ETV Bharat / state

ಮಾಗಡಿ ಬಾಲಕೃಷ್ಣನನ್ನು ಕೇಳಿ ದೇವೇಗೌಡರು ರಾಜಕಾರಣ ಮಾಡಬೇಕಾಗಿಲ್ಲ: ಶಾಸಕ ಸಿ ಎನ್ ಬಾಲಕೃಷ್ಣ

author img

By ETV Bharat Karnataka Team

Published : Nov 30, 2023, 1:33 PM IST

''ಮಾಗಡಿ ಕ್ಷೇತ್ರದ ಶಾಸಕ ಬಾಲಕೃಷ್ಣ ಯಾರ ಆಶ್ರಯದಲ್ಲಿ ಬೆಳೆದಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಅವರು ಮಿತಿಯಿಲ್ಲದೆ ಮಾತನಾಡುವುದು ಸರಿಯಲ್ಲ'' ಎಂದು ಜೆಡಿಎಸ್​ ಶಾಸಕ ಸಿ ಎನ್ ಬಾಲಕೃಷ್ಣ ಹೇಳಿದ್ದಾರೆ.

MLA CN Balakrishna
ಜೆಡಿಎಸ್​ ಶಾಸಕ ಸಿ.ಎನ್. ಬಾಲಕೃಷ್ಣ

ಶಾಸಕ ಸಿ ಎನ್ ಬಾಲಕೃಷ್ಣ ಪ್ರತಿಕ್ರಿಯೆ

ಹಾಸನ: '' ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡರು ಮಾಗಡಿ ಶಾಸಕ ಬಾಲಕೃಷ್ಣನ ಮಾತು ಕೇಳಿ ರಾಜಕೀಯ ಮಾಡಬೇಕಾಗಿಲ್ಲ. ಅವರ ಬಗ್ಗೆ ಮಾತಾಡಬೇಕಾದರೆ ಕೂತು, ಯೋಚನೆ ಮಾಡಿ ಮಾತಾಡ್ಬೇಕು'' ಎಂದು ಮಾಗಡಿ ಕ್ಷೇತ್ರದ ಕಾಂಗ್ರೆಸ್​ ಶಾಸಕ ಬಾಲಕೃಷ್ಣ ವಿರುದ್ಧ ಶ್ರವಣಬೆಳಗೊಳ ಕ್ಷೇತ್ರದ ಜೆಡಿಎಸ್​ ಶಾಸಕ ಸಿ ಎನ್ ಬಾಲಕೃಷ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ಅವರು, ''ಮಾಗಡಿ ಕ್ಷೇತ್ರದ ಶಾಸಕ ಬಾಲಕೃಷ್ಣ ಯಾರ ಆಶ್ರಯದಲ್ಲಿ ಬೆಳೆದಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಅವರು ಮಿತಿಯಿಲ್ಲದೆ ಮಾತನಾಡುವುದು ಸರಿಯಲ್ಲ. ಆಯಾ ಕಾಲಘಟ್ಟದಲ್ಲಿ ರಾಜಕೀಯದಲ್ಲಿ ಬದಲಾವಣೆಗಳು ಆಗುವುದು ಸಹಜ. ಮಾತನಾಡಬೇಕಾದರೆ ಆಚಾರ, ವಿಚಾರಗಳನ್ನು ನೋಡಿಕೊಂಡು ಮಾತನಾಡಬೇಕು'' ಎಂದು ಗರಂ ಆದರು.

''ದೇವೇಗೌಡರು ರಾಷ್ಟ್ರ ನಾಯಕರು, ಅವರು ರಾಜಕೀಯದಲ್ಲಿ ಆಗಲಿ, ವೈಯಕ್ತಿಕ ಜೀವನದಲ್ಲಾಗಲಿ ಒಂದೇ ಒಂದು ಕಪ್ಪು ಚುಕ್ಕಿ ಇಲ್ಲದೆ ಇರುವ ಏಕೈಕ ರಾಜಕಾರಣಿ. ದೇಶದಲ್ಲೂ ಉತ್ತಮ ಆಡಳಿತ ನಡೆಸಿದ್ದಾರೆ. ನಾವು ಬಿಜೆಪಿಯೊಂದಿಗೆ ವಿಲೀನವಾಗುವ ವಿಚಾರಕ್ಕಿಂತಲೂ ಬಿಜೆಪಿಗೆ ಸಹಕಾರ ನೀಡಿದ್ದೇವೆ ಎಂಬ ಚರ್ಚೆಯಾಗುತ್ತಿದೆ. ಆದರೆ, ಸಿದ್ಧಾಂತಗಳಲ್ಲಿ ಯಾವುದೇ ರಾಜೀ ಇರೋದಿಲ್ಲ. ಮುಂದಿನ ದಿನಗಳಲ್ಲಿ ಒಳ್ಳೆಯ ಬೆಳವಣಿಗೆ ಕಾಣಲಿದೆ. ಹಾಗಾಗಿ ಮಾಗಡಿ ಬಾಲಕೃಷ್ಣರ ಮಾತು ಕೇಳಿಕೊಂಡು ದೇವೇಗೌಡರು ರಾಜಕೀಯ ಮಾಡಬೇಕಾದ ಅವಶ್ಯಕತೆ ಇಲ್ಲ. ಅವರು ಅವರ ಕ್ಷೇತ್ರವನ್ನು ನೋಡಿಕೊಂಡರೆ ಸಾಕು. ಅದನ್ನು ಬಿಟ್ಟು ಬೇರೆಯವರ ಬಗ್ಗೆ ಮಾತನಾಡುವುದು ಒಳ್ಳೆಯದಲ್ಲ'' ಎಂದು ಹೇಳಿದರು.

''ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್​ನ ಸಾಕಷ್ಟು ನಾಯಕರ ಬಗ್ಗೆ ಅಪಾರ ಗೌರವವಿದೆ. ಆದರೆ, ಮಾಗಡಿ ಕ್ಷೇತ್ರದ ಶಾಸಕ ಬಾಲಕೃಷ್ಣ ಅವರು ದೇವೇಗೌಡರ ಬಗ್ಗೆ ಮಾತಾಡಬೇಕಾದರೆ ಸ್ವಲ್ಪ ಯೋಚನೆ ಮಾಡಿ ಮಾತಾಡ್ಬೇಕು'' ಎಂದ ಬಾಲಕೃಷ್ಣ, ''ಇನ್ನು ಹಾಸನದ ಮಾಜಿ ಶಾಸಕ ಪ್ರೀತಂ ಗೌಡನಿಗೆ ಸ್ವಲ್ಪ ಬಿಸಿರಕ್ತ ಇರುವುದರಿಂದ ಏನೇನೋ ಮಾತನಾಡುತ್ತಿದ್ದಾರೆ ಅನಿಸುತ್ತದೆ. ಮುಂದೆ ಎಲ್ಲವೂ ಸರಿಯಾಗುತ್ತೆ ಡೋಂಟ್ ವರಿ'' ಎಂದರು.

ಡಿಸೆಂಬರ್ 4 ರಿಂದ ಚಳಿಗಾಲ ಅಧಿವೇಶನ ಪ್ರಾರಂಭವಾಗುತ್ತಿದ್ದು, ಅಧಿವೇಶನದಲ್ಲಿ ರಾಜ್ಯ ಸರ್ಕಾರದ ಗ್ಯಾರಂಟಿಗಳ ಬಗ್ಗೆ, ಬರಗಾಲ ಮತ್ತು ಪರಿಹಾರದ ಕುರಿತು ಸಾಕಷ್ಟು ಚರ್ಚೆ ಮಾಡಲಾಗುತ್ತದೆ. ರಾಜ್ಯದಲ್ಲಿ ಕೊಬ್ಬರಿ ಬೆಲೆ ಕುಸಿದಿರುವ ಬಗ್ಗೆಯೂ ಈಗಾಗಲೇ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ರೈತರ ಹಿತ ಕಾಪಾಡುವಲ್ಲಿ ಕೊಬ್ಬರಿ ಬೆಲೆ ಹೆಚ್ಚಿಸುವುದು ಕೂಡ ಒಂದು ಎಂಬುದನ್ನು ಮನಗಂಡು ಸರ್ಕಾರಗಳು ಪರಿಹಾರ ದೊರಕಿಸಿಕೊಡಬೇಕು'' ಎಂದು ಅವರು ಮನವಿ ಮಾಡಿದರು.

ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ ಸಿಬಿಐ, ಇಡಿ, ತೆರಿಗೆ ಇಲಾಖೆಗಳ ದುರುಪಯೋಗ: ಶಶಿ ತರೂರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.