ETV Bharat / state

ಚುನಾವಣೆ ಬಂದಾಗ ಬೋಗಸ್ ಕಾರ್ಡ್ ಸರಣಿ ಆರಂಭ: ಕಾಂಗ್ರೆಸ್ ವಿರುದ್ಧ ಸಿಎಂ ಗರಂ

author img

By

Published : Mar 20, 2023, 8:35 PM IST

ರಾಹುಲ್ ಗಾಂಧಿ ಅವರಿಗೆ ದೇಶದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ
ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ

ಸಿಎಂ ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ/ಬೆಂಗಳೂರು : ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಬೋಗಸ್​ ಕಾರ್ಡ್​ಗಳ ಬಿಡುಗಡೆ ಸರಣಿ ಆರಂಭಿಸಿದೆ. ಈಗಾಗಲೇ ಮೂರನ್ನು ಬಿಟ್ಟಿದೆ. ಈಗ ನಾಲ್ಕನೆಯ ಬೋಗಸ್ ಕಾರ್ಡ್ ಬಿಡುಗಡೆ ಮಾಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದರು.

ನಗರದ ವಿಮಾನ ನಿಲ್ದಾಣದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿಗರು ತಮ್ಮ ಆಡಳಿತ ರಾಜ್ಯಗಳಲ್ಲಿ ಎಲ್ಲೆಲ್ಲಿ ಆಶ್ವಾಸನೆ ನೀಡಿದಂತೆ ಯೋಜನೆ ಅನುಷ್ಠಾನಗೊಳಿಸಿದ್ದಾರೆ ಎಂಬುವುದರ ಬಗ್ಗೆ ಶೀಘ್ರವೇ ಪಟ್ಟಿ ಬಿಡುಗಡೆ ಮಾಡುತ್ತೇನೆ. ಅಧಿಕಾರದ ಹತಾಶೆಯಿಂದ ಆಗಲಾರದ ಬೋಗಸ್ ಗ್ಯಾರಂಟಿ ಕಾರ್ಡ್​ಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಇದು ಚುನಾವಣೆಗಾಗಿ ಮಾಡುತ್ತಿರುವ ಬೋಗಸ್ ಕಾರ್ಡ್ ಸರಣಿಯಾಗಿದೆ. ಜನರು ಇದನ್ನು ನಂಬುವುದಿಲ್ಲ ಎಂದರು.

ಇವರಿಗೆ ದೇಶದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ : ರಾಹುಲ್ ಗಾಂಧಿಯ ಬಗ್ಗೆ ಮಾತನಾಡಿದ ಅವರು, ದೇಶದ ಬಗ್ಗೆ ಅವರಿಗೆ ಎಷ್ಟು ಪ್ರೀತಿ ಇದೆ ಎಂಬುವುದು ಎಲ್ಲರಿಗೂ ಗೊತ್ತು. ರಾಜ್ಯದ ಬಗ್ಗೆ ಅವರು ಏನು ಮಾತನಾಡುತ್ತಾರೆ. ಹೊರ ದೇಶಕ್ಕೆ ಹೋದಾಗ ನಾಡಿನ ಬಗ್ಗೆ ಕೀಳಾಗಿ ಮಾತನಾಡುತ್ತಾರೆ. ಇವರಿಗೆ ದೇಶದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂದು ರಾಹುಲ್ ಗಾಂಧಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ
ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ

ಉರಿಗೌಡ, ನಂಜೇಗೌಡ ಆಧಾರ ಕಾರ್ಡ್ ಕುರಿತು ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಅವರು, ಈ ಬಗ್ಗೆ ಸತ್ಯ ಸಂಶೋಧನೆ ಆಗಲಿ. ಆಗ ಎಲ್ಲವೂ ಹೊರಬೀಳಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಬಡವರ ಪರವಾಗಿ ಐತಿಹಾಸಿಕ ಕ್ರಮವನ್ನು ಸರ್ಕಾರ ಕೈಗೊಂಡಿದೆ: ಸಿಎಂ : ಇನ್ನೊಂದೆಡೆ ಬಡವರ ಕನಸುಗಳನ್ನು ನನಸು ಮಾಡುವುದೇ ಸರ್ಕಾರದ ಗುರಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ಕರ್ನಾಟಕ ಭೂ ಕಂದಾಯ ಕಾಯ್ದೆ -1964 ಕಲಂ 94 ಸಿ ಮತ್ತು 94 ಸಿಸಿಯಡಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ 1,54,000 ಹಕ್ಕುಪತ್ರಗಳನ್ನು ನೀಡಲಾಗಿದೆ. 1,50,000 ಕ್ಕಿಂತ ಹೆಚ್ಚು ಹಕ್ಕುಪತ್ರಗಳನ್ನು ಲಂಬಾಣಿ ತಾಂಡಾ, ಕುರುಬರ ಹಟ್ಟಿ, ಗೊಲ್ಲರ ಹಟ್ಟಿಯವರಿಗೆ ನೀಡಲಾಗಿದ್ದು, ಒಟ್ಟು 3 ಲಕ್ಷ ಹಕ್ಕುಪತ್ರಗಳನ್ನು ನೀಡಲಾಗಿದೆ.

ನಗರಗಳಲ್ಲಿ 90 ಸಿಸಿ ಅಡಿಯಲ್ಲಿ 172000 ಜನರಿಗೆ ಹಕ್ಕುಪತ್ರಗಳನ್ನು ನೀಡಿ ಮನೆಗಳನ್ನು ಕಟ್ಟಿಸಿಕೊಡಲಾಗಿದೆ. 40000 ಕ್ಕೂ ಹೆಚ್ಚು ಕಾಫಿ ಪ್ಲಾಂಟರ್​ಗಳಿಗೆ ಭೂಮಿಯನ್ನು ಗುತ್ತಿಗೆ ಮೇಲೆ ನೀಡಲಾಗಿದೆ. 60 ಸಾವಿರಕ್ಕೂ ಹೆಚ್ಚು ಎಕರೆ ರೈತರಿಗೆ ನೀಡಿದೆ. 1 ಲಕ್ಷ ಎಕರೆ ಡೀಮ್ಡ್ ಅರಣ್ಯವನ್ನು ಉಳುಮೆ ಮಾಡುವ ರೈತರಿಗೆ ನೀಡಲಾಗಿದೆ. ಜನರ ಶ್ರೇಯೋಭಿವೃದ್ಧಿಯೇ ನಮ್ಮ ರಾಜಕಾರಣ ಎಂದು ತಿಳಿಸಿದರು.

ಬಡವರ ಪರವಾಗಿ ಐತಿಹಾಸಿಕ ಕ್ರಮ : ಬಡವರ ಪರವಾಗಿ ಐತಿಹಾಸಿಕ ಕ್ರಮವನ್ನು ಸರ್ಕಾರ ಕೈಗೊಂಡಿದೆ. ಎಲ್ಲಾ ಜಿಲ್ಲೆಗಳಲ್ಲಿ ಈ ಕಾರ್ಯಕ್ರಮವನ್ನು ಕೈಗೊಳ್ಳಲಾಗಿದೆ. ಮನುಷ್ಯ ಗೌರವಯುತ, ಸ್ವಾವಲಂಬಿ, ಸ್ವಾಭಿಮಾನಿ ಬದುಕು ಬದುಕಲು ತಲೆ ಮೇಲೆ ಸೂರು ಅಗತ್ಯ. ಸೂರು ಬೇಕಾದರೆ ಜಮೀನು ಅಗತ್ಯ. ಜಮೀನಿಲ್ಲದೇ ಮನೆ ಕಟ್ಟಿದಾಗ ಸದಾ ಇರುವ ಆತಂಕಕ್ಕೆ ಶಾಶ್ವತ ನೆಮ್ಮದಿ ತರಲು 90 ಸಿ ಕಾನೂನಿನಡಿ ಹಕ್ಕುಪತ್ರ ನೀಡುವ ಮಹತ್ವದ ಕಾರ್ಯಕ್ರಮ ಇದು ಎಂದರು.

ಈ ಹಿಂದೆ ಯಾರೂ ಈ ದಿಟ್ಟ ಕ್ರಮ ಕೈಗೊಳ್ಳಲು ಮುಂದೆ ಬಂದಿರಲಿಲ್ಲ. ಕಾನೂನಿನ ತೊಡಕನ್ನು ಹೇಳುತ್ತಿದ್ದರು. ಬಡವರ ಬಗ್ಗೆ ಕಳಕಳಿ ಇದ್ದರೆ, ಎಲ್ಲಾ ಕಾನೂನಿನ ತೊಡಕನ್ನು ತೆಗೆದುಹಾಕಿ ಬಡವರ ಪರ ನಿಲ್ಲಬಹುದು ಎನ್ನುವುದಕ್ಕೆ ನಮ್ಮ ಸರ್ಕಾರದ ದಿಟ್ಟ ನಿಲುವೇ ಸಾಕ್ಷಿ. ಇದು ನಿಮ್ಮ ಹಕ್ಕು. ನಿಮ್ಮ ಹಕ್ಕಿಗೆ ಕಾನೂನಿನ ಮುದ್ರೆ ಹಾಕಲಾಗಿದೆ. ಒಂದು ಸರ್ಕಾರ ಬಡವರ ಪರವಾಗಿ ಮಿಡಿಯುವ ಸರ್ಕಾರವಿದ್ದರೆ, ಸಮಸ್ಯೆಗೆ ಪರಿಹಾರ ನೀಡುವ ನಿಲುವು ಇದ್ದರೆ ಇದು ಸಾಧ್ಯವಾಗುತ್ತದೆ. ಗುರು, ಹಿರಿಯರು, ದೇವರ ಪುಣ್ಯದಿಂದ ಕಾರ್ಯ ಸಾಧ್ಯವಾಗಿದೆ. ಈ ಅವಕಾಶ ನಮ್ಮ ಪಾಲಿಗೆ ಬಂದಿದೆ. ಇದನ್ನು ಜನ ಸ್ಮರಿಸಬೇಕು ಎಂದರು.

ಬದುಕಲು ಅವಕಾಶ : ಈ ನಿಲುವು ತೆಗೆದುಕೊಳ್ಳದೆ ಇರಬಹುದಿತ್ತು. ಆದರೆ ಬಡವರ ಪರವಾಗಿ ನಮ್ಮ ಸರ್ಕಾರವಿದೆ ಎಂದು ನಾವು ನಿರೂಪಿಸಿದ್ದೇವೆ. ನಾಲ್ಕು ಸಾವಿರ ಚದರ ಅಡಿಗೆ ಬೆಂಗಳೂರಿನಲ್ಲಿ ಕೋಟಿ ಬೆಲೆ ರಿಯಲ್ ಎಸ್ಟೇಟ್ ಜನ ಮಾರುತ್ತಾರೆ. ಬಡವರಾಗಿ ಹುಟ್ಟುವುದು ಆಕಸ್ಮಿಕ. ಬಡವರಾಗಿಯೇ ಸಾಯಬಾರದು. ಎಲ್ಲರಂತೆ ಸಾಧನೆ ಮಾಡಿ , ಏಳಿಗೆ ಹೊಂದಬೇಕು ಎನ್ನುವ ಹಂಬಲ ಎಲ್ಲರಿಗೂ ಇರುತ್ತದೆ. ಬಡವರಿಗೆ ಅವಕಾಶ, ಬೆಂಬಲ, ಬೆನ್ನೆಲುಬಾಗಿ ಸರ್ಕಾರ ನಿಲ್ಲಬೇಕು. ಜನ ಪ್ರಗತಿ ಹೊಂದಿದರೆ ನಾಡು ಏಳಿಗೆಯಾಗುತ್ತದೆ. ಬಡವರ ಬದುಕು ಕಟ್ಟುವ ಸಲುವಾಗಿ ಅವಕಾಶ ನೀಡಬೇಕು ಎಂದರು.

ಬಡವರಿಗೆ ನೆಮ್ಮದಿ : ಹಕ್ಕುಪತ್ರಗಳನ್ನು ನೀಡಿ ನಿಜವಾಗಿ ಬಡವರಿಗೆ ನೆಮ್ಮದಿ ನೀಡಲಾಗಿದೆ. ಇದು ಪುಣ್ಯ ಗಳಿಸುವ ಕ್ರಮ. ಒಳ್ಳೆಯ ಕೆಲಸ ಮಾಡಲು ಪ್ರೇರಣೆ ದೊರೆತಿದೆ. ಇಲ್ಲಿ ಸರ್ಕಾರ ಏನೆಲ್ಲಾ ಮಾಡಬಹುದು ಎಂದು ತೋರಿಸಿಕೊಟ್ಟಿದೆ. ಬಹಳ ದಿನಗಳ ಕನಸು ಈಡೇರುತ್ತಿದೆ. ಗ್ರಾಮ ಒನ್ ಅಡಿಯಲ್ಲಿ ಒಂದೂವರೆ ಕೋಟಿಗೂ ಹೆಚ್ಚು ಜನರಿಗೆ ಅನುಕೂಲ ಕಲ್ಪಿಸಲಾಗಿದೆ. ಹಲೋ ಕಂದಾಯ ಸಚಿವರೆ ಯೋಜನೆಯಡಿ ಇದೂವರೆಗೆ ಕೋಟಿ ಜನರಿಗೆ ಅನುಕೂಲವಾಗಿದೆ. ಜನರಿಗೆ ಹತ್ತಿರವಾಗಿ, ಸಮಸ್ಯೆ ಪರಿಹಾರಕ್ಕಾಗಿ ಸರ್ಕಾರ ಕೆಲಸ ಮಾಡುತ್ತಿದೆ.

ಇಡೀ ಕರ್ನಾಟಕದಲ್ಲಿ ಜಲ್ ಜೀವನ್ ಮಿಷನ್ ಯೋಜನೆಯಡಿ ಕಳೆದ ಮೂರು ವರ್ಷಗಳಲ್ಲಿ 40 ಲಕ್ಷ ಮನೆಗಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿ ಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬದ್ಧತೆಯಿಂದ ಇದು ಸಾಧ್ಯವಾಗಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 17 ಲಕ್ಷ ಮನೆಗಳಿಗೆ ಮಂಜೂರಾತಿ, ಸುಮಾರು 3 ಲಕ್ಷ ಮನೆಗಳಿಗೆ ವಿದ್ಯುಚ್ಛಕ್ತಿ, ಬಡವರಿಗೆ 12 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಇದಲ್ಲದೆ ಅನೇಕ ಯೋಜನೆಗಳನ್ನು ಜಾರಿ ಮಾಡಲಾಗಿದೆ. ಇದು ಬದುಕಿಗೆ ನೆಮ್ಮದಿ, ನೆರಳು ನೀಡುವ ಕಾರ್ಯಕ್ರಮ ಎಂದರು.

ಮಕ್ಕಳಿಗೆ ಶಿಕ್ಷಣ ನೀಡಿ : ಇನ್ನು ಮುಂದೆ ಆತ್ಮಸ್ಥೈರ್ಯದಿಂದ ಮುಂದೆ ಬಂದು ಮಕ್ಕಳಿಗೆ ಶಿಕ್ಷಣ ನೀಡಿ ಪ್ರಗತಿ ಹೊಂದಬೇಕು. ರೈತ ವಿದ್ಯಾನಿಧಿ ಯೋಜನೆಯನ್ನು ಇದಕ್ಕಾಗಿ ಜಾರಿಗೆ ತರಲಾಗಿದೆ. ಬಡವರ ಪರವಾಗಿ ಕೆಲಸ ಮಾಡುವ ಸರ್ಕಾರವಿದೆ ಎಂಬ ನಂಬಿಕೆಯಿಂದ ಮುಂದುವರೆಯಬೇಕು ಎಂದರು. ಇದು ಶಾಶ್ವತವಾಗಿ ಉಳಿಯುವ ಕೆಲಸವಿದು ಎಂದರು. ಉತ್ತಮವಾಗಿ ಕೆಲಸ ಮಾಡಿರುವ ಕಂದಾಯ ಸಚಿವರು ಹಾಗೂ ಅಧಿಕಾರಿಗಳನ್ನು ಮುಖ್ಯಮಂತ್ರಿಗಳು ಅಭಿನಂದಿಸಿದರು.

ಕಂದಾಯ ಸಚಿವ ಆರ್. ಅಶೋಕ್, ಸಚಿವ ಎಂ.ಟಿ. ಬಿ ನಾಗರಾಜ್, ಶಾಸಕರಾದ ಸತೀಶ್ ರೆಡ್ಡಿ, ರವಿ ಸುಬ್ರಹ್ಮಣ್ಯ, ಉದಯ ಗರುಡಾಚಾರ್ , ಎಂ. ಕೃಷ್ಣಪ್ಪ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ : ಉರಿಗೌಡ, ನಂಜೇಗೌಡ ಸಿನಿಮಾ ವಿಚಾರ, ಗುರುಗಳು ಹೇಳಿದಂತೆ ಕೇಳಬೇಕು: ಸಿಎಂ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.