ETV Bharat / state

ಮಹಾಲಯ ಅಮಾವಾಸ್ಯೆ ಹಿನ್ನೆಲೆ ಮಾದಪ್ಪನ ಬೆಟ್ಟದಲ್ಲಿ ಭಕ್ತಸಾಗರ : ಸರತಿ ಸಾಲಿನಲ್ಲಿ ನಿಂತು ಸಮಸ್ಯೆ ಆಲಿಸಿದ ಕಾರ್ಯದರ್ಶಿ

author img

By ETV Bharat Karnataka Team

Published : Oct 14, 2023, 12:51 PM IST

mahalaya amavasya
ಮಹಾಲಯ ಅಮಾವಾಸ್ಯೆ ಹಿನ್ನೆಲೆ ಮಾದಪ್ಪನ ಬೆಟ್ಟದಲ್ಲಿ ಭಕ್ತಸಾಗರ

ಮಹಾಲಯ ಅಮಾವಾಸ್ಯೆ ಹಿನ್ನೆಲೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಜನಸಾಗರವೇ ಹರಿದು ಬಂದಿದ್ದು, ದೇವಾಲಯದ ಕಾರ್ಯದರ್ಶಿ ಸರಸ್ವತಿ ಅವರು ಸರತಿ ಸಾಲಿನಲ್ಲಿ ನಿಂತು ಭಕ್ತರ ಸಮಸ್ಯೆ ಆಲಿಸಿದರು.

ಮಹಾಲಯ ಅಮಾವಾಸ್ಯೆ ಹಿನ್ನೆಲೆ ಮಾದಪ್ಪನ ಬೆಟ್ಟದಲ್ಲಿ ಭಕ್ತಸಾಗರ

ಚಾಮರಾಜನಗರ : ಕರ್ನಾಟಕದ ಪ್ರಮುಖ ದೇವಾಲಯಗಳಲ್ಲಿ ಒಂದಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾಲಯ ಅಮಾವಾಸ್ಯೆ ಜಾತ್ರೆ ಸಡಗರದಿಂದ ನಡೆಯುತ್ತಿದ್ದು, ಭಕ್ತಸಾಗರವೇ ಹರಿದು ಬರುತ್ತಿದೆ‌.

ಮಲೆ ಮಹದೇಶ್ವರ ಬೆಟ್ಟದಲ್ಲಿ ಅಕ್ಟೋಬರ್ 11 ರಿಂದ 15ರ ವರೆಗೆ ಮಹಾಲಯ ಅಮಾವಾಸ್ಯೆ ಜಾತ್ರೆ ನಡೆಯುತ್ತಿದೆ. ಜಿಲ್ಲೆ, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಸುಮಾರು 1.5 ರಿಂದ 2 ಲಕ್ಷಕ್ಕೂ ಅಧಿಕ ಭಕ್ತಾಧಿಗಳು ಆಗಮಿಸಿದ್ದಾರೆ‌. ಹೀಗಾಗಿ ವಾಹನ ದಟ್ಟಣೆ, ಹೆಚ್ಚಾಗಿ ಅಪಘಾತಗಳು ಸಂಭವಿಸುವ ಸಾಧ್ಯತೆ ಇರುವುದರಿಂದ ದ್ವಿಚಕ್ರ ವಾಹನ ಪ್ರವೇಶ ನಿರ್ಬಂಧಿಸಲಾಗಿದೆ. ಹಾಗೆಯೇ, ಅಮಾವಾಸ್ಯೆ ಪ್ರಯುಕ್ತ ಭಕ್ತರಿಗೆ ಕುಡಿಯುವ ನೀರು, ವಿಶೇಷ ದಾಸೋಹ, ನೆರಳಿನ ವ್ಯವಸ್ಥೆ ಸೇರಿದಂತೆ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಭಕ್ತರ ಸಮಸ್ಯೆ ಆಲಿಸಲು ಸರತಿ ಸಾಲಿನಲ್ಲಿ ನಿಂತ ಕಾರ್ಯದರ್ಶಿ : ಶ್ರೀ ಕ್ಷೇತ್ರ ಮಲೆಮಹದೇಶ್ವರ ಬೆಟ್ಟದಲ್ಲಿ ಇರುವ ಮುಖ್ಯ ಸಮಸ್ಯೆಗಳ ಬಗ್ಗೆ ಭಕ್ತರಿಂದಲೇ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಅವರು ಸರತಿ ಸಾಲಿನಲ್ಲಿ ತೆರಳಿ ಮಾಹಿತಿ ಪಡೆದುಕೊಂಡರು.

ಕಾರ್ಯದರ್ಶಿಯಾಗಿ ಸರಸ್ವತಿ ಅವರು ಅಧಿಕಾರ ವಹಿಸಿಕೊಂಡು ಕೇವಲ ಎರಡು ತಿಂಗಳಷ್ಟೇ ಆಗಿದೆ. ಇದು ಅವರಿಗೆ ಮೊದಲನೇ ಜಾತ್ರೆಯಾಗಿದ್ದು, ಸಮಸ್ಯೆಗಳ ಬಗ್ಗೆ ಭಕ್ತರಿಂದಲೇ ಮಾಹಿತಿ ಪಡೆದುಕೊಂಡು ಮುಂದಿನ ಜಾತ್ರಾ ಮಹೋತ್ಸವಕ್ಕೆ ಸರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಭರವಸೆ ವ್ಯಕ್ತಪಡಿಸಿದರು. ಜೊತೆಗೆ, ಪ್ರಾಧಿಕಾರದ ವತಿಯಿಂದಲೇ ಭಕ್ತರಿಗೆ ಕಡಿಮೆ ದುಡ್ಡಿನಲ್ಲಿ ರೂಂ ವಿತರಿಸುತ್ತಿದ್ದೇವೆ, ಭಕ್ತಾದಿಗಳು ಖಾಸಗಿ ವಸತಿಗೃಹಗಳನ್ನು ಆಶ್ರಯಿಸದೇ ಪ್ರಾಧಿಕಾರದ ವಸತಿಗೃಹಗಳನ್ನು ಪಡೆಯಬೇಕು ಎಂದು ಸಲಹೆ ನೀಡಿದರು.

ಇದನ್ನೂ ಓದಿ : ಕೋಟಿ ಒಡೆಯ ಮಾದಪ್ಪ: 36 ದಿನಕ್ಕೆ ಹುಂಡಿಯಲ್ಲಿ 2.38 ಕೋಟಿ ರೂ. ಸಂಗ್ರಹ

ಈ ವೇಳೆ ಭಕ್ತ ಮಹಿಳೆಯೊಬ್ಬರು ಮಾತನಾಡಿ, ದೇವಾಲಯದ ವತಿಯಿಂದ ನೆರಳಿನ ವ್ಯವಸ್ಥೆ ಕಲ್ಪಿಸಲಾಗಿದೆ. ಇದರ ಬದಲು ಶಾಶ್ವತವಾಗಿ ಶೀಟನ್ನು ಅಳವಡಿಸಿದರೆ ಎಲ್ಲಾ ಸಂದರ್ಭಗಳಲ್ಲೂ ಅನುಕೂಲವಾಗುತ್ತೆ ಎಂದರು.

ನಂಜನಗೂಡಿನ ಭಕ್ತರೊಬ್ಬರು ಮಾತನಾಡಿ, ಅಂತರಗಂಗೆ, ಕಟ್ಟೆ ಬಸವೇಶ್ವರ ಹಾಗೂ ದೇವಾಲಯದ ಒಳಗಡೆ ಇರುವ ದೇವಾಲಯಗಳಲ್ಲಿ ಕಾಯಿ ಒಡೆಯಲು ಹಾಗೂ ವಿಭೂತಿ ಹಾಕಲು 5, 10, 20 ರೂಪಾಯಿ ಪಡೆಯುತ್ತಿದ್ದಾರೆ, ಈ ಬಗ್ಗೆ ಕ್ರಮ ವಹಿಸಬೇಕು. ಜೊತೆಗೆ, ಸಮರ್ಪಕ ಶುದ್ಧ ಕುಡಿಯುವ ನೀರಿನ ಘಟಕವನ್ನು ತೆರೆದರೆ ಅನುಕೂಲವಾಗಲಿದೆ, ಆದ್ದರಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಎಂದು ಮನವಿ ಮಾಡಿದರು.

ಇದನ್ನೂ ಓದಿ : ಭೀಮನ ಅಮಾವಾಸ್ಯೆ : ಮಾದಪ್ಪನ ಬೆಟ್ಟಕ್ಕೆ ಹರಿದು ಬಂದ ಭಕ್ತಸಾಗರ - ವಿಡಿಯೋ

ಭಕ್ತಾದಿಗಳ ಸಲಹೆಯನ್ನು ಆಲಿಸಿದ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಅವರು, ಮುಂದಿನ ದಿನಗಳಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಂಬಂಧಪಟ್ಟ ಹಿರಿಯರ ಜೊತೆ ಚರ್ಚಿಸಿ ಕ್ರಮ ವಹಿಸುತ್ತೇನೆ. ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಅನುಕೂಲ ಕಲ್ಪಿಸುವುದೇ ನಮ್ಮ ಮುಖ್ಯ ಉದ್ದೇಶವಾಗಿದೆ ಎಂದರು.

ಇದನ್ನೂ ಓದಿ : ಮಾದಪ್ಪನ ಬೆಟ್ಟದಲ್ಲಿ ಸಾಮೂಹಿಕ ವಿವಾಹ.. ಸಾಲ ಮಾಡಿ ಅದ್ಧೂರಿ ಮದುವೆ ಮಾಡುವುದು ಬೇಡ : ಸಿಎಂ ಕಿವಿಮಾತು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.