ETV Bharat / state

ಮಂಗಳೂರು ಅಪಾರ್ಟ್ಮೆಂಟ್​ನಲ್ಲಿ ಬೆಂಕಿ ಅವಘಡ: ಹೊಗೆಗೆ ಉಸಿರುಗಟ್ಟಿ ಮಹಿಳೆ ಬಾತ್​ರೂಂನಲ್ಲೇ ಸಾವು

author img

By ETV Bharat Karnataka Team

Published : Nov 28, 2023, 1:03 PM IST

Updated : Nov 28, 2023, 1:39 PM IST

fire caught
ಬೆಂಕಿ ಅವಘಡ

ಮಂಗಳೂರು ನಗರದ ಅತ್ತಾವರದ ಒಂದು ಅಪಾರ್ಟ್​ಮೆಂಟ್​ನಲ್ಲಿ ಶಾರ್ಟ್ ​ಸರ್ಕೂಟ್​ನಿಂದ ಬೆಂಕಿ ಹೊತ್ತಿದ್ದು, ಸ್ನಾನಕ್ಕೆಂದು ಬಾತ್​ರೂಂ ಒಳಗೆ ಹೋಗಿದ್ದ ಮಹಿಳೆ ಹೊಗೆಯಿಂದ ಉಸಿರು ಕಟ್ಟಿ ಸಾವನ್ನಪ್ಪಿದ್ದಾರೆ.

ಮಂಗಳೂರು: ನಗರದ ಅತ್ತಾವರದ ಅಪಾರ್ಟ್ಮೆಂಟ್​ವೊಂದರಲ್ಲಿ ಬೆಂಕಿ ಅವಘಡದಿಂದ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಸಹೈನ್ ಮೂಸಬ್ (57) ಮೃತಪಟ್ಟ ಮಹಿಳೆ.

fire caught
ಘಟನಾ ಸ್ಥಳ

ನಗರದ ಅತ್ತಾವರದ ಅಪಾರ್ಟ್ಮೆಂಟ್​ನ ಫ್ಲ್ಯಾಟ್​ವೊಂದರಲ್ಲಿ ಇಂದು ಬೆಳಗ್ಗೆ ಅಗ್ನಿ ಅವಘಡ ಸಂಭವಿಸಿದೆ. ಅಪಾರ್ಟ್ಮೆಂಟ್​ಗೆ ಬೆಂಕಿ ತಗುಲುವ ವೇಳೆ ಮಹಿಳೆ ಬಾತ್​ ರೂಂಗೆ ತೆರಳಿದ್ದು, ಬೆಂಕಿಯ ಹೊಗೆಗೆ ಬಾತ್ ರೂಂನೊಳಗೆ ಉಸಿರುಕಟ್ಟಿ ಸಾವನ್ನಪ್ಪಿದ್ದಾರೆ. ಮನೆಯೊಳಗಿದ್ದ ಮತ್ತೊಬ್ಬರು ತೀವ್ರ ಅಸ್ವಸ್ಥರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

fire caught
ಬೆಂಕಿ ಅವಘಡಗೊಂಡ ಅಪಾರ್ಟ್​ಮೆಂಟ್​

ಅಗ್ನಿ ಅವಘಡದ ಮಾಹಿತಿ ಪಡೆದ ಪಾಂಡೇಶ್ವರ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು. ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ಸಂಭವಿಸಿದೆ ಎಂದು ಅಗ್ನಿಶಾಮಕ ದಳದ ಸಿಬ್ಬಂದಿಗಳು ಮಾಹಿತಿ ‌ನೀಡಿದ್ದಾರೆ. ಬೆಂಕಿ ತಗುಲುವ ಸಂದರ್ಭದಲ್ಲಿ ಮನೆಯಲ್ಲಿ 9 ಮಂದಿ ಇದ್ದರು. ಈ ವೇಳೆ 7 ಮಂದಿ ಹೊರಬಂದಿದ್ದಾರೆ. ಘಟನೆ ವೇಳೆ ಎಲ್ಲರೂ ಹೊರಬಂದಿದ್ದಾರೆ ಎಂದು ಉಳಿದವರು ತಿಳಿದುಕೊಂಡಿದ್ದರು. ಆದರೆ ಬಳಿಕ ಇಬ್ಬರು ಒಳಗೆ ಇರುವುದು ತಿಳಿದಿದೆ. ಆದರೆ ಅವರನ್ನು ರಕ್ಷಿಸುವ ವೇಳೆ ಒಬ್ಬರು ಸಾವನ್ನಪ್ಪಿದ್ದು, ಮತ್ತೊಬ್ಬರು ತೀವ್ರ ಅಸ್ವಸ್ಥರಾಗಿದ್ದಾರೆ.

ಇದನ್ನೂ ಓದಿ: ಮಂಗಳೂರು: ಬೈಕ್ ಅಡ್ಡಗಟ್ಟಿ ಯುವಕ, ಯುವತಿಗೆ ನೈತಿಕ ಪೊಲೀಸ್‌ಗಿರಿ, ಇಬ್ಬರ ಬಂಧನ

ಹಿಂದಿನ ಪ್ರಕರಣ: ಮಂಗಳೂರಲ್ಲೇ ನವೆಂಬರ್​ 22 ರಂದು ಇದೇ ರೀತಿಯ ಪ್ರಕರಣವೊಂದು ನಡೆದಿತ್ತು. ಲಾಡ್ಜ್ ರೂಂ ಬೆಡ್​ಗೆ ಬೆಂಕಿ ತಗುಲಿ ಯುವಕ ಜೀವಂತ ದಹನವಾದ ಘಟನೆ ಕಂಕನಾಡಿಯ ರೆಸಿಡೆನ್ಸಿ ಗೇಟ್​ ಲಾಡ್ಜ್​ನಲ್ಲಿ ಸಂಭವಿಸಿತ್ತು. ಬೆಂದೂರ್‌ವೆಲ್ ನಿವಾಸಿ ಯಶ್ ರಾಜ್ ಸುವರ್ಣ ಎಂಬುವರು (43) ಮೃತಪಟ್ಟಿದ್ದರು. ಮೃತ ಯಶ್ ರಾಜ್ ಸುವರ್ಣ ನವೆಂಬರ್ 15 ರಿಂದ ಹೋಟೆಲ್​ನಲ್ಲಿ ವಾಸವಿದ್ದರು. ನವೆಂಬರ್ 22 ರಂದು ರಾತ್ರಿ ಊಟ ಮುಗಿಸಿ ರೂಂಗೆ ಹೋಗಿದ್ದರು. ರಾತ್ರಿ 12 ಗಂಟೆಯ ಹೊತ್ತಿಗೆ ರೂಂನಿಂದ ಹೊಗೆ ಕಾಣಿಸಿಕೊಂಡಿತ್ತು. ತಕ್ಷಣವೇ ಅಗ್ನಿಶಾಮಕ ದಳದವರಿಗೆ ಮಾಹಿತಿ ರವಾನಿಸಿದಾಗ ಅವರು ಬಂದು ಬೆಂಕಿ ನಂದಿಸಿದ್ದರು. ದುರಾದೃಷ್ಟವಶಾತ್​ ಅಷ್ಟರಲ್ಲಿ ಬೆಂಕಿ ತಗುಲಿ ಯಶ್ ರಾಜ್ ಸುವರ್ಣ ಸಾವನ್ನಪ್ಪಿದ್ದರು. ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.

ಮತ್ತೊಂದೆಡೆ ಸಿಲಿಂಡರ್​ ಅನಿಲ ಸೋರಿಕೆಯಿಂದ ಬೆಂಕಿ ಹೊತ್ತಿಕೊಂಡು ಕುಕ್ಕರ್ ಸ್ಫೋಟಗೊಂಡ ಪರಿಣಾಮ ಗೃಹಿಣಿಗೆ ಗಂಭೀರ ಗಾಯಗಳಾಗಿರುವ ಘಟನೆ ದಾವಣಗೆರೆಯ ವಿನೋಭ ನಗರದಲ್ಲಿ ಇತ್ತೀಚೆಗೆ ನಡೆದಿತ್ತು. ಸ್ಮಿತಾ (54) ಎಂಬ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

Last Updated :Nov 28, 2023, 1:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.