ಬೊಮ್ಮಾಯಿ ರಾಜ್ಯ ಕಂಡ ಅತ್ಯಂತ ವೀಕೆಸ್ಟ್ ಮುಖ್ಯಮಂತ್ರಿ: ಸಿದ್ದರಾಮಯ್ಯ

author img

By

Published : Jan 3, 2023, 6:41 AM IST

Updated : Jan 3, 2023, 8:33 AM IST

hubli-congress-convention-siddaramaiah-statement

ಬಿಜೆಪಿ ಜನರ ಮನಸ್ಸಿಗೆ ಹುಳಿ ಹಿಂಡಿ ದೇಶವನ್ನು ಒಡೆದು ಹಾಕುತ್ತಿದೆ. ಆದರೆ, ದೇಶವನ್ನು ಜೋಡಿಸಲು ರಾಹುಲ್ ಗಾಂಧಿ ಯಾತ್ರೆ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಹುಬ್ಬಳ್ಳಿಯಲ್ಲಿ ನಡೆದ ಕಾಂಗ್ರೆಸ್ ಮಹದಾಯಿ ಆಂದೋಲನದಲ್ಲಿ ಸಿದ್ದರಾಮಯ್ಯ ಭಾಷಣ

ಹುಬ್ಬಳ್ಳಿ: ನಾವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಬಿಜೆಪಿ ರಾಜ್ಯದ ಜನರನ್ನು ನಂಬಿಸಿ ದ್ರೋಹ ಮಾಡಿದೆ. ಅವರು ರಾಜ್ಯಕ್ಕೆ ಒಂದು ಲಕ್ಷ ಐವತ್ತು ಸಾವಿರ ಕೋಟಿ ರೂಪಾಯಿ ಕೊಡುತ್ತೇವೆಂದು ಪ್ರಣಾಳಿಕೆಯಲ್ಲಿ ಹೇಳಿದ್ದರು. ಕೇವಲ 45 ಸಾವಿರ ಕೋಟಿ ರೂ ಖರ್ಚು ಮಾಡಿದ್ದಾರೆ. ಮಿಕ್ಕಿದ್ದು ಏನಾಯ್ತು ಬೊಮ್ಮಾಯಿಯವರೇ? ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಗುಡುಗಿದರು.

ಹುಬ್ಬಳ್ಳಿಯಲ್ಲಿ ನಡೆದ ಕಾಂಗ್ರೆಸ್ ಮಹದಾಯಿ ಆಂದೋಲನದಲ್ಲಿ ಮಾತನಾಡಿದ ಅವರು, ಈ ಬಾರಿ ನಾವು ನೂರಕ್ಕೆ ನೂರರಷ್ಟು ಅಧಿಕಾರಕ್ಕೆ ಬರುತ್ತೇವೆ. ಬಿಜೆಪಿ ಎಷ್ಟೇ ಅಪಪ್ರಚಾರ, ಆಪರೇಷನ್ ಕಮಲ, ಹಣದ ಹೊಳೆ ಹರಿಸಿದರೂ ನಾವೇ ಅಧಿಕಾರಕ್ಕೆ ಬರೋದು. ಅಧಿಕಾರಕ್ಕೆ ಬಂದು ಎರಡೇ ವರ್ಷದಲ್ಲಿ ಮಹದಾಯಿ ತಿರುವು ಯೋಜನೆ ಮುಗಿಸ್ತೀವಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜನರಿಗೆ ಸುಳ್ಳು ಹೇಳೋ, ಲೂಟಿ ಹೊಡೆಯೋ ಸರ್ಕಾರವನ್ನು ಬೇರುಸಹಿತ ಕಿತ್ತು ಹಾಕಬೇಕು. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದು ರಾಜ್ಯವನ್ನು ಉಳಿಸಿ. ಇದು 40% ಸರ್ಕಾರ. ಬಸವರಾಜ ಬೊಮ್ಮಾಯಿ ರಾಜ್ಯ ಕಂಡ ಅತ್ಯಂತ ವೀಕೆಸ್ಟ್ ಮುಖ್ಯಮಂತ್ರಿ. ಭಾಷಣದಲ್ಲಿ ಮಾತ್ರ ಧಮ್, ತಾಕತ್ತು ಬಗ್ಗೆ ಮಾತಾಡ್ತಾರೆ. ನರೇಂದ್ರ ಮೋದಿಯವರ ಬಳಿ ಹೋಗಿ ನಡುಗುತ್ತಾರೆ ಎಂದು ವ್ಯಂಗ್ಯವಾಡಿದರು.

ಖಾದ್ರಿ ದರ್ಗಾ ಮುಟ್ಟಬೇಡಿ ಅಂದಿದ್ದೆ: ಹುಬ್ಬಳ್ಳಿಯ ಖಾದ್ರಿ ದರ್ಗಾ ಮುಟ್ಟಬೇಡಿ ಅಂದಿದ್ದೆ. ಮುಸ್ಲಿಂ ಬಾಂಧವರನ್ನು ಕರೆದು ಮಾತಾಡಿ ಅಂತಾ ಬೊಮ್ಮಾಯಿಗೆ ತಿಳಿಸಿದ್ದೆ. ನಂತರ ಪ್ರಲ್ಹಾದ್ ಜೋಶಿ ಮಾತಿಗೆ, ಒತ್ತಡಕ್ಕೆ ಮಣಿದರು. ದರ್ಗಾ ಒಡೆಯಲು ಜೋಶಿ ನೇರ ಕಾರಣ. ದರ್ಗಾ ಒಡೆಯುವ ಅವಶ್ಯಕತೆ ಇರಲಿಲ್ಲ, ಟೈಮ್ ಕೊಟ್ಟರೆ ಏನಾಗ್ತಿತ್ತು? ಈ ದ್ವೇಷದ ರಾಜಕಾರಣ ಇನ್ನೆರಡು ಮೂರು ತಿಂಗಳು ಮಾಡಬಹುದು ಎಂದರು.

ಇದನ್ನೂ ಓದಿ: ಹುಬ್ಬಳ್ಳಿ: ಭೈರಿದೇವರಕೊಪ್ಪದ ದರ್ಗಾಗೆ ಭೇಟಿ ನೀಡಿದ ಸಿದ್ದರಾಮಯ್ಯ

ರಾಹುಲ್ ಗಾಂಧಿ ದೇಶ ಜೋಡಿಸುತ್ತಿದ್ದಾರೆ: ಬಿಜೆಪಿ ಜನರ ಮನಸ್ಸಿಗೆ ಹುಳಿ ಹಿಂಡಿ ದೇಶವನ್ನು ಒಡೆದು ಹಾಕುತ್ತಿದ್ದಾರೆ. ಆದರೆ, ದೇಶ ಜೋಡಿಸಲು ರಾಹುಲ್ ಗಾಂಧಿ ಯಾತ್ರೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಮನಸ್ಸು ಜೋಡಿಸುವ ಪಕ್ಷ. ಬಿಜೆಪಿ ಅಧಿಕಾರದಲ್ಲಿ ಇರುವವರೆಗೆ ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು, ಮಹಿಳೆಯರು ಅಸುರಕ್ಷಿತ ಎಂದು ಹೇಳಿದರು.

ಬಿಜೆಪಿ ಚರಿತ್ರೆಯೇ ಮೋಸದಿಂದ ಕೂಡಿದೆ: ಮಹದಾಯಿ ವಿಚಾರದಲ್ಲಿ ಈ ಭಾಗಕ್ಕೆ ಬಿಜೆಪಿ ಮೋಸ ಮಾಡಿದೆ. ಇದುವರೆಗೆ ಅರಣ್ಯ ಮತ್ತು ಪರಿಸರ ಇಲಾಖೆಯ ಕ್ಲಿಯರೆನ್ಸ್ ತೆಗೆದುಕೊಂಡಿಲ್ಲ. ಈಗ ಅಧಿಕಾರವಧಿ ಮುಗಿಯುವಾಗ ವಿಚಾರ ಮುನ್ನೆಲೆಗೆ ತಂದಿದ್ದಾರೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೆವಾಲ್ ಹೇಳಿದರು.

ಸಮಾವೇಶದಲ್ಲಿ ಮಾತನಾಡಿದ ಅವರು, ಮಹದಾಯಿ ನೀರನ್ನು ಇವರಿಂದ ತರಲು ಹಿಂದೆಯೂ ಸಾಧ್ಯವಾಗಿಲ್ಲ, ಮುಂದೆಯೂ ಆಗಲ್ಲ. ದೆಹಲಿ ಮತ್ತು ಬೆಂಗಳೂರಿನಲ್ಲಿರುವ ಸರ್ಕಾರ ಉತ್ತರ ಕರ್ನಾಟಕ ಭಾಗಕ್ಕೆ ದ್ರೋಹ ಮಾಡಿದೆ. ಇವರ ಚರಿತ್ರೆಯೇ ಮೋಸದಿಂದ ಕೂಡಿದೆ.‌ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಯೋಜನೆ ಜಾರಿಗೆ ತರುತ್ತೇವೆ ಎಂದು ಅವರು ಭರವಸೆ ನೀಡಿದರು.

ಇದನ್ನೂ ಓದಿ: ರಾಹುಲ್ ಗಾಂಧಿ ಪಿಎ ಹೆಸರಿನಲ್ಲಿ ಯುಟಿ ಖಾದರ್​ಗೆ ನಕಲಿ ಕರೆ: ದೂರು ದಾಖಲು

Last Updated :Jan 3, 2023, 8:33 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.