ETV Bharat / state

ದಾವಣಗೆರೆ ಮೂಲದ ದಂಪತಿ, ಮಗು ಅಮೆರಿಕಾದಲ್ಲಿ ನಿಗೂಢ ಸಾವು: ಸ್ವದೇಶಕ್ಕೆ ಮೃತದೇಹ ತರಲು ಕೇಂದ್ರ ಸರ್ಕಾರಕ್ಕೆ ಕುಟುಂಬಸ್ಥರ ಮನವಿ

author img

By

Published : Aug 19, 2023, 5:43 PM IST

Updated : Aug 19, 2023, 11:11 PM IST

Suspicious death of engineer couple: ಅಮೆರಿಕಾದಲ್ಲಿ ದಾವಣಗೆರೆ ಮೂಲದ ದಂಪತಿ ಹಾಗೂ ಮಗು ಸಾವು. ಪಾರ್ಥಿವ ಶರೀರ ತರಿಸಿಕೊಡುವಂತೆ ಸರ್ಕಾರಕ್ಕೆ ಕುಟುಂಬಸ್ಥರಿಂದ ಮನವಿ.

Davangere based couple and baby boy dies mysteriously in America
ದಾವಣಗೆರೆ ಮೂಲದ ದಂಪತಿ ಗಂಡು ಮಗು ಅಮೇರಿಕಾದಲ್ಲಿ ನಿಗೂಢ ಸಾವು

ದಾವಣಗೆರೆ: ಅಮೆರಿಕಾದಲ್ಲಿ ವಾಸವಾಗಿದ್ದ ದಾವಣಗೆರೆ ಮೂಲದ ದಂಪತಿ ಹಾಗೂ ಮಗು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಅಮೆರಿಕಾದ ಮೇರಿಲ್ಯಾಂಡ್ ರಾಜ್ಯದ ಬಾಲ್ಟಿಮೋರ್​ನಲ್ಲಿ ವಾಸವಾಗಿದ್ದ ಯೋಗೇಶ್ ಹೊನ್ನಾಳ (37), ಅವರ ಪತ್ನಿ ಪ್ರತಿಭಾ ಹೊನ್ನಾಳ್ (35), ಪುತ್ರ ಯಶ್ ಹೊನ್ನಾಳ್ (6) ಮೃತಪಟ್ಟವರು. ಸಾವಿನ ಸುದ್ದಿ ತಿಳಿದು ದಾವಣಗೆರೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಮೃತರು ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹಾಲೆಕಲ್ಲು ಗ್ರಾಮದವರಾಗಿದ್ದು, 9 ವರ್ಷಗಳ ಹಿಂದೆ ಯೋಗೇಶ್ ಹಾಗೂ ಪ್ರತಿಭಾ ಮದುವೆಯಾಗಿದ್ದರು. ಬಳಿಕ ಇವರು ಅಮೆರಿಕಾಗೆ ತೆರಳಿದ್ದರು. ಯೋಗೇಶ್ ಮತ್ತು ಅವರ ಪತ್ನಿ ಪ್ರತಿಭಾ ಇಬ್ಬರೂ ವೃತ್ತಿಯಲ್ಲಿ ಎಂಜಿನಿಯರ್​ ಆಗಿ ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದರು.‌ ಅಮೆರಿಕಾದಲ್ಲೇ ಸ್ವಂತ ಮನೆಯನ್ನೂ ಸಹ ಹೊಂದಿದ್ದರು.

ಆದರೆ ಕಳೆದ ಎರಡು ದಿನಗಳ ಹಿಂದೆ ದಂಪತಿ ಪುಟ್ಟ ಮಗುವಿನ ಸಮೇತ ಶವವಾಗಿ ಪತ್ತೆಯಾಗಿದ್ದು, ಕಾರಣ ಮಾತ್ರ ನಿಗೂಢವಾಗಿದೆ. ಅಮೆರಿಕಾದ ಮೇರಿಲ್ಯಾಂಡ್ ರಾಜ್ಯದ ಬಾಲ್ಟಿಮೋರ್​ನಲ್ಲಿ ಘಟನೆ ಈ ದುರ್ಘಟನೆ ನಡೆದಿದ್ದು, ಬಾಲ್ಟಿಮೋರ್ ನಗರದಲ್ಲಿರುವ ತಮ್ಮ ಸ್ವಂತ ಮನೆಯಲ್ಲೇ ಶವವಾಗಿ ಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಪೊಲೀಸರು ಖಾತ್ರಿ ಪಡಿಸಿದ್ದಾರೆ. ಆದರೆ ಕಳೆದ ಎರಡ್ಮೂರು ದಿನಗಳಿಂದ ದಂಪತಿ ಮನೆಯಿಂದ ಹೊರಗೆ ಬಾರದೇ ಇರುವುದನ್ನು ಗಮನಿಸಿದ ಅಕ್ಕಪಕ್ಕದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಪೊಲೀಸರು ಮನೆ ಬಳಿ ಬಂದು ಗಮನಿಸಿದಾಗ ಮೂವರು ಮೃತಪಟ್ಟಿದ್ದು ಗೊತ್ತಾಗಿದೆ.

ಸದ್ಯ ಪತಿ, ಪತ್ನಿ ಹಾಗೂ ಪುತ್ರ ಸಾವನಪ್ಪಿದ್ದಾರೆ. ಮೂವರ ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ, ಇದರಿಂದ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.‌ ಮೃತಪಟ್ಟ ಯೋಗೇಶ್ ಮೂಲತಃ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹಾಲೆಕಲ್ಲು ಗ್ರಾಮದವರು, ಪತ್ನಿ ಪ್ರತಿಭಾ ಮೂಲತಃ ಬೆಂಗಳೂರಿನವರು. ಯೋಗೇಶ್ ಅವರು ಮೂರು ದಿನಗಳಿಂದ ಕಚೇರಿಗೆ ಕೆಲಸಕ್ಕೆ ಬಾರದ ಹಿನ್ನೆಲೆಯಲ್ಲಿ ಸಹೋದ್ಯೋಗಿಗಳು ಮನೆಗೆ ಹೋಗಿ ವಿಚಾರಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.

ತಕ್ಷಣ ಬೆಂಗಳೂರಿನಲ್ಲಿ ಇದ್ದ ಯೋಗೇಶ್ ಸಹೋದರನಿಗೆ ಫೋನ್ ಮೂಲಕ ವಿಷಯ ಮುಟ್ಟಿಸಿದ್ದಾರೆ. ತಕ್ಷಣ ದಾವಣಗೆರೆಯ ವಿದ್ಯಾನಗರದಲ್ಲಿ ವಾಸವಾಗಿರುವ ಯೋಗೇಶ್ ತಾಯಿ ಶೋಭಾ ಮತ್ತು ಪ್ರತಿಭಾಳ ತಂದೆ ಅಮರ್ ನಾಥ್ ಅವರಿಗೂ ವಿಷಯ ತಿಳಿಸಲಾಗಿದೆ. ಮಕ್ಕಳ ಸಾವಿನ ವಿಷಯ ಕಿವಿಗೆ ಬೀಳುತ್ತಿದ್ದಂತೆ ಮೃತರ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ. ಇನ್ನೂ ಮೃತ ಯೋಗೇಶ್ ತಾಯಿ ಶೋಭಾ ತಮ್ಮ ಮಗ ಸೊಸೆ ಸಾವಿನ ಬಗ್ಗೆ ತನಿಖೆ ಮಾಡಿ ಸತ್ಯಾಸತ್ಯತೆ ತಿಳಿಸುವಂತೆ ಮತ್ತು ಮೃತದೇಹಗಳನ್ನು ಭಾರತಕ್ಕೆ ತರಿಸಿಕೊಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬಳಿ ಮನವಿ ಮಾಡಿಕೊಂಡಿದ್ದಾರೆ.

ಯೋಗೇಶ್ ಅವರ ತಾಯಿ ಶೋಭಾ ಅವರು ಪ್ರತಿಕ್ರಿಯೆ ನೀಡಿ, ಯೋಗೇಶ್​ ನನ್ನ ದೊಡ್ಡ ಮಗ, ಮದುವೆಯಾಗಿ 9 ವರ್ಷ ಆಗಿದೆ. ಇಬ್ಬರೂ ಇಂಜಿನಿಯರ್​ ಆಗಿದ್ದು, ಮದುವೆಯಾದ ಬಳಿಕ ಗಂಡ ಹೆಂಡತಿ ಇಬ್ಬರೂ ಅಮೆರಿಕಾದಲ್ಲೇ ಕೆಲಸ ಮಾಡುತ್ತಿದ್ದರು. ಇಂದು ಬೆಳಗ್ಗೆ ನಿಗೂಢ ಸಾವಿನ ವಿಚಾರ ತಿಳಿದು ಬಂದಿದೆ. ನನ್ನ ಸಣ್ಣ ಮಗ ಬೆಂಗಳೂರಲ್ಲಿ ಕೆಲಸ ಮಾಡ್ತಿದ್ದು, ಯೋಗೇಶ್​ ಜೊತೆ ಕೆಲಸ ಮಾಡುವವರು ಅವನಿಗೆ ಫೋನ್​ ಮಾಡಿ, ಏನೋ ಅನಾಹುತ ಆಗಿದೆ. ಯೋಗೇಶ್ ಅವರು ಮೂರು ದಿನಗಳಿಂದ ಕೆಲಸಕ್ಕೆ ಬಂದಿಲ್ಲ ಎಂದು ಮನೆಗೆ ಹೋಗಿ ನೋಡಿದಾಗ ಬೀಗ ಹಾಕಿತ್ತು. ಬಾಗಿಲು ತೆರೆಯದೇ ಇದ್ದದ್ದನ್ನು ನೋಡಿ, ಪೊಲೀಸ್​ಗೆ ಮಾಹಿತಿ ನೀಡಿದೆವು. ಘಟನಾ ಸ್ಥಳಕ್ಕೆ ಬಂದ ಅವರು ಮನೆಯೊಳಗೆ ಮೂರು ಮೃತದೇಹಗಳಿವೆ ಎಂದಷ್ಟೇ ಹೇಳಿದರು. ನಮಗೆ ನೋಡಲೂ ಸಹ ಬಿಡಲಿಲ್ಲ ಎಂದು ಹೇಳಿದ್ದರು. ನಮ್ಮೆಲ್ಲರಿಗೂ ಇವತ್ತು ಬೆಳಗ್ಗೆಯಷ್ಟೇ ವಿಷಯ ಗೊತ್ತಾಗಿದ್ದು, ಯಾವಾಗ ಸಾವನ್ನಪ್ಪಿದ್ದಾರೆ ಎಂಬುದು ಗೊತ್ತಿಲ್ಲ. ಅಲ್ಲಿ ಮನೆ ತೆಗೆದುಕೊಂಡು ಒಳ್ಳೆ ಸ್ಥಿತಿಯಲ್ಲಿ ಇದ್ರು, ಈ ನಿಗೂಢ ಸಾವು ನಮಗೆ ಅನುಮಾನ ಮೂಡಿಸುತ್ತಿದೆ. ಏನು ಮಾಡ್ಕೊಂಡಿದ್ದಾರೆ, ಅಥವಾ ಯಾರು ಏನು ಮಾಡಿದ್ದಾರೆ ಎನ್ನುವುದು ಗೊತ್ತಾಗ್ತಿಲ್ಲ. ಸಾವಿರಾರು ಮೈಲಿ ದೂರ ಇದ್ದಾರೆ. ನಮಗೆ ಪಾರ್ಥಿವ ಶರೀರಗಳನ್ನು ತರಲು ಸರ್ಕಾರದ ಸಹಕಾರ ಬೇಕು ಎಂದರು.

ಇದನ್ನೂ ಓದಿ : ವಿದೇಶಿ ಮಹಿಳೆಯ ನಿಗೂಢ ಸಾವು ಪ್ರಕರಣ: ಪೊಲೀಸರಿಂದ ತನಿಖೆ ಚುರುಕು

Last Updated :Aug 19, 2023, 11:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.