ETV Bharat / state

ಶೆಟ್ಟರ್, ಸವದಿಯಂತಹ ಹತ್ತು ನಾಯಕರನ್ನು ಸೃಷ್ಟಿಸುವ ಶಕ್ತಿ ಬಿಜೆಪಿಗಿದೆ: ರಮೇಶ್​ ಜಾರಕಿಹೊಳಿ

author img

By

Published : Apr 16, 2023, 3:57 PM IST

ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಭೆ ಇಂದು ಬೆಳಗಾವಿ ನಗರದಲ್ಲಿ ನಡೆಯಿತು.

ramesh jarakiholi
ರಮೇಶ್​ ಜಾರಕಿಹೊಳಿ

ರಮೇಶ್​ ಜಾರಕಿಹೊಳಿ ಹೇಳಿಕೆ

ಬೆಳಗಾವಿ: ಜಗದೀಶ್​ ಶೆಟ್ಟರ್, ಲಕ್ಷ್ಮಣ ಸವದಿಯಂಥವರು ಪಕ್ಷ ಬಿಟ್ಟು ಹೋಗುವುದರಿಂದ ಬಿಜೆಪಿ ಸ್ವಚ್ಛವಾಗುತ್ತದೆ. ಇಂತಹ ಹತ್ತು ನಾಯಕರನ್ನು ತಯಾರಿಸುವ ಶಕ್ತಿ ಪಕ್ಷಕ್ಕಿದೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ. ಇಂದು (ಭಾನುವಾರ) ನಗರದಲ್ಲಿ ಹಮ್ಮಿಕೊಂಡಿದ್ದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಭಾಗಿಯಾಗಿ ಅವರು ಮಾತನಾಡಿದರು.

ಸೋತ ವ್ಯಕ್ತಿಯನ್ನು ಪಕ್ಷ ಡಿಸಿಎಂ ಮಾಡಿತ್ತು. ಆದರೆ ಈಗ ಪಕ್ಷ ಬಿಟ್ಟು ಹೋಗಿ ಪಕ್ಷದ ಬಗ್ಗೆ ಕೀಳಾಗಿ ಮಾತಾಡುತ್ತಿದ್ದಾರೆ. ಜಗದೀಶ ಶೆಟ್ಟರ್​ ಎಲ್ಲ ಹುದ್ದೆಗಳನ್ನು ಅನುಭವಿಸಿದವರು. ಎಲ್.ಕೆ.ಅಡ್ವಾಣಿ ಅವರಷ್ಟು ಇವರು ಯಾರೂ ತ್ಯಾಗ ಮಾಡಿದವರಲ್ಲ ಎಂದರು.

ಜಗದೀಶ್​ ಶೆಟ್ಟರ್, ಲಕ್ಷ್ಮಣ ಸವದಿ ಪಕ್ಷ ಬಿಟ್ಟು ಹೋಗಿದ್ದಾರೆ ಅಂತಾ ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಬಿಜೆಪಿ ನಾಯಕರ ಪಕ್ಷ ಅಲ್, ಕಾರ್ಯಕರ್ತರ ಪಕ್ಷ. ಒಬ್ಬ ಲೀಡರ್ ಹೋಗಬಹುದು, ಅಂತಹ 10 ನಾಯಕರನ್ನು ತಯಾರಿಸುವ ಶಕ್ತಿ ಬಿಜೆಪಿ ಪಕ್ಷಕ್ಕಿದೆ‌. ಹೀಗಾಗಿ ಯಾರೂ ಹೆದರಬೇಡಿ. ಇಂತಹ ಎಷ್ಟೋ ನಾಯಕರು ಹೋಗುತ್ತಾರೆ, ಹೋಗಲಿ, ಒಮ್ಮೆ ಪಕ್ಷ ಸ್ವಚ್ಛವಾಗುತ್ತದೆ. ಎಲ್ಲ ಸ್ವಚ್ಛ ಮಾಡಿ, ಕಾರ್ಯಕರ್ತರನ್ನೇ ನಾಯಕರನ್ನಾಗಿ ಮಾಡೋಣ ಎಂದು ಹೇಳಿದರು.

ಲಿಂಗಾಯತ, ಮರಾಠ, ಎಸ್ಸಿ ಸೇರಿ ಎಲ್ಲಾ ಸಮಾಜಗಳಲ್ಲಿ ಹೊಸ ನಾಯಕರನ್ನು ತಯಾರು ಮಾಡಿ, ಬರುವ 20 ವರ್ಷದಲ್ಲಿ ಬಿಜೆಪಿ‌ಯನ್ನು ರಾಜ್ಯದಲ್ಲಿ‌ ಗಟ್ಟಿಯಾಗಿ ಬೆಳೆಸೋಣ. ದೇಶದಲ್ಲಿ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯೋಣ. ಇಡೀ ಜಗತ್ತಿನಲ್ಲಿ ಭಾರತ ನಂಬರ್ ಒನ್ ರಾಷ್ಟ್ರ ಆಗುವುದು ಶತಸಿದ್ಧ ಎಂದು ರಮೇಶ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ 28 ಸ್ಥಾನಗಳಿದ್ದರೆ, ಬಳಿಕ ಅತೀ ಹೆಚ್ಚು ಸ್ಥಾನ‌ವಿರುವ ಬೆಳಗಾವಿ ಜಿಲ್ಲೆಯಲ್ಲಿ‌ 15 ಕ್ಷೇತ್ರಗಳಲ್ಲಿ ಬಿಜೆಪಿ‌ ಗೆಲ್ಲಿಸಲು ದೃಢ ಸಂಕಲ್ಪ ಮಾಡಬೇಕಿದೆ. ಆ ನಿಟ್ಟಿನಿಲ್ಲಿ ಕಾರ್ಯಕರ್ತರು ಕೆಲಸ ಮಾಡಬೇಕೆಂದು ಕರೆ ನೀಡಿದರು. ವಿಶೇಷವಾಗಿ ಅಥಣಿ ಕ್ಷೇತ್ರಕ್ಕೆ ನಾವು ಹೆಚ್ಚು ಒತ್ತು ಕೊಡಬೇಕು. ಅಥಣಿಯಲ್ಲಿ ಬಿಜೆಪಿ ಬಾವುಟ ಹಾರಿಸಲೇಬೇಕು ಎಂದು ದೃಢ ಸಂಕಲ್ಪ ಮಾಡಿದ್ದು, ಅದನ್ನು ನಾವು ಮಾಡಿಯೇ ತೀರುತ್ತೇವೆ ಎಂದರು.

ಗ್ರಾಮೀಣ ಕ್ಷೇತ್ರದಲ್ಲಿ ಸಂಜಯ ಪಾಟೀಲ, ಧನಂಜಯ ಜಾಧವ ನೇತೃತ್ವ ವಹಿಸಿಕೊಳ್ಳಬೇಕು. ಹೆಗಲಿಗೆ ಹೆಗಲು ಕೊಟ್ಟು ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು. ನಾವು ಅಥಣಿ ಮತ್ತು ಕಾಗವಾಡ ಕ್ಷೇತ್ರಗಳಿಗೆ ಹೆಚ್ಚು ಒತ್ತು ಕೊಡುತ್ತೇವೆ. 140ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಮೂಲಕ ಮತ್ತೆ ರಾಜ್ಯದಲ್ಲಿ ಬಿಜೆಪಿ ಮುಖ್ಯಮಂತ್ರಿ ಮಾಡೋಣ ಎಂದರು.

ಮಂಡಿಯೂರಿ ಮತಭಿಕ್ಷೆ ಬೇಡಿದ ಸಂಜಯ ಪಾಟೀಲ: ಗ್ರಾಮಾಂತರ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ವೇದಿಕೆ ಮೇಲೆ ಮಂಡಿಯೂರಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮನವಿ ಮಾಡಿಕೊಂಡರು.‌ ಕಾರ್ಯಕರ್ತರು ಒಮ್ಮತದಿಂದ ಕೆಲಸ ಮಾಡಬೇಕು. ನಮಗೆ ಅಭ್ಯರ್ಥಿ ಮುಖ್ಯವಲ್ಲ. ನಾವೆಲ್ಲ ಒಗ್ಗಟ್ಟಾಗಿ ಗ್ರಾಮೀಣದಲ್ಲಿ ಬಿಜೆಪಿ ಗೆಲ್ಲಿಸೋಣ. ಸುಳೇಭಾವಿ ಮಹಾಲಕ್ಷ್ಮೀ, ಉಚಗಾಂವ ಮಳೆಕರಣಿ ದೇವಿ ಮೇಲೆ ಆಣೆ ಮಾಡಿ ಹೇಳುತ್ತೇನೆ, ನಾನು ಪಕ್ಷಕ್ಕೆ ದ್ರೋಹ ಮಾಡುವುದಿಲ್ಲ ಎಂದು ರೋಷಾವೇಷದಿಂದ ಮಾತನಾಡಿದರು. ಬಿಜೆಪಿ ಅಭ್ಯರ್ಥಿ ನಾಗೇಶ ಮನ್ನೋಳ್ಕರ್, ಧನಂಜಯ ಜಾಧವ, ಕಿರಣ ಜಾಧವ ಸೇರಿ ಮತ್ತಿತರರು ಇದ್ದರು.

ಇದನ್ನೂ ಓದಿ: ಹುಬ್ಬಳ್ಳಿಯಿಂದ ವಿಶೇಷ ವಿಮಾನದಲ್ಲಿ ಶೆಟ್ಟರ್ ಬೆಂಗಳೂರಿಗೆ: ಇಂದೇ ಕಾಂಗ್ರೆಸ್‌ ಸೇರ್ಪಡೆ?​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.