ಚಾಮರಾಜನಗರ: ಇಂದು ಸುರಿದ ಮಳೆಗೆ ಮನೆಯ ಗೋಡೆಯ ಕುಸಿದು ಬಿದ್ದಿದ್ದು, ಸ್ವಲ್ಪದರಲ್ಲಿಯೇ ವೃದ್ಧೆಯೊಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಾಲೂಕಿನ ಬಂಡಿಗೆರೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮದ ಮಹಾದೇವಮ್ಮ ಎಂಬ ಮುದುಕಿ ಅಪಾಯದಿಂದ ಪಾರಾಗಿದ್ದಾರೆ.
ಮನೆಯಲ್ಲಿ ನೀರಿಲ್ಲದಿದ್ದರಿಂದ ಬಾಯಾರಿಕೆಯೆಂದು ಮಳೆಯಲ್ಲೇ ನೀರು ತರಲು ಹೋದ ವೇಳೆ, ಪಕ್ಕದ ಮನೆಯ ಗೋಡೆ ಕುಸಿದು ಬಿದ್ದಿದ್ದರಿಂದ ಇವರ ಮನೆಯ ಗೋಡೆಯೂ ಬಿದ್ದಿದೆ ಎಂದು ತಿಳಿದು ಬಂದಿದೆ.
ಗೋಡೆ ಬಿದ್ದ ಸ್ಥಳದಲ್ಲೇ ಇವರು ಚಾಪೆ ಹಾಸಿ ಕುಳಿತು ಕೊಂಡಿದ್ದರಂತೆ. ಸದ್ಯ ಬಾಯಾರಿಕೆಯೇ ವೃದ್ಧೆಯ ಪ್ರಾಣ ಉಳಿಸಿದೆ ಎನ್ನುವಂತಾಗಿದೆ.
ಇನ್ನು ಚಾಮರಾಜನಗರ ಜಿಲ್ಲಾದ್ಯಂತ ಎರಡು ದಿನಗಳಿಂದ ಜೋರು ಮಳೆಯಾಗುತ್ತಿದ್ದು, ಕೊರೊನಾ ಸಂಕಷ್ಟದಲ್ಲಿ ವರುಣ ರೈತರಿಗೆ ಸಂತಸ ನೀಡಿದ್ದಾನೆ.