ಚಿಕ್ಕಬಳ್ಳಾಪುರ: ನಗರದ ವಾಪಸಂದ್ರ ಸರ್ಕಾರಿ ಬಾಲಕಿಯರ ಪ್ರೌಢಶಾಲೆಗೆ ಐಪಿಎಲ್ ಕ್ರಿಕೆಟ್ ಆಟಗಾರರಾದ ಅಭಿನವ್ ಮನೋಹರ್ ಹಾಗೂ ವೈಶಾಖ್ ವಿಜಯ್ ಕುಮಾರ್ ಅವರು ಭೇಟಿ ನೀಡಿ ವಿದ್ಯಾರ್ಥಿನಿಯರಿಗೆ ಶುಭ ಹಾರೈಸಿದರು. ಕ್ರಿಕೆಟ್ ಸ್ಟಾರ್ಗಳನ್ನು ನೋಡಿದ ಖುಷಿಯಲ್ಲಿ ವಿದ್ಯಾರ್ಥಿನಿಯರು ಕುಣಿದು ಕುಪ್ಪಳಿಸಿದರು.
ಮಕ್ಕಳಿಗೆ ಸ್ಫೂರ್ತಿ ತುಂಬಲು ಬಂದ ಐಪಿಎಲ್ ಆಟಗಾರರು: ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ ಬಿ ರೆಡ್ಡಿಯವರು ದತ್ತು ಪಡೆದಿರುವ ಸರ್ಕಾರಿ ಬಾಲಕಿಯರ ಶಾಲೆ ಯಾವುದೇ ಖಾಸಗಿ ಶಾಲೆಗೆ ಕಮ್ಮಿಯಿಲ್ಲದಂತೆ ಅಭಿವೃದ್ಧಿಗೊಂಡಿದೆ. ಮಕ್ಕಳಲ್ಲಿ ಸ್ಫೂರ್ತಿ ತುಂಬುವ ಸಲುವಾಗಿ ಗುಜರಾತ್ ಟೈಟಾನ್ಸ್ ಪರ ಆಡುತ್ತಿರುವ ಅಭಿನವ್ ಮನೋಹರ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿರುವ ವಿಜಯ್ ಕುಮಾರ್ ಅವರು ಸಂದೀಪ ರೆಡ್ಡಿಯವರ ಜೊತೆ ಶಾಲೆಗೆ ಭೇಟಿ ನೀಡಿದರು. ಬಳಿಕ ಮಕ್ಕಳೊಂದಿಗೆ ಸಂವಾದ ನಡೆಸಿ, ಸ್ಪಷ್ಟ ಗುರಿಯೊಂದಿಗೆ ಚೆನ್ನಾಗಿ ವ್ಯಾಸಂಗ ಮಾಡಿ. ನೀವು ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯ ಎಂದು ಬಾಲಕಿಯರನ್ನು ಹುರಿದುಂಬಿಸಿದರು.
ಇದನ್ನೂ ಓದಿ: ಶಾಲಾ ಮಕ್ಕಳಿಂದ ರಾಕೆಟ್, ರಾಖಿ ಮಾದರಿಯ ಅಣಕು ಪ್ರದರ್ಶನ- ವಿಡಿಯೋ
ಇದೇ ವೇಳೆ ಮಾತನಾಡಿದ ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ ಬಿ ರೆಡ್ಡಿ, "ವಿದ್ಯಾರ್ಥಿನಿಯರು ಮನಸ್ಸು ಮಾಡಿದರೆ ಏನೂ ಬೇಕಾದರೂ ಮಾಡಬಹುದು. ಇಡೀ ದೇಶವನ್ನು ಒಗ್ಗೂಡಿಸುವ ಶಕ್ತಿ ಇರುವುದು ಕ್ರಿಕೆಟ್ಗೆ ಮಾತ್ರ. ಜಾತಿ, ಧರ್ಮದ ಹೆಸರಲ್ಲಿ ನಾವೆಲ್ಲ ಒಡೆದು ಹೋಗಿದ್ದೇವೆ. ಆದರೆ ಯಾವ ಬೇಧವೂ ಇಲ್ಲದೆ ಜನರು ಕ್ರಿಕೆಟ್ನ್ನು ನೋಡಿ ನಮ್ಮ ದೇಶ ಎಂಬ ಅಭಿಮಾನದಿಂದ ಸಂಭ್ರಮಿಸುತ್ತಾರೆ. ಇಂತಹ ಕ್ರೀಡೆಯಲ್ಲಿ ಪಾಲ್ಗೊಂಡು ಇಡೀ ವಿಶ್ವವೇ ಗುರುತಿಸುವಂತಹ ಆಟಗಾರರು ಇಂದು ನಮ್ಮ ಶಾಲೆಗೆ ಬಂದಿದ್ದಾರೆ. ನಿಮಗೆಲ್ಲಾ ಇಂತವರು ಸ್ಫೂರ್ತಿಯಾಗಬೇಕು. ಹೆಣ್ಣು ಮಕ್ಕಳು ಯಾವುದಕ್ಕೂ ಕಡಿಮೆಯಲ್ಲ. ಹೆಣ್ಮಕ್ಕಳೇ ಸ್ಟ್ರಾಂಗ್ ಅನ್ನೋದನ್ನು ನೀವು ಸಾಬೀತು ಮಾಡಬೇಕು" ಎಂದು ಹೇಳಿದರು.
ಬಳಿಕ ಐಪಿಎಲ್ ಕ್ರಿಕೆಟ್ ಆಟಗಾರರ ಆಗಮನದಿಂದ ಸಂತಸಗೊಂಡ ವಿದ್ಯಾರ್ಥಿಗಳು ಮಾತನಾಡಿ, ತಾವು ಕೂಡ ಭವಿಷ್ಯದಲ್ಲಿ ಕ್ರಿಕೆಟ್ ಆಟಗಾರರಾಗಬೇಕೆಂಬ ಹಂಬಲ ವ್ಯಕ್ತಪಡಿಸಿದರು. ಅಭಿನವ್ ಮನೋಹರ್ ಹಾಗು ವೈಶಾಖ್ ವಿಜಯ್ ಕುಮಾರ್ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಮನಸ್ಸಿದ್ದರೆ ಯಾರೂ ಏನು ಬೇಕಾದರೂ ಆಗಬಹುದು. ಚೆನ್ನಾಗಿ ಓದಿ ಉನ್ನತ ಮಟ್ಟಕ್ಕೆ ಹೋಗಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕ್ರಿಕೆಟಿಗ ಸುದೀಂದ್ರ ಶಿಂದೆ, ಪ್ರೌಢಶಾಲೆ ಮುಖ್ಯಶಿಕ್ಷಕಿ ಕೃಷ್ಣಕುಮಾರಿ, ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.