ETV Bharat / state

ದಾವಣಗೆರೆಯಲ್ಲಿ ಮನೆ ಬಾಗಿಲು ಒಡೆದು ಕಳ್ಳತನ.. 6 ಜನ ಆರೋಪಿಗಳ ಬಂಧನ, 25 ಲಕ್ಷ ಮೌಲ್ಯದ ಚಿನ್ನಾಭರಣ ವಶ

author img

By

Published : Jul 8, 2023, 9:06 AM IST

ಮನೆ ಬಾಗಿಲು ಒಡೆದು ಕಳ್ಳತನ ಮಾಡಿದ್ದ 6 ಜನ ಆರೋಪಿಗಳನ್ನು ದಾವಣಗೆರೆ ಪೊಲೀಸರು ಕಳು ವಸ್ತುಗಳ ಸಮೇತ ಸೆರೆ ಹಿಡಿದಿದ್ದಾರೆ.

ವಶಪಡಿಸಿಕೊಂಡಿರುವ ಚಿನ್ನಾಭರಣ
ವಶಪಡಿಸಿಕೊಂಡಿರುವ ಚಿನ್ನಾಭರಣ

ದಾವಣಗೆರೆ: ಮನೆ ಕಳ್ಳತನ ಮಾಡಿದ 06 ಜನ ಆರೋಪಿಗಳನ್ನು ದಾವಣಗೆರೆ ಪೊಲೀಸರು ಬಂಧಿಸಿ‌ ಒಟ್ಟು 25,75,200 ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಜೂನ್​ 05 ರಂದು ನಗರದ ಡಾಲರ್ಸ್ ಕಾಲೋನಿ ಶಾಮನೂರು ನಿವಾಸಿ ತಿಪ್ಪೇಸ್ವಾಮಿ ಎಂಬವರ ಮನೆಯಲ್ಲಿ ಕಳ್ಳತನವಾಗಿತ್ತು. ಮನೆಗೆ ಬೀಗ ಹಾಕಿ ಬೆಂಗಳೂರಿಗೆ ಹೋಗಿದ್ದ ತಿಪ್ಪೇಸ್ವಾಮಿ ಕುಟುಂಬ ಜೂನ್‌ 08ಕ್ಕೆ ಹಿಂದಿರುಗಿದಾಗ ಈ ಘಟನೆ ಬೆಳಕಿಗೆ ಬಂದಿತ್ತು.‌

ಕಳ್ಳರು ಮನೆಯ ಬಾಗಿಲನ್ನು ಒಡೆದು ಮನೆಯಲ್ಲಿದ್ದ ಒಟ್ಟು 31,34,582 ರೂಪಾಯಿ ಬೆಲೆ ಬಾಳುವ ಬೆಳ್ಳಿ ಬಂಗಾರ ಮತ್ತು ಇತರೆ ವಸ್ತುಗಳನ್ನು ದೋಚಿದ್ದರು. ಈ ಪ್ರಕರಣಕ್ಕೆ‌ ಸಂಬಂಧಿಸಿದಂತೆ ವಿದ್ಯಾನಗರ ಪೊಲೀಸ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದರು. ಪ್ರಕರಣದಲ್ಲಿ ಕಳ್ಳತನವಾದ ವಸ್ತುಗಳ ಸಮೇತ ಆರೋಪಿಗಳನ್ನು ಪತ್ತೆ ಮಾಡಲು ಹೆಚ್ಚುವರಿ ಪೊಲೀಸ್ ಅಧೀಕ್ಷಕರವರಾದ ಶ್ರೀ ಆರ್.ಬಿ ಬಸರಗಿರವರು ತಂಡವನ್ನು ರಚಿಸಿ 06 ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ‌.

ಬಂಧಿತರನ್ನು ಹಾವೇರಿ ಜಿಲ್ಲೆ ರಾಣೇಬೆನ್ನೂರು ಗೋವಿಂದ ಬಡಾವಣೆಯ ಶಿವರಾಜ ಲಮಾಣಿ ಅಲಿಯಾಸ್​ ರಾಜಿ‌ (26) ಮಾರುತಿ (25), ಸುನೀಲ್ ಬಿ ಲಮಾಣಿ(22), ಮನೋಜ್ ಡಿ ಲಮಾಣಿ (25), ಅಭಿಷೇಕ್ ಅಲಿಯಾಸ್ ಅಭಿ (22), ಮಾಲತೇಶ್‌(25) ಎಂಬುವರನ್ನು ಬಂಧಿಸುವಲ್ಲಿ ವಿದ್ಯಾನಗರ ಠಾಣೆಯ ಪೋಲಿಸರು ಯಶಸ್ವಿಯಾಗಿದ್ದಾರೆ.

ಇನ್ನು ಬಂಧಿತ ಆರೋಪಿಗಳಿಂದ ಕಳ್ಳತನವಾಗಿದ್ದ 23,35,200/-ರೂ ಬೆಲೆ ಬಾಳುವ 417 ಗ್ರಾಂ ಬಂಗಾರದ ಆಭರಣ, 60,000/-ರೂ ಬೆಲೆ ಬಾಳುವ 328 ಗ್ರಾಂ ಬೆಳ್ಳಿಯ ಆಭರಣ ಮತ್ತು ಕೃತ್ಯಕ್ಕೆ ಬಳಸಿದ್ದ 1,80,000/-ರೂ ಬೆಲೆ ಬಾಳುವ 02 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ದಾವಣಗೆರೆ ಜಿಲ್ಲಾ ಪೋಲಿಸ್ ಇಲಾಖೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದೆ. ಈ ಪ್ರಕರಣ ಭೇದಿಸಿದ್ದರಿಂದ ಎಲ್ಲಾ ಸಿಬ್ಬಂದಿಗೆ ಪೊಲೀಸ್ ಅಧೀಕ್ಷಕರವರಾದ ಶ್ರೀ ಡಾ. ಅರುಣ್ ಕೆ ಅವರು ಶ್ಲಾಘಿಸಿದರು.

ಹಳೇ ಪಾಲಿಸಿ ನೀಡಿ 5.50 ಲಕ್ಷ ರೂಪಾಯಿ ವಂಚನೆ: ಮತ್ತೊಂದೆಡೆ ಲೈಫ್ ಇನ್ಶ್ಯೂರೆನ್ಸ್ ಹೆಸರಲ್ಲಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಇನ್ಶ್ಯೂರೆನ್ಸ್ ಮಾಡಿಸುವಾಗ ಮೋಸ ಹೋಗದಿರಿ. ನೀವು ವಿಮೆ ಮಾಡಿಸಬೇಕಾದರೆ ಆಯಾ ವಿಮಾ ಕಂಪನಿಗಳ ಕಚೇರಿಗೆ ತೆರಳಿ ವಿಮಾ ಮಾಡಿಸುವುದು ಉತ್ತಮ. ವಿಮೆ ಮಾಡಿಸುವುದಾಗಿ ಏಜೆಂಟ್​ಗಳನ್ನು ಸಂಪರ್ಕಿಸಿದರೆ ಎಚ್ಚರವಾಗಿರಬೇಕು. ಯಾಕೆಂದರೆ ಇಲ್ಲೋರ್ವ ವಿಮೆ ಮಾಡಿಸುವುದಾಗಿ ವ್ಯಕ್ತಿಯನ್ನು ನಂಬಿಸಿ ಹಳೇ ಪಾಲಿಸಿ ನೀಡಿ ವ್ಯಕ್ತಿಯೋರ್ವನಿಗೆ 5.50 ಲಕ್ಷ ರೂಪಾಯಿ ವಂಚನೆ ಮಾಡಿರುವ ಘಟನೆ ಜಿಲ್ಲೆಯ ಹರಿಹರ ನಗರದ ರಾಜಾರಾಂ ಕಾಲೋನಿಯಲ್ಲಿ ನಡೆದಿದೆ.

ರಾಜಾರಾಂ ಕಾಲೋನಿಯ ನಿವಾಸಿ ಕಿರ್ಲೋಸ್ಕರ್ ನೌಕರ ಈರಪ್ಪ ಹಾದಿಮನೆ ಮೊಸಕ್ಕೊಳಗಾದವರು. ಕಿರ್ಲೋಸ್ಕರ್ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸಿ ಕೂಡಿಟ್ಟಿದ್ದ ಹಣ ವಂಚಕನ ಪಾಲಾಗಿದೆ. ಇನ್ನು ದಾವಣಗೆರೆಯ ಇಂಡಸ್ಟ್ರಿಯಲ್ ಏರಿಯಾದ ನಿವಾಸಿಯಾದಂತ ಸಜೀತ್ ಕುಮಾರ್ ಎಂಬವರು ಈ ಕೃತ್ಯ ಎಸಗಿದ್ದಾರೆಂದು ಹರಿಹರ ನಗರ ಪೊಲೀಸ್ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿ ಸುಜೀತ್ ಕುಮಾರ್ ರಿಲಯನ್ಸ್​ನಲ್ಲಿ ರಿಲೇಷನ್ಶಿಪ್ ಮ್ಯಾನೇಜರ್ ಎಂದು ಈರಪ್ಪನವರಿಗೆ ಪರಿಚಯವಾಗಿದೆ. ಪುಸಲಾಯಿಸಿ ವಿಮೆ ಪಾಲಿಸಿ ಮಾಡಿಸಿಕೊಡುವುದಾಗಿ ಹೇಳಿ, ಹಳೆಯ ನಕಲು ವಿಮೆ ಪಾಲಿಸಿ ನೀಡಿ 5.50 ಲಕ್ಷ ಪಡೆದು ವಂಚನೆ ಮಾಡಿದ್ದಾನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ. 5.50 ಲಕ್ಷ ರೂ. ಕಳೆದುಕೊಂಡ ಈರಪ್ಪ ಅವರು ಹರಿಹರ ನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ನೀಡಿದ್ದಾರೆ. ಇನ್ನು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಂಚಕನ ಬಂಧನಕ್ಕೆ ಬಲೆ ಬೀಸಿದ್ದಾರೆ.

ಹೆಚ್ಚಾಗ್ತಿವೆ ವಂಚನೆ ಪ್ರಕರಣಗಳು: ದಾವಣಗೆರೆ ಜಿಲ್ಲೆಯಲ್ಲಿ ಈ ರೀತಿಯ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪೊಲೀಸ್ ಇಲಾಖೆ ಸಾಕಷ್ಟು ಬಾರಿ ಜನರಲ್ಲಿ ಜಾಗೃತಿ ಮೂಡಿಸಿದರೂ ಯಾವುದೇ ಪ್ರಯೋಜನ ಆಗುತ್ತಿಲ್ಲವಂತೆ. ಜನ ಮತ್ತೆ ಮತ್ತೆ ಮೋಸ ಹೋಗುತ್ತಲೇ ಇರುವುದರಿಂದ ಈ ರೀತಿಯ ಪ್ರಕರಣಗಳಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಹೊಸ ಸಿದ್ದತೆ ಮಾಡಿಕೊಂಡಿದೆ. ಈ ರೀತಿಯ ಮೋಸಗಳಿಗೆ ಬಲಿಯಾಗದಿರಲು ಪೊಲೀಸ್ ಇಲಾಖೆ ಹೆಚ್ಚು ಜಾಗೃತಿ ಮೂಡಿಸುವ ಅವಶ್ಯಕತೆ ಇದೆ.

ಇದನ್ನೂ ಓದಿ: ಏಡ್ಸ್ ಬಗ್ಗೆ ಸೈಕಲ್ ಏರಿ ಜಾಗೃತಿ ಮೂಡಿಸಿದ ವ್ಯಕ್ತಿ.. ಇಂದು ಕಳ್ಳನಾಗಿ ಜೈಲು ಸೇರಿದ..!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.