ETV Bharat / state

ಹಲ್ಲುನೋವಿಗೆ ಚಿಕಿತ್ಸೆ ಪಡೆದ ಮಹಿಳೆಗೆ ಅಂಗವೈಕಲ್ಯ: ವೈದ್ಯನಿಗೆ 9.2 ಲಕ್ಷ ರೂ. ದಂಡ

author img

By ETV Bharat Karnataka Team

Published : Oct 6, 2023, 1:08 PM IST

Updated : Oct 6, 2023, 6:53 PM IST

ಸೇವಾ ನ್ಯೂನತೆ ಮತ್ತು ಚಿಕಿತ್ಸೆ ನೀಡುವಾಗ ಬೇಜವ್ದಾರಿ ತೋರಿರುವುದು ವಿಚಾರಣೆ ಹಾಗೂ ವೈದ್ಯಕೀಯ ದಾಖಲೆಯಲ್ಲಿ ದೃಢಪಟ್ಟ ಹಿನ್ನೆಲೆಯಲ್ಲಿ ಜಿಲ್ಲಾ ಗ್ರಾಹಕರ ನ್ಯಾಯಾಲಯವು ದಂತ ವೈದ್ಯರೊಬ್ಬರಿಗೆ ದಂಡ ವಿಧಿಸಿದೆ.

ಗ್ರಾಹಕರ ನ್ಯಾಯಾಲಯ
ಗ್ರಾಹಕರ ನ್ಯಾಯಾಲಯ

ಚಾಮರಾಜನಗರ : ಹಲ್ಲು ನೋವಿಗೆ ಚಿಕಿತ್ಸೆ ಪಡೆದುಕೊಂಡ ಮಹಿಳೆಯೊಬ್ಬರು ವೈದ್ಯರ ನಿರ್ಲಕ್ಷ್ಯದಿಂದಾಗಿ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗಿರುವ ಪ್ರಕರಣ ಜರುಗಿದ್ದು, ವೈದ್ಯನಿಗೆ ಜಿಲ್ಲಾ ಗ್ರಾಹಕರ ನ್ಯಾಯಾಲಯ 9.2 ಲಕ್ಷ ರೂ. ದಂಡ ವಿಧಿಸಿದೆ.

ಚಾಮರಾಜನಗರದ ನಿವಾಸಿ ಸುಕನ್ಯಾ ಎಂಬವರು ಚಿಕಿತ್ಸೆ ಬಳಿಕ ಅಂಗವೈಕಲ್ಯಕ್ಕೆ ಒಳಗಾದ ಮಹಿಳೆಯಾಗಿದ್ದು, ಜಿಲ್ಲಾ ಗ್ರಾಹಕರ ನ್ಯಾಯಾಲಯವು ಚಾಮರಾಜನಗರದ ಗಿರಿಜಾ ಡೆಂಟಲ್ ಕೇರ್​ನ ದಂತ ವೈದ್ಯ ಮಂಜುನಾಥ್‍ ಎಂಬುವವರಿಗೆ 9,24,605 ರೂ.ಗಳನ್ನು ದಂಡದ ರೂಪದಲ್ಲಿ ಪರಿಹಾರ ನೀಡುವಂತೆ ಆದೇಶ ನೀಡಿದೆ.

ಸೇವಾ ನ್ಯೂನತೆ ಮತ್ತು ಚಿಕಿತ್ಸೆ ನೀಡುವಾಗ ಬೇಜವ್ದಾರಿ ತೋರಿರುವುದು ವಿಚಾರಣೆ ಹಾಗೂ ವೈದ್ಯಕೀಯ ದಾಖಲೆಯಲ್ಲಿ ದೃಢಪಟ್ಟ ಹಿನ್ನೆಲೆ ಅಲ್ಲದೇ, ರೋಗಿಗೆ ಪ್ರಾಥಮಿಕ ಹಂತದ ಪರೀಕ್ಷೆಗಳನ್ನು ಮಾಡದೇ ನೇರವಾಗಿ ಇಂಜೆಕ್ಷನ್ ನೀಡಿರುವುದು ಸಾಬೀತಾಗಿದೆ. ಹೀಗಾಗಿ ಚಾಮರಾಜನಗರ ಗ್ರಾಹಕರ ನ್ಯಾಯಾಲಯದ ನ್ಯಾ. ಎಂ.ವಿ ಭಾರತಿ ಹಾಗೂ ಸದಸ್ಯರಾದ ಕೆ.ಎಸ್ ರಾಜು ಅವರಿದ್ದ ಪೀಠ ಸುಕನ್ಯಾ ಅವರಿಗೆ ವೈದ್ಯಕೀಯ ವೆಚ್ಚ 6,14,605 ರೂ. ಹಾಗೂ 3 ಲಕ್ಷ ರೂ. ಪರಿಹಾರ ಮತ್ತು 10 ಸಾವಿರ ದಂಡ ಸೇರಿ 9,24,605 ರೂ.ಗಳನ್ನು 30 ದಿನಗಳಲ್ಲಿ ಪಾವತಿ ಮಾಡುವಂತೆ ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ಹಿನ್ನೆಲೆ : ''ಚಾಮರಾಜನಗರ ರಥದ ಬೀದಿಯಲ್ಲಿರುವ ಲೇಟ್ ಕೆ.ಬಿ. ಸುಂದರ್ ಅವರ ಪತ್ನಿ ಸುಕನ್ಯಾ ಅವರು 2021ರ ಫೆಬ್ರವರಿ 3 ರಂದು ಆಗ್ರಹಾರ ಬೀದಿಯಲ್ಲಿರುವ ಗಿರಿಜಾ ಡೆಂಟಲ್ ಕೇರ್​ನ ವೈದ್ಯ ಡಾ. ಮಂಜುನಾಥ್ ಅವರಿಗೆ ಹಲ್ಲುನೋವಿನ ಚಿಕಿತ್ಸೆ ಪಡೆಯಲು ಹೋಗಿದ್ದರು. ಈ ವೇಳೆ ಅನಸ್ಥೇಷಿಯಾ ನೀಡಿದ ಪರಿಣಾಮ ತೀವ್ರ ನಿತ್ರಾಣಗೊಂಡು ಕುಸಿದು ಬಿದ್ದಿದ್ದರು''.

''ವೈದ್ಯ ಮಂಜುನಾಥ್ ಹತ್ತಿರದಲ್ಲಿದ್ದ ಸರ್ಕಾರಿ ಅಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯದೇ ದೂರದ ಮರಿಯಾಲದ ಬಳಿ ಇದ್ದ ಬಸವರಾಜೇಂದ್ರ ಅಸ್ಪತ್ರೆಗೆ ದಾಖಲು ಮಾಡಿದ್ದರು. ಬಳಿಕ ಅಲ್ಲಿನ ವೈದ್ಯರ ಸೂಚನೆಯಂತೆ ಮೈಸೂರಿನ ನಾರಾಯಣ ಅಸ್ಪತ್ರೆಗೆ ಸೇರ್ಪಡೆ ಮಾಡಿದ್ದರು. ಒಂದು ವಾರಗಳ ಕಾಲ ತುರ್ತು ಚಿಕಿತ್ಸೆ ಘಟಕದಲ್ಲಿ ಚಿಕಿತ್ಸೆ ಪಡೆದು ಲಕ್ಷಾಂತರ ರೂ.ಗಳನ್ನು ಖರ್ಚು ಮಾಡಿ ಸುಕನ್ಯಾ ಅವರ ಜೀವ ಉಳಿಸಿಕೊಳ್ಳಲಾಗಿದೆ'' ಎಂದು ಪುತ್ರ ರವಿಕುಮಾರ್ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.

ವೈದ್ಯರು ತೋರಿದ ನಿರ್ಲಕ್ಷ್ಯದಿಂದಾಗಿ ಸುಕನ್ಯಾ ಅವರಿಗೆ ಈ ರೀತಿಯಾಗಿದೆ ಎಂದು ವೈದ್ಯಕೀಯ ಅಸ್ಪತ್ರೆ, ಜಿಲ್ಲಾ ಆರೋಗ್ಯ ಮತ್ತುಕುಟುಂಬ ಕಲ್ಯಾಣಾಧಿಕಾರಿಗಳಿಗೆ ದೂರು ನೀಡಲಾಗಿತ್ತು. ಅದರೆ, ಯಾವುದೇ ಪ್ರಯೋಜನವಾಗದ ಕಾರಣ ಒಂದು ವರ್ಷಗಳ ಕಾಲ ಚಿಕಿತ್ಸೆ ಪಡೆದುಕೊಂಡು ಬಂದ ನಂತರ ಪುತ್ರ ರವಿಕುಮಾರ್ ಜಿಲ್ಲಾ ಗ್ರಾಹಕರ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಿದ್ದರು.

''2022ರ ಮಾರ್ಚ್25 ರಂದು ವೈದ್ಯರ ವಿರುದ್ಧ ದಾವೆ ಹೂಡಿದ್ದರು. ನ್ಯಾಯಾಲಯವು ಆರೋಪಿಯಾಗಿದ್ದ ಡಾ.ಮಂಜುನಾಥ್ ಅವರಿಗೆ ಸಮನ್ಸ್ ಜಾರಿ ಮಾಡಿ, ವಿಚಾರಣೆಗೆ ಹಾಜರಾಗಿ ವೈದ್ಯಕೀಯ ದಾಖಲಾತಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಸೂಚನೆ ನೀಡಿತ್ತು. ಒಂದು ವರ್ಷ ನಾಲ್ಕು ತಿಂಗಳು ಕಾಲ ವಿಚಾರಣೆ ಮಾಡಿ, ಅನೇಕ ತಜ್ಞ ವೈದ್ಯರು ಅಭಿಪ್ರಾಯಗಳನ್ನು ಸಂಗ್ರಹಿಸಿ ಅಂತಿಮವಾಗಿ ವೈದ್ಯರ ಸೇವಾ ನ್ಯೂನತೆ, ಬೇಜವಾಬ್ದಾರಿಯಿಂದ ಮಹಿಳೆಯು ಶಾಶ್ವತವಾಗಿ ಎಡ ಕೈ ಮತ್ತು ಎಡ ಕಾಲಿನ ಸ್ವಾಧೀನವನ್ನು ಕಳೆದುಕೊಳ್ಳುವಂತಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ ಈ ಆದೇಶ ನೀಡಿದ್ದಾರೆ. ಇನ್ನು, ಕಳೆದ ಆ.29 ರಂದು 30 ದಿನಗಳ‌ ಒಳಗಾಗಿ ಪರಿಹಾರ ನೀಡುವಂತೆ ಆದೇಶ ನೀಡಿದ್ದು, ನಮಗಿನ್ನೂ ಪರಿಹಾರ ಸಿಕ್ಕಿಲ್ಲ'' ಎಂದು ಸುಕನ್ಯಾ ಅವರ ಪುತ್ರ ರವಿಕುಮಾರ್ ಆರೋಪ ಮಾಡಿದ್ದಾರೆ.

ಇದನ್ನೂ ಓದಿ : ಕ್ರೆಡಿಟ್​ ಕಾರ್ಡ್ ಹಣ ಪಾವತಿ ಬಳಿಕವೂ ಇನ್ನೂ ಬಾಕಿಯಿದೆ ಎಂದ ಬ್ಯಾಂಕ್​ಗೆ 5 ಸಾವಿರ ದಂಡ ವಿಧಿಸಿದ ಕೋರ್ಟ್

Last Updated : Oct 6, 2023, 6:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.