ಗದಗ: 3 ತಿಂಗಳು ಕಂದಮ್ಮ ಸೇರಿ ಒಂದೇ ಕುಟುಂಬದ ಮೂವರು ನೇಣಿಗೆ ಶರಣಾದ ಘಟನೆ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನಾಗೇಂದ್ರಗಡ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಹೊರವಲಯದ ತಮ್ಮ ಜಮೀನಿನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸುಮಾರು 30 ವರ್ಷದ ಮಲ್ಲಪ್ಪ ಗಡಾದ, 24 ವರ್ಷದ ಸುಧಾ ಗಡಾದ್ ಹಾಗೂ ರೂಪಾಶ್ರೀ 3 ತಿಂಗಳು ಮಗು ಸಾವನ್ನಪ್ಪಿದ್ದಾರೆ. ಇದಕ್ಕೆ ಕೌಟುಂಬಿಕ ಕಲಹವೇ ಕಾರಣ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಮನೆಯ ಹಾಲ್ನಲ್ಲಿ ಮಲ್ಲಪ್ಪ ನೇಣಿಗೆ ಶರಣಾಗಿದ್ರೆ, ಬೆಡ್ರೂಮ್ನಲ್ಲಿ ಸುಧಾ ಹಾಗೂ ಮಗು ರೂಪಾಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪತಿ ಮಲ್ಲಪ್ಪ ತನ್ನ ಪತ್ನಿ ಹಾಗೂ ಮಗುವಿಗೆ ನೇಣುಹಾಕಿ ಕೊನೆಗೆ ತಾನೂ ನೇಣಿಗೆ ಕೊರಳೊಡ್ಡಿದ್ದಾನೆ ಎಂಬ ಶಂಕೆ ಮೇಲ್ನೋಟಕ್ಕೆ ಕಂಡುಬಂದಿದೆ. ಕಳೆದ 2 ವರ್ಷದ ಹಿಂದಷ್ಟೇ ಮಲ್ಲಪ್ಪ ಹಾಗೂ ಸುಧಾ ಮದುವೆಯಾಗಿದ್ದರು.
ಸ್ಥಳಕ್ಕೆ ರೋಣ ಸಿಪಿಐ ಸುಧಿರ್ ಬೆಂಕಿ ಹಾಗೂ ಗಜೇಂದ್ರಗಡ ಪೊಲೀಸರು ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಜಗತ್ತನ್ನೇ ನೋಡದ 3 ತಿಂಗಳು ಮಗುವಿಗೂ ನೇಣು ಹಾಕಿ ತಾವೂ ನೇಣಿಗೆ ಕೊರಳೊಡ್ಡಿದ್ದು ವಿಪರ್ಯಾಸ. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ಗದಗ ಜಿಲ್ಲೆ ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರ ಮುಂದಿನ ಕ್ರಮ ಕೈಗೊಂಡಿದ್ದಾರೆ.