ETV Bharat / state

ಕುಕ್ಕೆಯಲ್ಲಿ ಚಂಪಾಷಷ್ಠಿ ಜಾತ್ರಾ ಮಹೋತ್ಸವ : ಭಕ್ತರಿಗೆ ಮೂಲ ಮೃತ್ತಿಕೆ ಪ್ರಸಾದ ವಿತರಣೆ

author img

By ETV Bharat Karnataka Team

Published : Dec 9, 2023, 11:04 PM IST

ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಕ್ತರಿಗೆ ಮೂಲಮೃತ್ತಿಕಾ ಪ್ರಸಾದವನ್ನು ವಿತರಿಸಲಾಯಿತು.

champashashti-jatra-mahotsava-at-kukke-distribution-of-mula-mrittike-prasad-to-devotees
ಕುಕ್ಕೆಯಲ್ಲಿ ಚಂಪಾಷಷ್ಠಿ ಜಾತ್ರಾ ಮಹೋತ್ಸವ : ಭಕ್ತರಿಗೆ ಮೂಲ ಮೃತ್ತಿಕೆ ಪ್ರಸಾದ ವಿತರಣೆ

ಸುಬ್ರಹ್ಮಣ್ಯ (ದಕ್ಷಿಣಕನ್ನಡ) : ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ ಕಾರ್ತಿಕ ಬಹುಳ ಏಕಾದಶಿಯ ದಿನವಾದ ಶನಿವಾರ ಮೂಲ ಮೃತ್ತಿಕಾ ಪ್ರಸಾದ ವಿತರಣೆ ನಡೆಯಿತು. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸಿದ ಭಕ್ತರು ಪವಿತ್ರ ಮೂಲಮೃತ್ತಿಕಾ ಪ್ರಸಾದವನ್ನು ಪಡೆದರು.

ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯ ಅವರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಗರ್ಭಗುಡಿಯಿಂದ ಮೂಲಮೃತ್ತಿಕೆಯನ್ನು ಮಧ್ಯಾಹ್ನ 11.15ರ ಸುಮುಹೂರ್ತದಲ್ಲಿ ವಿವಿಧ ವೈಧಿಕ ವಿಧಾನಗಳ ಮೂಲಕ ತೆಗೆದರು. ಆರಂಭದಲ್ಲಿ ಶ್ರೀ ದೇವಳದ ಪುರೋಹಿತರಿಗೆ ಮತ್ತು ಆಡಳಿತ ಮಂಡಳಿಗೆ ನೀಡಿದರು. ಬಳಿಕ ಭಕ್ತಾದಿಗಳಿಗೆ ವಿತರಿಸಿದರು. ಎಲ್ಲಾ ಭಕ್ತರು ಶ್ರದ್ಧಾಭಕ್ತಿಯಿಂದ ಮಹಾಪ್ರಸಾದವನ್ನು ಸ್ವೀಕರಿಸಿದರು.

ಸಾವಿರಾರು ಭಕ್ತರು ಬೆಳಗ್ಗೆ 10 ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಮೃತ್ತಿಕಾ ಪ್ರಸಾದ ಪಡೆದರು. ಹೆಚ್ಚಿನ ಸಂಖ್ಯೆಯಲ್ಲಿ ಊರ, ಪರವೂರ ಭಕ್ತಾದಿಗಳು ಮೃತ್ತಿಕಾ ಪ್ರಸಾದ ಸ್ವೀಕರಿಸಿದರು. ಶ್ರೀದೇವಳದಲ್ಲಿ ಮೂಲ ಮೃತ್ತಿಕಾ ಪ್ರಸಾದ ತೆಗೆಯಲು ಇದ್ದುದರಿಂದ ಮಧ್ಯಾಹ್ನ 2 ಗಂಟೆಯ ನಂತರ ಭಕ್ತಾದಿಗಳಿಗೆ ಶ್ರೀ ದೇವರ ದರುಶನಕ್ಕೆ ಅವಕಾಶ ಮಾಡಲಾಯಿತು. ಏಕಾದಶಿ ದಿನವಾದುದರಿಂದ ಶ್ರೀ ದೇವರ ದರುಶನದ ಬಳಿಕ ಆಯ್ದ ಸೇವೆಗಳನ್ನು ಭಕ್ತರು ನೆರವೇರಿಸಿದರು.

ಮೂಲಮೃತ್ತಿಕೆ ಪ್ರಸಾದ ಎಂದರೇನು ? : ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ವರ್ಷಕ್ಕೆ ಒಂದು ಬಾರಿ ಮಾತ್ರ ಮೂಲಮೃತ್ತಿಕೆಯನ್ನು ತೆಗೆಯಲಾಗುತ್ತದೆ. ಈ ಪ್ರಸಾದವು ರೋಗ ನಿರೋಧಕ, ಸಂತಾನಕಾರಕ ಮತ್ತು ಚರ್ಮ ರೋಗಗಳಿಗೆ ದಿವ್ಯ ಔಷಧ‌ವೆಂಬ ನಂಬಿಕೆ ಭಕ್ತರಲ್ಲಿದೆ. ಮೂಲ ಮೃತ್ತಿಕಾ ಪ್ರಸಾದವನ್ನು ಶುಭ ಕಾರ್ಯಗಳ ಒಳಿತಿಗಾಗಿಯೂ, ವ್ಯಾಧಿಗಳ ನಿವಾರಣೆಗೂ ಭಕ್ತರು ಕೊಂಡೊಯ್ಯುತ್ತಾರೆ. ಇದನ್ನು ತೀರ್ಥದಲ್ಲಿ ಸೇವಿಸುವ ಮೂಲಕ ಅಥವಾ ಶರೀರಕ್ಕೆ ರಕ್ಷೆಯಾಗಿ ಕಟ್ಟಿಕೊಳ್ಳುವ ಮೂಲಕ ಭಕ್ತರು ತಮ್ಮೊಳಗೆ ಧಾರಣೆ ಮಾಡುತ್ತಾರೆ. ಮೂಲ ಮೃತ್ತಿಕೆ ತೆಗೆಯುವ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ಭಕ್ತರಿಗೆ ವಿಳಂಬವಾಗಿ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.

ಈ ಸಂದರ್ಭದಲ್ಲಿ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಎಇಒ ರಾಜಣ್ಣ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಸನ್ನ ದರ್ಬೆ, ಪಿಜಿಎಸ್‌ಎನ್ ಪ್ರಸಾದ್, ಶ್ರೀವತ್ಸ ಬೆಂಗಳೂರು, ಮನೋಹರ ರೈ, ಶೋಭಾ ಗಿರಿಧರ್, ಲೋಕೇಶ್ ಮುಂಡುಕಜೆ, ವನಜಾ.ವಿ.ಭಟ್, ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ಹೆಬ್ಬಾರ್ ಪ್ರಸನ್ನ ಭಟ್, ಪಾಟಾಳಿ ಲೋಕೇಶ್ ಎ.ಆರ್ ಸೇರಿದಂತೆ ದೇವಳದ ಸಿಬ್ಬಂದಿಗಳು, ಭಕ್ತರು ಉಪಸ್ಥಿತರಿದ್ದರು.

ಇದನ್ನೂ ಓದಿ : ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಡಿ.10 ರಿಂದ 24ರ ವರೆಗೆ ಚಂಪಾಷಷ್ಠಿ ಮಹೋತ್ಸವ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.