ETV Bharat / state

ಕ್ರೆಡಿಟ್​ ಕಾರ್ಡ್ ಹಣ ಪಾವತಿ ಬಳಿಕವೂ ಇನ್ನೂ ಬಾಕಿಯಿದೆ ಎಂದ ಬ್ಯಾಂಕ್​ಗೆ 5 ಸಾವಿರ ದಂಡ ವಿಧಿಸಿದ ಕೋರ್ಟ್

author img

By ETV Bharat Karnataka Team

Published : Sep 6, 2023, 7:51 PM IST

Consumer Court fined Private Bank: ಕ್ರೆಡಿಟ್​ ಕಾರ್ಡ್​​ ಹಣ ಪಾವತಿ ಪ್ರಕರಣ ಸಂಬಂಧ ಖಾಸಗಿ ಬ್ಯಾಂಕ್​ವೊಂದಕ್ಕೆ ಗ್ರಾಹಕರ ನ್ಯಾಯಾಲಯವು ದಂಡ ವಿಧಿಸಿದೆ.

consumer-court-fined-private-bank-in-credit-card-case
ಕ್ರೆಡಿಟ್​ ಕಾರ್ಡ್ ಹಣ ಪಾವತಿ ಬಳಿಕವೂ ಇನ್ನೂ ಬಾಕಿಯಿದೆ ಎಂದು ಬ್ಯಾಂಕ್​ಗೆ 5 ಸಾವಿರ ದಂಡ

ಬೆಂಗಳೂರು : ಕ್ರೆಡಿಟ್​ ಕಾರ್ಡ್​​ ಸಂಪೂರ್ಣ ಮೊತ್ತವನ್ನು ಪಾವತಿಸಿದ ಬಳಿಕವೂ 6 ಸಾವಿರ ರೂ. ಪಾವತಿ ಮಾಡುವಂತೆ ಗ್ರಾಹಕರೊಬ್ಬರಿಗೆ ಸೂಚನೆ ನೀಡಿದ್ದ ಖಾಸಗಿ ಬ್ಯಾಂಕ್​ವೊಂದಕ್ಕೆ ಗ್ರಾಹಕರ ನ್ಯಾಯಾಲಯವು 5 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ. ಅಲ್ಲದೇ, ನೋ ಡ್ಯೂ ಸರ್ಟಿಫಿಕೆಟ್​ ನೀಡುವಂತೆ ಸೂಚನೆ ನೀಡಿದ್ದಲ್ಲದೇ, ದಂಡದ ಮೊತ್ತವನ್ನು ಆದೇಶ ಪ್ರತಿ ಲಭ್ಯವಾದ 45 ದಿನಗಳಲ್ಲಿ ಪಾವತಿಸಬೇಕು. ಇಲ್ಲವಾದಲ್ಲಿ ಮಾಸಿಕ ಶೇಕಡಾ 9ರಷ್ಟು ಬಡ್ಡಿಯೊಂದಿಗೆ ಪಾವತಿ ಮಾಡಬೇಕು ಎಂದು ನಿರ್ದೇಶನ ನೀಡಿದೆ.

ಬೆಂಗಳೂರಿನ ಆಶೋಕ ನಗರದ ಹಿರಿಯ ನಾಗರಿಕರಾದ ಪಿ.ವಿ. ರಮೇಶ್​ ಕುಮಾರ್​ ಸಲ್ಲಿಸಿದ್ದ ದೂರನ್ನು ವಿಚಾರಣೆ ನಡೆಸಿದ ನಗರದ 3ನೇ ಹೆಚ್ಚುವರಿ ಗ್ರಾಹಕರ ಪರಿಹಾರ ವೇದಿಕೆಯ ಅಧ್ಯಕ್ಷರಾದ ಕೆ. ಶಿವರಾಮ ಮತ್ತು ಸದಸ್ಯರಾದ ಚಂದ್ರಶೇಖರ್ ಎಸ್​. ನೋಲ ಅವರಿದ್ದ ಪೀಠ ಈ ಆದೇಶ ಮಾಡಿದೆ. ದೂರುದಾರರ ಕ್ರೆಡಿಟ್​ ಕಾರ್ಡ್​​ನಲ್ಲಿ 35 ಪೈಸೆ ಬಾಕಿಯಿದೆ ಎಂದು ಬ್ಯಾಂಕ್​ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ವಿಚಾರಣೆಯಲ್ಲಿ 595 ರೂ.ಗಳನ್ನು ಪಾವತಿಸಿಕೊಂಡಿದ್ದಾರೆ. ಇದಾದ ಬಳಿಕ ವಿನಾಕಾರಣ 6 ಸಾವಿರ ರೂ. ಬಾಕಿಯಿದೆ ಎಂಬುದಾಗಿ ಬ್ಯಾಂಕ್​ ತಿಳಿಸಿದೆ. ಅಲ್ಲದೆ, ದೂರುದಾರರಿಗೆ ಬ್ಯಾಂಕ್​ನವರು ಪದೇ ಪದೆ ಕರೆ ಮಾಡಿ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ಹಿನ್ನೆಲೆ: ದೂರುದಾರರಾದ ರಮೇಶ್​ ಕುಮಾರ್​ ಅವರು ಖಾಸಗಿ ಬ್ಯಾಂಕ್​ನಿಂದ ಕ್ರೆಡಿಟ್​ ಕಾರ್ಡ್ ಪಡೆದುಕೊಂಡಿದ್ದು, ನಾಲ್ಕು ವರ್ಷಗಳ ಕಾಲ ಬಳಕೆ ಮಾಡಿದ ಹಣವನ್ನು ಕಾಲ ಕಾಲಕ್ಕೆ ಪಾವತಿ ಮಾಡುತ್ತಿದ್ದರು. ಈ ನಡುವೆ ಕೊರೊನಾ ಸಾಂಕ್ರಾಮಿಕ ರೋಗ ಬಂದ ಸಂದರ್ಭದಲ್ಲಿ ಕಾರ್ಡ್​​ನ್ನು ಸ್ಥಗಿತಗೊಳಿಸುವಂತೆ ಸಂಬಂಧಪಟ್ಟ ಬ್ಯಾಂಕ್​ ಅಧಿಕಾರಿಗಳಿಗೆ ಕೋರಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಬ್ಯಾಂಕ್​ ಅಧಿಕಾರಿಗಳು ಕಾರ್ಡ್​​ನ್ನು ನಾಶ ಮಾಡುವಂತೆ ಸಲಹೆ ನೀಡಿದ್ದರು. ಆದರೆ, ಇದಾದ ಬಳಿಕವೂ ಬ್ಯಾಂಕ್​ ಅಧಿಕಾರಿಗಳು ಬಾಕಿ ಹಣ ಪಾವತಿ ಮಾಡುವಂತೆ ಕೋರಿ ಪದೇ ಪದೇ ಕರೆ ಮಾಡುತ್ತಿದ್ದರು.

ಈ ನಡುವೆ ಬ್ಯಾಂಕ್​ಗೆ ಭೇಟಿ ನೀಡಿದ್ದ ದೂರುದಾರರು, ಬಾಕಿ ಮೊತ್ತ 39 ಪೈಸೆ ಬಾಕಿ ಇದೆ ಎಂದು ತಿಳಿಸಿದ್ದರು. ಮತ್ತೆ ಪರಿಶೀಲನೆ ನಡೆಸಿ 595 ರೂ.ಗಳನ್ನು ಪಾವತಿಗೆ ಸೂಚನೆ ನೀಡಿದ್ದರು. ಇದರಂತೆ ಬಾಕಿ ಮೊತ್ತವನ್ನು ಪಾವತಿಸಿದ್ದರು. ಆದರೂ, ಬ್ಯಾಂಕ್​ ಅಧಿಕಾರಿಗಳು 6 ಸಾವಿರ ರೂ. ಪಾವತಿ ಮಾಡಬೇಕು ಎಂದು ಸೂಚನೆ ನೀಡಿದ್ದರು. ಅಲ್ಲದೆ, ಪದೇ ಪದೆ ಕರೆ ಮಾಡಿ ಸುಮಾರು 2 ವರ್ಷಗಳ ಕಾಲ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದರು. ಇದನ್ನು ಪ್ರಶ್ನಿಸಿ ರಮೇಶ್​ ಕುಮಾರ್​ ಗ್ರಾಹಕರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ವೇಳೆ ದೂರುದಾರರ ಪರ ವಕೀಲರು, 100 ರೂ.ಗಳಿಗಿಂತ ಕಡಿಮೆ ಮೊತ್ತ ಬಾಕಿ ಇದ್ದಲ್ಲಿ ಬ್ಯಾಂಕ್​ನಿಂದ ಸ್ಟೇಟ್​​ಮೆಂಟ್​ ನೀಡುವಂತಿಲ್ಲ. ಅಲ್ಲದೆ, ಬ್ಯಾಂಕ್​ ದೂರುದಾರರಿಗೆ 35 ಪೈಸೆ ಮಾತ್ರ ಬಾಕಿ ಇದೆ ಎಂದಿದೆ ಎಂದು ವಾದ ಮಂಡಿಸಿದ್ದರು. ಈ ಅಂಶವನ್ನು ಬ್ಯಾಂಕ್​ನ ವಕೀಲರು ಒಪ್ಪಿಕೊಂಡಿದ್ದರು. ವಾದ ಆಲಿಸಿದ ಪೀಠ, ಅರ್ಜಿಯನ್ನು ಪುರಸ್ಕರಿಸಿ ಬ್ಯಾಂಕ್​ಗೆ ದಂಡ ವಿಧಿಸಿ ಆದೇಶಿಸಿದೆ.

ಇದನ್ನೂ ಓದಿ: ನ್ಯಾಯಾಲಯಕ್ಕೆ ಹಾಜರಾಗದ ಶಶಿಕಲಾಗೆ ಜಾಮೀನುರಹಿತ ವಾರಂಟ್​ ಆದೇಶಿಸಿದ ಲೋಕಾಯುಕ್ತ ಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.