ಚಿಕ್ಕಮಗಳೂರು : ಕರ್ನಾಟದ ಅತ್ಯಂತ ಹೆಮ್ಮೆ ಹಾಗೂ ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯ ಪ್ರಮುಖ ಬೆಳೆ ಕಾಫಿ ಬಗ್ಗೆ ಪರಿಸರ ವಿಜ್ಞಾನಿಗಳು ಮಹತ್ವದ ಎಚ್ಚರಿಕೆ ನೀಡಿದ್ದಾರೆ. ಮುಂದಿನ ಮೂರು ದಶಕಗಳಲ್ಲಿ ಅರೇಬಿಕಾ ಕಾಫಿ ಬೆಳೆ ಶೇ.85 ಸಂಪೂರ್ಣ ನಾಶವಾಗಲಿದೆ ಎಂಬ ಎಚ್ಚರಿಕೆಯಿಂದಾಗಿ ಈ ಭಾಗದ ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ.
ಈ ಕಾಫಿ ಉದ್ಯಮ ವಿದೇಶಿ ವಿನಿಮಯ ತಂದು ಕೊಡುವ ದೊಡ್ಡ ಬೆಳೆಗಳಲ್ಲಿ ಅತ್ಯಂತ ಪ್ರಮುಖ ಬೆಳೆ. ಇದು ಮುಂದಿನ ಮೂರು ದಶಕಗಳಲ್ಲಿ ಭಾರತದಲ್ಲಿ ಸಂಪೂರ್ಣ ನಾಶವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಹೈಬ್ರೀಡ್ ಕಾಫಿ ಈಗಾಗಲೇ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಇದರಿಂದ ಕಾಫಿ ಬೆಳೆಗಾರರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಈಗಾಗಲೇ ಕಾಫಿ ಎಲೆಗೆ ತುಕ್ಕು ರೋಗ ಹಾಗೂ ಬೋರರ್ ಹಾವಳಿಯಿಂದ ಬೆಳೆಗಾರರು ಕಂಗಲಾಗಿದ್ದು, ವಿಪರೀತ ಮಳೆ ಹಾಗೂ ಉಷ್ಣಾಂಶದಲ್ಲಿ ಏರಿಳಿತ, ಶೀಲೀಂದ್ರಗಳ ದಾಳಿಯಿಂದ ಈ ಬೆಳೆ ನಾಶದತ್ತ ಸಾಗುತ್ತಿದೆ. ಇದರಿಂದ ಹಂತ ಹಂತವಾಗಿ ಕಾಫಿ ಗಿಡಗಳು ನಾಶವಾಗುತ್ತಾ ಹೋಗುತ್ತದೆ ಎಂದು ಪರಿಸರ ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಈ ಹಿಂದೇ 795 ತಳಿಯ ಅರೇಬಿಕಾ ಕಾಫಿ ಗಿಡಗಳನ್ನು ಜಿಲ್ಲೆಯಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತಿತ್ತು. ಆದರೆ, ಈಗ ಅದು ನೋಡಲು ಸಿಗುತ್ತಿಲ್ಲ. ಕಾಫೀ ಬೋರ್ಡ್ ಹೈಬ್ರೀಡ್ ಕಾಫಿ ನೀಡುತ್ತಿದ್ದು, ಅದರಲ್ಲಿ ಕಟುವಾ, ಚಂದ್ರಗಿರಿ ಬೆಳೆ ನೀಡುತ್ತಿದ್ದಾರೆ. ಈ ಗಿಡಗಳು ಹವಾಮಾನಕ್ಕೆ ನಿಲ್ಲುತ್ತಿಲ್ಲ. ಕಾಫಿ ಹಣ್ಣುಗಳು ಕೈಗೆ ಸಿಗುತ್ತಿಲ್ಲ. ಕಾಫಿ ತೋಟ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ. ಕೇಂದ್ರ ಸರ್ಕಾರದ ಅವೈಜ್ಞಾನಿಕ ನೀತಿ ನಮ್ಮ ಮೇಲೆ ಪರಿಣಾಮ ಬೀರುತ್ತಿದೆ.
ಇತ್ತ ವೈಜ್ಞಾನಿಕ ಬೆಲೆಯೂ ಸಿಗುತ್ತಿಲ್ಲ, ಕಾಫಿ ಬೋರ್ಡ್ ರೀಸರ್ಚ್ ಕೆಲಸ ಮಾಡುತ್ತಿಲ್ಲ. ಸಂಸದರು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಅವರು ಕಾಫಿ ಬೆಳೆಗಾರರ ಪರ ಧ್ವನಿ ಎತ್ತುತ್ತಿಲ್ಲ ಎಂದು ಕಾಫಿ ಬೆಳೆಗಾರರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪರಿಸರ ವಿಜ್ಞಾನಿಗಳು ಹೇಳಿದಂತೆ ಅರೇಬಿಕಾ ಕಾಫಿ ಅವನತಿ ಬಂದ್ರೆ ಮುಂದೇನ್ ಗತಿ ಎಂಬ ಆತಂಕ ಬೆಳೆಗಾರರನ್ನ ಆವರಿಸಿದೆ. ಈ ಕುರಿತು ಕೇಂದ್ರ ಸರ್ಕಾರ ಹಾಗೂ ಕಾಫಿ ಬೋರ್ಡ್ ಗಮನ ಹರಿಸಿಬೇಕಿದೆ.