ETV Bharat / state

ಹಿಂದೂ ಮುಸ್ಲಿಂರು ಸೇರಿ ಗಣೇಶೋತ್ಸವ ಆಚರಣೆ.. ಮಾದರಿಯಾದ ಕೊಟಗೊಂಡಹುಣಸಿ ಗ್ರಾಮಸ್ಥರು

author img

By

Published : Sep 4, 2022, 4:00 PM IST

ಹಿಂದೂ ಮುಸ್ಲಿಂರು ಸೇರಿ ಗಣೇಶೋತ್ಸವ
ಹಿಂದೂ ಮುಸ್ಲಿಂರು ಸೇರಿ ಗಣೇಶೋತ್ಸವ

ಹುಬ್ಬಳ್ಳಿ ತಾಲೂಕಿನ ಕೊಟಗೊಂಡಹುಣಸಿ ಗ್ರಾಮದಲ್ಲಿ ಹಿಂದೂ ಮುಸ್ಲಿಮರು ಒಟ್ಟಿಗೆ ಸೇರಿ ವಿಘ್ನ ವಿನಾಶಕನಿಗೆ ಒಟ್ಟಾಗಿ ಪೂಜೆ ಸಲ್ಲಿಸುವ ಮೂಲಕ ಮಾದರಿಯಾಗಿದ್ದಾರೆ.

ಹುಬ್ಬಳ್ಳಿ: ದೇಶಾದ್ಯಂತ ಸಡಗರ ಸಂಭ್ರಮದಿಂದ ಗಣೇಶ ಚತುರ್ಥಿಯನ್ನು ಜನರು ಆಚರಿಸುತ್ತಿದ್ದಾರೆ. ಮತ್ತೊಂದೆಡೆ ಕೋಮು ಭಾವನೆ ಕಿಚ್ಚು ಹೆಚ್ಚಾಗುತ್ತಿದೆ. ಈ ನಡುವೆ ಇಲ್ಲೊಂದು ಗ್ರಾಮ ಇಡೀ ದೇಶಕ್ಕೆ ಮಾದರಿಯಾಗಿದೆ. ಹಿಂದೂ ಹಾಗೂ ಮುಸ್ಲಿಮರು ಇಬ್ಬರು ಸೇರಿಕೊಂಡು ಗಣಪತಿ ಪ್ರತಿಷ್ಠಾಪನೆ ಮಾಡುವ ಮೂಲಕ ಸೌಹಾರ್ದತೆ ಮೆರೆದಿದ್ದಾರೆ.

ಹೌದು.. ಹುಬ್ಬಳ್ಳಿ ತಾಲೂಕಿನ ಕೊಟಗೊಂಡಹುಣಸಿ ಗ್ರಾಮದಲ್ಲಿ ಹಿಂದೂ ಮುಸ್ಲಿಮರು ಒಟ್ಟಿಗೆ ಸೇರಿ ವಿಘ್ನ ವಿನಾಶಕನಿಗೆ ಒಟ್ಟಾಗಿ ಪೂಜೆ ಸಲ್ಲಿಸುವ ಮೂಲಕ ಮಾದರಿಯಾಗಿದ್ದಾರೆ. ಇಲ್ಲಿ ಗಣೇಶೋತ್ಸವ ಕಾರ್ಯಕ್ರಮಕ್ಕೆ ತಳಿರುತೋರಣ ಕಟ್ಟುವವರು ಮುಸ್ಲಿಮರು. ಆದರೆ, ಇಫ್ತಾರ್​ಗೆ ಊಟ ಬಡಿಸುವವರು ಇಲ್ಲಿನ ಹಿಂದೂಗಳಾಗಿದ್ದಾರೆ. ಗಣಪತಿ ಪ್ರತಿಷ್ಠಾಪನೆ ಬಳಿಕ ನಿತ್ಯವೂ ಹಿಂದೂ-ಮುಸ್ಲಿಂ ಮಹಿಳೆಯರು, ಪುರುಷರು ಒಟ್ಟುಗೂಡಿ ಪೂಜೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಗಣೇಶನ ಮುಂದೆ ನಮಾಜ್ ಮಾಡುವ ಮೂಲಕ ನಾವೆಲ್ಲರೂ ಒಂದೇ ಎನ್ನುವ ಸಂದೇಶ ನೀಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ.

ಗಣೇಶೋತ್ಸವದ ಬಗ್ಗೆ ಗ್ರಾಮಸ್ಥರು ಮಾತನಾಡಿರುವುದು

ಕಳೆದ 25 ವರ್ಷಗಳಿಂದ ಸೌಹಾರ್ದ ಗಣೇಶ ಪ್ರತಿಷ್ಠಾಪನೆ ಮಾಡುವ ಮೂಲಕ ನಾವೆಲ್ಲರೂ ಒಂದೇ ಎಂದು ಸಾರುತ್ತಿದ್ದಾರೆ. ವಿಶೇಷವಾಗಿ ಈ ಬಾರಿ ಬೆಳ್ಳಿಹಬ್ಬದ ಹಿನ್ನೆಲೆ ಬೆಳ್ಳಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ. ಇನ್ನು, ಇಲ್ಲಿ ಪ್ರತಿವರ್ಷವೂ ರೇಣುಕಾ ಯಲ್ಲಮ್ಮ, ತಿರುಪತಿ, ಶಬರಿಮಲೆ ಅಯ್ಯಪ್ಪಗಳಂತಹ ದೇವರ ಚರಿತ್ರೆಗಳನ್ನು ಗೊಂಬೆ ಆಟದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಾಗುತ್ತಿತ್ತು. ಆದರೆ ಕೊರೊನಾ ನಂತರ ಗೊಂಬೆ ಆಟವನ್ನು ನಿಲ್ಲಿಸಲಾಗಿದೆ. ಆದರೆ ಮುಂಬರುವ ಹಬ್ಬದಲ್ಲಿ ಮತ್ತೆ ಎಂದಿನಂತೆ ಬೊಂಬೆ ಆಟ ಪ್ರಾರಂಭಿಸಲಾಗುವುದು ಎನ್ನುತ್ತಾರೆ ಗಣೇಶೋತ್ಸವ ಯುವಕ ಮಂಡಳಿಯವರು.

ಗಣೇಶೋತ್ಸವದ ಬಗ್ಗೆ ಗ್ರಾಮಸ್ಥರು ಮಾತನಾಡಿರುವುದು

'ನಮ್ಮ ಹುಡುಗ್ರು ಇಲ್ಲಿನ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಮಣ್ಣಿನ ಗಣಪತಿ ಮೂರ್ತಿ ಮಾಡಿ ಆಚರಿಸುತ್ತಿದ್ದಾರೆ. ಒಂದನೇ ವರ್ಷದಿಂದ ಎರಡನೇ ವರ್ಷದಿಂದ ಸಣ್ಣ ಸಣ್ಣ ಪ್ರಮಾಣದಲ್ಲಿ ಹಬ್ಬವನ್ನು ಆಚರಿಸುತ್ತ ಬಂದಿದ್ದಾರೆ. ಅಲ್ಲಿಂದ ಈ ಹಬ್ಬವನ್ನು ಎಲ್ಲ ಸಮುದಾಯದವರು ಸೇರಿದಂತೆ ಸುಮಾರು 25 ವರ್ಷದಿಂದ ಆಚರಿಸುತ್ತ ಬಂದಿದ್ದೇವೆ. ಅಲ್ಲದೇ ಪ್ರತಿವರ್ಷವೂ ನಾಟಕಗಳನ್ನು ಮಾಡುತ್ತ ಬಂದಿದ್ದೇವೆ ಗ್ರಾಮಸ್ಥ ಸಿದ್ದಪ್ಪ ಅವರು ತಿಳಿಸಿದ್ದಾರೆ.

ಬೆಳ್ಳಿ ಮೂರ್ತಿಯ ಪ್ರತಿಷ್ಠಾಪನೆ: ಧರ್ಮಸ್ಥಳ ಮಂಜುನಾಥ, ವಿಕ್ರಮಾರ್ಜುನ ವಿಜಯ, ಶಬರಿಮಲೆ ಅಯ್ಯಪ್ಪಸ್ವಾಮಿ ಹಾಗೆಯೇ ಆಪ್ತಮಿತ್ರ ಈ ರೀತಿಯ ಸನ್ನಿವೇಶಗಳನ್ನು ಮಾಡುತ್ತ ಬಂದಿದ್ದರು. ಕೊರೊನಾ ಲಾಕ್​ಡೌನ್ ಇದ್ದಿದ್ದರಿಂದ ನಾವು ಆಚರಿಸಿರಲಿಲ್ಲ. ಈ ವರ್ಷ ನಾವು ಮತ್ತೆ ಊರಿನಲ್ಲಿ ಎಲ್ಲಾ ಸಮುದಾಯದವರು ಸೇರಿಕೊಂಡು ಬೆಳ್ಳಿ ಮೂರ್ತಿ ಇಟ್ಟು ಪೂಜಿಸಬೇಕೆಂದು ಪ್ರಯತ್ನ ಮಾಡಿದ್ದೇವೆ. ಅದರಂತೆ ಎಲ್ಲರ ಸಹಕಾರದಿಂದ ಈ ವರ್ಷ ಬೆಳ್ಳಿ ಮೂರ್ತಿಯ ಪ್ರತಿಷ್ಠಾಪನೆಯಾಗಿ 25 ವರ್ಷ ಆಗಿದೆ. ಎಲ್ಲ ಸಮುದಾಯದವರು ಸೇರಿ ಹಬ್ಬವನ್ನು ಆಚರಿಸುತ್ತ ಬಂದಿದ್ದೇವೆ. ಮುಂದೆಯೂ ಕೂಡಾ ನಾವೆಲ್ಲರೂ ಸೇರಿ ಆಚರಿಸುವ ಪ್ರಯತ್ನದಲ್ಲಿದ್ದೇವೆ' ಎಂದು ಗ್ರಾಮದ ಮುಖಂಡ ತಿಪ್ಪಣ್ಣ ತಿಳಿಸಿದರು.

ಭಾವೈಕ್ಯತೆ ಸಂದೇಶ: ಒಟ್ಟಾರೆ ಧರ್ಮ ಧರ್ಮಗಳ ಕಚ್ಚಾಟದ ನಡುವೆ ಅದೆಷ್ಟೋ ಪ್ರಕರಣಗಳು ನಡೆಯುತ್ತಿವೆ. ಇಂತಹ ದಿನಗಳಲ್ಲಿ ಈ ಗ್ರಾಮದ ಜನತೆ ಗಣೇಶೋತ್ಸವವನ್ನು ಒಟ್ಟಾಗಿ ಆಚರಿಸುವ ಮೂಲಕ ನಾವೆಲ್ಲರೂ ಮನುಷ್ಯ ಜಾತಿ ಎಂದು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಭಾವೈಕ್ಯತೆ ಸಂದೇಶವನ್ನು ಈ ಊರಿನ ಜನತೆ ಸಾರಿದ್ದಾರೆ.

ಓದಿ: ಗಣೇಶೋತ್ಸವ ಅಲಂಕೃತ ಮಂಟಪ ಕುಸಿತ.. ಹಲವರಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.