ETV Bharat / state

ರಾಜ್ಯ ಸರ್ಕಾರವನ್ನು ಗವರ್ನರ್​ ಪದಚ್ಯುತಿಗೊಳಿಸಿ ರಾಷ್ಟ್ರಪತಿ ಆಡಳಿತ ಹೇರಲಿ: ಬಿ ಕೆ ಹರಿಪ್ರಸಾದ್

author img

By

Published : Jul 31, 2022, 6:44 PM IST

ಸರಣಿ ಹತ್ಯೆಗಳಿಂದ ದ. ಕ ಜಿಲ್ಲೆಗೆ ಮಸಿ ಬಳಿಯುವ ಕೆಲಸವಾಗುತ್ತಿದೆ- ಬಿಜೆಪಿ ಇತ್ತೀಚೆಗೆ ಕೇವಲ ಹೆಣಗಳ ಮೇಲಿನ ರಾಜಕೀಯದಲ್ಲಿ ಸಕ್ರಿಯವಾಗಿದೆ- ವಿಧಾನಪರಿಷತ್ ವಿಪಕ್ಷ ನಾಯಕ ಬಿ. ಕೆ ಹರಿಪ್ರಸಾದ್ ಆರೋಪ

ಬಿ ಕೆ ಹರಿಪ್ರಸಾದ್
ಬಿ ಕೆ ಹರಿಪ್ರಸಾದ್

ಮಂಗಳೂರು: ರಾಜ್ಯದಲ್ಲಿ ಆಡಳಿತ ನಡೆಸಲು ಬಿಜೆಪಿಗೆ ನೈತಿಕ ಹಕ್ಕಿಲ್ಲ. ಮುಖ್ಯಮಂತ್ರಿಗಳು ರಾಜ್ಯಕ್ಕೆ ಮುಖ್ಯಮಂತ್ರಿಯಾಗದೆ ಬಿಜೆಪಿಗೆ ಮಾತ್ರ ಮುಖ್ಯಮಂತ್ರಿಯಾಗಿದ್ದಾರೆ. ಈ ಸರ್ಕಾರವನ್ನು ರಾಜ್ಯಪಾಲರು ಪದಚ್ಯುತಗೊಳಿಸಿ ರಾಷ್ಟ್ರಪತಿ ಆಡಳಿತ ಹೇರಲಿ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಬಿ. ಕೆ ಹರಿಪ್ರಸಾದ್ ಆಗ್ರಹಿಸಿದರು.

ವಿಧಾನಪರಿಷತ್ ವಿಪಕ್ಷ ನಾಯಕ ಬಿ. ಕೆ ಹರಿಪ್ರಸಾದ್ ಅವರು ಮಾತನಾಡಿದರು

ನಗರದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಸರಣಿ ಹತ್ಯೆಗಳಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಮಸಿ ಬಳಿಯುವ ಕೆಲಸವಾಗುತ್ತಿದೆ. ಬಿಜೆಪಿ ಇತ್ತೀಚೆಗೆ ಕೇವಲ ಹೆಣಗಳ ಮೇಲಿನ ರಾಜಕೀಯದಲ್ಲಿ ಸಕ್ರಿಯವಾಗಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 24 ಕೊಲೆ ನಡೆದಾಗ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ನಿರಂತರ ಪ್ರಯತ್ನ ಮಾಡಲಾಯಿತು. ಇದೀಗ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆಯನ್ನು ಗೃಹಮಂತ್ರಿ, ಸಂಸದ, ಸಚಿವರು ಎದುರಿಸಬೇಕಾಯಿತು.

ಪ್ರವೀಣ್ ನೆಟ್ಟಾರು ಪ್ರಕರಣದಲ್ಲಿ ತಮ್ಮ ವೈಫಲ್ಯ ಒಪ್ಪಿಕೊಂಡು ತನಿಖೆಯನ್ನು ಎನ್ಐಎಗೆ ಕೊಟ್ಟಿದ್ದಾರೆ. ಪರೇಶ್ ಮೇಸ್ತ ಕೊಲೆ ಪ್ರಕರಣ ಸಿಬಿಐಗೆ ಕೊಟ್ಟು 5 ವರ್ಷವಾದರೂ ಇನ್ನೂ ಶಿಕ್ಷೆಯಾಗಿಲ್ಲ. ಇದೀಗ ಪ್ರವೀಣ್ ನೆಟ್ಟಾರು ಪ್ರಕರಣ ಎನ್​ಎಐಗೆ ಕೊಟ್ಟರೂ ಪ್ರಯೋಜನ ಇಲ್ಲ. ಈ ಪ್ರಕರಣದಲ್ಲಿ 15 ದಿನದೊಳಗೆ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಗುಪ್ತಚರ ಇಲಾಖೆ ಸಂಪೂರ್ಣ ವಿಫಲ: ಸಿಎಂ ಸಂವಿಧಾನವನ್ನು ಬುಡಮೇಲು ಮಾಡಿದ್ದಾರೆ. ಅವರು ಬಿಜೆಪಿಗೆ ಮಾತ್ರ ಸಿಎಂ ಆಗಿದ್ದಾರೆ. ಗುಪ್ತಚರ ಇಲಾಖೆ ಸಂಪೂರ್ಣ ವಿಫಲವಾಗಿದೆ. ದ.ಕ ಕೋಮುಸೂಕ್ಷ್ಮ ಜಿಲ್ಲೆಯಾಗಿದ್ದರೂ ಮಸೂದ್ ಘಟನೆ ನಡೆದಾಗ ಎಚ್ಚೆತ್ತುಕೊಳ್ಳಬೇಕಿತ್ತು. ಕಾಳಿ ಸ್ವಾಮಿ ಸೇರಿದಂತೆ ಪ್ರಚೋದನಕಾರಿ ಹೇಳಿಕೆ ನೀಡುವವರ ವಿರುದ್ಧ ಯುಎಪಿಎ ಪ್ರಕರಣ ದಾಖಲಿಸಬೇಕು ಎಂದು ಹರಿಪ್ರಸಾದ್​ ಆಗ್ರಹಿಸಿದರು.

ಯುಪಿ ಮಾಡೆಲ್ ತರುತ್ತೇನೆ ಎಂದು ಹೇಳುತ್ತಿದ್ದಾರೆ. ಆಡಳಿತವನ್ನು ನೆಲದ ಕಾನೂನಿನ ನೆಲೆಯಲ್ಲಿ ಮಾಡಿದರೆ ಸ್ವಾಗತ. ಅತೀ ಹೆಚ್ಚು ಕೊಲೆ, ದರೋಡೆ , ಅಭಿವೃದ್ಧಿಯಲ್ಲಿ ಕೆಳಗಿನಿಂದ ಒಂದನೇ ಸ್ಥಾನದಲ್ಲಿರುವ ಉತ್ತರಪ್ರದೇಶಕ್ಕೆ ಕರ್ನಾಟಕ ಮಾಡೆಲ್ ಆಗಬೇಕು. ಕರ್ನಾಟಕ ಮಾದರಿ ಯುಪಿ, ಗುಜರಾತ್​ಗೆ ಇಷ್ಟವಿಲ್ಲ ಎಂದರು. ಯುಪಿಯಿಂದ ಬೇಲ್ ಪುರಿ, ಪಾನಿಪುರಿ ಮಾರಲು ಬರುತ್ತಾರೆ. ಇಲ್ಲಿನವರು ಅಲ್ಲಿ ಹೋಗಿ ಬೇಲ್​ಪುರಿ, ಪಾನಿಪುರಿ ಮಾರಬೇಕೇ ಎಂದು ಹರಿಪ್ರಸಾದ್​​ ಪ್ರಶ್ನಿಸಿದರು.

ಧಿಕ್ಕಾರ ಕೂಗಿದವರು ಬಾಡಿಗೆ ಪ್ರತಿಭಟನಾಕಾರರು: ಹತ್ಯೆಯಾದ ಬೆಳ್ಳಾರೆಯ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಮನೆಗೆ ಭೇಟಿ ನೀಡಿದಾಗ ಬಿಜೆಪಿಯ ಬಾಡಿಗೆ ಪ್ರತಿಭಟನಕಾರರು ಧಿಕ್ಕಾರ ಕೂಗಿದರು. ಪ್ರವೀಣ್ ನೆಟ್ಟಾರು ಮನೆಯವರು ದು:ಖದಲ್ಲಿದ್ದಾರೆ. ಮನೆಯವರು ಧಿಕ್ಕಾರ ಹಾಕಿಲ್ಲ. ಸಂಬಂಧಿಕರು ಯಾರೂ ಇರಲಿಲ್ಲ. ಬಿಜೆಪಿ ಬಾಡಿಗೆ ಪ್ರತಿಭಟನಕಾರರು ಮಾತ್ರ ಧಿಕ್ಕಾರ ಕೂಗಿದ್ದಾರೆ ಎಂದರು.

ಹಿಂದೂತ್ವಕ್ಕೂ ಹಿಂದೂ ಧರ್ಮಕ್ಕೂ ಸಂಬಂಧವಿಲ್ಲ. ಸಾವರ್ಕರ್ ಅವರು ಹಿಂದೂತ್ವಕ್ಕೂ ಹಿಂದೂ ಧರ್ಮಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದರು. ಆದರೆ, ಸಾವರ್ಕರ್ ಅವರನ್ನು ನಂಬುವ ಬಿಜೆಪಿಯವರು ಅದಕ್ಕೆ ವಿರುದ್ದವಾಗಿದ್ದಾರೆ ಎಂದು ಹೇಳಿದರು.

ಓದಿ: ಅರಣ್ಯಾಧಿಕಾರಿಗಳ ದಾಳಿ : 4. 5 ಲಕ್ಷ ಮೌಲ್ಯದ ಮರದ ದಿಮ್ಮಿಗಳು ವಶ, ಮೂವರ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.