶೆ ಏರಿಸಿಕೊಂಡು ಬೆಳಗ್ಗೆ ಬಂದು ಏನು ಮಾತನಾಡುತ್ತಾರೆ ಎಂಬುದೇ ಅವರಿಗೆ ಗೊತ್ತಿರುವುದಿಲ್ಲ ಎಂದು ಪ್ರೀತಂಗೌಡ ಹರಿಹಾಯ್ದರು.

ನನಗೆ ನಮ್ಮ ತಂದೆ, ತಾಯಿ ಸಂಸ್ಕಾರ ಕಲಿಸಿಕೊಟ್ಟಿದ್ದಾರೆ. ನಮ್ಮ ತಾಯಿ ಬಿಎ ಓದಿದ್ದು, ನಾನು ಯಾರ ಬಗ್ಗೆ ವೈಯಕ್ತಿಕವಾಗಿ ಮಾತನಾಡುವುದಿಲ್ಲ. ಭವಾನಿ ಅಕ್ಕ ಮಾತನಾಡಿದ ಬಗ್ಗೆ ಬೆಳಗ್ಗೆ ಗೊತ್ತಾಯಿತು. ಒಂದು ಡಿಎನ್ಎ ಸಮಸ್ಯೆ.. ಅಮ್ಮ ಮತ್ತು ಮಗ ಇಬ್ಬರೂ ಮಾತನಾಡಿದ್ದು, ಹುಟ್ಟ ಗುಣ ಸುಟ್ಟರೂ ಹೋಗುವುದಿಲ್ಲ. ನಿನ್ನ ಕೆಲಸ ನೀನು ಮಾಡು ಎಂಬಂತೆ ನಾನು ಶಾಸಕನಾಗಿ ಸಾರ್ವಜನಿಕ ಕೆಲಸ ಮಾಡುತ್ತೇನೆ ಎಂದರು.

ಈ ಐಡಿಯಾಲಜಿಯನ್ನು ಹಾಸನದ ಜನರು ಒಪ್ಪುವುದಿಲ್ಲ: ​ಶಾಸಕನಾಗಿದ್ದಾಗ ನೂರಾರು ಜನರು ಬರ್ತಾರೆ. ಶಿಫಾರಸ್ಸು ಕೇಳಿದ ತಕ್ಷಣ ಅವರು ಓದಿದಂತಹದನ್ನು ಬಿಟ್ಟು ನಾವೇ ಅವರನ್ನು ಸಾಕಿದ್ದೇವೆ ಎನ್ನುವ ಉದ್ದಟತನದ ಮಾತನ್ನು, ಕಲ್ಚರನ್ನು, ಈ ಐಡಿಯಾಲಜಿಯನ್ನು ಹಾಸನದ ಜನರು ಒಪ್ಪುವುದಿಲ್ಲ. ನೀವು ಚುನಾವಣೆಯಲ್ಲಿ ಸ್ಪರ್ಧೆ ಮಾಡಿದರೆ 50 ಸಾವಿರ ಲೀಡ್​ನಲ್ಲಿ ಸೋಲುತ್ತೀರಿ ಎಂದು ನಾನು ಹೇಳಿದ್ದು, ಇದೇ ಕಾರಣಕ್ಕೆ ಎಂದರು.

ಅಧಿಕಾರಿಗಳೆಲ್ಲರಿಗೂ ನಾನು ಕೈಮುಗಿದು ಕೇಳುವುದೊಂದೆ. ಯಾವುದೇ ಕಾರಣಕ್ಕೂ ಹೆಚ್​ಡಿ ರೇವಣ್ಣನವರ ಕುಟುಂಬದವರ ಬಳಿ ಸಹಾಯ ಕೇಳಲು ಹೋಗಬೇಡಿ. ಯಾವುದೇ ಸಹಾಯ ಮಾಡದೆ ಮತ್ತು ಶಾಸಕರ ತಂದೆಯ ಬಗ್ಗೆಯೇ ಇಷ್ಟೊಂದು ಮಾತನಾಡುತ್ತಿದ್ದಾರೆ ಎಂದರೆ, ಸಾಮಾನ್ಯ ನೌಕರರ ಪಾಡೇನು?. ಅಪ್ಪಿ ತಪ್ಪಿನೂ ಅವರ ಮನೆ ಬಾಗಿಲಿಗೆ ಹೋಗಬೇಡಿ. ಹೋದರೆ ನಿಮ್ಮ ಜೀವನವೇ ಅವರಿಂದ ನಡೆಯುತ್ತಿರುವುದು ಎಂದು ಹೇಳುತ್ತಾರೆ. ಯಾವುದೇ ಶಿಫಾರಸ್ಸು ತಗಬೇಡಿ ಮತ್ತು ಎಚ್ಚರಿಕೆಯಿಂದಿರಿ ಎಂದು ಮನವಿ ಮಾಡಿದರು.

ಇದನ್ನೂ ಓದಿ: ಅವರಪ್ಪ ದುಡ್ಡು ಮಾಡಿದ್ದಕ್ಕೆ ಮಗ ಇಲ್ಲಿ ಎಗ್ರಾಡ್ತಿದ್ದಾನೆ: ಶಾಸಕ ಪ್ರೀತಂ ಗೌಡ ವಿರುದ್ಧ ಪ್ರಜ್ವಲ್ ರೇವಣ್ಣ ಕಿಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.