ETV Bharat / state

ರಾಷ್ಟ್ರೀಯ ಯುವಜನೋತ್ಸವಕ್ಕೆ ಸಿಂಗಾರಗೊಂಡ ಹುಬ್ಬಳ್ಳಿ: ಗಮನ ಸೆಳೆಯುತ್ತಿರುವ ಕಟೌಟ್​ಗಳು

author img

By

Published : Jan 11, 2023, 12:38 PM IST

Updated : Jan 11, 2023, 1:46 PM IST

Hubli Decorated For National Youth Festival
ರಾಷ್ಟ್ರೀಯ ಯುವಜನೋತ್ಸವಕ್ಕೆ ಸಿಂಗಾರಗೊಂಡ ಹುಬ್ಬಳ್ಳಿ

ನಾಳೆ ಸ್ವಾಮಿ ವಿವೇಕಾನಂದ ಜಯಂತಿ- ರಾಷ್ಟ್ರೀಯ ಯುವಜನೋತ್ಸವಕ್ಕೆ ಸಜ್ಜಾದ ವಾಣಿಜ್ಯ ನಗರಿ- ಮೋದಿ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭ.

ರಾಷ್ಟ್ರೀಯ ಯುವಜನೋತ್ಸವಕ್ಕೆ ಸಿಂಗಾರಗೊಂಡ ಹುಬ್ಬಳ್ಳಿ

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರು ಯುವಜನೋತ್ಸವ ಉದ್ಘಾಟನೆಗೆ ಆಗಮಿಸುವ ಹಿನ್ನೆಲೆ ಹುಬ್ಬಳ್ಳಿಯ ಗೋಕುಲ ರಸ್ತೆಯ ಬಳಿ ಅಳವಡಿಸಿರುವ ಕಟೌಟ್​​ಗಳು ಗಮನ ಸೆಳೆಯುತ್ತಿವೆ. ಹೌದು, ರಾಷ್ಟ್ರೀಯ ಯುವಜನೋತ್ಸವ ಉದ್ಘಾಟನಾ ಸಮಾರಂಭಕ್ಕೆ ಜ.12ರಂದು(ನಾಳೆ) ನಗರಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿರುವ ಹಿನ್ನೆಲೆ ವಾಣಿಜ್ಯ ನಗರಿ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.

ಸುಣ್ಣ-ಬಣ್ಣ ಬಳಿದು ಅಲಂಕಾರ: ವಿಮಾನ ನಿಲ್ದಾಣದಿಂದ ಉದ್ಘಾಟನಾ ಕಾರ್ಯಕ್ರಮ ನಡೆಯಲಿರುವ ಕ್ಲಬ್‌ ರಸ್ತೆಯ ರೈಲ್ವೆ ಮೈದಾನದವರೆಗಿನ ರಸ್ತೆಯನ್ನು ಶುಚಿಗೊಳಿಸಲಾಗಿದೆ. ಗುಂಡಿಗಳಿಗೆ ಡಾಂಬರು ಹಾಕಿ, ಸಮತಟ್ಟು ಮಾಡಲಾಗಿದೆ. ಗೋಕುಲ ರಸ್ತೆ, ವಾಣಿವಿಲಾಸ ವೃತ್ತ, ಲಕ್ಷ್ಮೀ ವೇ ಬ್ರಿಡ್ಜ್​, ದೇಶಪಾಂಡೆ ನಗರ, ಸರ್ವೋದಯ ವೃತ್ತದ ರಸ್ತೆಯ ಇಕ್ಕೆಲಗಳಲ್ಲಿದ್ದ ಧೂಳು ತೆಗೆಯಲಾಗಿದೆ. ರಸ್ತೆ ವಿಭಜಕಗಳಿಗೆ ಸುಣ್ಣ-ಬಣ್ಣ ಬಳಿದು ಅಲಂಕರಿಸಲಾಗಿದೆ. ಪರ್ಯಾಯ ಮಾರ್ಗವಾಗಿ ಗೋಕುಲ ರಸ್ತೆ, ಅಕ್ಷಯ ಪಾರ್ಕ್‌, ಶಿರೂರು ಪಾರ್ಕ್‌, ಕಿಮ್ಸ್‌ ಮುಖ್ಯ ರಸ್ತೆ, ಹೊಸೂರು ವೃತ್ತದ ಮಾರ್ಗಗಳನ್ನು ಪ್ರಧಾನಿ ಸಂಚಾರಕ್ಕೆ ಸಿದ್ಧಗೊಳಿಸಲಾಗಿದೆ.

ಗಮನ ಸೆಳೆಯುತ್ತಿರುವ ಬ್ಯಾನರ್​ಗಳು: ಸರ್ವೋದಯ ವೃತ್ತದ ಬಳಿಯ ಮೇಲ್ಸೇತುವೆಗೆ ಹಾಗೂ ಕ್ಲಬ್‌ ರಸ್ತೆಯ ಅಕ್ಕಪಕ್ಕದ ತಡೆಗೋಡೆಗಳಿಗೆ ಭಾರತೀಯ ಸಂಸ್ಕೃತಿ ಪ್ರತಿಬಿಂಬಿಸುವ ಚಿತ್ರಗಳನ್ನು ಬಿಡಿಸಲಾಗಿದೆ. ಹಳೆ ರೈಲ್ವೆ ಡಿಜಿಎಂ ಕಚೇರಿಗೆ ತೆರಳುವ ರಸ್ತೆಗೆ ಡಾಂಬರು ಹಾಕಿ, ನೂತನ ರಸ್ತೆಯನ್ನಾಗಿ ಮಾಡಲಾಗಿದೆ. ಪ್ರಧಾನಿ ಆಗಮಿಸಲಿರುವ ಮಾರ್ಗದುದ್ದಕ್ಕೂ ಸ್ವಾಮಿ ವಿವೇಕಾನಂದ, ಪ್ರಧಾನಿ ಮೋದಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಭಾವಚಿತ್ರಗಳಿರುವ ಸ್ವಾಗತದ ಫ್ಲೆಕ್ಸ್‌, ಕಟೌಟ್‌, ಬ್ಯಾನರ್‌ಗಳನ್ನು ಹಾಕಲಾಗಿದೆ. ರಸ್ತೆ ಮಧ್ಯದ ವಿದ್ಯುತ್‌ ಕಂಬಗಳಿಗೆ ಕೇಸರಿ ಬಟ್ಟೆ ತೂಗು ಬಿಡಲಾಗಿದೆ.

30 ಸಾವಿರ ಮಂದಿಗೆ ಅವಕಾಶ: 50X40 ಉದ್ದ-ಅಗಲದ ಪ್ರಧಾನ ವೇದಿಕೆ ನಿರ್ಮಿಸಿದ್ದು, ಉತ್ಸವದಲ್ಲಿ ಪಾಳ್ಗೊಳ್ಳುವ ಕಲಾವಿದರಿಗೆ, ಗಣ್ಯರಿಗೆ ಹಾಗೂ ಸಾರ್ವಜನಿಕರಿಗೆಂದು 100X100 ಉದ್ದ–ಅಗಲದ ಬೃಹತ್‌ ಪೆಂಡಾಲ್‌ ಹಾಕಲಾಗಿದೆ. ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡ ವಿವಿಧ ರಾಜ್ಯಗಳ ಆಯ್ದ 7,500 ಮಂದಿ ಯುವಕರಿಗೆ ಹಾಗೂ ಒಂದು ಸಾವಿರದಷ್ಟು ಗಣ್ಯರಿಗೆ ಮುಂಭಾಗದಲ್ಲಿ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಒಟ್ಟು 30 ಸಾವಿರ ಮಂದಿಗೆ ಅವಕಾಶ ಕಲ್ಪಿಸಲಾಗಿದೆ.

ಪ್ರತಿದಿನ ವೈವಿಧ್ಯಮಯ ಆಹಾರ.. 600 ಬಾಣಸಿಗರಿಂದ ಸಿದ್ಧತೆ: ಜ.12 ರಿಂದ 16 ರ ವರೆಗೆ ಹುಬ್ಬಳ್ಳಿ- ಧಾರವಾಡದಲ್ಲಿ ನಡೆಯಲಿರುವ ರಾಷ್ಟ್ರೀಯ ಯುವ ಜನೋತ್ಸವಕ್ಕಾಗಿ ದೇಶದ ವಿವಿಧ ಭಾಗಗಳ ಸ್ವಾದಿಷ್ಟ ಭಕ್ಷ್ಯಗಳು ತಯಾರಾಗುತ್ತಿವೆ. 600 ಜನ ಬಾಣಸಿಗರು ಒಂದು ಲಕ್ಷ ಜನರಿಗಾಗಿ ಗುಣಮಟ್ಟದ ವೈವಿಧ್ಯಮಯ ತಿಂಡಿ, ತಿನಿಸುಗಳನ್ನು ಸಿದ್ಧಪಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಧಾರವಾಡದ ಕೃಷಿ ವಿವಿ ಆವರಣದ ಐದು ಎಕರೆ ವಿಶಾಲ ಪ್ರದೇಶದಲ್ಲಿ ಆಹಾರ ತಯಾರಿಸಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಕೃಷಿ ವಿವಿಯ ಸಭಾಂಗಣದಲ್ಲಿ ಊಟ ಬಡಿಸಲು ಸಿದ್ಧತೆ ಕೈಗೊಳ್ಳಲಾಗಿದೆ. ದೇಶದ ವೈವಿಧ್ಯತೆ ಮತ್ತು ಏಕತೆಯನ್ನು ಪ್ರತಿಬಿಂಬಿಸುವ ಈ ಯುವ ಜನೋತ್ಸವದಲ್ಲಿ ಆಹಾರ ವೈವಿಧ್ಯೆದ್ಯತೆಗೂ ಒತ್ತು ನೀಡಲಾಗಿದೆ. ಎಲ್ಲಾ ಬಗೆಯ ಭಕ್ಷ್ಯಗಳನ್ನು ಇಲ್ಲಿ ತಯಾರು ಮಾಡಲಾಗುತ್ತಿದೆ. ಆಹಾರ ವಸ್ತುಗಳು, ಪಾತ್ರೆ, ಪಗಡೆಗಳು 12 ಲಾರಿಗಳಲ್ಲಿ ಸಾಮಗ್ರಿಗಳು ಬಂದಿಳಿದಿವೆ. ತರಕಾರಿಗಳನ್ನು ಸ್ಥಳೀಯ ಮಾರಾಟಗಾರರಿಂದ ಖರೀದಿಸಲಾಗಿದೆ. ಆಹಾರ ತಯಾರಿಕೆಗಾಗಿ ಸಿದ್ಧತೆ ತೀವ್ರಗತಿಯಲ್ಲಿ ಸಾಗಿದೆ.

ಊಟದ ಜವಾಬ್ದಾರಿ ವಹಿಸಿಕೊಂಡಿರುವ ಬೆಂಗಳೂರಿನ ಕೇಟರಿಂಗ್ ಕಂಪನಿಯಿಂದ ಒಂದು ಬಾರಿಗೆ 7 ರಿಂದ 8 ಸಾವಿರ ಪ್ರತಿನಿಧಿಗಳಿಗೆ ಮುಂಜಾನೆ ತಿಂಡಿ, ಮಧ್ಯಾಹ್ನದ ಊಟ, ಸಂಜೆ ಚಹಾ ಹಾಗೂ ರಾತ್ರಿಯ ಊಟ ಸಿದ್ಧಪಡಿಸಲಾಗುವುದು. ಪ್ರತಿ ದಿನವೂ ಆಹಾರದಲ್ಲಿ ವೈವಿಧ್ಯತೆ ಇರಲಿದೆ. ಒಂದು ದಿನ ಉತ್ತರ ಕರ್ನಾಟಕ ಖಡಕ್ ರೊಟ್ಟಿ, ವೈವಿದ್ಯಮಯ ಪಲ್ಯವನ್ನೊಳಗೊಂಡ ವಿಶೇಷ ಆಹಾರ ಸಿದ್ಧಪಡಿಸಲಾಗುವುದು. ಉತ್ತರ ಭಾರತ, ದಕ್ಷಿಣ ಭಾರತ ಶೈಲಿಯ ಖಾದ್ಯಗಳು ವಿಶೇಷವಾಗಿರಲಿವೆ. ಪ್ರತಿದಿನ ಒಂದೊಂದು ರೀತಿಯ ಪಾಯಸ ಇರಲಿದ್ದು, ಅಗತ್ಯಕ್ಕೆ ತಕ್ಕಂತೆ ಆಹಾರದ ಮೆನು ಬದಲಾವಣೆಗೂ ಸಿದ್ಧರಾಗಿದ್ದಾರೆ. ಅಡುಗೆ ತಯಾರಿಸಲು ಮಲಪ್ರಭ ನದಿಯಿಂದ ನೀರಿನ ಸೌಲಭ್ಯ ಕಲ್ಪಿಸಲಾಗಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ರಾಷ್ಟ್ರೀಯ ಯುವಜನೋತ್ಸವ, ಉದ್ಘಾಟನೆಗೆ ಪ್ರಧಾನಿ ಆಗಮನ: ಸಿಎಂ ಬೊಮ್ಮಾಯಿ

ಆರೋಗ್ಯ ರಕ್ಷಣೆ, ಗುಣಮಟ್ಟ, ಸ್ವಾದಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಊಟ ಬಡಿಸಲು ಪ್ರತಿಯೊಂದು ಕೌಂಟರ್​ಗೆ ಒಂದೊಂದು ತಂಡವನ್ನು ನೇಮಿಸಿದ್ದು, 20 ಕೌಂಟರ್ ಗಳನ್ನು ತೆರೆಲಾಗಿದೆ. ಒತ್ತಡ ಹೆಚ್ಚಾದಲ್ಲಿ ಊಟದ ಕೌಂಟರ್​ಗಳ ಸಂಖ್ಯೆ ಹೆಚ್ಚಿಸಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಆರು ದಿನಗಳ ಕಾಲ ಊಟೋಪಚಾರದ ಆತಿಥ್ಯ ವಹಿಸಿಕೊಂಡಿದ್ದು, ಪ್ರತಿಯೊಂದು ದಿನವೂ ವಿಶೇಷವೇ. ಬೆಳಗಿನ ಉಪಹಾರ, ಮಧ್ಯಾಹ್ನದ ಭೋಜನದಲ್ಲೂ ನಾವೀನ್ಯತೆ ಇರಲಿದ್ದು, ಮಾಂಸಾಹಾರ ಇರುವುದಿಲ್ಲ. ರಾತ್ರಿ ಭೋಜನದಲ್ಲಿ ಪ್ರತಿ ದಿನ ಒಂದೊಂದು ಬಗೆಯ ಮಾಂಸಾಹಾರ ಖಾದ್ಯವಿರಲಿದೆ.

ಮೊದಲ ದಿನ: ಉಪಹಾರಕ್ಕೆ ಬಾಳೆ ಹಣ್ಣು, ಕಲ್ಲಂಗಡಿ, ಬ್ರೆಡ್, ಬಟರ್, ಜಾಮ್, ಕಾರ್ನ್ ಫ್ಲಕ್ಸ್, ಬೇಯಿಸಿದ ಮೊಟ್ಟೆ ಅಥವಾ ಮೊಟ್ಟೆ ಪಲ್ಯ, ಆಮ್ಲೆಟ್, ಇಡ್ಲಿ, ವಡೆ, ಆಲೂ ಪರೋಟ, ಶಾವಿಗೆ ಉಪ್ಪಿಟ್ಟು, ಕಾಫಿ, ಟೀ, ಮಿನಿ ರಸ್ಕ್ ಮತ್ತು ಖಾರಿ, ಬಿಸಿ ಮತ್ತು ತಂಪಾದ ಬಾದಾಮಿ ಹಾಲು. ಮಧ್ಯಾಹ್ನ-ಬಿಂದಿ ಮಸಾಲ, ಪನ್ನೀರ್ ಮಟ್ಟರ್, ದಾಲ್ ಮಖಾನಿ, ಗೋಧಿ ರೋಟಿ/ತವಾ ರೋಟಿ, ಕುಲ್ಚಾ, ತಂದೂರಿ ರೋಟಿ, ಪಲಾವ್, ಅನ್ನ. ಸಂಜೆ- ಟೀಗೆ ತರಕಾರಿ ಮಿಶ್ರಣದ ಪಕೋಡ, ಕುಕೀಸ್, ಕಾಫಿ ಟೀ: ರಾತ್ರಿ - ಮಟನ್, ಮೇಥಿಮತರ್ ಮಲೈ, ಪನ್ನೀರ್ ಹರಿಯಾಲಿ, ಚಪಾತಿ, ಬೇಬಿ ನಾನ್, ತಂದೂರಿ ರೋಟಿ, ದೋಸೆ, ಸಾಲಡ್, ಪಾಸ್ತಾ, ಟೊಮೊಟೋ ರೈಸ್, ಜಿಲೇಬಿ ಡಬ್ಡಿ.

2ನೇ ದಿನ: ಪರಂಗಿ/ಸೇಬು ಹಣ್ಣು, ಇಡ್ಲಿ, ವಡೆ, ಚೋಲೆ ಬತುರಾ ಪೊಹ ಮತ್ತು ದೋಕ್ಲಾ. ಮಧ್ಯಾಹ್ನ-ಪನೀರ್ ಬಟರ್ ಮಸಾಲ, ಆಲೂ ಗೋಬಿ, ದಾಲ್ ತಡ್ಕ, ಗೋಧಿ ರೋಟಿ, ಕುಲ್ಚಾ, ತಂದೂರಿ ರೋಟಿ, ಫ್ರೈಡ್ ರೈಸ್, ಶೆಜ್ವಾನ್ ಫ್ರೈಡ್ ರೈಸ್, ಮೂಂಗ್ ದಾಲ್ ಹಲ್ವಾ. ಸಂಜೆ-ವಡಾಪಾವ್, ಕುಕೀಸ್. ರಾತ್ರಿ-ಮೀನು, ಮಲಾಯ್ ಕೋಪ್ತಾ, ಬೆಂಡ್ ದಾಲ್ ಪಾಲಾಕ್, ವಿವಿಧ ರೋಟಿಗಳು, ನೂಡಲ್ಸ್, ತುಪ್ಪದ ಅನ್ನ, ಶಶಿ ತುಡ್ಕಾ.

3ನೇ ದಿನ: ಕಿತ್ತಲೆ/ಬಾಳೆ ಹಣ್ಣು, ಬ್ರೆಡ್, ಬಟರ್, ಜಾಮ್, ಬೇಯಿಸಿದ ಮೊಟ್ಟ, ಪಲ್ಯ. ಆಮ್ಲೆಟ್, ಇಡ್ಲಿ, ವಡೆ, ದೋಸೆ, ಉಪ್ಪಿಟ್ಟು, ಕೇಸರಿಬಾತ್. ಮಧ್ಯಾಹ್ನ– ರಾಜ್ಮಾ ಮಸಾಲ, ಶಿಮ್ಲಾ ಮಿರ್ಚಿ ಆಲೂ ಕಿ ಸಬ್ಜಿ, ಪಾಲಕ್ ಪನ್ನೀರ್, ತವಾ ರೋಟಿ, ಕುಲ್ಚಾ, ತಂದೂರಿ ರೋಟಿ, ವೆಜ್ ಬಿರಿಯಾನಿ, ಗುಲಾಬ್ ಜಾಮೂನ್. ಸಂಜೆ- ಮೈಸೂರು ಬಜ್ಜಿ, ಕುಕೀಸ್. ರಾತ್ರಿ – ಮೊಟ್ಟೆ ಸಾರು, ಪನ್ನೀರ್ ಬುರ್ಜಿ, ದಾಲ್ ಕೊಲ್ಹಾಪುರಿ, ಗೋಧಿ ಚಪಾತಿ, ಬೇಬಿ ನಾನ್, ತಂದೂರಿ ರೋಟಿ, ದೋಸೆ, ಸಾಲಡ್, ಜೀರಾ ರೈಸ್.

4ನೇ ದಿನ: ಪರಂಗಿ/ಸೀಬೆ ಹಣ್ಣು, ಬ್ರೆಡ್ ಬಟರ್ ಜಾಮ್, ಕಾರ್ನ್ ಫ್ಲಾಕ್ಸ್, ಬೇಯಿಸಿದ ಮೊಟ್ಟ, ಪಲ್ಯ. ಆಮ್ಲೆಟ್, ಇಡ್ಲಿ, ವಡೆ, ಸಬೂದನ ಕಿಚ್ಡಿ. ಮಧ್ಯಾಹ್ನ– ಶಾಹಿ ಪನ್ನೀರ್, ಮಶ್ರೂಮ್ ಮಸಾಲ, ರೋಟಿಗಳು, ಜೀರಾ ರೈಸ್, ಶಾವಿಗೆ ಪಾಯಿಸ. ಸಂಜೆ ಸಬೂದನ ವಡೆ, ಕುಕೀಸ್. ರಾತ್ರಿ– ಮೀನು, ಪನ್ನೀರ್ ಬುರ್ಜಿ, ಬೀಟ್ ರೋಟ್ ಮಸಾಲ, ಗೋಧಿ ಚಪಾತಿ, ಬೇಬಿ ನಾನ್, ತಂದೂರಿ ರೋಟಿ, ದೋಸೆ, ಸಾಲಡ್, ರಸ್ಮಲೈ.

5ನೇ ದಿನ: ಕಲ್ಲಂಗಡಿ/ಕಿತ್ತಲೆ, ಬ್ರೆಡ್ ಬಟರ್ ಜಾಮ್, ಕಾರ್ನ್ ಫ್ಲೆಕ್ಸ್, ಬೇಯಿಸಿದ ಮೊಟ್ಟೆ, ಪಲ್ಯ, ಆಮ್ಲೆಟ್, ಇಡ್ಲಿ, ವಡೆ, ಟೊಮೊಟೋ ರೈಸ್. ಮಧ್ಯಾಹ್ನ ಉತ್ತರ ಕರ್ನಾಟಕದ ವಿಶೇಷ, ಎಣ್ಣೆಗಾಯಿ ಬದನೆಕಾಯಿ, ಜುಂಕಾ, ಸಂಜ್ಕಾ, ಹೆಸರು ಕಾಳು ಪಲ್ಯ, ಸಜ್ಜಿ/ಖಾಕಡ್ ರೋಡಿ, ಚಪಾತಿ, ಮೂರು ರೀತಿಯ ಚಟ್ನಿ ಪೌಡರ್, ನಿಂಬೆ ಹಣ್ಣಿನ ಚಿತ್ರಾನ್ನ, ಅನ್ನ, ಕಟ್ಟು ಸಾರು, ರಸಂ, ಸಾಂಬಾರ್, ಗೋಧಿ ಹುಗ್ಗಿ. ಸಂಜೆ ಗುರ್ಮಿಟ್, ಮಿರ್ಚಿ. ರಾತ್ರಿ– ಕೋಳಿ ಖಾದ್ಯ, ಅಲಸಂದೆ ಕಾಳು ಪಲ್ಯ, ಪನ್ನೀರ್ ಮಿಕ್ಸ್ ವೆಜ್, ವಿವಿಧ ರೋಟಿಗಳು, ರೆಡ್ ಸಾಸ್/ ವೈಟ್ ಸಾಸ್ ಪಾಸ್ತಾ, ಪಾಲಕ್ ರೈಸ್, ಹೆಸರು ಬೇಳೆ ಪಾಯಿಸ.

6ನೇ ದಿನ: ಬಾಳೆ ಹಣ್ಣು/ಸೇಬು, ಬ್ರೆಡ್ ಬಟರ್ ಜಾಮ್, ಕಾರ್ನ್ ಫ್ಲಾಕ್ಸ್, ಬೇಯಿಸಿದ ಮೊಟ್ಟೆ, ಪಲ್ಯ, ಆಮ್ಲೆಟ್, ಇಡ್ಲಿ, ವಡೆ, ಗೋಭಿ, ಆಲೂ ಪರೋಟ, ಪುಳಿಯೊಗರೆ ಅಥವಾ ಪೊಂಗಲ್. ಮಧ್ಯಾಹ್ನ– ವೆಜ್ ಹಂಡಿ, ದಾಲ್ ಮೇಥಿ, ಪನ್ನೀರ್, ರೋಟಿಗಳು, ಮಹಾರಾಷ್ಟ್ರ ಮಸಾಲ ಬಾತ್ ಅಥವಾ ಗ್ರೀನ್ ಪಲಾವ್, ಫೀರ್ನಿ, ಸಂಜೆ – ದಾಲ್ ವಡಾ, ಕುಕೀಸ್: ರಾತ್ರಿ ; - ಮಟನ್ ಖೀಮಾ, ಪನ್ನೀರ್ ಧಮ್ ಆಲೂ, ಗೋಬಿ ಬಜಾರ್ ಮಟರ್, ವಿವಿಧ ರೋಟಿಗಳು, ದೋಸೆ, ಸಲಾಡ್, ದಾಲ್ ಕಿಚಡಿ ಮತ್ತು ಗುಜರಾತಿ ಖಾದ್ಯ, ಫ್ರೈಡ್ ರೈಸ್, ಕರದಂಡು/ಕುಂದಾ ಇರಲಿದೆ.

ಇದನ್ನೂ ಓದಿ: ಜ.12ರಂದು ಹುಬ್ಬಳ್ಳಿಗೆ ಮೋದಿ ಆಗಮನ .. ರೈಲ್ವೆ ಮೈದಾನಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭೇಟಿ, ಪರಿಶೀಲನೆ

Last Updated :Jan 11, 2023, 1:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.