ETV Bharat / state

ಕಾಡಾನೆ ದಾಳಿಯಿಂದ ಪಾರಾದ ಕಾರ್ಮಿಕ: ಒಂಟಿ ಸಲಗ ಸೆರೆಗೆ ಜನರ ಒತ್ತಾಯ

author img

By

Published : Feb 16, 2023, 9:19 AM IST

Updated : Feb 16, 2023, 1:19 PM IST

ಕಾಡಾನೆ ದಾಳಿಯಿಂದ ಕೂದಲೆಳೆಯ ಅಂತರದಲ್ಲಿ ಪಾರಾದ ಕಾರ್ಮಿಕ - ಕಾಫಿ ತೋಟಕ್ಕೆ ಸೈಲೆಂಟ್​ ಆಗಿ ಎಂಟ್ರಿ ಕೊಟ್ಟ ಒಂಟಿ ಸಲಗ - ಆನೆ ಸೆರೆ ಹಿಡಿದು ಬೇರೆಡೆ ಸ್ಥಳಾಂತರಿಸುವಂತೆ ಜನರ ಒತ್ತಾಯ

wild elephant attack
ಕಾಡಾನೆ ದಾಳಿ

ಕಾರ್ಮಿಕರಿಂದ ಗ್ರಾಮಸ್ಥರ ಮೇಲೆ ಹಲ್ಲೆ ಆರೋಪ

ಚಿಕ್ಕಮಗಳೂರು : ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕನೋರ್ವ ಕಾಡಾನೆ ದಾಳಿಯಿಂದ ಕೂದಲೆಳೆಯ ಅಂತರದಲ್ಲಿ ಪಾರಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹೊರನಾಡು ಸಮೀಪದ ಹೆಬ್ಬಾಳೆ ಗ್ರಾಮದಲ್ಲಿ ನಡೆದಿದೆ. ಹೆಬ್ಬಾಳೆ ಸಮೀಪದ ಕಾಫಿ ತೋಟಕ್ಕೆ ಸೈಲೆಂಟ್​ ಆಗಿ ಎಂಟ್ರಿ ಕೊಟ್ಟ ಕಾಡಾನೆ ಏಕಾಏಕಿ ಕಾರ್ಮಿಕನ ಮೇಲೆ ದಾಳಿಗೆ ಮುಂದಾಗಿದೆ. ಆನೆಯನ್ನು ಕಂಡ ಕೂಡಲೇ ಕಾರ್ಮಿಕ ಕೂಗುತ್ತ ಜೀವ ಭಯದಲ್ಲಿ ಓಡಿ ಹೋಗಿದ್ದಾನೆ. ಕಾಡಾನೆ ಕೂಡ ಆತನ ಹಿಂದೆಯೇ ಓಡಿದೆ. ಸ್ವಲ್ಪ ದೂರ ಅಟ್ಟಿಸಿಕೊಂಡು ಬಂದ ಒಂಟಿ ಸಲಗ ನಂತರ ವಾಪಸ್ ಹೋಗಿದೆ.

ಅಷ್ಟೇ ಅಲ್ಲದೆ, ಬುಧವಾರ ಬೆಳಗಿನ ಜಾವ ಕಳಸ ತಾಲೂಕಿನ ಮುಂಡುಗದ ಗ್ರಾಮದ ಮನೆಯೊಂದರ ಪಕ್ಕದ ಕಾಫಿ ತೋಟದಲ್ಲಿ ಕಾಡಾನೆ ಬಂದು ನಿಂತಿತ್ತು. ಮುಂಜಾನೆ ಮನೆಯಿಂದ ಹೊರಬಂದ ಮನೆಯವರು ಆನೆಯನ್ನು ನೋಡಿ ಭಯಗೊಂಡು ಕೂಡಲೇ ಒಳಗೆ ಹೋಗಿದ್ದರು. ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನರು ಜೀವಭಯದಲ್ಲಿ ಬದುಕುವಂತಾಗಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಮೂಡಿಗೆರೆ ತಾಲೂಕಿನಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿತ್ತು. ಇದೀಗ ಆನೆಗಳ ಹಾವಳಿ ಮೂಡಿಗೆರೆಯಿಂದ ಕಳಸಕ್ಕೆ ಶಿಫ್ಟ್‌ ಆಗಿದ್ದು, ಮೂರ್ನಾಲ್ಕು ವರ್ಷದಲ್ಲಿ ಏಳೆಂಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹಾಗಾಗಿ, ಅರಣ್ಯ ಇಲಾಖೆ ಕೂಡಲೇ ಕಾಡಾನೆಯನ್ನು ಸೆರೆ ಹಿಡಿದು ಬೇರೆಡೆ ಸ್ಥಳಾಂತರ ಮಾಡಬೇಕೆಂದು ಸ್ಥಳೀಯರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಕಾಫಿ ತೋಟದಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿದ್ದ ಪುಂಡಾನೆ ಸೆರೆ.. ನಿಟ್ಟುಸಿರು ಬಿಟ್ಟ ಜನತೆ

ಬಾಂಗ್ಲಾದೇಶ ಮೂಲದ ಕಾರ್ಮಿಕರಿಂದ ಗ್ರಾಮಸ್ಥರ ಮೇಲೆ ಹಲ್ಲೆ ಆರೋಪ: ಕಾಫಿ ತೋಟದ ರೈಟರ್ ಜೊತೆ ಜಗಳವಾಡುತ್ತಿದ್ದ ವೇಳೆ ಗಲಾಟೆ ಬಿಡಿಸಲು ಬಂದ ಗ್ರಾಮಸ್ಥರ ಮೇಲೆ ಬಾಂಗ್ಲಾ ಮೂಲದ ಕಾರ್ಮಿಕರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಮಲಗಾರು ಗ್ರಾಮದಲ್ಲಿ ನಡೆದಿದ್ದು, ಹಲ್ಲೆಗೊಳಗಾದ ಗ್ರಾಮಸ್ಥರನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಹೋಬಳಿ ವ್ಯಾಪ್ತಿಯಲ್ಲಿರುವ ಮಲಗಾರು ಗ್ರಾಮದ ಕಾಫಿ ಎಸ್ಟೇಟ್‍ಗೆ ಬಾಂಗ್ಲಾದೇಶದಿಂದ ನೂರಾರು ಕಾರ್ಮಿಕರು ಕೆಲಸಕ್ಕೆ ಬಂದಿದ್ದು, ಕೆಲಸದ ಕೂಲಿ ಹಣದ ವಿಚಾರವಾಗಿ ಎಸ್ಟೇಟ್‍ನ ರೈಟರ್ ಜೊತೆ ವಾಗ್ವಾದ ನಡೆಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಜಗಳ ನಡೆದಿದೆ. ಕೂಡಲೇ ಸ್ಥಳೀಯ ಗ್ರಾಮಸ್ಥರು ಜಗಳ ಬಿಡಿಸಲು ಮುಂದಾಗಿದ್ದರಿಂದ ಕುಪಿತರಾದ ಕಾರ್ಮಿಕರು, ಗ್ರಾಮಸ್ಥರನ್ನು ಅಟ್ಟಾಡಿಸಿಕೊಂಡು ಬಂದು ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ದುಬಾರೆ ಆನೆ ಶಿಬಿರದ ಮೇಲೆ ಕಾಡಾನೆ ದಾಳಿ.. ಸಾಕಾನೆ ಗೋಪಿಗೆ ಗಾಯ.. ಪ್ರವಾಸಿಗರಿಗೆ ನಿಷೇಧ

ಹಲ್ಲೆಗೊಳಗಾದವರ ಪೈಕಿ ನಾಲ್ಕು ಮಂದಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Feb 16, 2023, 1:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.