20 ದಿನದ ಅವಧಿಯಲ್ಲಿ ಆನೆ ದಾಳಿಗೆ 2ನೇ ಬಲಿ: ಮಲೆನಾಡಿಗರ ಆಕ್ರೋಶ

author img

By

Published : Sep 9, 2022, 1:59 PM IST

Chikkamagaluru

ಆನೆ ದಾಳಿಯಿಂದ ಕಾರ್ಮಿಕನೋರ್ವ ಸಾವನ್ನಪ್ಪಿರುವ ಘಟನೆ ಮೂಡಿಗೆರೆ ತಾಲೂಕಿನ ಊರಬಗೆ ಗ್ರಾಮದಲ್ಲಿ ನಡೆದಿದೆ

ಚಿಕ್ಕಮಗಳೂರು: ಒಂದು ತಿಂಗಳ ಅವಧಿಯಲ್ಲಿ ಆನೆ ದಾಳಿಗೆ ಇಬ್ಬರು ಬಲಿಯಾಗಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ. ಮೂಡಿಗೆರೆ ತಾಲೂಕಿನ ಊರಬಗೆ ಗ್ರಾಮದಲ್ಲಿ ತೋಟದ ಕೆಲಸ ಮುಗಿಸಿ ಬರುತ್ತಿದ್ದ ಕಾರ್ಮಿಕ ಅರ್ಜುನ್ ಎಂಬುವರ ಮೇಲೆ ಆನೆ ದಾಳಿ ಮಾಡಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೂಡಿಗೆರೆ ತಾಲೂಕಿನ ಊರಬಗೆ, ಗೌಡಹಳ್ಳಿ ಭಾಗದಲ್ಲಿ ಐದು ಕಾಡಾನೆಗಳು ಬೀಡುಬಿಟ್ಟಿವೆ. ಈ ಬಗ್ಗೆ ಸ್ಥಳೀಯರು ಅರಣ್ಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಇದು ಅರಣ್ಯ ಇಲಾಖೆ ಮಾಡಿದ ಕೊಲೆ ಎಂದು ಸ್ಥಳೀಯರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಆನೆ ದಾಳಿ: ಕಾರ್ಮಿಕ ಸಾವು

ಹಳ್ಳಿಯ ಮುಖ್ಯ ರಸ್ತೆ ಬಳಿಯೇ ಆನೆ ದಾಳಿ ಮಾಡಿರುವುದರಿಂದ ಸ್ಥಳೀಯರು ಆತಂಕಕ್ಕೀಡಾಗಿದ್ದಾರೆ. ಕಳೆದ ಆ.25 ರಂದು ಮೂಡಿಗೆರೆ ತಾಲೂಕಿನ ಹಾರ್ಗೋಡು ಗ್ರಾಮದ ಆನಂದ್ ದೇವಾಡಿಗ ಎಂಬುವರ ಮೇಲೆ ಆನೆ ದಾಳಿ ಮಾಡಿದ್ದು ಅವರು ಕೂಡ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಅವರ ಮೃತ ದೇಹವನ್ನ ಆನೆ ಕಾಡಿನಲ್ಲಿ ಸುಮಾರು ಒಂದು ಕಿ.ಮೀ. ಎಳೆದುಕೊಂಡು ಹೋಗಿದ್ದ ಪರಿಣಾಮ ದೇಹದ ಅಂಗಾಂಗಗಳು ಕಾಡಿನಲ್ಲಿ ಚದುರಿ ಹೋಗಿದ್ದವು.

ಮೊನ್ನೆ-ಮೊನ್ನೆಯಷ್ಟೆ ಕೊಪ್ಪ ತಾಲೂಕಿನ ಜಯಪುರ ಸಮೀಪದ ಎಲೆಮಡಿಲು ಗ್ರಾಮದಲ್ಲಿ ರೈತರ ನಿದ್ದೆಗೆಡಿಸಿದ್ದ ಒಂಟಿ ಸಲಗವನ್ನ ವಾರಗಟ್ಟಲೇ ಕಷ್ಟಪಟ್ಟು ಐದು ಸಾಕಾನೆಗಳು ಸೆರೆ ಹಿಡಿದಿದ್ದವು. ಆದರೆ, ಮೂಡಿಗೆರೆ ತಾಲೂಕಿನಲ್ಲಿ ಕಳೆದೊಂದು ದಶಕದಿಂದಲೂ ಆನೆ ಹಾವಳಿ ಮಿತಿ ಮೀರಿದೆ. ಸಾರಗೋಡು, ಗೌಡಹಳ್ಳಿ, ಕೋಗಿಲೆ, ಊರಬಗೆ, ಗುತ್ತಿಹಳ್ಳಿ, ಬೈರಾಪುರ, ದೇವವೃಂದ, ಸತ್ತಿಗನಹಳ್ಳಿ ಸೇರಿದಂತೆ ಹತ್ತಾರು ಹಳ್ಳಿಗಳಲ್ಲಿ ಆನೆ ಹಾವಳಿ ಮೀತಿ ಮೀರಿದೆ.

ಸ್ಥಳೀಯರು ಹತ್ತಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದಾಗ ಸ್ಥಳಕ್ಕೆ ಬಂದು ಪಟಾಕಿ ಹೊಡೆದಿದ್ದೇ ಅಧಿಕಾರಿಗಳ ಸಾಧನೆ ಎಂದು ಸ್ಥಳೀಯರು ಕಿಡಿಕಾರಿದ್ದಾರೆ. ಕಳೆದೊಂದು ವರ್ಷದಲ್ಲಿ ಆನೆ ದಾಳಿಯಿಂದ ಜಿಲ್ಲೆಯಲ್ಲಿ 10ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಕಾಡಾನೆ ದಾಳಿ.. ಫಾರೆಸ್ಟ್ ವಾಚರ್​​ ಸಾವು, ಮಗನಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.