ETV Bharat / state

ಗ್ಯಾರಂಟಿ ಯೋಜನೆಯ ಅರ್ಜಿ ಪಡೆಯಲು ಕಾಂಗ್ರೆಸ್ ಕಾರ್ಯಕರ್ತರು ಮನೆ ಮನೆಗೆ ಬರಲಿದ್ದಾರೆ- ಸಚಿವ ಬಿ.ನಾಗೇಂದ್ರ

author img

By

Published : Jun 29, 2023, 7:36 PM IST

ನೂಕುನುಗ್ಗಲು ಹಾಗು ಗೊಂದಲ ತಪ್ಪಿಸುವ ಉದ್ಧೇಶದಿಂದ ಗ್ಯಾರಂಟಿ ಯೋಜನೆಗಳ ಅರ್ಜಿ ಪಡೆಯಲು ಕಾಂಗ್ರೆಸ್​ ಕಾರ್ಯಕರ್ತರು ಮನೆಗಳಿಗೆ ಬರುತ್ತಾರೆ ಎಂದು ಸಚಿವ ಬಿ. ನಾಗೇಂದ್ರ ಹೇಳಿದರು.

ಸಚಿವ ಬಿ.ನಾಗೇಂದ್ರ
ಸಚಿವ ಬಿ.ನಾಗೇಂದ್ರ

ಸರ್ಕಾರ ಘೋಷಿಸಿರುವ ಗ್ಯಾರೆಂಟಿ ಯೋಜನೆಗಳ ಬಗ್ಗೆ ಸಚಿವ ಬಿ.ನಾಗೇಂದ್ರ ಪ್ರತಿಕ್ರಿಯೆ

ಬಳ್ಳಾರಿ : ಗ್ಯಾರಂಟಿ ಯೋಜನೆಗಳ ಅರ್ಜಿ ಪಡೆಯಲು ಕಾಂಗ್ರೆಸ್ ಕಾರ್ಯಕರ್ತರು ಜನರ ಮನೆ ಬಾಗಿಲಿಗೇ ಬರಲಿದ್ದಾರೆ ಎಂದು ಯುವಜನ ಸಬಲೀಕರಣ, ಕ್ರೀಡೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ ಹೇಳಿದರು. ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ರಾಜ್ಯ ಸರ್ಕಾರ ಘೋಷಿಸಿರುವ ಗ್ಯಾರಂಟಿ ಯೋಜನೆಗಳನ್ನು ಪಡೆಯಲು ಅರ್ಜಿ ಸಲ್ಲಿಸಬೇಕಿದ್ದು, ಈಗಾಗಲೇ ಗೃಹಜ್ಯೋತಿ ಯೋಜನೆಯ ಅರ್ಜಿಗಳನ್ನು ಆನ್‌ಲೈನ್ ಮತ್ತು ಆಫ್‌ಲೈನ್ ಅಂದರೆ, ಗ್ರಾಮ ಒನ್, ಬಾಪು ಕೇಂದ್ರ, ತಾಲೂಕು ಕಚೇರಿಗಳಲ್ಲಿ ಸಲ್ಲಿಸಬಹುದು. ಆದರೆ ದಿನಕ್ಕೆ ಸುಮಾರು 12 ಲಕ್ಷಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗುತ್ತಿರುವ ಕಾರಣ ತಾಂತ್ರಿಕ ಕಾರಣಗಳಿಂದ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಗೊಂದಲ ಉಂಟಾಗುತ್ತಿದೆ. ಹಾಗಾಗಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನೇ ಮನೆ ಮನೆಗೆ ಕಳುಹಿಸಿ ಗ್ಯಾರಂಟಿ ಯೋಜನೆಯ ಅರ್ಜಿ ಸ್ವೀಕರಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

ಪ್ರತಿ ಐನೂರು ಜನರಿಗೆ ಇಬ್ಬರು ಕಾಂಗ್ರೆಸ್ ಕಾರ್ಯಕರ್ತರನ್ನು ನೇಮಿಸಲಾಗುತ್ತದೆ. ಅವರು ಪ್ರತಿ ಮನೆಗೆ ಭೇಟಿ ನೀಡಿ ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳ ಅರ್ಜಿ ಸ್ವೀಕರಿಸಿ, ಗ್ರಾಮ ಒನ್ ಕೇಂದ್ರಗಳಲ್ಲಿ ನೀಡುವಂತಹ ಸರ್ಟಿಫಿಕೇಟ್‌ಗಳನ್ನು ಸಂಗ್ರಹಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸುತ್ತಾರೆ ಎಂದು ನಾಗೇಂದ್ರ ವಿವರಿಸಿದರು.

ಇದೇ ವೇಳೆ ಮುಂಗಾರು ತಡವಾಗಿರುವುದರ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಮುಂಗಾರು ಮಳೆ ಅಭಾವ ಕಂಡು ಬಂದಿರುವುದರಿಂದ ಮೋಡ ಬಿತ್ತನೆ ಕಾರ್ಯ ಮಾಡುವ ಕುರಿತು ಸರ್ಕಾರ ಚಿಂತನೆ ಮಾಡಿದೆ. ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆ ಆಗಿದ್ದು ರೈತರಿಗೆ ಯಾವುದೇ ಸಂಕಷ್ಟ ಉಂಟಾಗದೇ ಇರುವ ರೀತಿ ಸರ್ಕಾರ ಕ್ರಮ ಕೈಗೊಳ್ಳಲಿದೆ. ಅಂದಾಜು 138 ಮಿ.ಮೀ ನಷ್ಟು ಮಳೆ ಈಗಾಗಲೇ ಆಗಬೇಕಿತ್ತು. ಆದರೆ ಕೇವಲ ಅರ್ಧದಷ್ಟು ಅಂದರೆ 70 ರಿಂದ 75 ಮಿ.ಮೀ ನಷ್ಟು ಮಾತ್ರ ಮಳೆಯಾಗಿದೆ ಎಂದರು.

ರೈತರು ಆತಂಕಪಡುವ ಅಗತ್ಯವಿಲ್ಲ. ಮುಂದಿನ ಎರಡು ವಾರಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಒಂದು ವೇಳೆ ಸಮರ್ಪಕ ಮಳೆಯಾಗದ ಪಕ್ಷದಲ್ಲಿ ಮೋಡ ಬಿತ್ತನೆ ಕಾರ್ಯ ಮಾಡುವ ಬಗ್ಗೆ ಸರ್ಕಾರ ಚಿಂತಿಸಲಿದೆ ಎಂದು ಹೇಳಿದರು.

ಕೃಷಿ ಚಟುವಟಿಕೆಗೆ ಅಗತ್ಯವಿರುವಷ್ಟು ರಸಗೊಬ್ಬರ ಮತ್ತು ಬಿತ್ತನೆ ಬೀಜಗಳ ಸಂಗ್ರಹವಿದೆ. ಮುಂದಿನ ದಿನಗಳಲ್ಲಿ ಉತ್ತಮ ಪ್ರಮಾಣದಲ್ಲಿ ಮಳೆ ಆಗುವ ಸಂಭವವಿದ್ದು, ಅದರಲ್ಲಿಯೂ ವಿಶೇಷವಾಗಿ ಮಲೆನಾಡು ಹಾಗೂ ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಟಿಬಿ ಡ್ಯಾಂನ ಜಲ ಸಂಗ್ರಹ ಹೆಚ್ಚಾಗಿ ರೈತರ ಕೃಷಿ ಚಟುವಟಿಕೆಗಳು ಚುರುಕುಗೊಳ್ಳಲಿವೆ ಎಂದು ನಾಗೇಂದ್ರ ಆಶಾಭಾವನೆ ವ್ಯಕ್ತಪಡಿಸಿದರು.

ಇದನ್ನೂ ಓದಿ : ಮುಂಗಾರು ವಿಳಂಬ, ಬಳ್ಳಾರಿಯಲ್ಲಿ ಬಿತ್ತನೆ ಕಾರ್ಯ ಕುಂಠಿತ: ಬರದ ಆತಂಕದಲ್ಲಿ ರೈತರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.