ETV Bharat / state

ಭ್ರೂಣಹತ್ಯೆ ತಡೆಗಟ್ಟಲು ಕಠಿಣ ಕಾನೂನು ಜಾರಿ: ಸಚಿವ ದಿನೇಶ್​ ಗುಂಡೂರಾವ್

author img

By ETV Bharat Karnataka Team

Published : Dec 14, 2023, 7:13 PM IST

Updated : Dec 14, 2023, 8:37 PM IST

ಭ್ರೂಣ ಹತ್ಯೆ ಒಂದು ಸಾಮಾಜಿಕ ಪಿಡುಗಾಗಿ ಮಹಿಳೆಯರನ್ನ ಶೋಷಣೆ ಮಾಡುತ್ತಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಸಚಿವ ದಿನೇಶ್​ ಗುಂಡೂರಾವ್
ಸಚಿವ ದಿನೇಶ್​ ಗುಂಡೂರಾವ್

ಸಚಿವ ದಿನೇಶ್​ ಗುಂಡೂರಾವ್

ಬೆಂಗಳೂರು/ಬೆಳಗಾವಿ : ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಕಾನೂನಾತ್ಮಕ ರಕ್ಷಣೆ, ಸಮಾನ ಹಕ್ಕು, ಸಾಮಾಜಿಕ ನ್ಯಾಯ ದೊರಕುವಂತೆ ಸರ್ಕಾರಗಳು ಕ್ರಮ ವಹಿಸಿವೆ. ಭ್ರೂಣಹತ್ಯೆ ಒಂದು ಸಾಮಾಜಿಕ ಪಿಡುಗಾಗಿ ಮಹಿಳೆಯರನ್ನು ಶೋಷಣೆ ಮಾಡುತ್ತಿದೆ. ಈ ಕುರಿತು ಕಠಿಣ ಕ್ರಮಗಳನ್ನು ಕೈಗೊಳ್ಳಲು ಮತ್ತು ಇದರಲ್ಲಿನ ಅಪರಾಧಿಗಳನ್ನು ಕಠಿಣವಾಗಿ ಶಿಕ್ಷಿಸಲು ಅನುವಾಗುವಂತೆ ಈಗಿರುವ ಕಾನೂನುಗಳಿಗೆ ಮತ್ತು ಐ.ಪಿ.ಸಿ ತಿದ್ದುಪಡಿ ಮಾಡಿ, ಈ ಭ್ರೂಣಹತ್ಯೆ ತಡೆಗಟ್ಟಲು ವಿಶೇಷವಾದ ಮತ್ತು ಸಮಗ್ರವಾದ ಹೊಸ ನೀತಿ ರೂಪಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ವಿಧಾನಸಭೆಯಲ್ಲಿ ಹೇಳಿದ್ದಾರೆ.

ಪ್ರತಿಪಕ್ಷ ನಾಯಕ ಆರ್ ಅಶೋಕ್
ಪ್ರತಿಪಕ್ಷ ನಾಯಕ ಆರ್ ಅಶೋಕ್

ಇಂದು ಶೂನ್ಯ ವೇಳೆಯಲ್ಲಿ ಪ್ರತಿಪಕ್ಷ ನಾಯಕ ಆರ್ ಅಶೋಕ್ ಪ್ರಸ್ತಾಪಿಸಿದ ರಾಜ್ಯದಲ್ಲಿ ಭ್ರೂಣಹತ್ಯೆ ತಡೆಗಟ್ಟುವ ಕುರಿತ ವಿಷಯಕ್ಕೆ ಉತ್ತರಿಸಿದ ಸಚಿವರು, ಆರೋಗ್ಯ ಇಲಾಖೆಯು 1994ರಲ್ಲಿ ರಚನೆಗೊಂಡಿರುವ ಪಿ.ಸಿ.ಪಿ.ಎನ್.ಡಿ.ಟಿ. ಕಾಯ್ದೆ ಅನ್ವಯ ಲಿಂಗ ಪತ್ತೆ ನಿಷೇಧಿಸಿದೆ. ಆದರೂ ಭ್ರೂಣಹತ್ಯೆ ಪ್ರಕರಣಗಳು ವರದಿಯಾಗುತ್ತಿವೆ. 2002 ರಿಂದ 2023ರ ಆರೋಗ್ಯ ಇಲಾಖೆಯ ಈ ಕುರಿತ ವರದಿ ನೋಡಿದಾಗ ಕೇವಲ 100 ಪ್ರಕರಣಗಳು ದಾಖಲಾಗಿವೆ. ಇದನ್ನು ಗಂಭೀರವಾಗಿ ಪರಿಗಣಿಸದಿರುವುದು ತಿಳಿದು ಬರುತ್ತದೆ. ಕಳೆದ ವರ್ಷ 1000ಕ್ಕೆ 947 ಇದ್ದ ಲಿಂಗಾನುಪಾತ ಪ್ರಸಕ್ತ ವರ್ಷ 929ಕ್ಕೆ ಇಳಿದಿದೆ. ಈ ಕುರಿತು ಎಲ್ಲರೂ ಗಂಭೀರವಾಗಿ ಚಿಂತಿಸುವ ಮತ್ತು ಇಂತಹ ಅಪರಾಧ ಪ್ರಕರಣಗಳಲ್ಲಿ ಭಾಗವಹಿಸುವವರನ್ನು ಕಠಿಣವಾಗಿ ಶಿಕ್ಷಿಸುವ ಕ್ರಮವಾಗಬೇಕು ಎಂದು ಹೇಳಿದರು.

ಸಚಿವ ದಿನೇಶ್​ ಗುಂಡೂರಾವ್
ಸಚಿವ ದಿನೇಶ್​ ಗುಂಡೂರಾವ್

ಸರ್ಕಾರವು ಭ್ರೂಣಹತ್ಯೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಈಗಾಗಲೇ ಈ ಕುರಿತು ಸಿ.ಐ.ಡಿ ತನಿಖೆಗೆ ಆದೇಶಿಸಲಾಗಿದೆ. ಆದಷ್ಟು ಶೀಘ್ರದಲ್ಲಿ ತನಿಖಾ ವರದಿಯನ್ನು ಪಡೆಯಲು ಸರ್ಕಾರ ಕ್ರಮವಹಿಸಲಿದೆ. ಪಿ.ಸಿ.ಪಿ.ಎನ್.ಡಿ.ಟಿ. ಕಾಯ್ದೆ ಕಟ್ಟುನಿಟ್ಟಾಗಿ ಜಾರಿಗೆ ತರಲು ನಿರ್ದೇಶಿಸಲಾಗಿದೆ. ರಾಜ್ಯಾದ್ಯಂತ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಮತ್ತು ಗ್ರಾಮಮಟ್ಟದಿಂದ ಸಾರ್ವಜನಿಕರಿಗೆ ತಿಳಿವಳಿಕೆ ನೀಡುವ ಕುರಿತು ದೀರ್ಘಕಾಲಿನ ಕಾರ್ಯಕ್ರಮಗಳನ್ನು ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಶರತ್​ ಬಚ್ಚೇಗೌಡ
ಶರತ್​ ಬಚ್ಚೇಗೌಡ

ಅಪರಾಧಿಗಳಿಗೆ ಸೂಕ್ತ ಶಿಕ್ಷೆ: ಲಿಂಗ ಪತ್ತೆ ಮತ್ತು ಭ್ರೂಣಹತ್ಯೆಯಂತಹ ಅಪರಾಧ ಮಾಡುವವರ ಮೇಲೆ ಮತ್ತು ಮಾಡಿಸುವವರ ಮೇಲೆ ಸೂಕ್ತ ಕ್ರಮವಾಗಬೇಕು. ಈ ಕುರಿತು ವಿಶೇಷ ನೀತಿ ರೂಪಿಸುವ ಕಾನೂನನ್ನು ರಚಿಸಲಾಗುವುದು. ಮತ್ತು ಈ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಇಲಾಖೆ, ಕಾನೂನು ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಮನ್ವಯದಲ್ಲಿ ಆರೋಗ್ಯ ಇಲಾಖೆ ಸಾಮಾಜಿಕ ಕಾರ್ಯಕ್ರಮಗಳನ್ನು ರೂಪಿಸಲಿದೆ. ಟಾಸ್ಕ್​ ಫೋರ್ಸ್ ರಚಿಸಿ ನಿರಂತರ ನಿಗಾ ವಹಿಸಲಿದೆ. ರಾಜ್ಯಮಟ್ಟದಲ್ಲಿ ಮೇಲ್ವಿಚಾರಣಾ ಸಮಿತಿಯನ್ನು ರಚಿಸಲಿದೆ. ಮತ್ತು ಉಪ ವಿಭಾಗ ಮಟ್ಟದಲ್ಲಿ ತಪಾಸಣಾ ಸಮಿತಿಗಳನ್ನು ರಚಿಸಿ ಪ್ರತಿ ಮೂರು ತಿಂಗಳಿಗೊಮ್ಮೆ ಎಲ್ಲಾ ಸ್ಕ್ಯಾನಿಂಗ್ ಸೆಂಟರ್​ಗಳ ಪರಿಶೀಲನೆ ಹಾಗೂ ಪಿ.ಸಿ.ಪಿ.ಎನ್.ಡಿ.ಟಿ ಕಾಯ್ದೆಯ ಪರಿಣಾಮಕಾರಿ ಜಾರಿಗೆ ನಿರಂತರ ನಿಗಾ ವಹಿಸಲಿದೆ ಎಂದು ಆರೋಗ್ಯ ಸಚಿವರು ತಿಳಿಸಿದರು.

ಮಂಡ್ಯ, ಮೈಸೂರು, ಬೆಂಗಳೂರು ಭ್ರೂಣಪತ್ತೆ ಮತ್ತು ಹತ್ಯೆ ಪ್ರಕರಣಗಳಲ್ಲಿ ಭಾಗಿಯಾದವರನ್ನು ಬಂಧಿಸಿ ಕ್ರಮವಹಿಸಲಾಗಿದೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ವರದಿಯಾಗಿರುವ ಭ್ರೂಣಹತ್ಯೆ ಪ್ರಕರಣದ ಆರೋಪಿಗಳನ್ನು ಬಂಧಿಸಿ, ಆಸ್ಪತ್ರೆಯನ್ನು ಸೀಜ್ ಮಾಡಲಾಗಿದೆ. ಆರೋಗ್ಯ ಇಲಾಖೆ ತಕ್ಷಣ ಕ್ರಮವಹಿಸಿದೆ ಎಂದು ಸಚಿವರು ತಿಳಿಸಿದರು.

ಶರತ್​ ಬಚ್ಚೇಗೌಡ
ಶರತ್​ ಬಚ್ಚೇಗೌಡ

ಮುಂದಿನ ಅಧಿವೇಶನದಲ್ಲಿ ಕಾನೂನು ರಚನೆ : ಭ್ರೂಣಹತ್ಯೆ ವಿಷಯ ಚರ್ಚೆಯಲ್ಲಿ ಭಾಗವಹಿಸಿದ ಕಾನೂನು, ಸಂಸದೀಯ ವ್ಯವಹಾರಗಳ ಸಚಿವ ಹೆಚ್ ಕೆ ಪಾಟೀಲ್ ಮಾತನಾಡಿ, ಭ್ರೂಣಹತ್ಯೆ ಮಹಾಪಾಪ. ಈ ಕೃತ್ಯವನ್ನು ತಡೆಗಟ್ಟಲು ಸರ್ಕಾರವು ಮುಂದಿನ ಅಧಿವೇಶನದಲ್ಲಿ ವಿಶೇಷ ಕಾನೂನು ರೂಪಿಸಿ ಜಾರಿಗೊಳಿಸಲಿದೆ ಎಂದು ಹೇಳಿದರು. ಇದಕ್ಕೂ ಮುನ್ನ ಚರ್ಚೆಯಲ್ಲಿ ಭಾಗವಹಿಸಿದ್ದ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ಪ್ರಸ್ತುತ ಇರುವ ಕಾನೂನನ್ನು ಭ್ರೂಣ ಹತ್ಯೆ ಮಾಡಿದ ಕುಟುಂಬದವರನ್ನು ಮಾತ್ರ ಹೊಣೆ ಮಾಡಲು ಬಳಕೆಯಾಗುತ್ತದೆ. ಆಸ್ಪತ್ರೆಗಳು ಹಾಗೂ ಇತರ ಸಂಸ್ಥೆಗಳನ್ನು ಜವಾಬ್ದಾರರನ್ನಾಗಿ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ಕಾನೂನು ತಿದ್ದುಪಡಿ ತರಬೇಕು ಎಂದು ಸಲಹೆ ನೀಡಿದರು.

ರಾಜ್ಯಾದ್ಯಂತ ಭ್ರೂಣ ಹತ್ಯೆ ನಡೆಯುತ್ತಿದ್ದರೂ ಆರೋಗ್ಯ ಇಲಾಖೆ ಯಾವುದೇ ಕ್ರಮಕೈಗೊಳ್ಳದೇ ಸುಮ್ಮನೆ ಇದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಲು ಎಸ್​ಐಟಿ ರಚಿಸಬೇಕು. ಕಳೆದ 27 ವರ್ಷದಲ್ಲಿ ಆರೋಗ್ಯ ಇಲಾಖೆ ಕೇವಲ 87 ಭ್ರೂಣಹತ್ಯೆ ಪ್ರಕರಣವನ್ನು ವರದಿ ಮಾಡಿದೆ. ಮಂಡ್ಯ, ಮೈಸೂರು, ರಾಮನಗರ, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಭ್ರೂಣಹತ್ಯೆ ಪ್ರಕರಣಗಳು ವ್ಯಾಪಿಸಿದೆ. ಇಂತಹ ದುಷ್ಕೃತ್ಯದಲ್ಲಿ ತೊಡಗಿರುವವರಿಗೆ ಮರಣದಂಡನೆಯಂತಹ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ವರದಕ್ಷಿಣೆ ಕಾರಣದಿಂದಲೂ ಹೆಣ್ಣು ಭ್ರೂಣ ಹತ್ಯೆ: ಕೆಲ ವರದಿಗಳನ್ನು ನೋಡುತ್ತಿದ್ದರೆ ಒಬ್ಬೊಬ್ಬರು 200, 300, 400 ಭ್ರೂಣ ಹತ್ಯೆ ಮಾಡಿದ್ದಾರೆ. ಇದು ಮಾನವಕುಲಕ್ಕೆ ಕಳಂಕ ತರುವ ವಿಷಯ. ಈ ಹತ್ಯೆಗೆ ಮೂಢನಂಬಿಕೆಗಳು ಕಾರಣ. ನಾನು ಅವನ್ನು ನಂಬುವುದಿಲ್ಲ. ನಮ್ಮಲ್ಲಿ ಯಾರಾದರೂ ಸತ್ತರೆ ಅವರಿಗೆ ಕೊನೆ ಕಾರ್ಯಗಳನ್ನು ಮಾಡಲು ಗಂಡು ಮಗು ಬೇಕು ಎನ್ನುತ್ತಾರೆ. ಮತ್ತು ವರದಕ್ಷಿಣೆ ಕಾರಣದಿಂದಲೂ ಹೆಣ್ಣು ಭ್ರೂಣ ಹತ್ಯೆಗಳು ನಡೆಯುತ್ತಿವೆ. ಗರ್ಭಿಣಿ ಹೆಣ್ಣಿನ ಮೇಲೆ ಗಂಡ ಸೇರಿದಂತೆ ಕುಟುಂಬದವರು ಒತ್ತಡ ಹೇರಿದಾಗ ಈ ರೀತಿಯ ಕೃತ್ಯಗಳು ನಡೆಯುತ್ತವೆ ಎಂದರು.

ಇವತ್ತಿನ ಜಗತ್ತಿನಲ್ಲಿ ಹೆಣ್ಣು ಅಂತರಿಕ್ಷಕ್ಕೆ ಹಾರಿದ್ದಾರೆ. ಭಾರತ ಪಾಕ್ ಗಡಿಯಲ್ಲಿ ಎಕೆ 47 ಬಂದೂಕು ಹಿಡಿದು ಸೇನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮಹಿಳೆಯರು ಪಾಕಿಸ್ತಾನದ ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಇಲ್ಲಿ ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿದೆ ಎಂದರೆ ಅದು ಮನುಕುಲ ತಲೆ ತಗ್ಗಿಸುವ ವಿಚಾರ ಎಂದರು. ಇದು ಕೇವಲ 4-5 ತಂಡದಲ್ಲಿ ಮಂಡ್ಯ, ಮೈಸೂರು, ಬೆಂಗಳೂರಿಗೆ ಸೀಮಿತವಾಗಿಲ್ಲ. ರಾಜ್ಯದ ಬೇರೆ ಬೇರೆ ಕಡೆ ಸುಮಾರು 20 ರಿಂದ 30 ತಂಡ ಇರಬಹುದು. ಸರ್ಕಾರ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ನಾನು ಆರೋಗ್ಯ ಸಚಿವನಾಗಿ ನಕಲಿ ವೈದ್ಯರ ವಿರುದ್ಧ ಕಾರ್ಯಾಚರಣೆ ಮಾಡಿದಾಗ ಮಂತ್ರಿಗಳು, ಶಾಸಕರು, ಸಂಸದರು ಸೇರಿದಂತೆ ಅನೇಕ ಪ್ರಭಾವಿಗಳು ನನ್ನ ಮೇಲೆ ಒತ್ತಡ ಹೇರಿ ಅವರನ್ನು ಬಿಡಿ ಎನ್ನುತ್ತಿದ್ದರು. ಸುಮಾರು 4 ಸಾವಿರದಿಂದ 5 ಸಾವಿರ ನಕಲಿ ವೈದ್ಯರು ಇದ್ದಾರೆ. ನನ್ನ ಜೊತೆ ಪೊಲೀಸರನ್ನು ಕರೆದುಕೊಂಡು ಹೋಗಿ ಅವರನ್ನು ಬಂದಿಸಿದ್ದೆ ಎಂದು ನೆನಪಿಸಿದರು. ಚರ್ಚೆಯಲ್ಲಿ ಸಚಿವ ಚಲುವರಾಯಸ್ವಾಮಿ, ಶಾಸಕರಾದ ಶರತ್​ ಬಚ್ಚೇಗೌಡ, ಶಶಿಕಲಾ ಜೊಲ್ಲೆ, ನರೇಂದ್ರಸ್ವಾಮಿ, ಡಾ. ಮಂಥನಗೌಡ, ಡಾ. ಶ್ರೀನಿವಾಸ ಸೇರಿದಂತೆ ಸದನದ ಸದಸ್ಯರು ಭಾಗವಹಿಸಿ ತಮ್ಮ ಸಲಹೆ, ಅಭಿಪ್ರಾಯ ತಿಳಿಸಿದರು.

ಇದನ್ನೂ ಓದಿ : ನಾಲ್ಕು ಲಕ್ಷ ರೈತರ ಕೃಷಿ ಪಂಪ್ ಸೆಟ್‍ಗಳಿಗೆ ಮೂಲ ಸೌಕರ್ಯ: ಸಚಿವ ಕೆ ಜೆ ಜಾರ್ಜ್

Last Updated :Dec 14, 2023, 8:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.