ETV Bharat / state

ಚಿಕ್ಕಮಗಳೂರು: ತಾರಕಕ್ಕೇರಿದ ಲಾಯರ್-ಪೊಲೀಸ್​​ ಪ್ರಕರಣ; ಕೇಸ್​ ಸಿಐಡಿಗೆ ವಹಿಸಿ ಸರ್ಕಾರದ ಆದೇಶ

author img

By ETV Bharat Karnataka Team

Published : Dec 3, 2023, 10:33 PM IST

ವಕೀಲನ ಮೇಲೆ ಹಲ್ಲೆ, ಪೊಲೀಸರ ಪ್ರತಿಭಟನೆ ಸೇರಿದಂತೆ ಒಟ್ಟು ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲು ಪೊಲೀಸ್ ಇಲಾಖೆ ತೀರ್ಮಾನಿಸಿದೆ.

ಪಶ್ಚಿಮ ವಲಯ ಐಜಿಪಿ ಡಾ.ಚಂದ್ರಗುಪ್ತ
ಪಶ್ಚಿಮ ವಲಯ ಐಜಿಪಿ ಡಾ.ಚಂದ್ರಗುಪ್ತ

ಚಿಕ್ಕಮಗಳೂರು : ಜಿಲ್ಲೆಯಲ್ಲಿ ಹೆಲ್ಮೆಟ್ ಧರಿಸದ ವಿಚಾರಕ್ಕೆ ಯುವ ವಕೀಲನ ಮೇಲೆ ಪೊಲೀಸರಿಂದ ಹಲ್ಲೆ ನಡೆದ ಆರೋಪ ಪ್ರಕರಣ ತಾರಕಕ್ಕೇರಿದೆ. ವಕೀಲರು ಮತ್ತು ಪೊಲೀಸರು ನಡೆಸಿದ ಪ್ರತಿಭಟನೆ ಸೇರಿದಂತೆ ಒಟ್ಟು ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲು ಪೊಲೀಸ್ ಇಲಾಖೆ ತೀರ್ಮಾನಿಸಿದ್ದು, ರಾಜ್ಯ ಸರ್ಕಾರ ಆದೇಶ ಹೊರಡಿಸಿರುವ ಬಗ್ಗೆ ಪಶ್ಚಿಮ ವಲಯ ಐಜಿಪಿ ಡಾ. ಚಂದ್ರಗುಪ್ತ ಅವರು ತಿಳಿಸಿದ್ದಾರೆ.

ಯುವ ವಕೀಲ ಪ್ರೀತಂ ಮೇಲೆ ಪೊಲೀಸ್ ಸಿಬ್ಬಂದಿಗಳು ನಡೆಸಿದ್ದ ಹಲ್ಲೆ ವಿಚಾರವು ಎರಡೂ ಕಡೆಯ ಸಂಘರ್ಷಕ್ಕೆ ಕಾರಣವಾಗಿ ಪರಸ್ಪರ ಆಹೋರಾತ್ರಿ ಪ್ರತಿಭಟನೆ, ಮಾತಿನ ಚಕಮಕಿಯಂತಹ ಘಟನೆಗೆ ದಾರಿ ಮಾಡಿಕೊಟ್ಟಿತ್ತು. ವಕೀಲರ ಪ್ರತಿಭಟನೆಗೆ ಮಣಿದು ನಗರ ಠಾಣೆ ಪಿಎಸ್ಐ ಸೇರಿದಂತೆ 6 ಮಂದಿ ಸಿಬ್ಬಂದಿಯನ್ನು ಅಮಾನತು ಮಾಡಿ 307 ಸೇರಿದಂತೆ ವಿವಿಧ ಸೆಕ್ಷನ್​ಗಳಡಿ ಪ್ರಕರಣ ದಾಖಲಿಸಲಾಗಿತ್ತು. ಆರೋಪಿತ ಪೊಲೀಸ್ ಸಿಬ್ಬಂದಿಗಳ ಬಂಧನಕ್ಕೆ ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಂತೆ ಅವರ ಕುಟುಂಬಸ್ಥರೊಂದಿಗೆ ಕರ್ತವ್ಯನಿರತ ಇತರೆ ಪೊಲೀಸ್ ಸಿಬ್ಬಂದಿಗಳು ಬೀದಿಗಿಳಿದು ರಾತ್ರಿಯಿಡೀ ಪ್ರತಿಭಟನೆ ನಡೆಸಿ ಅಧಿಕಾರಿಗಳನ್ನು ಬಂಧಿಸಬಾರದು. ಕರ್ತವ್ಯಕ್ಕೆ ಅಡ್ಡಿಪಡಿಸಿದ ವಕೀಲರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.

ಒತ್ತಡಕ್ಕೆ ಸಿಕ್ಕಿದ ಇಲಾಖೆ : ಒಂದೆಡೆ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ಪ್ರಕರಣ ಕೈ ಗೊತ್ತಿಕೊಂಡಿದೆ. ಇನ್ನೊಂದೆಡೆ ಗಂಭೀರ ಆರೋಪದಡಿ ಪೊಲೀಸರ ಮೇಲೆ ಪ್ರಕರಣ ದಾಖಲಿಸಿದ್ದು, ಬಂಧಿಸಲೇಬೇಕಾದ ಒತ್ತಡಕ್ಕೆ ಸಿಲುಕಿಕೊಂಡಿದ್ದ ಪೊಲೀಸ್ ಇಲಾಖೆ ಭಾನುವಾರ ದಿನವಿಡೀ ಸಭೆ, ಸಮಾಲೋಚನೆಗಳನ್ನು ನಡೆಸಿ ಅಂತಿಮವಾಗಿ ಒಟ್ಟು ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲು ತೀರ್ಮಾನಿಸಿದೆ. ಎರಡು ದಿನಗಳಿಂದ ನಗರದಲ್ಲೇ ವಾಸ್ತವ್ಯ ಹೂಡಿರುವ ಪಶ್ಚಿಮ ವಲಯ ಐಜಿಪಿ ಡಾ. ಚಂದ್ರಗುಪ್ತ ಅವರು ಭಾನುವಾರ ಬೆಳಗ್ಗೆ ನಗರದ ಡಿಎಆರ್ ಕಚೇರಿಯಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸಭೆ ನಡೆಸಿ ಪ್ರತಿಭಟನೆ ನಡೆಸಿದ ಪೊಲೀಸರಿಗೆ ಇಲಾಖೆ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ನೀಡಿದರು.

ಸಾರ್ವಜನಿಕರ ಬೇಸರ : ಎರಡು ದಿನಗಳ ಕಾಲ ಪೊಲೀಸರು ಹಾಗೂ ವಕೀಲರ ನಡುವೆ ನಡೆದ ಸಂಘರ್ಷವು ಆಡಳಿತ ವ್ಯವಸ್ಥೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ ಬಗ್ಗೆ ಸಾರ್ವಜನಿಕರೂ ಬೇಸರ ವ್ಯಕ್ತಪಡಿಸಿದರು. ಇಂತಹ ಘಟನೆಗಳಿಂದ ಎರಡೂ ವ್ಯವಸ್ಥೆಯು ಗಂಭೀರತೆ ಕಳೆದುಕೊಳ್ಳುತ್ತವೆ. ಪರೋಕ್ಷವಾಗಿ ಸಾರ್ವಜನಿಕರ ಮೇಲೆ ಪರಿಣಾಮ ಉಂಟಾಗುತ್ತದೆ. ಎಂತಹದ್ದೇ ಸಂದರ್ಭ ಬಂದರೂ ಬೀದಿಗಿಳಿಯದೆ ಮಾತುಕತೆ ಮೂಲಕವೇ ಬಗೆಹರಿಸಿಕೊಳ್ಳುವುದು ಒಳಿತು ಎನ್ನುವ ಅಭಿಪ್ರಾಯ ಸಾರ್ವಜನಿಕ ವಲಯಗಳಿಂದ ಕೇಳಿ ಬಂದಿದೆ.

ಎರಡೂ ಕಡೆ ಸಂಯಮ ಇರಲಿ : ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳುವ ಹಾಗೂ ಸಾಮಾನ್ಯ ಜನತೆಗೆ ನ್ಯಾಯ ದೊರಕಿಸುವ ವಿಚಾರದಲ್ಲಿ ವಕೀಲರು ಮತ್ತು ಪೊಲೀಸರಿಬ್ಬರ ಹೊಣೆಗಾರಿಕೆ ಸಮಾನವಾದದ್ದು, ಪರಸ್ಪರ ಸಹಕಾರವಿಲ್ಲದೆ ಇದು ಸಾಕಾರವಾಗಲು ಸಾದ್ಯವೇ ಇಲ್ಲ. ಈ ಹಿನ್ನೆಲೆಯಲ್ಲಿ ಎರಡೂ ಕಡೆಯವರು ಶತ್ರುಗಳಂತೆ ವರ್ತಿಸದೆ ವಿವಾದಗಳು ತಲೆದೋರಿದ ಸಂದರ್ಭದಲ್ಲಿ ಸಂಯಮದಿಂದ ಕುಳಿತು ಬಗೆಹರಿಸಿಕೊಳ್ಳುವುದು ಒಟ್ಟು ವ್ಯವಸ್ಥೆಯ ಹಿತದೃಷ್ಠಿಯಿಂದ ಒಳಿತು ಎಂದು ವಕೀಲರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ವಕೀಲನ ಮೇಲೆ ಹಲ್ಲೆ ಪ್ರಕರಣ: ಚಿಕ್ಕಮಗಳೂರು ನಗರದಲ್ಲಿ ಪೊಲೀಸರಿಂದ ರಸ್ತೆ ತಡೆದು ಪ್ರತಿಭಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.