ಚಾಮರಾಜನಗರ: ಏಪ್ರಿಲ್ 20ರಂದು ಪತಿಯೇ ಪತ್ನಿಯನ್ನು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಮರಾಜನಗರ ಪೂರ್ವ ಠಾಣೆ ಪೊಲೀಸರು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಮೃತ ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ.
ಏಪ್ರಿಲ್ 20ರಂದು ಚಾಮರಾಜನಗರ ತಾಲೂಕಿನ ನಾಗವಳ್ಳಿ ಗ್ರಾಮದ ತೋಟದಲ್ಲಿ ಅಬ್ದುಲ್ ಹಬೀಬ್ ಎಂಬಾತ ತನ್ನ ಪತ್ನಿ ಅಜ್ರಾ ಬಾನು ಎಂಬಾಕೆಯ ಕೊಲೆ ಮಾಡಿದ್ದ. ಬಳಿಕ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾಳೆಂದು ಬಿಂಬಿಸಿದ್ದ ಎನ್ನಲಾಗಿದೆ. ಈ ಕುರಿತು ಮೃತಳ ಪೋಷಕರು ಪ್ರಕರಣ ದಾಖಲಿಸಿದ್ದರು.
ಆದರೆ ಎಫ್ಐಆರ್ನಲ್ಲಿ 9 ಜನರ ಹೆಸರು ನಮೂದಿಸಲಾಗಿತ್ತು. ಪೊಲೀಸರು ಅಬ್ದುಲ್ ಹಬೀಬ್ ಸೇರಿದಂತೆ ನಾಲ್ವರನ್ನು ಮಾತ್ರ ಬಂಧಿಸಿದ್ದಾರೆ. ಉಳಿದವರನ್ನು ಬಂಧಿಸಿಲ್ಲ ಎಂದು ಮೃತಳ ತಾಯಿ ಆರೋಪಿಸಿದ್ದಾರೆ.
ಪೋಲೀಸರ ನಿರ್ಲಕ್ಷ್ಯದಿಂದಾಗಿ ತಮಗೆ ಅನ್ಯಾಯವಾಗುತ್ತಿದ್ದು, ಪೊಲೀಸ್ ವರಿಷ್ಠಾಧಿಕಾರಿ ನ್ಯಾಯ ದೊರಕಿಸಿಕೊಡಬೇಕು. ಇಲ್ಲದಿದ್ದಲ್ಲಿ ಹೋರಾಡುತ್ತೇವೆ ಎಂದಿದ್ದಾರೆ.