ETV Bharat / state

ಮೈಸೂರು ಭೀಕರ ರಸ್ತೆ ಅಪಘಾತ ಪ್ರಕರಣ; ಮೃತರ ಕುಟುಂಬಸ್ಥರಿಗೆ ತಲಾ 2 ಲಕ್ಷ ರೂ.ಗಳ ಚೆಕ್​ ವಿತರಿಸಿದ ಸಚಿವ ಬಿ.ನಾಗೇಂದ್ರ

author img

By

Published : Jun 4, 2023, 10:41 PM IST

ಸಿಎಂ ಸಿದ್ದರಾಮಯ್ಯ ಅವರು ಸಿಎಂ ಪರಿಹಾರ ನಿಧಿಯಿಂದ ತಲಾ ಒಬ್ಬರಿಗೆ 2 ಲಕ್ಷ ರೂ. ಚೆಕ್ ನೀಡುವಂತೆ ಘೋಷಣೆ ಮಾಡಿದ್ದರು.

ಸಚಿವ ಬಿ.ನಾಗೇಂದ್ರ
ಸಚಿವ ಬಿ.ನಾಗೇಂದ್ರ

ಮೃತರ ಕುಟುಂಬಸ್ಥರಿಗೆ ತಲಾ 2 ಲಕ್ಷ ರೂ.ಗಳ ಚೆಕ್​ ವಿತರಿಸಿದ ಸಚಿವರು

ಬಳ್ಳಾರಿ : ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಕುರುಬೂರು ಬಳಿ (ಮೇ 29) ಭೀಕರ ರಸ್ತೆ ಅಪಘಾತದಲ್ಲಿ ಬಳ್ಳಾರಿ ಜಿಲ್ಲೆ ಸಂಗನಕಲ್ಲು ಗ್ರಾಮದ 11 ಮೃತಪಟ್ಟಿದ್ದರು. ಇದೀಗ ಮೃತರ ಕುಟುಂಬಸ್ಥರಿಗೆ ಭಾನುವಾರ ಸಂಜೆ ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಬಿ ನಾಗೇಂದ್ರ ಅವರು ಪರಿಹಾರದ ಚೆಕ್ ವಿತರಣೆ ಮಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದಂತೆ ಸಿಎಂ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂ. ಗಳ ಚೆಕ್ ವಿತರಿಸಲಾಯಿತು.

ಚೆಕ್​ ವಿತರಿಸಿದ ಬಳಿಕ ಇದೇ ಸಂದರ್ಭದಲ್ಲಿ ಮಾತನಾಡಿದ ಸಚಿವ ಬಿ.ನಾಗೇಂದ್ರ, ಸಿಎಂ ಸಿದ್ದರಾಮಯ್ಯ ಅವರು ಸಿಎಂ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂ. ಚೆಕ್ ನೀಡುವಂತೆ ಘೋಷಣೆ ಮಾಡಿದ್ದರು. ಜೊತೆಗೆ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳುವಂತೆ ಸಿಎಂ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ನಾನು ಸಂಗನಕಲ್ಲು ಗ್ರಾಮಕ್ಕೆ ಭೇಟಿ ನೀಡಿ ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದ್ದೇನೆ. ರಸ್ತೆ ಅಪಘಾತದಲ್ಲಿ ಒಟ್ಟು ಈವರೆಗೆ 11 ಜನ ಸಾವನ್ನಪ್ಪಿದ್ದಾರೆ. ಈ ಪೈಕಿ ಸಂಗನಕಲ್ಲು ಗ್ರಾಮದ 10 ಜನರು ಮೃತರಾಗಿದ್ದರು. ಮೃತರ ಕುಟುಂಬದವರಲ್ಲಿ ಸದ್ಯ 7 ಜನರಿಗೆ ಮಾತ್ರ ಸಿಎಂ ಪರಿಹಾರ ನಿಧಿಯ ಚೆಕ್ ವಿತರಣೆ ಮಾಡಲಾಗಿದೆ. ಇನ್ನುಳಿದ ಮೂರು ಜನರ ಕುಟುಂಬಕ್ಕೆ ಶೀಘ್ರವೇ ಪರಿಹಾರದ ಚೆಕ್ ವಿತರಿಸಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ : ಕುರುಬೂರು ರಸ್ತೆ ಅಪಘಾತ: ಮರಣೋತ್ತರ ಪರೀಕ್ಷೆ ಬಳಿಕ ಸ್ವಗ್ರಾಮಕ್ಕೆ ಮೃತದೇಹಗಳ ರವಾನೆ

ಕಳೆದ ತಿಂಗಳು 29ನೇ ತಾರೀಕು ದೇವರ ದರ್ಶನಕ್ಕೆಂದು ಸಂಗನಕಲ್ಲು ಗ್ರಾಮದ ಮೂರು ಕುಟುಂಬಗಳ 13 ಜನರು ಪ್ರವಾಸಕ್ಕೆ ತೆರಳಿದ್ದರು. ದೇವರ ದರ್ಶನ ಪಡೆದು ವಾಪಸ್ ಬರುವಾಗ ದುರದೃಷ್ಟವಶಾತ್​ ರಸ್ತೆ ಅಪಘಾತ ಸಂಭವಿಸಿತ್ತು. ಇದರಿಂದಾಗಿ ಈವರೆಗೆ 11 ಜನ ಮೃತಪಟ್ಟಿದ್ದಾರೆ. ಸ್ಥಳದಲ್ಲೇ 10 ಜನರು ಸಾವನ್ನಪ್ಪಿದ್ದರು. ಗಾಯಾಳುಗಳ ಪೈಕಿ ಸಂದೀಪ್ ಎಂಬುವರನ್ನು ಬದುಕುಳಿಸಲು ಮೈಸೂರಿನ ಕೆ ಆರ್ ಆಸ್ಪತ್ರೆಯ ವೈದ್ಯರು ತಮ್ಮ ಶಕ್ತಿ ಮೀರಿ ಪ್ರಯತ್ನಪಟ್ಟರು. ಆದರೆ ಚಿಕಿತ್ಸೆ ಫಲಕಾರಿ ಆಗದೆ ಮೊನ್ನೆ ಕೊನೆಯುಸಿರೆಳೆದಿದ್ದಾರೆ ಎಂದು ಸಚಿವ ನಾಗೇಂದ್ರ ಅವರು ಮಾಹಿತಿ ನೀಡಿದರು.

ಈ ಘಟನೆ ನಡೆಯುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಅವರ ಸೂಚನೆಯಂತೆ ನಾನು ಮೈಸೂರಿನ ಆಸ್ಪತ್ರೆ ಹಾಗೂ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದೆ. ಇಂತಹ ಘಟನೆ ಯಾರ ಜೀವನದಲ್ಲೂ ನಡೆಯಬಾರದು ಎಂದು ಹೇಳಿದ ಸಚಿವರು, ಅಲ್ಲಿ ಹೋಗಿ ನಾನು ನೋಡಿದಾಗ ಹೃದಯವಿದ್ರಾವಕ ದೃಶ್ಯ ಇತ್ತು. ಗಾಯಾಳು ಸಂದೀಪ್ ಉಳಿಯಬಹುದೆಂಬ ನಿರೀಕ್ಷೆ ಇತ್ತು. ಅದು ಹುಸಿಯಾಗಿದೆ ಎಂದು ಬಿ ನಾಗೇಂದ್ರ ಅವರು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ : ಮೈಸೂರು ಭೀಕರ ಅಪಘಾತ ಪ್ರಕರಣ: ಚಿಕಿತ್ಸೆ ಪಡೆಯುತ್ತಿದ್ದ ಮತ್ತೊಬ್ಬ ಸಾವು... ಮೃತರ ಸಂಖ್ಯೆ 11ಕ್ಕೆ ಏರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.