ETV Bharat / state

ಪಡಿತರ ವಿತರಣೆಯಲ್ಲಿ ಲೋಪದೋಷ ಕಂಡುಬಂದರೆ ಶಿಸ್ತು ಕ್ರಮ: ಸಚಿವ ಮುನಿಯಪ್ಪ

author img

By ETV Bharat Karnataka Team

Published : Dec 15, 2023, 8:32 PM IST

ಬೆಳಗಾವಿ ಜಿಲ್ಲೆಯ ಸಂಕೇಶ್ವರದ ಗೋದಾಮುಗಳಿಗೆ ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ದಿಢೀ‌ರ್ ಭೇಟಿ ನೀಡಿ ಪರಿಶೀಲಿಸಿದರು.

Minister Muniyappa inspected the warehouses of Sankeshwar
ಸಂಕೇಶ್ವರದ ಗೋದಾಮುಗಳಿಗೆ ಆಹಾರ ಸಚಿವ ಮುನಿಯಪ್ಪ ಭೇಟಿನೀಡಿ ಪರಿಶೀಲಿಸಿದರು.

ಚಿಕ್ಕೋಡಿ: ಸಾರ್ವಜನಿಕ ಪಡಿತರ ವಿತರಣೆಯಲ್ಲಿ ಲೋಪದೋಷ ಕಂಡುಬಂದರೆ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳು ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆ ಸಚಿವ ಕೆ.ಹೆಚ್.ಮುನಿಯಪ್ಪ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಬೆಳಗಾವಿ ಜಿಲ್ಲೆಯ ಸಂಕೇಶ್ವರನಲ್ಲಿರುವ ಗೋದಾಮಿಗೆ ಸಚಿವರು ಇಂದು ದಿಢೀರ್ ಭೇಟಿ ನೀಡಿ ಅಕ್ಕಿ ಹಾಗೂ ಗೋಧಿಯನ್ನು ಪರಿಶೀಲಿಸಿದರು. ಅಕ್ಕಿ ಚೀಲವನ್ನು ತೂಕದ ಯಂತ್ರದ ಮೇಲಿಟ್ಟು ತೂಕ ಪರಿಶೀಲಿಸಿದ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಸಂಕೇಶ್ವರನಲ್ಲಿರುವ ಎರಡು ಗೋದಾಮಿನ ಸ್ವಚ್ಛತೆ ಮತ್ತು ದಾಸ್ತಾನು ಅಚ್ಚುಕಟ್ಟಾಗಿದೆ. ಗೋಧಿ ಹಿಟ್ಟು ಸೇರಿದಂತೆ ಎಫ್‌ಸಿಐನಿಂದ ಬಂದಿರುವ ಅಕ್ಕಿಯ ಪ್ರಮಾಣದ ಸಂಪೂರ್ಣ ಮಾಹಿತಿ ಇದೆ ಎಂದರಲ್ಲದೆ, ಹೊಸ ಪಡಿತರ ಚೀಟಿ ಪಡೆಯಲು ಲೋಪದೋಷ ಇರುವ ಕೆಲವು ಮಾಹಿತಿಯನ್ನು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪ್ರಕಾಶ್ ನೀಡಿದ್ದಾರೆ. ಅದನ್ನು ಲಿಖಿತ ರೂಪದಲ್ಲಿ ಸ್ವೀಕರಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಯಾವುದೇ ಕಾರಣಕ್ಕೂ ಸಾರ್ವಜನಿಕರಲ್ಲಿ, ಗ್ರಾಹಕರಲ್ಲಿ ಒತ್ತಾಯಪೂರ್ವಕವಾಗಿ ಇನ್ಸ್‌ಪೆಕ್ಟರ್, ಶಿರಸ್ತೇದಾರ್ ಸೇರಿದಂತೆ ಆಹಾರ ಗ್ರಾಹಕ ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಹಣ ಪಡೆಯುವುದು ಕಂಡಲ್ಲಿ ಶಿಸ್ತು ಕ್ರಮ ಜರುಗಿಸಿ ಅಮಾನತು ಮಾಡಲಾಗುವುದು ಎಂದರು.

ಸಾರ್ವಜನಿಕರಿಗೆ, ಗ್ರಾಹಕರಿಗೆ ಉಚಿತವಾಗಿ ನೀಡುವ ಪಡಿತರವನ್ನು ಸಮರ್ಪಕವಾಗಿ ನೀಡಬೇಕು ಅಧಿಕಾರಿ, ಸಿಬ್ಬಂದಿಗಳಿಂದ ಲೋಪದೋಷ ಉಂಟಾಗಿದ್ದಲ್ಲಿ ಗೋದಾಮಿನಲ್ಲಿ ತೊಂದರೆ ಇದ್ದರೆ ತಾಲೂಕು ಸೊಸೈಟಿಯವರಿಗೆ ತೊಂದರೆ ಇದ್ದರೆ ಪಿಡಿಎಸ್ ಮಾಲೀಕರಿಗೆ ತೊಂದರೆ ಇದ್ದಲ್ಲಿ ಆಯಾ ಭಾಗದ ಸಾರ್ವಜನಿಕರು ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸಹಕಾರ ಸಂಘಗಳ ಅಧ್ಯಕ್ಷರು ಉಪಾಧ್ಯಕ್ಷರು ಗಮನಕ್ಕೆ ತೆಗೆದುಕೊಂಡು ಬಂದರೆ ಕ್ರಮ ಜರುಗಿಸಿ, ಪರಿಹಾರ ಸೂಚಿಸಲಾಗುವುದು ಎಂದು ಹೇಳಿದರು.

ಪಡಿತರ ಚೀಟಿ ಹೊಂದಿರುವ ಗ್ರಾಹಕರಿಗೆ ಯಾವುದೇ ಕಾರಣಕ್ಕೂ ತೊಂದರೆ ಉಂಟಾಗಬಾರದು. ಶಹಪುರದಲ್ಲಿ ಆಗಿರುವ ಘಟನೆಗೆ ಈಗಾಗಲೇ ಶಿಸ್ತಿನ ಕ್ರಮ ತೆಗೆದುಕೊಂಡು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಪರಿಶೀಲನೆ ಮಾಡಲಾಗುತ್ತಿದೆ. ಸಾರ್ವಜನಿಕರಿಗೆ ಯಾವುದೇ ಕುಂದುಕೊರತೆ ಆಗದಂತೆ ಕ್ರಮಬದ್ಧವಾಗಿ ಕಾರ್ಯನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಾರ್ವಜನಿಕರ ಹಿತದೃಷ್ಟಿಯಿಂದ ಅವರಿಗೆ ಸರ್ಕಾರಿ ಸೇವೆಗಳು ಸಮರ್ಪಕವಾಗಿ ತಲುಪಬೇಕೆನ್ನುವುದು ಸರ್ಕಾರದ ಮೂಲ ಉದ್ದೇಶವಾಗಿದೆ. ಜುಲೈ 10ನೇ ತಾರೀಖಿನಿಂದ ಡಿಬಿಟಿ (ನೇರ ನಗದು ವರ್ಗಾವಣೆ) ಪ್ರಾರಂಭಿಸಿದ್ದೇವೆ. ಬೆಳಗಾವಿ ವಿಭಾಗದಲ್ಲಿ ಮೊದಲನೆಯ ತಿಂಗಳು 46 ಕೋಟಿ ರೂ ಎರಡನೇ ತಿಂಗಳು 50 ಕೋಟಿ 88 ಲಕ್ಷ ಹಾಗೂ ಸೆಪ್ಟೆಂಬರ್ ತಿಂಗಳಿನಲ್ಲಿ 53 ಕೋಟಿ 73 ಲಕ್ಷ, ಅಕ್ಟೋಬರ್ ತಿಂಗಳಿನಲ್ಲಿ 55 ಕೋಟಿ 80 ಲಕ್ಷ, ನವೆಂಬ‌ರ್ ತಿಂಗಳ ಮಾಹಿತಿ ಪ್ರಗತಿಯಲ್ಲಿದೆ.

ಅರ್ಹತಾ ಪಡಿತರ ಚೀಟಿಗೆ ನವೆಂಬರ್ ತಿಂಗಳಿನಲ್ಲಿ 10 ಲಕ್ಷ 6 ಸಾವಿರ 895 ಜುಲೈ ತಿಂಗಳಿನಲ್ಲಿ 8 ಲಕ್ಷ 79 ಸಾವಿರದ 208 ಆಗಸ್ಟ್, ಸೆಪ್ಟೆಂಬರ್ ಅಕ್ಟೋಬರ್ ನವೆಂಬರ್​ನಲ್ಲಿ ಅಧಿಕಾರಿಗಳು ಕ್ರಮಬದ್ಧವಾಗಿ ಕಾರ್ಯನಿರ್ವಹಿಸಿ 8 ಲಕ್ಷ ಇದ್ದ ಮೊತ್ತವನ್ನು ಮನೆ ಬಾಗಿಲಿಗೆ ಹೋಗಿ 10 ಲಕ್ಷ ಅಂದರೆ 1 ಲಕ್ಷದ 74 ಸಾವಿರ ಜನರಿಗೆ ಬ್ಯಾಂಕ್ ಮಾಹಿತಿ ಹಾಗೂ ಪಡಿತರ ಚೀಟಿ ನವೀಕರಿಸಿ 5 ಕೆಜಿ ಅಕ್ಕಿ ಮತ್ತು 170 ರಂತೆ ಹಣವನ್ನು ನೀಡಲಾಗಿದೆ ಎಂದು ವಿವರಣೆ ನೀಡಿದರು.

ಅನ್ನಭಾಗ್ಯ ಯೋಜನೆಯಡಿಯಲ್ಲಿ ಅಕ್ಕಿಯ ಅಭಾವ ಇರುವುದರಿಂದ ಹಣವನ್ನು ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಆದಷ್ಟು ಬೇಗ 10 ಕೆಜಿ ಅಕ್ಕಿಯನ್ನು ನೀಡಲಾಗುವುದು. ಸಂಕೇಶ್ವರದಲ್ಲಿ ಗೋಡೌನ್ ಗಳು ಕ್ರಮಬದ್ಧವಾಗಿದೆ. ಮುಂದೆ ಇದೇ ರೀತಿ ನಡೆಸಿಕೊಳ್ಳಲು ಸೂಚನೆ ನೀಡಿದರು.

ಅಂತ್ಯೋದಯ 68356, ಫಲಾನುಭವಿಗಳು 2,68000, ಬಿಪಿಎಲ್ ಕಾರ್ಡುಗಳು 1076000, ಫಲಾನುಭವಿಗಳು 3498606. ಉಳಿತ 20000 ಕಾರ್ಡುಗಳ ವಿತರಣೆಯನ್ನು 15 ದಿನಗಳೊಳಗಾಗಿ ಪರಿಶೀಲನೆ ಮಾಡಿ ವಿತರಿಸುವ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆ ಸಚಿವರ ಆಪ್ತ ಕಾರ್ಯದರ್ಶಿ ಡಾ.ನಟರಾಜ್, ಜಂಟಿ ನಿರ್ದೇಶಕ ಶ್ರೀಶೈಲ ಕಂಕನವಾಡಿ, ವಿಭಾಗ ನಿಯಂತ್ರಕ ಮಾಳಿ, ಕಾನೂನು ಮಾಪನ ಇಲಾಖೆ ಸಹಾಯಕ ನಿಯಂತ್ರಕ ರುದ್ರೇಶ್ ಬಿಸಾಗುಪ್ಪಿ, ಉಪ ನಿರ್ದೇಶಕಿ ಸುಶೀಲಮ್ಮ ಎಪಿಎಂಸಿ ಅಧ್ಯಕ್ಷ ಪ್ರಶಾಂತ ಪಾಟೀಲ, ಸಾಗಣೆ ಗುತ್ತಿಗೆದಾರ ಶಿವಾನಂದ ಮುಡಸಿ, ಆಹಾರ ನಿಗಮದ ಅಧಿಕಾರಿ ಸೋಮೇಶ್ ಮಗದುಮ್ಮ, ಶಿರಸ್ತೇದಾರ್ ಉಸ್ತಾದ, ಗೋದಾಮು ವ್ಯವಸ್ಥಾಪಕ ಲಕ್ಷ್ಮಿ ಮೆದಾರ್ ಹಾಗೂ ಆಹಾರ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.

ಇದನ್ನೂಓದಿ: ಉತ್ತರ ಕರ್ನಾಟಕ ಕುರಿತ 3 ದಿನಗಳ ಚರ್ಚೆಯನ್ನು ಸರ್ಕಾರ ಮಣ್ಣುಪಾಲು ಮಾಡಿದೆ: ಆರ್​.ಅಶೋಕ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.