ETV Bharat / state

ಕಾಂಗ್ರೆಸ್‌ನವರು ದಿಂಬು, ಹಾಸಿಗೆಯನ್ನೂ ಬಿಟ್ಟಿಲ್ಲ; ಸಿದ್ದರಾಮಯ್ಯ ಸಚಿವರುಗಳಿಗೆ 'ಟಾರ್ಗೆಟ್‌' ಕೊಡ್ತಿದ್ರು: ಸಿಎಂ

author img

By

Published : Mar 6, 2023, 10:44 AM IST

Updated : Mar 6, 2023, 12:16 PM IST

ಆಪಾದನೆ ಮಾಡುವವರು ಮೊದಲು ತಾವು ಶುದ್ಧ ಹಸ್ತರಿರಬೇಕು ಎಂದು ಕಾಂಗ್ರೆಸ್​ ನಾಯಕರಿಗೆ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

ಸಿಎಂ ಬಸವರಾಜ್​ ಬೊಮ್ಮಾಯಿ
ಸಿಎಂ ಬಸವರಾಜ್​ ಬೊಮ್ಮಾಯಿ

ಹುಬ್ಬಳ್ಳಿ: "ಕಾಂಗ್ರೆಸ್ ಪಕ್ಷವು ಮಾರ್ಚ್ 9ರಂದು ಕರ್ನಾಟಕ ಬಂದ್​ಗೆ ಕರೆ ಕೊಟ್ಟಿರುವುದು ಹಾಸ್ಯಾಸ್ಪದವಾಗಿದೆ.‌ ಕಾಂಗ್ರೆಸ್ ಪಕ್ಷವೇ ಭ್ರಷ್ಟಾಚಾರದ ಕೂಪವಾಗಿದೆ. ಅವರ ಕೈ ಭ್ರಷ್ಟಾಚಾರದಲ್ಲಿ ಮುಳುಗಿದೆ. ಹೀಗಾಗಿ ಜನರು ಈ ಬಂದ್ ಕರೆಗೆ ಬೆಂಬಲ ನೀಡುವುದಿಲ್ಲ" ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.

ನಗರದಲ್ಲಿಂದು ತಮ್ಮ‌ ನಿವಾಸದ ಬಳಿ ಮಾತನಾಡಿದ ಅವರು, "ಆಪಾದನೆ ಮಾಡುವವರು ಮೊದಲು ಶುದ್ಧ ಹಸ್ತರಿರಬೇಕು. ಆಗ ಅದಕ್ಕೆ ಬೆಲೆ ಬರುತ್ತದೆ. ಕಾಂಗ್ರೆಸ್‌ನವರು ದಿಂಬು, ಹಾಸಿಗೆಯನ್ನೂ ಬಿಟ್ಟಿಲ್ಲ. ಬಿಸ್ಕೆಟ್, ಕಾಫಿಯಲ್ಲೂ ಭ್ರಷ್ಟಾಚಾರ ಮಾಡಿದ್ದಾರೆ. ಸಿದ್ಧರಾಮಯ್ಯ ಎಷ್ಟೆಲ್ಲ ಟಾರ್ಗೆಟ್ ಕೊಟ್ಟಿದ್ರು ಅಂತ ಎಂ.ಬಿ.ಪಾಟೀಲ್, ಜಾರ್ಜ್, ಮಹದೇವಪ್ಪಗೆ ಕೇಳಬೇಕು. ಭ್ರಷ್ಟಾಚಾರದ ಕೂಪದಲ್ಲಿ ಇರುವವರು ಆಪಾದನೆ ಮಾಡಿದರೆ ನಡೆಯುವುದಿಲ್ಲ" ಎಂದರು.

"ದೇಶದಲ್ಲಿ ಕಾಂಗ್ರೆಸ್ ಸಂಪೂರ್ಣ ಬಂದ್ ಆಗುತ್ತಿದೆ. ಹೀಗಾಗಿ ರಾಜ್ಯ ಬಂದ್ ಮಾಡುವುದರಲ್ಲಿ ಅರ್ಥವಿಲ್ಲ. ಕಾಂಗ್ರೆಸ್ ಮಾಡಿದ ಕರ್ಮಕಾಂಡ ಒಂದಾ, ಎರಡಾ?, ಬಂದ್ ಮೂಲಕ ತಮ್ಮ ರಾಜಕೀಯ ಭವಿಷ್ಯ ಬರೆದುಕೊಳ್ಳಬಹುದು ಅನ್ನೋದು ಮೂರ್ಖತನ. ಚುನಾವಣಾ ಅಖಾಡವಿದೆ, ಜನರೇ ವಿಮರ್ಶೆ ಮಾಡುತ್ತಾರೆ" ಎಂದು ಹೇಳಿದರು.

ಬೆಳಗಾವಿ ರಾಜಹಂಸಗಢದಲ್ಲಿ ಕಾಂಗ್ರೆಸ್‌ನಿಂದ ಶಿವಾಜಿ ಪ್ರತಿಮೆ ಮರುಉದ್ಘಾಟನೆ ಪ್ರಕರಣಕ್ಕೆ ಪ್ರತಿಕ್ರಿಯಿಸಿ, "ಇದೊಂದು ಹಾಸ್ಯಾಸ್ಪದ ಸಂಗತಿ. ಸರ್ಕಾರವೇ ಬಂದು ಮೂರ್ತಿ ಉದ್ಘಾಟನೆ ಮಾಡಿದ ಮೇಲೆ ಈ ರೀತಿ ಮಾಡೋದು ಸರಿಯಲ್ಲ. ಒಣ ಪ್ರತಿಷ್ಠೆಗಾಗಿ ಮಾಡಿದ್ದಾರೆ. ರಾಷ್ಟ್ರನಾಯಕರ ಹೆಸರಲ್ಲಿ ರಾಜಕೀಯ ಮಾಡೋದು ಥರವಲ್ಲ. ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣಕ್ಕೆ ಐಎಸ್​ಕೆಪಿ ಹೊಣೆ ಹೊತ್ತ ವಿಚಾರಕ್ಕೆ ಈಗ ಡಿಕೆಶಿ ಏನು ಹೇಳ್ತಾರೆ, ಕೇಳಬೇಕು. ಬರೀ ಸಾದಾ ಕುಕ್ಕರ್ ಅಂತಾ ಡಿಕೆಶಿ ಹೇಳಿದ್ರು. ಬಿಜೆಪಿಯವರು ಇದರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಅಂತಾ ಹೇಳಿದ್ರು, ಈಗ ಈ ವಿಚಾರಕ್ಕೆ ಡಿಕೆಶಿ ಏನೇಳ್ತಾರೆ ಪ್ರಶ್ನಿಸಿ ಎಂದು ತಿರುಗೇಟು ನೀಡಿದರು.

ಇದನ್ನೂ ಓದಿ: ಭ್ರಷ್ಟಾಚಾರ ವಿರೋಧಿಸಿ ಮಾ. 9 ರಂದು ಕರ್ನಾಟಕ ಬಂದ್: ಡಿಕೆಶಿ

ಕರ್ನಾಟಕ ಬಂದ್​​ಗೆ ಡಿಕೆಶಿ ಕರೆ: ಭ್ರಷ್ಟಾಚಾರ ವಿರೋಧಿಸಿ ಬಿಜೆಪಿ ಸರ್ಕಾರದ ವಿರುದ್ಧ ಮಾರ್ಚ್​ 9ಕ್ಕೆ ರಾಜ್ಯ ಬಂದ್​ಗೆ ಕರೆ ನೀಡಿದ್ದಾಗಿ ಡಿಕೆಶಿ ಹೇಳಿದ್ದರು. ಈ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದ ಅವರು, ಭ್ರಷ್ಟಾಚಾರದ ಕಿಂಗ್ ಬಿಜೆಪಿ ವಿರುದ್ಧ ಕಾಂಗ್ರೆಸ್ ಹೋರಾಟ ಕೈಗೊಂಡಿದೆ. ಕರ್ನಾಟಕದಲ್ಲಿ ಬಿಜೆಪಿಯ ಭ್ರಷ್ಟಾಚಾರದ ದುರ್ವಾಸನೆ ವಾಕರಿಕೆ ತರಿಸಿದೆ. 40 ಪರ್ಸೆಂಟ್​ ಸರ್ಕಾರ ಎಲ್ಲ ವರ್ಗದ ಜನರ ಬದುಕು ನಾಶ ಮಾಡಿದೆ. ಭ್ರಷ್ಟಾಸುರ ಬೊಮ್ಮಾಯಿ ಸರ್ಕಾರವು ಭ್ರಷ್ಟಾಚಾರದಿಂದ, ಭ್ರಷ್ಟಾಚಾರಕ್ಕಾಗಿ, ಭ್ರಷ್ಟಾಚಾರಕ್ಕೋಸ್ಕರ ಸರ್ಕಾರ ಎಂದು ಆರೋಪಿಸಿದ್ದರು.

ಇದನ್ನೂ ಓದಿ: 'ಭ್ರಷ್ಟಾಚಾರದ ಕೂಸು ಹುಟ್ಟಿಸಿದ್ದು ಕಾಂಗ್ರೆಸ್‌, ಅವ್ರಿಗೆ ಬಿಜೆಪಿ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ'

Last Updated :Mar 6, 2023, 12:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.