3 ವರ್ಷ ಕಳೆದ್ರೂ ಸಿಗದ ನೆರೆ ಪರಿಹಾರ.. ರೊಟ್ಟಿಗಂಟ್‌ ಕಟ್ಕೊಂಡ್‌ ಡಿಸಿ ಕಚೇರಿ ಮುಂದೆ ಸಂತ್ರಸ್ತರ ಧರಣಿ..

author img

By

Published : Sep 15, 2021, 8:06 PM IST

Flood victims are protest

ನಮ್ಮಂತವರಿಗೆ ಈವರೆಗೂ ಯಾರೂ ಮನೆ ಮಾಡಿ ಕೊಡುತ್ತಿಲ್ಲ. ಮನೆಯಲ್ಲಿ ಐದಾರು ಜನರಿದ್ದೇವೆ. ಬಾಡಿಗೆ ಮನೆ, ಗುಡಿಸಲ್ಲಲ್ಲಿ ವಾಸವಿದ್ದೇವೆ. ಹೀಗಾಗಿ, ಸರ್ಕಾರ ನಮಗೆ ಮನೆಗಳನ್ನು ನಿರ್ಮಿಸಿಕೊಡಬೇಕು ಎಂದು ಅಳಲು ತೋಡಿಕೊಂಡರು..

ಬೆಳಗಾವಿ : 2019ರಲ್ಲಿ ಸಂಭವಿಸಿದ ಪ್ರವಾಹದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಇದರಿಂದ ಸಿಟ್ಟಿಗೆದ್ದ ಸಂತ್ರಸ್ತರು, ರೊಟ್ಟಿ-ಬುತ್ತಿ ಕಟ್ಟಿಕೊಂಡು ನಗರದ ಡಿಸಿ ಕಚೇರಿ ಮುಂದೆ ಧರಣಿ ನಡೆಸಿದರು.

ಡಿಸಿ ಕಚೇರಿ ಮುಂದೆ ಧರಣಿ ನಡೆಸಿದ ಸಂತ್ರಸ್ತರು

ಕಳೆದ 2019ರಲ್ಲಿ ಗೋಕಾಕ್ ತಾಲೂಕಿನ ಅರಭಾವಿ ಮತಕ್ಷೇತ್ರದಲ್ಲಿ ಸುರಿದ ಭಾರಿ ಮಳೆ ಹಾಗೂ ಪ್ರವಾಹದಿಂದ ಅಂದಾಜು 800ಕ್ಕೂ ಹೆಚ್ಚು ಜನರು ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ. ಇದಾಗಿ 3 ವರ್ಷ ಕಳೆಯುತ್ತಾ ಬಂದರೂ ಈವರೆಗೂ ನೆರೆ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಮನೆ ಕಟ್ಟಿ ಕೊಟ್ಟಿಲ್ಲ.

ಗೋಕಾಕ್ ತಾಲೂಕಿನ ಅರಭಾವಿ ಮತಕ್ಷೇತ್ರದ ಅಡಿಬಟ್ಟಿ, ಚಿಗಡೊಳ್ಳಿ, ಮೇಳವಂಕಿ, ಹಡಗಿನಾಳ, ಉದಗಟ್ಟಿ, ತಿಗಡಿ, ಮಸಗುಪ್ಪಿ, ಕಲಾರಕೊಪ್ಪ, ಅಳ್ಳಿಮಟ್ಟಿ, ಸುಣಧೋಳಿ, ಢವಳೇಶ್ವರ, ಮುನ್ಯಾಳ, ಕಮಲದಿನ್ನಿ, ರಂಗಾಪುರ ಸೇರಿ ಘಟಪ್ರಭಾ ನದಿ ದಂಡೆಯ ಹಲವು ಹಳ್ಳಿಗಳಿಂದ ಆಗಮಿಸಿದ 500ಕ್ಕೂ ಹೆಚ್ಚು ಸಂತ್ರಸ್ತರು ನಗರದ ಡಿಸಿ ಕಚೇರಿವರೆಗೂ ಪ್ರತಿಭಟನಾ ರ್ಯಾಲಿ ನಡೆಸಿ ಧರಣಿ ನಡೆಸಿ ಪರಿಹಾರಕ್ಕೆ ಒತ್ತಾಯಸಿದರು.

Flood victims are protested in Belgavi
ಡಿಸಿ ಕಚೇರಿ ಮುಂದೆ ಧರಣಿ ನಡೆಸಿದ ಸಂತ್ರಸ್ತರು

ಈ ವೇಳೆ ಮಾತನಾಡಿದ ಸಂತ್ರಸ್ತರು, ಮನೆ ಕಳೆದುಕೊಂಡು ಮೂರು ವರ್ಷಗಳೇ ಕಳೆದಿದೆ. ಸಂಬಂಧಿಸಿದ ಅಧಿಕಾರಿಗಳು ಈವರೆಗೂ ಪರಿಹಾರ ಕೊಟ್ಟಿಲ್ಲ. ತಮಗೆ ಬೇಕಾದವರಿಗೆ ಮನೆ ಹಾಕಿ ಕೊಡುತ್ತಿದ್ದಾರೆ.

ನಮ್ಮಂತವರಿಗೆ ಈವರೆಗೂ ಯಾರೂ ಮನೆ ಮಾಡಿ ಕೊಡುತ್ತಿಲ್ಲ. ಮನೆಯಲ್ಲಿ ಐದಾರು ಜನರಿದ್ದೇವೆ. ಬಾಡಿಗೆ ಮನೆ, ಗುಡಿಸಲ್ಲಲ್ಲಿ ವಾಸವಿದ್ದೇವೆ. ಹೀಗಾಗಿ, ಸರ್ಕಾರ ನಮಗೆ ಮನೆಗಳನ್ನು ನಿರ್ಮಿಸಿಕೊಡಬೇಕು ಎಂದು ಅಳಲು ತೋಡಿಕೊಂಡರು.

ಬಳಿಕ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ್ ಮಾತನಾಡಿ, ಅರಭಾವಿ ಕ್ಷೇತ್ರದಲ್ಲಿ 2019ರಲ್ಲಿ ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ಮನೆ ಪರಿಹಾರ ಕೊಟ್ಟಿಲ್ಲ. ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ಮಾಡಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲಾ ಮನೆಗಳಿಗೆ ಪರಿಹಾರ ಕೊಟ್ಟಿದ್ದೇವೆ ಎಂದು ಹೇಳಿದ್ದಾರೆ.

ಅವರು ಪ್ರತ್ಯಕ್ಷವಾಗಿ ಪ್ರವಾಹಕ್ಕೆ ಹಾನಿಯಾದ ಮನೆಗಳಿಗೆ ಭೇಟಿ ನೀಡಿ ಸತ್ಯಾಸತ್ಯತೆಯನ್ನು ಪರಿಶೀಲನೆ ನಡೆಸಬೇಕು. ಮನೆಗಳಿಗೆ ಪರಿಹಾರ ನೀಡುವ ಆದೇಶ ಬರುವವರೆಗೆ ಜಿಲ್ಲಾಧಿಕಾರಿಗಳ ಕಚೇರಿ ಬಿಟ್ಟು ಹೋಗುವುದಿಲ್ಲ. ಬುತ್ತಿ ಕಟ್ಟಿಕೊಂಡೆ ಬಂದಿದ್ದೇವೆ. ಸರ್ಕಾರ ಗಟ್ಟಿ ನಿರ್ಧಾರ ತೆಗೆದುಕೊಳ್ಳುವ ಮೂಲಕ ನೆರೆ ಸಂತ್ರಸ್ತರಿಗೆ ನೆರವಾಗಬೇಕು ಎಂದರು.

ಓದಿ: ರಾಜ್ಯದಲ್ಲಿ ಐದು ಸಾವಿರ ಶಿಕ್ಷಕರ ನೇಮಕಕ್ಕೆ ಭರವಸೆ : ಸಚಿವ ಬಿ ಸಿ ನಾಗೇಶ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.