ETV Bharat / state

ಡೋಲಿಯಲ್ಲಿ ಪ್ರಯಾಣ ಬೆಳೆಸಿ, ದೇವರ ದರ್ಶನ ಮಾಡಿದ್ವಿ; ಎದುರಿಸಿದ ಸಂಕಷ್ಟ ಹಂಚಿಕೊಂಡ ಅಮರನಾಥ ಯಾತ್ರಾರ್ಥಿಗಳು

author img

By

Published : Jul 10, 2023, 8:22 PM IST

ಅಮರನಾಥ ಯಾತ್ರೆಗೆ ತೆರಳಿದ್ದ ದಾವಣಗೆರೆ ಯಾತ್ರಿಗಳು ಸುರಕ್ಷಿತವಾಗಿ ಮರಳಿದ್ದಾರೆ. ಅಲ್ಲಿ ಅವರು ಎದುರಿಸಿದ ಸವಾಲುಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಅಮರನಾಥ ಯಾತ್ರೆಗೆ ತೆರಳಿ ಮರಳಿ ಬಂದವರು
ಅಮರನಾಥ ಯಾತ್ರೆಗೆ ತೆರಳಿ ಮರಳಿ ಬಂದವರು

ಅಮರನಾಥ ಯಾತ್ರೆಯಿಂದ ಮರಳಿದ ಪುಷ್ಪಾ ಅವರು ಮಾಹಿತಿ ಹಂಚಿಕೊಂಡಿದ್ದಾರೆ

ದಾವಣಗೆರೆ : ಅಮರನಾಥ ಯಾತ್ರೆಗೆ ತೆರಳಿದ್ದ ದಾವಣಗೆರೆಯ ಒಟ್ಟು ಒಂಬತ್ತು ಜನರ ಪೈಕಿ ನಾಲ್ಕು ಜನ ಸುರಕ್ಷಿತವಾಗಿ ದಾವಣಗೆರೆಗೆ ಮರಳಿದ್ದಾರೆ. ಕಳೆದ ರಾತ್ರಿ ದಾವಣಗೆರೆಗೆ ಆಗಮಿಸಿದ ನಾಲ್ಕು ಜನ ಅಲ್ಲಿ ನಡೆದಂತಹ ದುರಂತಗಳನ್ನು ಬಿಚ್ಚಿಟ್ಟಿದ್ದಾರೆ. ಅಮರನಾಥ ಕ್ಷೇತ್ರದಲ್ಲಿ ಸಂಭವಿಸಿದ ಭೂ ಕುಸಿತ, ಹವಾಮಾನ ವೈಪರಿತ್ಯ ಹಾಗೂ ಮಳೆಯಿಂದ ಆದ ಅನಾಹುತಗಳನ್ನು ನಾಲ್ಕು ಜನ ಮಹಿಳೆಯರು ಕಣ್ಣಿಗೆ ಕಟ್ಟುವಂತೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಅಮರನಾಥ ಯಾತ್ರೆಗೆ ಹೋಗಿದ್ದ ದಾವಣಗೆರೆಯ ಯಾತ್ರಿಗಳು ಸುರಕ್ಷಿತವಾಗಿ ದಾವಣಗೆರೆಗೆ ಮರಳಿದ್ದಾರೆ. ಈಟಿವಿ ಭಾರತದೊಂದಿಗೆ ಅಲ್ಲಿ ಜರುಗಿದ ಘಟನಾವಳಿಗಳನ್ನು ಹಂಚಿಕೊಂಡಿದ್ದಾರೆ. ದಾವಣಗೆರೆಯ ವಿವಿಧ ಬಡಾವಣೆಯಲ್ಲಿರುವ ಗೀತಾ, ಚಂದ್ರಿಕಾ, ಪುಷ್ಪ, ಉಷಾ ಈ ನಾಲ್ಕು ಜನ ಸೇರಿ ಅಮರನಾಥ ಯಾತ್ರೆಗೆ ತೆರಳಿದ್ದರು. ಈ ನಾಲ್ಕು ಜನರು ಸ್ನೇಹಿತರಾಗಿದ್ದು, ನಾಲ್ಕು ಜನ ಮಹಿಳೆಯರು ದಾವಣಗೆರೆಯಿಂದ ಜೂನ್ 30 ರಂದು ಅಮರನಾಥ ಯಾತ್ರೆಗೆ ತೆರಳಿದ್ದರು. ಜುಲೈ 6 ರಂದೇ ಅಮರನಾಥ ದರ್ಶನ ಮುಗಿಸಿ ಬೇಸ್ ಕ್ಯಾಂಪ್​ಗೆ ತೆರಳಿದ್ದರು. ಅವರು ಅಮರನಾಥನ ದರ್ಶನ ಪಡೆದು ವಾಪಸ್​​ ಬಂದ ಎರಡು ಗಂಟೆಯಲ್ಲಿ ‌ಹವಾಮಾನ ವೈಪರೀತ್ಯ ಸ್ಥಿತಿ ಉಂಟಾಗಿದೆ. ಈ ವೇಳೆ, ಸಾಕಷ್ಟು ಜನರು ಸಂಕಷ್ಟಕ್ಕೆ ಸಿಲುಕಿದ್ದರಂತೆ. ಆ ಭೋಲೆನಾಥ್ ದೇವರ ದಯೆಯಿಂದ ನಾಲ್ಕು ಜನ ಸುರಕ್ಷಿತವಾಗಿ ವಾಪಸ್​ ಬಂದಿದ್ದೇವೆ ಎಂದು ಕಣ್ಣೀರಿಟ್ಟರು.

ಇನ್ನು ವಿಪರೀತ ಮಳೆಯಿಂದ ಭೂ ಕುಸಿತ ಉಂಟಾಗಿದ್ದರಿಂದ ಬಿಎಸ್ಎಫ್ ಆರ್ಮಿಯವರು ಹಾಗೂ ಅಲ್ಲಿನ ದೇವಸ್ಥಾನದ ಆಡಳಿತ ಮಂಡಳಿಯವರು ಸಾಕಷ್ಟು ಸಹಾಯ ಮಾಡಿದ್ದಾರೆ ಎಂದು ಅವರಿಗೆ ಕೃತಜ್ಞತೆ ಸಲ್ಲಿಸಿದರು. ಅದರಲ್ಲೂ ದಾವಣಗೆರೆಗೆ ವಾಪಸ್ ಆದ ನಾಲ್ಕು ಜನ ಮಹಿಳೆಯರು ಈಶ್ವರ‌ನ ದರ್ಶನ ಮುಗಿಸಿ ಬೇಗಾ ವಾಪಸ್​ ಆಗಿದ್ದಕ್ಕಾಗಿ ಬಚಾವ್ ಆಗಿದ್ದಾರೆ.

ಅಮರನಾಥ ಯಾತ್ರಾರ್ಥಿಗಳು ಹೇಳೋದೇನು ?: ದಾವಣಗೆರೆಯಿಂದ ಕಾಶ್ಮೀರದ ಅಮರನಾಥ ಯಾತ್ರೆಗೆ ತೆರಳಿದ್ದ ನಾಲ್ವರ ಪೈಕಿ ಪುಷ್ಪ ಅವರು ಮಾತನಾಡಿ, ಬೆಂಗಳೂರಿನಿಂದ ಜೂನ್ 30 ಕ್ಕೆ ತೆರಳಿದ್ದೆವು. ಮೊದಲು ವೈಷ್ಣವಿ ದೇವಿಯ ದೇವಾಲಯಕ್ಕೆ ತೆರಳಿ, ರಾಮ್ ಬನ್ ಎಂಬ ಪ್ರದೇಶದಲ್ಲಿ ಉಳಿದುಕೊಂಡೆವು. ನಾವು ಮೊದಲೇ ನಾಲ್ಕು ಜನ ಮಹಿಳೆಯರು ಶ್ರೀ ನಗರಕ್ಕೆ ತೆರಳಿದ ಬಳಿಕ ಕೆವೈಸಿ ಕೂಡ ಸಿಗಲಿಲ್ಲ. ಆದ್ದರಿಂದ ಮೂರು ದಿನಗಳ ಕಾಲ ಬೇಸ್ ಕ್ಯಾಂಪ್​ನಲ್ಲಿ ಉಳಿದುಕೊಂಡೆವು. ಬೆಳಗಿನ ಜಾವ 04 ಡೋಲಿ ಮೂಲಕ ಅಮರನಾಥ ಯಾತ್ರೆ ಆರಂಭಿಸಿದೆವು. ಅಲ್ಲಿಗೆ 11 ಗಂಟೆಗೆ ತೆರಳಿ ದರ್ಶನ ಪಡೆದೆವು.

ಆದ್ರೆ ಅಷ್ಟೊತ್ತಿಗೆ ಮಳೆ ಆರಂಭವಾಗುವ ಮುನ್ಸೂಚನೆ ನೀಡಿತ್ತು. ಅಲ್ಲಿಂದ ತಕ್ಷಣ ಅದೇ ಡೋಲಿಯಲ್ಲಿ 12 ಗಂಟೆಗೆ ಅಲ್ಲಿಂದ ಬಿಟ್ಟು ಸಂಜೆ 06 ಕ್ಕೆ ಬೇಸ್ ಕ್ಯಾಂಪ್​ಗೆ ಬಂದು ಸೇರಿದೆವು. ಆದರೆ, ಅಮರನಾಥದಲ್ಲಿ ಉಳಿದುಕೊಂಡಿದ್ದರೆ ನಾವು ಸುರಕ್ಷಿತವಾಗಿ ಬರುತ್ತಿರಲಿಲ್ಲ. ಅವಾಗಲೇ ಭೂಕುಸಿತ ಆರಂಭವಾಗಿ ಮಳೆ ನೀರು ಕೆಸರುಮಯವಾಗಿ ಹರಿಯುತ್ತಿದ್ದನ್ನು ಗಮನಿಸಿ ಒಂದು ಕ್ಷಣ ಭಯವಾಯಿತು ಎಂದರು. ನಾವು ಅಮರನಾಥ ಯಾತ್ರೆಯಲ್ಲಿ ಫೋಟೋ ತೆಗೆಸಿಕೊಳ್ಳುವಲ್ಲಿ ಕಾಲ ಕಳೆದಿದ್ದರೆ, ಜೀವಂತವಾಗಿ ಮರಳಿ ಬರುತ್ತಿರಲಿಲ್ಲ ಎಂದರು.

ಶ್ರೀನಗರಕ್ಕೆ ಆಗಮಿಸಿದಾಗ ಜೀವ ಉಳಿಯಿತು: ಈ ವೇಳೆ ಮತ್ತೋರ್ವ ಯಾತ್ರಾರ್ಥಿ ಚಂದ್ರಿಕ ಮಾತನಾಡಿ, ಕೆವೈಸಿಗೋಸ್ಕರ ಮೂರು ದಿನಗಳ ಕಾಲ ಕಾದಿದ್ದೆವು. ಇನ್ನು ಬಲ್ ಟಾಲ್ ಕ್ಯಾಂಪ್​ಗೆ ತೆರಳಿ ಟೆಂಟ್​ನಲ್ಲಿ ಕಾಲ ಕಳೆದೆವು. ಎರಡು ಅಡಿಯಷ್ಟು ರಸ್ತೆಯಲ್ಲಿ ಒಂದು ಕಡೆ ಡೋಲಿಯವರು, ಮಧ್ಯೆ ನಡೆದುಕೊಂಡು ಹೋಗುವವರು, ಅವರ ಪಕ್ಕ ಕುದುರೆ ಮೂಲಕ ಅಮರನಾಥಕ್ಕೆ ತೆರಳಬಹುದು. ಇದೊಂದು ಕಠಿಣವಾದ ಯಾತ್ರೆಯಾಗಿದೆ.

ಶಿವನ ಬಳಿ ತೆರಳಿ 16 ಕಿ ಮೀ ಕ್ರಮಿಸಿ 120 ಮೆಟ್ಟಿಲು ಹತ್ತಿದ ಬಳಿಕ ಶಿವ ಗೋಚರವಾಗುತ್ತಾನೆ. ದರ್ಶನಕ್ಕೆ ಕೇವಲ 10 ನಿಮಿಷ ಮಾತ್ರ ಅವಕಾಶ ನೀಡಿದ್ರು. ಡೋಲಿಯವರು ತಡ ಮಾಡದೇ ಹಿಂದಿರುಗಿ ಕರೆದುಕೊಂಡು ಬಂದಿದ್ದಕ್ಕೆ ನಾವು ಸಂಕಷ್ಟಕ್ಕೆ ಸಿಲುಕದೇ ಇರಲು ಪ್ರಮುಖ ಕಾರಣ ಎಂದು ಅವರಿಗೆ ಕೃತಜ್ಞತೆ ಸಲ್ಲಿಸಿದರು. ನಾವು ಮರಳಿ ಬಂದ ಬಳಿಕ ಭಾರೀ ಮಳೆಯಾಗಿದ್ದರಿಂದ ಸಾಕಷ್ಟು ಯಾತ್ರಾರ್ಥಿಗಳು ಸಿಲುಕಿಕೊಂಡಿದ್ದರು. ಬಿಎಸ್ಎಫ್ ಯೋಧರು ಒಳ್ಳೆಯ ಭದ್ರತೆ ಒದಗಿಸುವ ಮೂಲಕ ಸಹಕರಿಸಿದ್ರು. ಮಳೆ ಆರಂಭ ಆಗುತ್ತಿದ್ದಂತೆ ನಾವು ಅಮರನಾಥ ಬಿಟ್ಟು ಶ್ರೀ ನಗರಕ್ಕೆ ಆಗಮಿಸಿದ್ದರಿಂದ ಕಷ್ಟದಿಂದ ಪಾರಾದೆವು ಎಂದರು.

ಇದನ್ನೂ ಓದಿ: ಹವಾಮಾನ ವೈಪರೀತ್ಯದಿಂದಾಗಿ ಸ್ಥಗಿತಗೊಂಡಿದ್ದಅಮರನಾಥ ಯಾತ್ರೆ ಪುನಾರಂಭ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.