ETV Bharat / state

ಯುಟಿ ಖಾದರ್​ಗೆ ವೇದಿಕೆಯಲ್ಲೇ ಟಾಂಗ್​ ನೀಡಿದ ಸಿಎಂ ಬೊಮ್ಮಾಯಿ

author img

By

Published : Nov 19, 2022, 8:57 PM IST

Updated : Nov 19, 2022, 9:25 PM IST

cm-basavaraja-bommai-slams-ut-khader
ಯುಟಿ ಖಾದರ್​ಗೆ ವೇದಿಕೆಯಲ್ಲೇ ಟಾಂಗ್​ ನೀಡಿದ ಸಿಎಂ ಬೊಮ್ಮಾಯಿ

ಮಂಗಳೂರಿನ‌ ವಿಮಾನ ನಿಲ್ದಾಣಕ್ಕೆ ರಾಣಿ ಅಬ್ಬಕ್ಕ ಹೆಸರು ಹಾಗೂ ರೈಲ್ವೆ ನಿಲ್ದಾಣಕ್ಕೆ ನಾರಾಯಣ ಗುರು ಹೆಸರಿಡಬೇಕೆಂದು ಹೇಳಿದ ವಿಪಕ್ಷ ನಾಯಕ ಯುಟಿ ಖಾದರ್​​ ಅವರಿಗೆ, ಏರ್ ಪೋರ್ಟ್, ವಿಮಾನನಿಲ್ದಾಣಕ್ಕೆ ನಿಮ್ಮ ಸರ್ಕಾರವೇ ಇದ್ದಾಗ ಹೆಸರು ಇಡಬಹುದಿತ್ತು.ಈ ದೇಶದಲ್ಲಿ ಬಹಳ ಪುಕ್ಕಟೆಯಾಗಿ ಸಲಹೆ ಸೂಚನೆ ಕೊಡಬಹುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟಾಂಗ್​ ನೀಡಿದರು.

ಮಂಗಳೂರು : ಮಂಗಳೂರಿನಲ್ಲಿ ಇಂದು ನಡೆದ ಕೆದಂಬಾಡಿ ರಾಮಯ್ಯ ಗೌಡ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ವಿಪಕ್ಷ ಉಪನಾಯಕ ಯು‌ ಟಿ ಖಾದರ್ ಮಾತಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರು ಟಾಂಗ್ ನೀಡಿದ ಘಟನೆ ನಡೆಯಿತು.

ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ವಿಪಕ್ಷ ಉಪನಾಯಕ ಯು ಟಿ ಖಾದರ್ ಅವರು ಮಂಗಳೂರಿನ‌ ವಿಮಾನ ನಿಲ್ದಾಣಕ್ಕೆ ರಾಣಿ ಅಬ್ಬಕ್ಕ ಹೆಸರು ಹಾಗೂ ರೈಲ್ವೆ ನಿಲ್ದಾಣಕ್ಕೆ ನಾರಾಯಣ ಗುರು ಹೆಸರಿಡಬೇಕೆಂದು ಹೇಳಿದ್ದರು. ಖಾದರ್ ಅವರ ಭಾಷಣದ ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಟಾಂಗ್​​ ನೀಡಿದರು.

ವೇದಿಕೆಯಲ್ಲಿ ಖಾದರ್​ಗೆ ಟಾಂಗ್​ ನೀಡಿದ ಸಿಎಂ : ನಮ್ಮ ಮಣ್ಣಲ್ಲೇ ಹುಟ್ಟಿದ ಕ್ರಾಂತಿ ಪುರುಷರನ ಪ್ರತಿಮೆ ಸ್ಥಾಪನೆಗೆ ಇಷ್ಟು ವರ್ಷ ಬೇಕಾಯಿತು. ನಮ್ಮ ಯು.ಟಿ.ಖಾದರ್ ಒಳ್ಳೆ ಭಾಷಣ ಮಾಡ್ತಾರೆ. ಅವರ ಭಾಷಣದಲ್ಲಿ ಒಳಾರ್ಥ ಇರುತ್ತದೆ. ಖಾದರ್ ಆತ್ಮೀಯ ಸ್ನೇಹಿತನಾಗಿ ನನಗೆ ಅವರ ಮಾತಿನ ಒಳಾರ್ಥ ನಮಗೆ ಗೊತ್ತಾಗುತ್ತದೆ.

ಕೆಲವು ವಿಷಯ ವಿಧಾನಸಭೆಯಲ್ಲಿ ಮಾತನಾಡಬೇಕು. ಈ ಸಭೆ ಅತ್ಯಂತ ಪವಿತ್ರವಾಗಿದ್ದು. ಏರ್ ಪೋರ್ಟ್, ವಿಮಾನನಿಲ್ದಾಣಕ್ಕೆ ನಿಮ್ಮ ಸರ್ಕಾರವೇ ಇದ್ದಾಗ ಹೆಸರು ಇಡಬಹುದಿತ್ತು. ಈ ದೇಶದಲ್ಲಿ ಬಹಳ ಪುಕ್ಕಟೆಯಾಗಿ ಸಲಹೆ ಸೂಚನೆ ಕೊಡಬಹುದು. ಆದರೆ ಮೊದಲು ಯಾಕೆ ಮಾಡಿಲ್ಲ ಅನ್ನುವುದನ್ನು ಯೋಚಿಸಬೇಕು ಎಂದು ಹೇಳಿದರು.

ಯುಟಿ ಖಾದರ್​ಗೆ ವೇದಿಕೆಯಲ್ಲೇ ಟಾಂಗ್​ ನೀಡಿದ ಸಿಎಂ ಬೊಮ್ಮಾಯಿ

ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ನಿರ್ಮಾಣ : ಬೆಂಗಳೂರಿನ ಪ್ರಮುಖ ಸ್ಥಳಗಳಲ್ಲಿ ಅನಾಮಧೇಯ ಸ್ವಾತಂತ್ರ್ಯ ಹೋರಾಟಗಾರರ ಹೆಸರುಗಳನ್ನೊಳಗೊಂಡ ಸ್ಮಾರಕವನ್ನು ನಿರ್ಮಾಣ ಮಾಡುವುದಾಗಿ ಮುಖ್ಯಮಂತ್ರಿಗಳು ಘೋಷಿಸಿದರು.

ದೇಶವಿದೇಶಗಳಲ್ಲಿ ಇಂತಹ ಸ್ಮಾರಕಗಳಿಗೆ ಬಹಳ ಮಹತ್ವ ಇದೆ. ಇಂತಹ ಸ್ಮಾರಕಗಳು ನಮ್ಮ ಇತಿಹಾಸ, ಸಂಸ್ಕೃತಿ-ಪರಂಪರೆಗಳನ್ನು ಬಿಂಬಿಸುವ ಜೊತೆಗೆ ನಮ್ಮ ಅಸ್ಮಿತೆಯನ್ನೂ ಬಿಂಬಿಸಲಿದೆ. ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಭಾರತೀಯತೆ, ಇದಕ್ಕೆ ಪೂರಕವಾದ ಸರ್ಕಾರದ ನೀತಿಗಳು ಭಾರತದ ಅಸ್ಮಿತೆಯನ್ನು ಗಟ್ಟಿಗೊಳಿಸುತ್ತದೆ.

ಭಾರತದ ಸ್ವಾತಂತ್ರ್ಯಕ್ಕಾಗಿ ಜೀವತೆತ್ತ ಅನೇಕ ಅನಾಮಧೇಯ ಹೋರಾಟಗಾರರ ಬಗ್ಗೆ ನಮ್ಮ ಯುವಜನತೆಗೆ, ದೇಶ ವಿದೇಶಗಳಿಗೆ ಅರಿವು ಮೂಡಿಸುವಂತಾಗಬೇಕು. ಜಪಾನ್ ನಲ್ಲಿ ಸುಭಾಷ್ ಚಂದ್ರ ಬೋಸ್ ಪ್ರತಿಮೆ, ಅಮೆರಿಕದಲ್ಲಿ ಮಹಾತ್ಮಗಾಂಧಿ ಸ್ಮಾರಕ ನಮಗೆ ಸ್ಪೂರ್ತಿ ನೀಡುತ್ತಿದೆ ಎಂದು ಹೇಳಿದರು.

ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಗಳನ್ನು ಮರೆಯಬಾರದು : ಕೆದಂಬಾಡಿ ರಾಮಯ್ಯ ಗೌಡರ ಸ್ಮಾರಕವನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿಯೂ ನಿರ್ಮಿಸಲಾಗುವುದು. ಅವರ ಜೀವನ ಚರಿತ್ರೆಯನ್ನು ಪಠ್ಯಪುಸ್ತಕದಲ್ಲಿಯೂ ಅಳವಡಿಸಲಾಗುವುದು. ಮಂಗಳೂರು ಭಾಗದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಹೆಸರುಗಳನ್ನು ನಾಮಕರಣ ಮಾಡುವ ಬಗ್ಗೆ ಸೂಕ್ತ ನಿರ್ಣಯವನ್ನು ಶೀಘ್ರದಲ್ಲಿ ತೆಗೆದುಕೊಳ್ಳಲಾಗುವುದು.

ಲೋಕಮಾನ್ಯ ತಿಲಕರು, ಕಾಲಾಪಾನಿ ಶಿಕ್ಷೆ ಅನುಭವಿಸಿದ ಸಾವರ್ಕರ್, ಸುಭಾಷ್ ಚಂದ್ರಬೋಸ್, ಭಗತ್ ಸಿಂಗ್, ಚಂದ್ರಶೇಖರ ಆಜಾದ್ ಅವರ ತ್ಯಾಗಬಲಿದಾನಗಳನ್ನು ಮರೆಯಬಾರದು. ಇದನ್ನು ಮರೆಯುವವರು ನಿಜ ದೇಶಭಕ್ತರಾಗಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ರೈತರು ಯೋಧರಾದಾಗ ಕ್ರಾಂತಿ : ಭಾರತಕ್ಕೆ ಸ್ವಾತಂತ್ರ್ಯ ಸುಲಭವಾಗಿ ದೊರಕಲಿಲ್ಲ. ಹಲವರು ತಮ್ಮ ಬದುಕು ಜೀವನವನ್ನೇ ತ್ಯಾಗ ಮಾಡಿದ್ದಾರೆ. ಬ್ರಿಟೀಷರ ವಿರುದ್ಧ ಹೋರಾಟ ಮೊದಲು ರೈತರಿಂದ ಪ್ರಾರಂಭವಾಯಿತು. ಕೆದಂಬಾಡಿ ರಾಮಯ್ಯ ಗೌಡರು ರೈತ ಕುಟುಂಬದಲ್ಲಿ ಹುಟ್ಟಿ, ವೀರ ಯೋಧರಾಗಿ ಬ್ರಿಟೀಷರಿಗೆ ಸಿಂಹಸ್ವಪ್ನವಾಗಿದ್ದರು. ರೈತರು ಯೋಧರಾದಾಗ ಕ್ರಾಂತಿಯಾಗುತ್ತದೆ ಎಂದು ಹೇಳಿದರು.

ಸಮಾರಂಭದಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಸಚಿವರಾದ ಎಸ್. ಅಂಗಾರ, ಡಾ.ಸಿ.ಎನ್. ಅಶ್ವತ್ಥನಾರಾಯಣ, ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವ ಡಿ.ವಿ. ಸದಾನಂದ ಗೌಡ, ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯ ಶಾಸಕರು, ಜಿಲ್ಲೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ : ಬಾದಾಮಿಗೆ ಬಂದು ಹೋಗಲು ಜನರಿಂದಲೇ ಸಿದ್ದರಾಮಯ್ಯಗೆ ಹೆಲಿಕಾಪ್ಟರ್ : ಜಮೀರ್ ಅಹಮ್ಮದ್ ಖಾನ್​

Last Updated :Nov 19, 2022, 9:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.