ETV Bharat / state

ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಬರೆದಿರುವ ಪತ್ರಕ್ಕೆ ನಾನೂ ಸಹಿ ಹಾಕಿದ್ದೇನೆ, ಅದರಲ್ಲಿ ತಪ್ಪೇನಿಲ್ಲ: ಶಾಸಕ ಬಸವರಾಜ ರಾಯರೆಡ್ಡಿ

author img

By

Published : Jul 25, 2023, 5:22 PM IST

Updated : Jul 25, 2023, 7:22 PM IST

mla-basavaraja-rayareddy-reaction-on-legislative-party-meeting
ಶಾಸಕಾಂಗ ಪಕ್ಷದ ಸಭೆ ಕರೆಯಲು ನಾನು ಸಹಿ ಹಾಕಿದ್ದೇನೆ, ಅದರಲ್ಲಿ ತಪ್ಪೇನಿಲ್ಲ: ಶಾಸಕ ಬಸವರಾಜ ರಾಯರೆಡ್ಡಿ

ವೈಯುಕ್ತಿಕವಾಗಿ ನಮಗೆ ಯಾವುದೇ ರೀತಿಯಲ್ಲಿ ಅಸಮಾಧಾನವಿಲ್ಲ. ಕೆಲವರು ಹೊಸ ಶಾಸಕರು ಮತ್ತು ಸಚಿವರಾಗಿದ್ದಾರೆ. ಸಂಪರ್ಕ ಸಂಬಂಧ ಸಭೆ ಕರೆಯಿರಿ ಅಂತ ಹೇಳಿದ್ದಾರೆ ಎಂದು ಬಸವರಾಜ ರಾಯರೆಡ್ಡಿ ತಿಳಿಸಿದ್ದಾರೆ.

ಶಾಸಕ ಬಸವರಾಜ ರಾಯರೆಡ್ಡಿ

ವಿಜಯನಗರ: ಅಭಿವೃದ್ಧಿ ವಿಚಾರದಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆಯಬೇಕು ಅಂತ ಆಳಂದ ಶಾಸಕ ಬಿ. ಆರ್. ಪಾಟೀಲ ಮತ್ತು ಕೆಲವರು ಪತ್ರ ಬರೆದಿದ್ದಾರೆ. ಆ ಪತ್ರಕ್ಕೆ ನಾನು ಕೂಡ ಸಹಿ ಹಾಕಿದ್ದೇನೆ, ಅದರಲ್ಲಿ ತಪ್ಪೇನಿಲ್ಲ ಎಂದು ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ ಹೇಳಿದ್ದಾರೆ. ಹೊಸಪೇಟೆಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಲವೊಂದು ಕಮ್ಯುನಿಕೇಷನ್ ಗ್ಯಾಪ್​ ವಿಚಾರವಾಗಿ ಈ ರೀತಿಯಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆಯಿರಿ ಅಂತ ಹೇಳಿದ್ದಾರೆ ಅಷ್ಟೇ‌ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದು ನಮಗೆ ಅಸಮಾಧಾನ ಅಂತ ಅನಿಸೋಲ್ಲಾ, ವೈಯುಕ್ತಿಕವಾಗಿ ನಮಗೆ ಯಾವುದೇ ರೀತಿಯಲ್ಲಿ ಅಸಮಾಧಾನವಿಲ್ಲಾ‌. ಕೆಲವರು, ಹೊಸ ಶಾಸಕರಾಗಿದ್ದಾರೆ, ಸಚಿವರಾಗಿದ್ದಾರೆ. ಸಂಪರ್ಕ ಸಂಬಂಧ ಸಭೆ ಕರೆಯಿರಿ ಅಂತ ಹೇಳಿದ್ದಾರೆ, ಸಿಎಂ ಸಭೆ ಕರೆಯೋಕೆ ಒಪ್ಪಿದ್ದಾರೆ. ಸದ್ಯ ಸರ್ಕಾರವೂ ಯಾವುದೇ ರೀತಿಯಲ್ಲಿ ಸಮಸ್ಯೆಯಿಲ್ಲದೇ ನಡೆಯುತ್ತಿದೆ. ಸರ್ಕಾರ ಈಗ ತಾನೇ ರಚನೆಯಾಗಿದೆ, ಸರ್ಕಾರದಿಂದ ಒಳ್ಳೆಯ ಕೆಲಸ ನಡೆಯುತ್ತಿದೆ ಎಂದು ರಾಯರೆಡ್ಡಿ ಹೇಳಿದರು.

ಸಿದ್ದರಾಮಯ್ಯ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಕೆಲಸ ಮಾಡುತ್ತಿಲ್ಲ ಅಂದರೆ, ಯಾವ ವೈರಿಯೂ ಕೂಡ ಮೆಚ್ಚಲ್ಲಾ. ವೈಯುಕ್ತಿಕ ಆಸೆ ಆಮಿಷಗಳು ಬೇರೆ, ಕೆಲಸದಲ್ಲಿ ಬೆಸ್ಟ್ ಗೌರ್ಮೆಂಟ್ ಇನ್ ದ ಇಂಡಿಯಾ. ಶಾಸಕಾಂಗ ಪಕ್ಷದ ಸಭೆ ಕರೆಯಬೇಕು ಅಂತ ಶಾಸಕರ ಒತ್ತಾಯ ಬಹಳ ಇತ್ತು. ನಾನು ಶಾಸಕಾಂಗ ಪಕ್ಷದ ಸಭೆ ಕರೆಯಿರಿ ಅಂತ ಹೇಳಿದವನಲ್ಲ. ಆಳಂದ ಶಾಸಕರು ಕೇಳಿದ್ದಾರೆ, ಅದಕ್ಕೆ ನಾನು ಸಹಿ ಮಾಡಿದ್ದೇನೆ. ಸರ್ಕಾರ ಶಾಸಕಾಂಗದ ನಡುವೆ ಸೌಹಾರ್ದತೆ ಇರಲಿ ಅಂತ ಹೇಳಿದ್ದಾರೆ. ಅದರಲ್ಲಿ ತಪ್ಪೇನಿಲ್ಲ. ನಾನು ಬಹಳ ಸ್ಟ್ರೈಟ್ ಮತ್ತು ಫ್ರಾಂಕ್ ಮ್ಯಾನ್ ಎಂದು ಶಾಸಕ ರಾಯರೆಡ್ಡಿ ತಿಳಿಸಿದರು.

ಸಿದ್ದರಾಮಯ್ಯನವರು ಪ್ರಸ್ತುತ ಭಾರತದ ಅತ್ಯುತ್ತಮ ಮುಖ್ಯಮಂತ್ರಿಗಳಲ್ಲಿ ಒಬ್ಬರು. ಸಿದ್ದರಾಮಯ್ಯ ಐದು ವರ್ಷ ಮುಂದುವರೆಯೋದು ಅಂತ ಕೆಲವರು, ಡಿಕೆಶಿ ಆಗಲಿ ಅಂತ ಇನ್ನೂ ಕೆಲವರು ಹೇಳ್ತಾರೆ. ಸಿದ್ದರಾಮಯ್ಯ ಐದು ವರ್ಷಗಳ ಕಾಲ ಸಿಎಂ ಆಗಿರಲಿ ಅನ್ನೋದರಲ್ಲಿ ತಪ್ಪೇನಿಲ್ಲ. ವಿರೋಧ ಪಕ್ಷದವರು ಟೀಕೆ ಮಾಡ್ತಾರೆ ಮಾಡಲಿ, ಅವರದ್ದು ಅದೇ ಕೆಲಸ, ಹೊರತು ಬೇರೆನೂ ಅಲ್ಲಾ. ನನಗೂ ಸಚಿವ ಸ್ಥಾನ ಸಿಕ್ಕಿಲ್ಲಾ, ಹಾಗಂತ ನನಗೆ ಅಸಮಾಧಾನವಿಲ್ಲ. ಸಮನ್ವಯದ ಕೊರತೆಯಿದೆ. ಸರಿಯಾಗಲಿ ಅನ್ನೋದು ನಮ್ಮ ಆಶಯ ಎಂದು ತಿಳಿಸಿದರು.

ಇದನ್ನೂ ಓದಿ: ಸಿಂಗಾಪುರ ಆಪರೇಷನ್ ವಿಚಾರ: ಏಕಾಏಕಿ ಮೌನಕ್ಕೆ ಜಾರಿದ ಡಿಕೆಶಿ, ಸಚಿವರ ವಿರುದ್ಧ ಯಾರೂ ಪತ್ರ ಬರೆದಿಲ್ಲ ಎಂದು ಸ್ಪಷ್ಟನೆ!

ಪತ್ರದ ಕುರಿತು ಶಾಸಕ ಬಿ ಆರ್ ಪಾಟೀಲ್ ಸ್ಪಷ್ಟನೆ: ಕಲಬುರಗಿ ಜಿಲ್ಲೆ ಆಳಂದ ಶಾಸಕ ಬಿ ಆರ್ ಪಾಟೀಲ್ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬರೆದಿರುವ ಪತ್ರದ ಪ್ರತಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದು ನಕಲಿ ಪತ್ರ ಎಂದು ಸ್ವತಃ ಶಾಸಕರೇ ಸ್ಪಷ್ಟಪಡಿಸಿದ್ದಾರೆ. ತಮ್ಮ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರದ ಬಗ್ಗೆ ಸ್ಪಷ್ಟೀಕರಣ ನೀಡಿರುವ ಶಾಸಕ ಬಿ.ಆರ್ ಪಾಟೀಲ್ ಅವರು ಶಾಸಕರ ಕುಂದುಕೊರತೆಗಳನ್ನು ಆಲಿಸಲು ಮುಖ್ಯಮಂತ್ರಿಗಳಿಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಬರೆದ ಮನವಿ ಪತ್ರವನ್ನು ತಿರುಚಿ ಕಿಡಿಗೇಡಿಗಳು ನಕಲಿ ಪತ್ರವನ್ನು ಹರಿಬಿಟ್ಟಿದ್ದಾರೆ. ಈ ಪತ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಮೇಲೆ ಕೆಲ ಆರೋಪಗಳನ್ನು ಮಾಡುತ್ತಿರುವಂತೆ ಕುತಂತ್ರದಿಂದ ಸುಳ್ಳುಗಳನ್ನು ಹರಿಬಿಡಲಾಗಿದೆ ಎಂದಿದ್ದಾರೆ.

Last Updated :Jul 25, 2023, 7:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.