ಚಾಮರಾಜನಗರ: ತಾಲೂಕಿನ ಹೊನ್ನಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗುರುವಾರ ಭಾರಿ ಮಳೆ ಸುರಿದಿದೆ.
ಗುಡುಗು-ಸಿಡಿಲು ಆರ್ಭಟದೊಂದಿಗೆ ಹೊನ್ನಳ್ಳಿಯಲ್ಲಿ ಬರೋಬ್ಬರಿ 95 ಮಿ.ಮೀ ಮಳೆಯಾಗಿದ್ದು, ಉಳಿದಂತೆ ಇರಸವಾಡಿಯಲ್ಲಿ 62 ಮಿ.ಮೀ, ಟಗರಪುರ, ಹೊಂಗನೂರಿನಲ್ಲಿ 58, ಮಸಣಪುರದಲ್ಲಿ 57, ಪುಣಜನೂರಿನಲ್ಲಿ 56, ಯರಗನಹಳ್ಳಿಯಲ್ಲಿ 50, ಗುಂಬಳ್ಳಿಯಲ್ಲಿ 46, ಯರಿಯೂರಿನಲ್ಲಿ 44 ಮಿ.ಮೀ ಮಳೆಯಾಗಿದೆ.
ಹವಾಮಾನ ಇಲಾಖೆಯ ಪ್ರಕಾರ ಜಿಲ್ಲೆಯಲ್ಲಿ 35-40 ಕಿ.ಮೀ ವೇಗದಲ್ಲಿ ಗುರುವಾರ ಗಾಳಿ ಬೀಸಿದ್ದು, ಸಿಡಿಲು-ಗುಡುಗಿನ ಆರ್ಭಟ ಜೋರಾಗಿತ್ತು. ಚಾಮರಾಜನಗರ, ಗುಂಡ್ಲುಪೇಟೆ ಮತ್ತು ಕೊಳ್ಳೇಗಾಲ ಭಾಗದಲ್ಲಿ ಉತ್ತಮ ಮಳೆಯಾಗಿದೆ.
ಭಾರೀ ಗಾಳಿಗೆ ಬಾಳೆ ಬೆಳೆಗಾರರು, ಸಾಧಾರಣ ಛಾವಣಿ ಮನೆ ನಿವಾಸಿಗಳು ಆತಂಕ ಪಡುವ ಸ್ಥಿತಿ ನಿರ್ಮಾಣವಾಗಿದೆ. ಇದೇ ರೀತಿ ಗಾಳಿಯ ಆರ್ಭಟ ಕೆಲ ದಿನಗಳವರೆಗೆ ಮುಂದುವರೆಯಬಹುದು ಎಂದು ಹವಾಮಾನ ಇಲಾಖೆ ಸೂಚಿಸಿದೆ.
ಕೇರಳಕ್ಕೆ ಕೆಲವೇ ದಿನಗಳಲ್ಲಿ ಮುಂಗಾರು ಪ್ರವೇಶವಾಗಲಿದ್ದು, ರಾಜ್ಯಕ್ಕೆ ಗಡಿಜಿಲ್ಲೆಯ ಮೂಲಕವೇ ವರುಣ ಆಗಮಿಸಲಿದ್ದಾನೆ. ಈ ಬಾರಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ಕೃಷಿ ಚಟುವಟಿಕೆಗಳು ಈಗಾಗಲೇ ಗರಿಗೆದರಿವೆ.