ETV Bharat / state

ಅಧಿವೇಶನದಲ್ಲಿ ಜನರ ಹಿತದ ಬಗ್ಗೆ ಚಿಂತಿಸಿ, ಸದನ ಮುಂದೂಡಿಕೆಗೆ ಕಡಿವಾಣ ಹಾಕಿ: ಹೋರಾಟಗಾರರ ಆಗ್ರಹ

author img

By ETV Bharat Karnataka Team

Published : Dec 3, 2023, 6:14 PM IST

Updated : Dec 3, 2023, 7:18 PM IST

ಕಳಸಾ ಬಂಡೂರಿ ವಿಚಾರದ ಬಗ್ಗೆ ಸಚಿವ ಹೆಚ್.ಕೆ‌. ಪಾಟೀಲ್​ ಅವರು ವಿಧಾನಸಭೆಯಲ್ಲಿ ಧ್ವನಿ ಎತ್ತಿ, ಆದೇಶ ಮಾಡಬೇಕು ಎಂದು ವಿಜಯ ಕುಲಕರ್ಣಿ ಆಗ್ರಹಿಸಿದ್ದಾರೆ.

Etv Bharatthink-about-the-welfare-of-the-people-in-the-session-demand-by
ಅಧಿವೇಶನದಲ್ಲಿ ಜನರ ಹಿತದ ಬಗ್ಗೆ ಚಿಂತಿಸಿ, ಸದನ ಮುಂದೂಡಿಕೆಗೆ ಕಡಿವಾಣ ಹಾಕಿ: ಹೋರಾಟಗಾರರ ಆಗ್ರಹ

ಅಧಿವೇಶನದಲ್ಲಿ ಜನರ ಹಿತದ ಬಗ್ಗೆ ಚಿಂತಿಸಬೇಕೆಂದು ಹೋರಾಟಗಾರರ ಆಗ್ರಹ

ಬೆಳಗಾವಿ: "ಜನರಿಗೋಸ್ಕರ ಆಯ್ಕೆಯಾಗಿರುವ ನೀವು ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಜನರ ಹಿತದ ಪರವಾಗಿ ಮಾತ್ರ ಚಿಂತನೆ ಮಾಡಬೇಕು. ಅದು ಬಿಟ್ಟು ಸುಮ್ಮನೆ ಆರೋಪ ಪ್ರತ್ಯಾರೋಪ ಮಾಡಿ ಹೋಗುವುದಲ್ಲ" ಎಂದು ಕಳಸಾ - ಬಂಡೂರಿ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ವಿಜಯ ಕುಲಕರ್ಣಿ ಆಗ್ರಹಿಸಿದ್ದಾರೆ.

ನಗರದಲ್ಲಿಂದು ಈಟಿವಿ ಭಾರತ ಜೊತೆಗೆ ಮಾತನಾಡಿದ ಅವರು, "ಮಹದಾಯಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಜೆ.ಎಸ್. ಪಾಂಚಾಲ್ ನೇತೃತ್ವದ ನ್ಯಾಯಮಂಡಳಿಯು 2018 ಆಗಸ್ಟ್ 14ರಂದು ಅಂತಿಮ ತೀರ್ಪು ಪ್ರಕಟಿಸಿ, ಕರ್ನಾಟಕಕ್ಕೆ ಒಟ್ಟು 13. 7 ಟಿಎಂಸಿ ನೀರು ಹಂಚಿಕೆ ಮಾಡಿದೆ. ಇದರಲ್ಲಿ ವಿದ್ಯುತ್​ ಉತ್ಪಾದನೆಗೆ 8.02 ಟಿಎಂಸಿ, ಕುಡಿಯುವ ನೀರಿಗಾಗಿ 5.5 ಟಿಎಂಸಿ ಹಂಚಿಕೆ ಮಾಡಿದೆ. ತೀರ್ಪು ಬಂದು ಐದು ವರ್ಷವಾದರೂ ಯೋಜನೆ ಮಾತ್ರ ಇನ್ನೂ ಬಾಕಿ ಉಳಿದಿದೆ. ಕೋರ್ಟ್​ನಲ್ಲಿ ವ್ಯಾಜ್ಯ ಬಗೆಹರಿದಿದ್ದು, ಮಹದಾಯಿ ಜಾರಿಗೆ ಮನಸ್ಸು ಮಾಡದ ಜನಪ್ರತಿನಿಧಿಗಳು ಸುಮ್ಮನೆ ಒಬ್ಬರಿಗೊಬ್ಬರು ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ'' ಎಂದು ಕುಟುಕಿದರು.

"ಇನ್ನು 2003ರಲ್ಲಿ ಹೆಚ್.ಕೆ. ಪಾಟೀಲರು ಬೃಹತ್ ನೀರಾವರಿ ಸಚಿವರಾಗಿದ್ದರು. ಆ ಸಮಯದಲ್ಲಿ ಅಂದಿನ ಗದಗ ಜಿಲ್ಲಾಧಿಕಾರಿಗಳು ನಮ್ಮಿಬ್ಬರನ್ನು ಸಭೆಗೆ ಕರೆದಿದ್ದರು. ಆ ವೇಳೆ ಕಪ್ಪತಗುಡ್ಡ ಅರಣ್ಯ ಪ್ರದೇಶವನ್ನು ಉಳಿಸಿ, ಬೆಳೆಸುವ ಬಗ್ಗೆ ಗಂಭೀರವಾಗಿ ಚರ್ಚಿಸಿದ್ದೆವು. ಹಾಗಾಗಿ ಕಳಸಾ ಬಂಡೂರಿ ನಾಲಾವನ್ನು ಮಲಪ್ರಭಾ ನದಿಗೆ ಜೋಡಿಸಿದರೆ ಸಾವಿರಾರು ಕಿ.ಮೀ. ಪ್ರದೇಶ ಹೊಂದಿರುವ ಕಪ್ಪತಗುಡ್ಡವನ್ನು ಸಮೃದ್ಧವಾಗಿ ಬೆಳೆಸುವ ಶಪಥವನ್ನು ನಾನು ಮಾಡಿದ್ದೇನೆ. ಕಳಸಾ ಬಂಡೂರಿ ವಿಚಾರದ ಬಗ್ಗೆ ಇಂದಿನ ಕಾನೂನು ಸಚಿವರಾದ ಹೆಚ್.ಕೆ‌. ಪಾಟೀಲ್​ ಅವರು ವಿಧಾನಸಭೆಯಲ್ಲಿ ಧ್ವನಿ ಎತ್ತಿ, ಆದೇಶ ಮಾಡಬೇಕು" ಎಂದು ಒತ್ತಾಯಿಸಿದರು.

ಸದನದ ಬಾವಿಗಿಳಿದು ಪ್ರತಿಭಟನೆ ಮಾಡುವುದನ್ನು ನಿಷೇಧಿಸಬೇಕು - ಶ್ರೀನಿವಾಸ ತಾಳೂಕರ್​: ಮತ್ತೊಂದೆಡೆ, ಹಿರಿಯ ಕನ್ನಡ ಹೋರಾಟಗಾರ ಶ್ರೀನಿವಾಸ ತಾಳೂಕರ್​ ಮಾತನಾಡಿ, "ಚಳಿಗಾಲ ಅಧಿವೇಶನ ವೇಳೆ ಸುವರ್ಣ ವಿಧಾನಸೌಧ ಹೊರಗೆ ನಡೆಯುವ ಪ್ರತಿಭಟನೆಗಳನ್ನು ಕಡಿಮೆ ಮಾಡಿದ್ದು ಒಳ್ಳೆಯ ಬೆಳವಣಿಗೆ. ಅದೇ ರೀತಿ ಸದನದಲ್ಲಿ ಶಾಸಕರು ಅಸಭ್ಯವಾಗಿ ವರ್ತಿಸುವುದನ್ನು ನಿಷೇಧಿಸಬೇಕು. ಅಲ್ಲದೇ ಸದನದ ಬಾವಿಗಿಳಿದು ಶಾಸಕರು ಪ್ರತಿಭಟನೆ ನಡೆಸಿ, ಸದನ ಮುಂದೂಡುವಂತೆ ಮಾಡುವುದಕ್ಕೂ‌ ಕಡಿವಾಣ ಹಾಕುವಂತೆ" ಆಗ್ರಹಿಸಿದರು.

"ಸಭಾಪತಿ/ಸಭಾಧ್ಯಕ್ಷರು ವಿಶೇಷ ಕಾಳಜಿ ವಹಿಸಿ ಈ ಬಾರಿ ಪ್ರತಿಭಟನೆಗಳನ್ನು ತಗ್ಗಿಸಿರುವುದು ಒಳ್ಳೆಯ ಸಂಗತಿ. ಆದರೆ ವಿಧಾನಸೌಧದ ಒಳಗೆ ಶಾಸಕರು ಅಶಿಸ್ತಿನಿಂದ ವರ್ತಿಸುತ್ತಿದ್ದು, ಶಾಸಕರು ತಮ್ಮ ಬಟ್ಟೆಗಳನ್ನು ಹರಿದುಕೊಳ್ಳುವುದು, ಫಲಕಗಳನ್ನು ಹಿಡಿದು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುವುದು. ಸದನದಲ್ಲಿಯೇ ಗಾದಿ, ಹಾಸಿಗೆ ಹಾಗೂ ತಲೆದಿಂಬುಗಳನ್ನು ತರಿಸಿ ಮಲಗಿ ಪ್ರತಿಭಟನೆ ಮಾಡುವುದು, ಸಭಾಪತಿಗಳ ಮೇಲೆ ಕಾಗದಗಳನ್ನು ಹರಿದು ಬಿಸಾಕುವುದು, ಸಭಾಧ್ಯಕ್ಷರ ವೇದಿಕೆ ಮೇಲೆ ಏರಿ ಅವರನ್ನು ಎಳೆದಾಡುವುದು ಇಂತಹ ನಡೆಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳಂಕವಾಗಿವೆ. ಇಂಥಹ ಪ್ರತಿಭಟನೆಗಳಿಗೆ ಸಭಾಪತಿಗಳು ಕಡಿವಾಣ ಹಾಕಬೇಕು, ಸದನದ ಬಾವಿಗಿಳಿದು ಪ್ರತಿಭಟನೆ ಮಾಡುವುದನ್ನು ನಿಷೇಧಿಸಬೇಕೆಂದು" ಎಂದು ಒತ್ತಾಯಿಸಿದರು.

"ಸದನದಲ್ಲಿ ಉತ್ತರ ಕರ್ನಾಟಕದ ರೈತರ ಸಮಸ್ಯೆ ಹಾಗೂ ಭೀಕರ ಬರಗಾಲ ಕುರಿತು ಶಾಶ್ವತ ಪರಿಹಾರ ಒದಗಿಸಲು ಗಂಭೀರ ಚಿಂತನೆ ಮಾಡಬೇಕು. ಉಭಯ ಸದನಗಳಲ್ಲಿ ಕನ್ನಡ ನಾಡು, ನುಡಿ, ನೆಲ, ಜಲ ಕುರಿತಾದ ಹಿತ ಚಿಂತನೆಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು" ಎಂದರು.

ಇದನ್ನೂ ಓದಿ: ಆಡಳಿತ-ಪ್ರತಿಪಕ್ಷಗಳ ಜಂಗಿಕುಸ್ತಿಗೆ ವೇದಿಕೆಯಾಗಲಿದೆ ಬೆಳಗಾವಿಯ ಸುವರ್ಣ ವಿಧಾನಸೌಧ

Last Updated : Dec 3, 2023, 7:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.