ETV Bharat / state

ಈದ್ಗಾ ಮೈದಾನದಲ್ಲಿ ಗಣೇಶನ ವಿರೋಧಿಸಿದವರಿಗೆ ಶಾಪ ತಟ್ಟುತ್ತೆ: ಪ್ರಮೋದ್ ಮುತಾಲಿಕ್​

author img

By

Published : Aug 31, 2022, 10:37 AM IST

pramod-mutalik
ಈದ್ಗಾ ಮೈದಾನದಲ್ಲಿ ಗಣೇಶನ ವಿರೋಧಿಸಿದವರಿಗೆ ಶಾಪ ತಟ್ಟುತ್ತೆ

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಹಿಂದೂ ಸಂಘಟನೆಗಳಿಂದ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದ್ದು, ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಭೇಟಿ ನೀಡಿ ಆಶೀರ್ವಾದ ಪಡೆದರು.

ಹುಬ್ಬಳ್ಳಿ: ಇಲ್ಲಿನ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ವಿರೋಧಿಸುವವರಿಗೆ ಶಾಪ ತಟ್ಟದೇ ಬಿಡದು. ನಮ್ಮ ಹೋರಾಟಕ್ಕೆ ಕೋರ್ಟ್​ ನ್ಯಾಯ ದೊರಕಿಸಿಕೊಟ್ಟಿದೆ. ಸರ್ಕಾರಕ್ಕೆ ಸೇರಿದ ಜಾಗದಲ್ಲಿ ನ್ಯಾಯಸಮ್ಮತವಾಗಿ ಗಣೇಶನ ಪೂಜೆ ಮಾಡಲಾಗುತ್ತಿದೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.

ಹುಬ್ಬಳ್ಳಿಯ ಈದ್ಗಾ ಮೈದಾನದ ಗಣೇಶ ದರ್ಶನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ಐತಿಹಾಸಿಕ ದಿನವಾಗಿದೆ. ಈದ್ಗಾದಲ್ಲಿ ಪ್ರಾರ್ಥನೆ ಮಾಡಲಾಗುತ್ತದೆ. ಗಣೇಶನ ಪ್ರತಿಷ್ಠಾಪನೆ ಮಾಡಲು ವಿರೋಧ ಯಾಕೆ?. ಕೋರ್ಟ್​ಗೆ ನಮ್ಮ ಭಾವನೆ ಅರ್ಥವಾಗಿದೆ. ಹೋರಾಟಕ್ಕೆ ನ್ಯಾಯ ಕೊಟ್ಟಿದೆ. ಇದನ್ನು ವಿರೋಧಿಸಿದವರಿಗೆ ಕೋರ್ಟ್ ಛೀಮಾರಿ ಹಾಕಿದೆ ಎಂದರು.

ಗಣೇಶೋತ್ಸವ ಆರಂಭಿಸಿ 129 ವರ್ಷವಾಗಿದೆ. ಬ್ರಿಟಿಷರು ಕೂಡ ಆಚರಣೆಯನ್ನು ವಿರೋಧಿಸಲಿಲ್ಲ. ಆದರೆ, ಕಾಂಗ್ರೆಸ್​ನವರು ನೀಡಿದ ಕುಮ್ಮಕ್ಕಿನಿಂದ ಮುಸ್ಲಿಮರು ಕೋರ್ಟ್​ ಮೆಟ್ಟಿಲೇರಿದ್ದಾರೆ. ಸರ್ವಪಾಪ ವಿನಾಶಕನ ಆಚರಣೆಗೆ ಅಡ್ಡಿಪಡಿಸುವವರಿಗೆ ಆ ಗಣೇಶನ ಶಾಪ ತಟ್ಟದೇ ಬಿಡದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈಗಾಗಲೇ ಈದ್ಗಾ ಮೈದಾನದಲ್ಲಿ ಗಣೇಶನ ಪ್ರತಿಷ್ಠಾಪನೆ ಮಾಡಿ ಪೂಜಿಸಲಾಗಿದೆ. ಯಾವ ಶಕ್ತಿಯೂ ಇದನ್ನು ತಡೆಯೋಕೆ ಸಾಧ್ಯವಿಲ್ಲ. ಕಾಂಗ್ರೆಸ್​ ಶಾಸಕ ಪ್ರಸಾದ್​ ಅಬ್ಬಯ್ಯ ಕೂಡ ಆಚರಣೆಯನ್ನು ವಿರೋಧಿಸಿದ್ದಾರೆ. ನೀವೊಬ್ಬ ಹಿಂದೂ ಆಗಿ ಹಬ್ಬವನ್ನು ವಿರೋಧಿಸುತ್ತೀರಾ ಎಂದು ಪ್ರಶ್ನಿಸಿದ ಅವರು, ನಿಮ್ಮನ್ನು ಜನರು ಚುನಾವಣೆಯಲ್ಲಿ ವಿಸರ್ಜನೆ ಮಾಡುತ್ತಾರೆ. ನಿಮಗೆ ಮತ ಹಾಕದಂತೆ ಪ್ರಚಾರ ಮಾಡುತ್ತೇವೆ ಎಂದು ಕಿಡಿಕಾರಿದರು.

ಮೆರವಣಿಗೆ ಮಾಡದೇ ಗಣೇಶ ಪ್ರತಿಷ್ಠಾಪನೆ ಮಾಡಿದ ವಿಚಾರವಾಗಿ ಮಾತನಾಡಿ, ಇದಕ್ಕೆ ಕಾಂಗ್ರೆಸ್ ಕಾರಣವಾಗಿದೆ. ಅವರೇ ಇಂಥದ್ದೊಂದು ಸಮಸ್ಯೆಯನ್ನು ಸೃಷ್ಟಿ ಮಾಡಿದ್ದಾರೆ. ಮುಸ್ಲಿಂ ಕಿಡಿಗೇಡಿಗಳಿಗೆ ಕಾಂಗ್ರೆಸ್ ಕುಮ್ಮಕ್ಕು ನೀಡುತ್ತಿದೆ. ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನದಿಂದ ಶಫಿ ಆಸಾದ್​ನನ್ನು ಸಸ್ಪೆಂಡ್ ಮಾಡಬೇಕು ಎಂದು ಒತ್ತಾಯಿಸಿದರು.

ಓದಿ: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ : ಹೈಕೋರ್ಟ್​ ತೀರ್ಪು ಪ್ರಶ್ನಿಸಿ ಸುಪ್ರೀಂಗೆ ಮೇಲ್ಮನವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.