ದಾವಣಗೆರೆ: ಬೆಣ್ಣೆನಗರಿಯಲ್ಲಿ ಸತತ ಮೂರ್ನಾಲ್ಕು ಗಂಟೆಗಳ ಕಾಲ ಸುರಿದ ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದೆ.
ನಿನ್ನೆ ಸಂಜೆ ಐದು ಗಂಟೆಗೆ ಶುರುವಾದ ಮಳೆ ಮೂರ್ನಾಲ್ಕು ಗಂಟೆಗಳ ಕಾಲ ಸುರಿದಿದ್ದು, ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿದೆ. ಇನ್ನು ಕೆಲ ಕಡೆ ವಿದ್ಯುತ್ ಕಂಬಗಳು ಧರೆಗುರುಳಿವೆ.
![Friday night heavy rain, Friday night heavy rain in Davanagere, heavy rain in Davanagere, Davanagere rain, Davanagere rain 2021, Davanagere rain 2021 news, ಶುಕ್ರವಾರ ರಾತ್ರಿ ಭಾರೀ ಮಳೆ, ದಾವಣಗೆರೆಯಲ್ಲಿ ಶುಕ್ರವಾರ ರಾತ್ರಿ ಭಾರೀ ಮಳೆ, ದಾವಣಗೆರೆ ಮಳೆ, ದಾವಣಗೆರೆ ಮಳೆ 2021, ದಾವಣಗೆರೆ ಮಳೆ 2021 ಸುದ್ದಿ,](https://etvbharatimages.akamaized.net/etvbharat/prod-images/kn-dvg-06-08-rain-effect-av-7204336_08012021214332_0801f_1610122412_511.jpg)
ಇನ್ನು ಸಿಡಿಲಿನ ಹೊಡೆತಕ್ಕೆ ಶಾಮನೂರಿನಲ್ಲಿ ಮನೆಯ ಮೇಲ್ಛಾವಣಿ ಹಾರಿ ಹೋಗಿದ್ದು, ಪ್ರಾಣಹಾನಿ ಸಂಭವಿಸಿಲ್ಲ. ದಾವಣಗೆರೆ ನಗರದ ಸಂಗೊಳ್ಳಿ ರಾಯಣ್ಣ ರಸ್ತೆಯಲ್ಲಿ ಸ್ಮಾರ್ಟ ಸಿಟಿ ಕಾಮಗಾರಿ ನಡೆಯುತ್ತಿದ್ದು, ತೆಗ್ಗಿಗೆ ಕಾರೊಂದು ಸಿಲುಕಿರುವ ದೃಶ್ಯ ಕಂಡುಬಂತು.
ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಬಳಿಯಿದ್ದ ದ್ವಿಚಕ್ರ ವಾಹನಗಳು ಮಳೆಯ ನೀರಿನಿಂದ ಸಂಪೂರ್ಣ ಮುಳುಗಡೆಯಾಗಿದ್ದವು. ಇಡೀ ಬಸ್ ನಿಲ್ದಾಣದಲ್ಲಿ ನೀರು ತುಂಬಿಕೊಂಡ ಪರಿಣಾಮ ಪ್ರಯಾಣಿಕರು ಹೊರ ಬಾರದೆ ಪರದಾಡುವಂತಾಯಿತು.
ಮಸಾಲೆ ಪದಾರ್ಥಗಳು ನೀರು ಪಾಲು...!
ದಾವಣಗೆರೆ ನಗರದ ಚಾಮರಾಜಪೇಟೆಯಲ್ಲಿ ಮಳೆಯಿಂದಾಗಿ 30 ಕ್ಕೂ ಹೆಚ್ಚು ಮಳಿಗೆಗಳಿಗೆ ನೀರು ನುಗ್ಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ರೇಷನ್ ಅಂಗಡಿ, ಮಸಾಲೆ ಪದಾರ್ಥಗಳ ಅಂಗಡಿ, ಹೋಟೆಲ್, ಅಕ್ಕಿ ಅಂಗಡಿಗಳು ಜಲಾವೃತವಾಗಿವೆ.
ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿರುವುದರಿಂದ ಮಳೆ ನೀರು ಸರಾಗವಾಗಿ ಹೋಗದೆ ತಗ್ಗು ಪ್ರದೇಶಗಳಿಗೆ ನುಗ್ಗಿದೆ. ಸ್ಮಾರ್ಟ ಸಿಟಿ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಪ್ರಯೋಜನವಾಗಲಿಲ್ಲ.
ಸ್ಥಳಕ್ಕೆ ಅಧಿಕಾರಿಗಳು ಬಾರದ ಹಿನ್ನೆಲೆ ಆಕ್ರೋಶಗೊಂಡ ವ್ಯಾಪಾರಸ್ಥರು ಸ್ಮಾರ್ಟ್ ಸಿಟಿ ಕಾಮಗಾರಿ ಮಾಡಲು ನಿಂತಿದ್ದ ಜೆಸಿಬಿಗೆ ಕಲ್ಲು ಹೊಡೆದಿದ್ದು, ಜೆಸಿಬಿ ಗಾಜು ಜಖಂಗೊಂಡಿವೆ.